ಇಂಡಿಯನ್ ಪ್ರೀಮಿಯರ್ ಲೀಗ್ 2023ರ ಆವೃತ್ತಿಯಲ್ಲಿ ಭಾರಿ ನಿರೀಕ್ಷೆ ಹೊಂದಿದ್ದ ಪಂದ್ಯದಲ್ಲಿ ರಾಯಲ್ಸ್ ಚಾಲೆಂಜರ್ಸ್ ಬೆಂಗಳೂರು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 8 ರನ್ಗಳಿಂದ ಸೋಲನುಭವಿಸಿದೆ. ಸೋತ ಬೆನ್ನಲ್ಲೇ ಮಾಜಿ ಕ್ರಿಕೆಟಿಗ ವಾಸಿಂ ಜಾಫರ್ ಆರ್ಸಿಬಿ ಬ್ಯಾಟರ್ ಮಹಿಪಾಲ್ ಲೊಮ್ರೊರ್ ಅವರನ್ನು 3ನೇ ಕ್ರಮಾಂಕದಲ್ಲಿ ಕಳುಹಿಸಿದ ಬಗ್ಗೆ ಪ್ರಶ್ನೆ ಮಾಡಿದ್ದಾರೆ.
227 ರನ್ಗಳ ಬೃಹತ್ ಗುರಿಯನ್ನು ಬೆನ್ನತ್ತಿದ ಆರ್ಸಿಬಿ ವಿರಾಟ್ ಕೊಹ್ಲಿ ಅವರ ವಿಕೆಟ್ ಅನ್ನು ಬೇಗನೆ ಕಳೆದುಕೊಂಡಿತು. ಕೊಹ್ಲಿ ಔಟಾಗುತ್ತಿದ್ದಂತೆ ಎಡಗೈ ಬ್ಯಾಟರ್ ಮಹಿಪಾಲ್ ಲೊಮ್ರೊರ್ 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಬಂದರು, 5 ಎಸೆತಗಳನ್ನು ಎದುರಿಸಿದ ಅವರು ಯಾವುದೇ ರನ್ ಗಳಿಸದೇ ಔಟಾದರು. ಇದು ತಂಡದ ಮೇಲಿನ ಒತ್ತಡವನ್ನು ಮತ್ತಷ್ಟು ಹೆಚ್ಚಿಸಿತು.

ಮಹಿಪಾಲ್ ಲೊಮ್ರೊರ್ ಅವರನ್ನು 3ನೇ ಕ್ರಮಾಂಕದಲ್ಲಿ ಕಳುಹಿಸಿದ ಆರ್ಸಿಬಿ ಯೋಜನೆಯನ್ನು ವಾಸಿಂ ಜಾಫರ್ ಪ್ರಶ್ನಿಸಿದ್ದಾರೆ. ಲೊಮ್ರೊರ್ ದೇಶೀಯ ಕ್ರಿಕೆಟ್ನಲ್ಲಿ ಕೂಡ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವುದಿಲ್ಲ, ಅವರು ಮಧ್ಯಮ ಕ್ರಮಾಂಕದಲ್ಲಿ ಉತ್ತಮವಾಗಿ ಆಡುತ್ತಾರೆ, ಲೊಮ್ರೊರ್ ಬದಲಾಗಿ ಸುಯಶ್ ಪ್ರಭುದೇಸಾಯಿ ಅವರಂತಹ ಬ್ಯಾಟರ್ ಮೂರನೇ ಕ್ರಮಾಂಕದಲ್ಲಿ ಕಳುಹಿಸಬೇಕಿತ್ತು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಆರ್ಸಿಬಿ ಸೋಲಿನ ಬಗ್ಗೆ ಮಾತನಾಡಿದ ವಾಸಿಂ ಜಾಫರ್, ಪ್ರಮುಖ ಬ್ಯಾಟರ್ ರಜತ್ ಪಾಟಿದಾರ್ ಅನುಪಸ್ಥಿತಿ ತಂಡಕ್ಕೆ ಹೆಚ್ಚಾಗಿ ಕಾಡುತ್ತಿದೆ ಎಂದು ಹೇಳಿದರು. ಇದರಿಂದಾಗಿ ತಂಡದ ಹಿರಿಯ ಬ್ಯಾಟರ್ ಗಳ ಮೇಲೆ ಹೆಚ್ಚಿನ ಒತ್ತಡ ಬಿದ್ದಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಕಾಲಿನ ಗಾಯದ ಪರಿಣಾಮವಾಗಿ ರಜತ್ ಪಾಟಿದಾರ್ ಈ ಬಾರಿ ಐಪಿಎಲ್ನಿಂದ ಹೊರಗುಳಿದಿದ್ದಾರೆ.
ಆರ್ಸಿಬಿ ಆರಂಭಿಕ ಆಟಗಾರರು ಅದ್ಭುತ ಫಾರ್ಮ್ನಲ್ಲಿದ್ದಾರೆ. ಮ್ಯಾಕ್ಸ್ವೆಲ್ ಕೂಡ ರನ್ ಗಳಿಸುತ್ತಿದ್ದಾರೆ. ಆದರೆ ಉಳಿದ ಬ್ಯಾಟರ್ ಗಳು ರನ್ ಗಳಿಸಲು ಪರದಾಡುತ್ತಿದ್ದಾರೆ. ಆರ್ಸಿಬಿ ಬ್ಯಾಟಿಂಗ್ ಈ ಮೂವರ ಮೇಲೆ ಹೆಚ್ಚಾಗಿ ಅವಲಂಬಿತವಾಗಿದೆ. ಇವರು ಔಟಾದರೆ ಆರ್ಸಿಬಿ ಸುಲಭವಾಗಿ ಪಂದ್ಯವನ್ನು ಕೈಚೆಲ್ಲುತ್ತದೆ. ಅದರಲ್ಲೂ ಮಧ್ಯಮ ಕ್ರಮಾಂಕ ಸಾಕಷ್ಟು ದುರ್ಬಲವಾಗಿದೆ.
"ಸುಯಶ್ ಪ್ರಭುದೇಸಾಯಿ ಗೋವಾ ತಂಡಕ್ಕಾಗಿ ಅಗ್ರಸ್ಥಾನದಲ್ಲಿ ಬ್ಯಾಟಿಂಗ್ ಮಾಡುತ್ತಾರೆ, ಮೂರನೇ ಕ್ರಮಾಂಕದಲ್ಲಿ ಅವರನ್ನು ಆಡಿಸಬಹುದು. ಅನುಜ್ ರಾವತ್ ಕೂಡ ಅಗ್ರಸ್ಥಾನದಲ್ಲಿ ಬ್ಯಾಟಿಂಗ್ ಮಾಡಿದ ಅನುಭವ ಹೊಂದಿದ್ದಾರೆ, ಲೊಮ್ರೊರ್ ರಾಜಸ್ಥಾನಕ್ಕೆ ಐದು, ಆರು ಮತ್ತು ಏಳನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುತ್ತಾರೆ, ಅವರನ್ನು ಮಧ್ಯಮ ಕ್ರಮಾಂಕದಲ್ಲಿ ಆಡಿಸಬೇಕು" ಎಂದು ಜಾಫರ್ ಸಲಹೆ ನೀಡಿದ್ದಾರೆ.

ತಂಡದ ಅನುಭವಿ ಬ್ಯಾಟರ್ ದಿನೇಶ್ ಕಾರ್ತಿಕ್ ಜವಾಬ್ದಾರಿ ತೆಗೆದುಕೊಂಡು ಪಂದ್ಯವನ್ನು ಗೆಲ್ಲಿಸಬೇಕು ಎಂದು ಹೇಳಿದರು. ಅನುಭವಿ ಕೀಪರ್-ಬ್ಯಾಟರ್ ಕೊನೆಯವರೆಗೂ ಬ್ಯಾಟಿಂಗ್ ಮಾಡುವ ಅಗತ್ಯವಿದೆ ಕಳೆದ ಬಾರಿಯಂತೆ ಅವರು ಉತ್ತಮ ಲಯದಲ್ಲಿ ಕಾಣುತ್ತಿಲ್ಲ ಎಂದರು. ಆರ್ಸಿಬಿ ಬ್ಯಾಟಿಂಗ್ ಬಗ್ಗೆ ವಾಸಿಂ ಜಾಫರ್ ಕಳವಳ ವ್ಯಕ್ತಪಡಿಸಿದ್ದಾರೆ.
ಸಿಎಸ್ಕೆ ತಂಡದ ಬೌಲಿಂಗ್ ದುರ್ಬಲವಾಗಿದೆ, ಚಿನ್ನಸ್ವಾಮಿಯಂತಹ ಬ್ಯಾಟಿಂಗ್ ಪಿಚ್ನಲ್ಲಿ ಇಂತಹ ಅನನುಭವಿ ಬೌಲಿಂಗ್ ವಿರುದ್ಧ ನೀವು ಗೆಲ್ಲದಿದ್ದರೆ ಮುಂದಿನ ದಿನಗಳಲ್ಲಿ ಮತ್ತಷ್ಟು ಕಷ್ಟವಾಗಲಿದೆ ಎಂದು ವಾಸಿಂ ಜಾಫರ್ ಅಭಿಪ್ರಾಯಪಟ್ಟಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಬೇಕು ಎಂದು ಹೇಳಿದರು.