
ನಿನ್ನೆ ( ಮೇ 1 ) ಲಕ್ನೋದ ಅಟಲ್ ಬಿಹಾರಿ ವಾಜಪೇಯಿ ಏಕನ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಲಕ್ನೋ ಸೂಪರ್ ಜೈಂಟ್ಸ್ ನಡುವಿನ ಪಂದ್ಯ ಆಟಕ್ಕಿಂತ ಹೆಚ್ಚಾಗಿ ಜಗಳದ ವಿಷಯದಿಂದಲೇ ಸುದ್ದಿಗೀಡಾಗಿದೆ.
ಹೌದು, ಈ ಪಂದ್ಯದ ಬಳಿಕ ವಿರಾಟ್ ಕೊಹ್ಲಿ ಹಾಗೂ ಗೌತಮ್ ಗಂಭೀರ್ ನಡುವೆ ನಡೆದ ವಾಕ್ಸಮರ ಸದ್ಯ ಕ್ರೀಡಾಲೋಕದ ಹಾಟ್ ಟಾಪಿಕ್ ಆಗಿದೆ. ಇದಕ್ಕೆಲ್ಲಾ ಕಾರಣ ಪಂದ್ಯದುದ್ದಕ್ಕೂ ಎರಡೂ ತಂಡಗಳ ಆಟಗಾರರ ನಡುವೆ ನಡೆದ ಸ್ಲೆಡ್ಜಿಂಗ್. ಈ ಸ್ಲೆಡ್ಲಿಂಗ್ಗೆ ಕಾರಣ ಇದೇ ತಂಡಗಳು ಬೆಂಗಳೂರಿನ ಎಂ ಚಿನ್ನಸ್ವಾಮಿ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಮೊದಲ ಬಾರಿಗೆ ಮುಖಾಮುಖಿಯಾಗಿದ್ದ ಪಂದ್ಯ.
ಹೌದು, ಹಳೆಯ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಆಟಗಾರರು ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಪಂದ್ಯ ಗೆದ್ದಾಗ ಅತಿರೇಕದ ಸಂಭ್ರಮಾಚರಣೆ ಮಾಡಿದ್ದರು. ಅದರಲ್ಲಿಯೂ ಲಕ್ನೋ ಸೂಪರ್ ಜೈಂಟ್ಸ್ ತಂಡದ ಮೆಂಟರ್ ಗೌತಮ್ ಗಂಭೀರ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಭಿಮಾನಿಗಳಿಗೆ ಸದ್ದು ಮಾಡದಂತೆ ಶ್ ಎಂದು ಸನ್ನೆ ಮೂಲಕ ಕೇವಲವಾಗಿ ಹೇಳಿದ್ದರು.
ಇದನ್ನು ಮನಸ್ಸಿನಲ್ಲಿ ಇಟ್ಟುಕೊಂಡಿದ್ದ ವಿರಾಟ್ ಕೊಹ್ಲಿ ನಿನ್ನೆಯ ಪಂದ್ಯದಲ್ಲಿ ಗೆದ್ದ ಬಳಿಕ ಲಕ್ನೋ ಸೂಪರ್ ಜೈಂಟ್ಸ್ ಆಟಗಾರರ ರೀತಿಯೇ ಪ್ರತ್ಯುತ್ತರವನ್ನು ನೀಡಿದ್ದಾರೆ. ಗಂಭೀರ್ ರೀತಿ ಮೈದಾನದಲ್ಲಿ ನೆರೆದಿದ್ದ ಕ್ರಿಕೆಟ್ ಅಭಿಮಾನಿಗಳಿಗೆ ಶ್ ಎಂದಿದ್ದ ವಿರಾಟ್ ಕೊಹ್ಲಿ ನಾವು ನಿಮ್ಮನ್ನು ದ್ವೇಷಿಸುವುದಿಲ್ಲ, ಪ್ರೀತಿಸುತ್ತೇವೆ ಎಂದು ಸನ್ನೆ ಮೂಲಕವೇ ಹೇಳಿದ್ದರು.
ಅಲ್ಲದೇ ಲಕ್ನೋ ಸೂಪರ್ ಜೈಂಟ್ಸ್ ತಂಡದ ನವೀನ್ ಉಲ್ ಹಕ್ ಜತೆ ಸಹ ವಿರಾಟ್ ಕೊಹ್ಲಿ ಮೈದಾನದಲ್ಲಿ ಕಿತ್ತಾಡಿದ್ದರು. ತಮ್ಮ ಶೂಗೆ ಅಂಟಿದ್ದ ಮಣ್ಣನ್ನು ತೋರಿಸಿ ಸುಮ್ಮನೆ ಆಟವನ್ನಾಡು ಎಂದು ವಾರ್ನ್ ಮಾಡಿದ್ದರು. ಹೀಗೆ ಪಂದ್ಯದುದ್ದಕ್ಕೂ ಎರಡೂ ತಂಡಗಳ ನಡುವೆ ಜಗಳದ ಕಾವು ಕಂಡುಬರುತ್ತಲೇ ಇತ್ತು.
ಇನ್ನು ಈ ಘಟನೆಗಳ ಬಗ್ಗೆ ಹಲವಾರು ಹಿರಿಯ ಕ್ರಿಕೆಟಿಗರು ಪ್ರತಿಕ್ರಿಯಿಸಿದ್ದು, ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಈ ಸಾಲಿಗೆ ಇದೀಗ ಹಿರಿಯ ಕ್ರಿಕೆಟಿಗ ಹರ್ಭಜನ್ ಸಿಂಗ್ ಸಹ ಮಾತನಾಡಿದ್ದು, ತಮ್ಮ ಪಾಲಿನ ಅಭಿಪ್ರಾಯವನ್ನು ತಿಳಿಸಿದ್ದಾರೆ.
"2008ರಲ್ಲಿ ಶ್ರೀಶಾಂತ್ ಜತೆ ನಾನು ನಡೆದುಕೊಂಡಿದ್ದರ ಬಗ್ಗೆ ನನಗಿನ್ನೂ ನಾಚಿಕೆಯಾಗ್ತಿದೆ. ವಿರಾಟ್ ಕೊಹ್ಲಿ ಓರ್ವ ಲೆಜೆಂಡ್. ಆತ ಇಂತಹ ಕೆಲಸಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳಬಾರದು. ವಿರಾಟ್ ಕೊಹ್ಲಿ ಹಾಗೂ ಗೌತಮ್ ಗಂಭೀರ್ ನಡುವೆ ಏನೆಲ್ಲಾ ನಡೆಯಿತೋ ಅದು ಕ್ರಿಕೆಟ್ಗೆ ಸರಿಯಲ್ಲ" ಎಂದು ಹರ್ಭಜನ್ ಸಿಂಗ್ ತಿಳಿಸಿದರು.
ಇನ್ನೂ ಮುಂದುವರಿದು ಮಾತನಾಡಿದ ಹರ್ಭಜನ್ ಸಿಂಗ್ "ನೀವು ಪಂದ್ಯದ ಹೈಲೈಟ್ಸ್ ವೀಕ್ಷಿಸಿದರೆ ಅದರಲ್ಲಿ ಪಂದ್ಯಕ್ಕಿಂತ ಜಗಳವೇ ಹೆಚ್ಚಾಗಿ ನಡೆದಿದೆ ಎಂಬುದನ್ನು ನೀವು ಹೇಳುತ್ತೀರ. ವಿರಾಟ್ ಕೊಹ್ಲಿ ಹಾಗೂ ಗೌತಮ್ ಗಂಭೀರ್ ತಮ್ಮ ನಡುವೆ ತುಂಬಾ ಹಿಂದಿನಿಂದಲೂ ದ್ವೇಷ ಹಾಗೂ ಮನಸ್ತಾಪಗಳನ್ನು ಹೊಂದಿದ್ದಾರೆ. ಈ ಹಿಂದೆ ಚಿನ್ನಸ್ವಾಮಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದಿದ್ದ ಘಟನೆ ಬಳಿಕ ಇಬ್ಬರ ಸಂಬಂಧ ಸರಿಹೋಗಲೇ ಇಲ್ಲ" ಎಂದು ಹರ್ಭಜನ್ ಹೇಳಿದ್ದಾರೆ.
ಈ ಮೂಲಕ ತಾನು ಉದ್ಘಾಟನಾ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಶ್ರೀಶಾಂತ್ ಕೆನ್ನೆಗೆ ಬಾರಿಸಿದ್ದರ ಬಗ್ಗೆ ನಾಚಿಕೆಯಾಗ್ತಿದೆ ಎಂದ ಹರ್ಭಜನ್ ವಿರಾಟ್ ಹಾಗೂ ಗಂಭೀರ್ ನಡುವೆ ಎಲ್ಲವೂ ಸರಿಯಿಲ್ಲ ಎಂದಿದ್ದಾರೆ. ಅಲ್ಲದೇ ಓರ್ವ ಲೆಜೆಂಡ್ ಆಗಿ ಕೊಹ್ಲಿ ಇಂತಹ ಕೆಲಸಗಳನ್ನು ಮಾಡಬಾರದು ಎಂದು ಹರ್ಭಜನ್ ಸಿಂಗ್ ತಿಳಿಸಿದ್ದಾರೆ.