ಬೌಲಿಂಗ್ ವೈಫಲ್ಯದಿಂದ ಕಂಗಾಲಾಗಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಸಮಾಧಾನಕರ ಸುದ್ದಿ ಸಿಕ್ಕಿದೆ. ಪ್ರಮುಖ ಬೌಲರ್ ವನಿಂದು ಹಸರಂಗ ಸೋಮವಾರ ಬೆಂಗಳೂರಿಗೆ ಆಗಮಿಸಿದ್ದು, ಆರ್ ಸಿಬಿ ತಂಡವನ್ನು ಸೇರಿಕೊಂಡಿದ್ದಾರೆ. ಏಪ್ರಿಲ್ 15ರಂದು ಶನಿವಾರ ನಡೆಯಲಿರುವ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯಕ್ಕೆ ಅವರು ಲಭ್ಯರಾಗಿದ್ದಾರೆ. ವನಿಂದು ಹಸರಂಗ ಆಗಮನದಿಂದ ಆರ್ ಸಿಬಿ ತಂಡಕ್ಕೆ ನಿಟ್ಟುಸಿರು ಬಿಟ್ಟಂತಾಗಿದೆ.
ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಆಡುತ್ತಿದ್ದ ಕಾರಣ ಶ್ರೀಲಂಕಾ ಸ್ಪಿನ್ನರ್ ಐಪಿಎಲ್ನಲ್ಲಿ ಮೊದಲ ಮೂರು ಪಂದ್ಯಗಳನ್ನು ತಪ್ಪಿಸಿಕೊಂಡಿದ್ದರು. ಐಪಿಎಲ್ ಮೆಗಾಹರಾಜಿನಲ್ಲಿ ಆರ್ ಸಿಬಿ ಅವರನ್ನು 10.5 ಕೋಟಿ ರುಪಾಯಿ ನೀಡಿ ಖರೀದಿ ಮಾಡಿತ್ತು. ಅದಕ್ಕೆ ತಕ್ಕಂತೆಯೇ ಕಳೆದ ಆವೃತ್ತಿಯಲ್ಲಿ ವಿಕೆಟ್ ಗಳಿಸಿದ್ದರು. 2022ರ ಐಪಿಎಲ್ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಆಟಗಾರರ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದರು.

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈ ಬಾರಿ ಆಡಿರುವ ಮೂರು ಪಂದ್ಯಗಳಲ್ಲಿ ಎರಡರಲ್ಲಿ ಸೋತಿದ್ದು, ಒಂದು ಪಂದ್ಯದಲ್ಲಿ ಮಾತ್ರ ಜಯ ಸಾಧಿಸಿದೆ. ಮೂರು ಪಂದ್ಯಗಳಲ್ಲಿ ಆರ್ ಸಿಬಿ ತಂಡಕ್ಕೆ ಬೌಲಿಂಗ್ ಸಮಸ್ಯೆಯೇ ದೊಡ್ಡ ಸಮಸ್ಯೆಯಾಗಿದೆ. ಸೋಮವಾರ ನಡೆದ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ಆರ್ ಸಿಬಿ 212 ರನ್ಗಳನ್ನು ಹೊಡೆದರು, ರಕ್ಷಣೆ ಮಾಡುವಲ್ಲಿ ವಿಫಲವಾಯಿತು. ಕರಣ್ ಶರ್ಮಾ 3 ಓವರ್ ಗಳಲ್ಲಿ 48 ರನ್ ನೀಡಿದರೆ, ಹರ್ಷಲ್ ಪಟೇಲ್ 4 ಓವರ್ ಗಳಲ್ಲಿ 48 ರನ್ ನೀಡಿದರು.
ಇನ್ನಾದರೂ ಸುಧಾರಿಸುತ್ತಾ ಬೌಲಿಂಗ್
ಈ ಆವೃತ್ತಿಯ ಮೂರು ಪಂದ್ಯಗಳಲ್ಲಿ ಆರ್ ಸಿಬಿ ಪವರ್ ಪ್ಲೇನಲ್ಲಿ ಅದ್ಭುತ ಬೌಲಿಂಗ್ ಮಾಡಿದೆ. 2023ರ ಐಪಿಎಲ್ನಲ್ಲಿ ಪವರ್ ಪ್ಲೇನಲ್ಲಿ ಅತಿ ಕಡಿಮೆ ರನ್ ನೀಡಿ, ವಿಕೆಟ್ ಪಡೆದಿರುವುದು ಆರ್ ಸಿಬಿ. ಆದರೆ ಮಧ್ಯಮ ಮತ್ತು ಅಂತಿಮ ಓವರ್ ಗಳಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಬೌಲಿಂಗ್ ಪ್ರದರ್ಶನ ತೀರಾ ಕಳಪೆಯಾಗಿದೆ. ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ಕೂಡ ಇದು ಸಾಬೀತಾಗಿದೆ. ಪವರ್ ಪ್ಲೇನಲ್ಲಿ ರನ್ಗಳಿಗೆ ಕಡಿವಾಣ ಹಾಕಿ ಮೂರು ವಿಕೆಟ್ ಪಡೆದ ಆರ್ ಸಿಬಿ ನಂತರ ಪಂದ್ಯವನ್ನು ಬಿಟ್ಟುಕೊಟ್ಟಿತು.
ವನಿಂದು ಹಸರಂಗ ತಂಡವನ್ನು ಸೇರಿಕೊಂಡಿರುವುದು ಸದ್ಯ ತಂಡಕ್ಕೆ ಹೆಚ್ಚಿನ ಶಕ್ತಿ ನೀಡಲಿದೆ ಎಂದು ನಂಬಲಾಗಿದೆ. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಅವರು ಕಣಕ್ಕಿಳಿಯುವುದು ಖಚಿತವಾಗಿದೆ. ಡೇವಿಡ್ ವಿಲ್ಲಿ ಬದಲಾಗಿ ಹಸರಂಗ ಕಣಕ್ಕಿಳಿಯುವ ಸಾಧ್ಯತೆ ಇದೆ. ಕರಣ್ ಶರ್ಮಾ ತಂಡದಿಂದ ಹೊರಗುಳಿದರೆ, ಮತ್ತೊಬ್ಬ ಭಾರತದ ವೇಗಿ ತಂಡವನ್ನು ಸೇರಿಕೊಳ್ಳಬಹುದು.

ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಮುಂದಿನ ಪಂದ್ಯ
ರಾಯಲ್ ಚಾಲೆಂಜರ್ಸ್ ಬೆಂಗಳೂರು ತನ್ನ ಮುಂದಿನ ಪಂದ್ಯವನ್ನು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಆಡಲಿದೆ. ಏಪ್ರಿಲ್ 15ರ ಶನಿವಾರ, ಮಧ್ಯಾಹ್ನ 3.30ಕ್ಕೆ ಈ ಪಂದ್ಯ ಆರಂಭವಾಗಲಿದೆ. ಆಡಿದ ಮೂರು ಪಂದ್ಯಗಳಲ್ಲಿ ಎರಡು ಪಂದ್ಯಗಳನ್ನು ಸೋತಿರುವ ಆರ್ ಸಿಬಿ ಡೆಲ್ಲಿ ವಿರುದ್ಧ ಗೆಲುವು ಸಾಧಿಸುವ ಲೆಕ್ಕಾಚಾರದಲ್ಲಿದೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಈ ಪಂದ್ಯ ನಡೆಯಲಿದ್ದು, ತಂಡದಲ್ಲಿ ಹಲವು ಬದಲಾವಣೆಗಳನ್ನು ನಿರೀಕ್ಷೆ ಮಾಡಬಹುದಾಗಿದೆ. ಮುಖ್ಯವಾಗಿ ಬೌಲಿಂಗ್ ವಿಭಾಗದಲ್ಲಿ ಸುಧಾರಣೆ ಕಂಡರೆ ಮಾತ್ರ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮುಂದಿನ ಪಂದ್ಯಗಳಲ್ಲಿ ಗೆಲುವು ಸಾಧಿಸಬಹುದು, ಇಲ್ಲವಾದರೆ ಈ ಸಲ ಕಪ್ ನಮ್ದೇ ಅನ್ನೋದನ್ನ ಮರೆಯಬೇಕಾಗುತ್ತದೆ.