ಮುಂಬೈ ಇಂಡಿಯನ್ಸ ತಂಡದ ನಾಯಕ ರೋಹಿತ್ ಶರ್ಮಾ ಈ ಬಾರಿಯ ಆವೃತ್ತಿಯಲ್ಲಿ ಕಳಪೆ ಪ್ರದರ್ಶನ ಮುಂದಿವರಿಸಿದ್ದಾರೆ. ಮುಂಬೈ ಇಂಡಿಯನ್ಸ್ ತಂಡದ ಪರವಾಗಿ ರೋಹಿತ್ ಮಿಂಚಲು ವಿಫಲವಾಗುತ್ತಿದ್ದು ತಂಡದ ಪ್ರದರ್ಶನಕ್ಕೂ ಹಿನ್ನಡೆಯುಂಟು ಮಾಡಿದೆ. ಈ ಹಿನ್ನೆಲೆಯಲ್ಲಿ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಪ್ರತಿಕ್ರಿಯೆ ನೀಡಿದ್ದು ರೋಹಿತ್ ಶರ್ಮಾ ಎಲ್ಲಿ ಎಡವುತ್ತಿದ್ದಾರೆ ಎಂಬುದರ ಬಗ್ಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.
ಈ ಬಾರಿಯ ಐಪಿಎಲ್ನಲ್ಲಿ ರೋಹಿತ್ ಶರ್ಮಾ ರನ್ಗಳಿಸಲು ಅಕ್ಷರಶಃ ಪರದಾಡುತ್ತಿದ್ದಾರೆ. ಈವರೆಗೆ ಆಡಿರುವ ಪಂದ್ಯಗಳಲ್ಲಿ ರೋಹಿತ್ 18.39ರ ಸರಾಸರಿಯಲ್ಲಿ 184ರನ್ ಮಾತ್ರವೇ ಗಳಿಸಿದ್ದು ಅವರ ಸ್ಟ್ರೈಕ್ರೇಟ್ 126.89 ಮಾತ್ರವೇ ಇದೆ. ಅದರಲ್ಲೂ ಕಳೆದ ಎರಡು ಪಂದ್ಯಗಳಲ್ಲಿ ರೋಹಿತ್ ಶರ್ಮಾ ಖಾತೆಯನ್ನೇ ತೆರೆದಿಲ್ಲ. ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ರೋಹಿತ್ ಶೂನ್ಯ ಸುತ್ತುವ ಮೂಲಕ ಐಪಿಎಲ್ ಇತಿಹಾಸದಲ್ಲಿ 16 ಶೂನ್ಯ ಸುತ್ತಿ ಅತ್ಯಂತ ಹೆಚ್ಚು ಬಾರಿ ಈ ಬೇಡದ ಸಾಧನೆ ಮಾಡಿದ ದಾಖಲೆಯನ್ನು ಬರೆದಿದ್ದಾರೆ.

ಈ ಬಗ್ಗೆ ಮಾತನಾಡಿರುವ ವೀರೇಂದ್ರ ಸೆಹ್ವಾಗ್, "ರೋಹಿತ್ ಶರ್ಮಾ ಬೌಲರ್ಗಳ ವಿರುದ್ಧ ಹೋರಾಡುತ್ತಿಲ್ಲ. ಅವರು ತಮ್ಮೊಂದಿಗೇ ಹೋರಾಡುತ್ತಿದ್ದಾರೆ. ಅವರು ಮೆಂಟರ್ ಬ್ಲಾಕ್ಗೆ ಒಳಗಾಗಿದ್ದಾರೆ" ಎಂದಿದ್ದಾರೆ. ಮುಂದುವರಿದು ಮಾತನಾಡಿರುವ ಅವರು, "ಅವರ ಬ್ಯಾಟಿಂಗ್ನಲ್ಲಿ ತಾಂತ್ರಿಕವಾಗಿ ಯಾವುದೇ ಸಮಸ್ಯಯಿಲ್ಲ. ಆದರೆ ಅವರ ಮನಸ್ಸಿನಲ್ಲಿ ಕೆಲ ಗೊಂದಲಗಳಿವೆ. ಆದರೆ ಅವರು ಅದರಿಂದ ಹೊರಬಂದ ದಿನ ಹಿಂದಿನ ಎಲ್ಲಾ ವೈಫಲ್ಯಗಳನ್ನು ಸರಿಪಡಿಸಿಕೊಳ್ಳಲಿದ್ದಾರೆ" ಎಂದಿದ್ದಾರೆ ಮಾಜಿ ಕ್ರಿಕೆಟಿಗ.
ಇನ್ನು ಮುಂಬೈ ಇಂಡಿಯನ್ಸ್ ತಂಡ ಈ ಬಾರಿಯ ಟೂರ್ನಿಯಲ್ಲಿ ನಿರೀಕ್ಷಿತ ಪ್ರದರ್ಶನ ನೀಡಲು ವಿಫಲವಾಗಿದ್ದು ಸದ್ಯ ಅಂಕಪಟ್ಟಿಯಲ್ಲಿ 7ನೇ ಸ್ಥಾನದಲ್ಲಿದೆ. ಆಡಿರುವ 10 ಪಂದ್ಯಗಳಲ್ಲಿ ಮುಂಬೈ ಇಂಡಿಯನ್ಸ್ ತಂಡ ಐದು ಗೆಲುವು ಹಾಗೂ ಐದು ಸೋಲು ಅನುಭವಿಸಿದ್ದು 10 ಅಂಗಳನ್ನು ಖಾತೆಯಲ್ಲಿ ಹೊಂದಿದೆ. ಆದರೆ ನೆಟ್ರನ್ರೇಟ್ನಲ್ಲಿಯೂ ಹಿಂದುಳಿದಿರುವ ಕಾರಣ ಅಂಕಪಟ್ಟಿಯಲ್ಲಿ ಕೆಳ ಹಂತದಲ್ಲಿ ಸ್ಥಾನ ಪಡೆದುಕೊಂಡಿದೆ.
ಇನ್ನು ಮಂಗಳವಾರ ಐಪಿಎಲ್ನಲ್ಲಿ ಕುತೂಹಲಕಾರಿ ಪಂದ್ಯವೊಂದು ನಡೆಯಲಿದೆ. ಮುಂಬೈ ಇಂಡಿಯನ್ಸ್ ತಂಡವನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ಎದುರಿಸಲಿದ್ದು ಎರಡು ತಂಡಗಳಿಗೂ ಈ ಪಂದ್ಯದ ಗೆಲುವು ಅತ್ಯಂತ ಮಹತ್ವದ್ದಾಗಿದೆ. ಈ ಪಂದ್ಯದಲ್ಲಿ ಗೆಲುವು ಸಾಧಿಸಿದ ತಂಡ ಪ್ಲೇಆಫ್ಗೇರುವ ಸ್ಪರ್ಧೆಯಲ್ಲಿ ಮುನ್ನಡೆ ಸಾಧಿಸಿದರೆ ಸೋತ ತಂಡಕ್ಕೆ ಪ್ಲೇಆಫ್ ಹಾದಿ ದುರ್ಗಮವಾಗಲಿದೆ.
ಸೋಲಿನಿಂದ ಹೊರಬರಲು ಎರಡು ತಂಡಗಳ ಪ್ರಯತ್ನ
ಇನ್ನು ಕಳೆದ ಪಂದ್ಯದಲ್ಲಿ ಎರಡು ತಂಡಗಳು ಕೂಡ ಸೋಲು ಅನುಭವಿಸಿದ್ದು ಸೋಲಿನ ಕಹಿಯಿಂದ ಹೊರಬರುವ ಪ್ರಯತ್ನ ನಡೆಸಲಿದೆ. ಮುಂಬೈ ಇಂಡಿಯನ್ಸ್ ತಂಡ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಸೋಲಿನ ಕಹಿ ಅನುಭವಿಸಿದ್ದರೆ ಆರ್ಸಿಬಿ ತಂಡ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಹೀನಾಯ ಸೋಲು ಕಂಡಿತ್ತು. ಇನ್ನು ಈ ಬಾರಿಯ ಐಪಿಎಲ್ ಟೂರ್ನಿಯ ಆರ್ಸಿಬಿ ಹಾಗೂ ಮುಂಬೈ ಇಂಡಿಯನ್ಸ್ ತಂಡಗಳು ಮೊದಲ ಸುತ್ತಿನಲ್ಲಿ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮುಖಾಮುಖಿಯಾಗಿತ್ತು. ಈ ಪಂದ್ಯದಲ್ಲಿ ಆರ್ಸಿಬಿ ಗೆದ್ದು ಬೀಗಿತ್ತು.