ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಈ ಬಾರಿಯ ಐಪಿಎಲ್ನಲ್ಲಿ ಭಾರಿ ಮುಖಭಂಗವಾಗಿದೆ. ಆಡಿದ ಮೂರು ಪಂದ್ಯಗಳಲ್ಲಿ ಅವರು ಗೆಲುವು ಕಾಣಲು ಸಾಧ್ಯವಾಗಿಲ್ಲ. ಡೇವಿಡ್ ವಾರ್ನರ್ ಹೊರತುಪಡಿಸಿ ಉಳಿದ ಬ್ಯಾಟರ್ ಗಳು ರನ್ ಗಳಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿದ್ದಾರೆ. ಅಕ್ಷರ್ ಪಟೇಲ್ ಕೂಡ ಬ್ಯಾಟಿಂಗ್ ಮತ್ತು ಬೌಲಿಂಗ್ನಲ್ಲಿ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲವಾಗಿದ್ದಾರೆ. ಮಿಚೆಲ್ ಮಾರ್ಷ್ ಆಸ್ಟ್ರೇಲಿಯಾಗೆ ವಾಪಸ್ ತೆರಳಿರುವುದು ತಂಡಕ್ಕೆ ಮತ್ತೊಂದು ದೊಡ್ಡ ಹಿನ್ನಡೆಯಾಗಿದೆ.
ಶನಿವಾರ ನಡೆದ ಪಂದ್ಯದಲ್ಲಿ ಅವರು ರಾಜಸ್ಥಾನ ರಾಯಲ್ಸ್ ವಿರುದ್ಧ 57 ರನ್ಗಳಿಂದ ಸೋಲನುಭವಿಸಿತು. 200 ರನ್ಗಳ ಗುರಿಯನ್ನು ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್, ಕೇವಲ 142 ರನ್ ಗಳಿಸಲು ಸಾಧ್ಯವಾಯಿತು. ಈ ದೊಡ್ಡ ಅಂತರದಲ್ಲಿ ಸೋಲನುಭವಿಸುವ ಮೂಲಕ ರನ್ರೇಟ್ ಮೇಲೆ ಕೂಡ ಭಾರಿ ಪರಿಣಾಮ ಬೀರಿದೆ. ಡೆಲ್ಲಿ ಕ್ಯಾಪಿಟಲ್ಸ್ ತಂಡದ ಹೀನಾಯ ಪ್ರದರ್ಶನವನ್ನು ನೋಡಿದ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಕಿಡಿ ಕಾರಿದ್ದಾರೆ.

ವೀರೇಂದ್ರ ಸೆಹ್ವಾಗ್ ಮಾತ್ರವಲ್ಲದೇ ಮಾಜಿ ಕ್ರಿಕೆಟಿಗ ರೋಹನ್ ಗವಾಸ್ಕರ್ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ಡೇವಿಡ್ ವಾರ್ನರ್ ವಿರುದ್ಧ ಟೀಕೆ ಮಾಡಿದ್ದಾರೆ. 200 ರನ್ಗಳ ಬೃಹತ್ ಗುರಿಯನ್ನು ಚೇಸ್ ಮಾಡುವ ಸಂದರ್ಭದಲ್ಲಿ 65 ಎಸೆತಗಳಲ್ಲಿ 55 ರನ್ ಗಳಿಸಿದ್ದರು. ವಾರ್ನರ್ ನಿಧಾನಗತಿಯಲ್ಲಿ ಬ್ಯಾಟಿಂಗ್ ಮಾಡಿದ್ದಕ್ಕೆ ಸೆಹ್ವಾಗ್ ಮತ್ತು ಗವಾಸ್ಕರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಓವರ್ನಲ್ಲೇ ಪೃಥ್ವಿ ಶಾ ಮತ್ತು ಮನೀಶ್ ಪಾಂಡೆ ಇಬ್ಬರನ್ನೂ ಔಟ್ ಮಾಡುವ ಮೂಲಕ ಟ್ರೆಂಟ್ ಬೌಲ್ಟ್ ಡೆಲ್ಲಿ ಕ್ಯಾಪಿಟಲ್ಸ್ಗೆ ಭಾರಿ ಆಘಾತ ನೀಡಿದರು. ರಿಲೀ ರೊಸೊವ್ ಕೂಡ ಯಾವುದೇ ದೊಡ್ಡ ಮೊತ್ತ ಗಳಿಸದೆ ಔಟಾಗುವ ಮೂಲಕ ಮತ್ತೆ ನಿರಾಸೆ ಮೂಡಿಸಿದರು. ನಂತರ ಲಲಿತ್ ಯಾದವ್ ಮತ್ತು ವಾರ್ನರ್ ಜೋಡಿ 64 ರನ್ಗಳನ್ನು ಕಲೆಹಾಕಿತು. ಆದರೂ ವಾರ್ನರ್ ದೊಡ್ಡ ಹೊಡೆತಗಳನ್ನು ಹೊಡೆಯಲು ಪ್ರಯತ್ನ ಮಾಡಲಿಲ್ಲ.
ಲಲಿತ್ ಯಾದವ್ ಉತ್ತಮವಾಗಿ ಬ್ಯಾಟಿಂಗ್ ಮಾಡುವ ಸಂದರ್ಭದಲ್ಲಿ ವಾರ್ನರ್ ವೇಗವಾಗಿ ರನ್ ಗಳಿಸಲು ಪ್ರಯತ್ನ ಮಾಡಬೇಕಿತ್ತು. ಅವರು ವೇಗವಾಗಿ ರನ್ ಗಳಿಸದೇ ಇದ್ದದ್ದು ತಂಡದ ಮೇಲೆ ಹೆಚ್ಚಿನ ಒತ್ತಡ ಹೇರಿತು. ವಾರ್ನರ್ ಅಂತಿಮವಾಗಿ ತಮ್ಮ ಅರ್ಧಶತಕ ಗಳಿಸಿದರು, ಐಪಿಎಲ್ನಲ್ಲಿ 6000 ರನ್ ಗಳಿಸಿ ದಾಖಲೆ ಮಾಡಿದರು. ಆದರೂ ಡೆಲ್ಲಿ ಕ್ಯಾಪಿಟಲ್ಸ್ 9 ವಿಕೆಟ್ ಕಳೆದುಕೊಂಡು 142 ರನ್ ಮಾತ್ರ ಗಳಿಸಿತು.

ಐಪಿಎಲ್ನಲ್ಲಿ ಆಡಬೇಡಿ ಎಂದ ಸೆಹ್ವಾಗ್
ವಾರ್ನರ್ ಇನ್ನಿಂಗ್ಸ್ನಿಂದ ಕೋಪಗೊಂಡಿರುವ ಸೆಹ್ವಾಗ್ ಕಿಡಿ ಕಾರಿದರು. ಡೆಲ್ಲಿ ವಿರುದ್ಧ ಸ್ಫೋಟಕ ಇನ್ನಿಂಗ್ಸ್ ಆಡಿದ ಯಶಸ್ವಿ ಜೈಸ್ವಾಲ್ರಂತ ಆಟಗಾರರನ್ನು ನೋಡಿ ಕಲಿಯಿರಿ ಇಲ್ಲವಾದರೆ ಐಪಿಎಲ್ನಲ್ಲಿ ಆಡಬೇಡಿ ಎಂದು ಹೇಳಿದರು. "ಈಗ ಅವರಿಗೆ ಹೇಳುವ ಸಮಯ ಬಂದಿದೆ, ಇದನ್ನು ಕೇಳಿದರೆ ಅವರಿಗೆ ನೋವಾಗಬಹುದು. ಡೇವಿಡ್ ವಾರ್ನರ್ ನೀವು ಇದನ್ನು ಕೇಳುತ್ತಿದ್ದರೆ, ದಯವಿಟ್ಟು ಉತ್ತಮವಾಗಿ ಆಡಿ, 25 ಎಸೆತಗಳಲ್ಲಿ 50 ರನ್ ಗಳಿಸಿ, ಜೈಸ್ವಾಲ್ ಅವರನ್ನು ನೋಡಿ ಕಲಿಯಿರಿ. ನಿಮಗೆ ಹಾಗೆ ಮಾಡಲು ಸಾಧ್ಯವಾಗದಿದ್ದರೆ, ಐಪಿಎಲ್ಗೆ ಬಂದು ಆಡಬೇಡಿ" ಎಂದು ಹೇಳಿದರು.
"ಡೇವಿಡ್ ವಾರ್ನರ್ 55-60 ರನ್ ಗಳಿಸುವ ಬದಲು, 30 ರನ್ಗಳಿಗೆ ಔಟಾದರೆ ತಂಡಕ್ಕೆ ಅನುಕೂಲವಾಗಿತ್ತು. ರೋವ್ಮನ್ ಪೊವೆಲ್ ಮತ್ತು ಇಶಾನ್ ಪೊರೆಲ್ ಅವರಂತಹ ಆಟಗಾರರು ತುಂಬಾ ಮುಂಚೆಯೇ ಕ್ರೀಸ್ಗೆ ಬಂದಿದ್ದರೆ ಏನನ್ನಾದರೂ ಮಾಡಬಹುದಿತ್ತು. ಅವರು ತಂಡದಲ್ಲಿ ದೊಡ್ಡ ಹಿಟ್ಟರ್ ಗಳು ಆದರೆ ಅವರಿಗೆ ಹೆಚ್ಚಿನ ಸಮಯ ಸಿಗಲಿಲ್ಲ" ಎಂದು ಹೇಳಿದರು.

ಕಿಡಿ ಕಾರಿದ ರೋಹನ್ ಗವಾಸ್ಕರ್
ಭಾರತದ ಮಾಜಿ ಕ್ರಿಕೆಟಿಗ ಗವಾಸ್ಕರ್ ಕೂಡ ವಾರ್ನರ್ ವಿರುದ್ಧ ಕಿಡಿಕಾರಿದರು, ಇದು ಯಾವುದೇ ಯುವ ಭಾರತೀಯ ಕ್ರಿಕೆಟಿಗನಾಗಿದ್ದರೆ, ಇದು ಐಪಿಎಲ್ನಲ್ಲಿ ಅವರ ಕೊನೆಯ ಪಂದ್ಯವಾಗುತ್ತಿತ್ತು ಎಂದು ಹೇಳಿದರು. " ನೀವು ಒಂದು ತಂಡದ ನಾಯಕರಾಗಿದ್ದೀರಿ, ಅಪಾರ ಅನುಭವ ಹೊಂದಿದ್ದೀರಾ, ಐಪಿಎಲ್ನಲ್ಲಿ ವೇಗವಾಗಿ 6000 ರನ್ ಗಳಿಸಿದವರು. ಅವರು ಇಂತಹ ಇನ್ನಿಂಗ್ಸ್ಗಳನ್ನು ನಿಮ್ಮಿಂದ ನಿರೀಕ್ಷೆ ಮಾಡುವುದಿಲ್ಲ. ನಾಯಕಾರಿಗಿಲ್ಲದಿದ್ದರೆ ತಂಡದಲ್ಲಿ ಸ್ಥಾನ ಸಿಗುತ್ತಿರಲಿಲ್ಲ. ಈ ಸೋಲಿನ ಹೊಣೆಯನ್ನು ವಾರ್ನರ್ ಹೊರಬೇಕು" ಎಂದು ಹೇಳಿದರು.