ಈ ಬಾರಿಯ ಐಪಿಎಲ್ನಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ಮಿಂಚುವಲ್ಲಿ ವಿಫಲವಾಗಿದ್ದರೂ ಆರ್ಸಿಬಿ ತಂಡದ ವಿರುದ್ಧ ಆಡಿದ ಎರಡು ಪಂದ್ಯಗಳಲ್ಲಿಯೂ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ ಟೂರ್ನಿಯಲ್ಲಿ ಮೂರನೇ ಗೆಲುವು ಸಾಧಿಸಲುವಲ್ಲಿ ಯಶಸ್ವಿಯಾಗಿದೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಆರ್ಸಿಬಿ ವಿರುದ್ಧ ಮೊದಲಿಗೆ ಬ್ಯಾಟಿಂಗ್ನಲ್ಲಿ ಅಬ್ಬರಿಸಿದ್ದ ಕೆಕೆಆರ್ ಬಳಿಕ ಬೌಲಿಂಗ್ನಲ್ಲಿಯೂ ಮಿಂಚಿದೆ. ಅದರಲ್ಲೂ ಕೆಕೆಆರ್ ತಂಡದ ಸ್ಪಿನ್ನರ್ಗಳು ಆರ್ಸಿಬಿ ತಂಡಕ್ಕೆ ದೊಡ್ಡ ಆಘಾತವನ್ನು ನೀಡಿದ್ದಾರೆ.
ಕೆಕೆಆರ್ ಸ್ಪಿನ್ನರ್ಗಳ ಈ ಪ್ರದರ್ಶನದ ಬಗ್ಗೆ ಮಾಜಿ ಕ್ರಿಕೆಟಿಗ ಜಹೀರ್ ಖಾನ್ ಮೆಚ್ಚುಗೆ ಸೂಚಿಸಿದ್ದಾರೆ. ಅಲ್ಲದೆ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ತನ್ನ ಸ್ಪಿನ್ ಬೌಲರ್ಗಳು ಹೆಚ್ಚಾಗಿ ಅವಲಂಬಿಸಿದೆ ಎಂದಿದ್ದಾರೆ ಜಹೀರ್ ಖಾನ್. ಸುನಿಲ್ ನರೈನ್ ಇತ್ತೀಚಿನ ಕೆಲ ಪಂದ್ಯಗಳಲ್ಲಿ ವೈಫಲ್ಯತೆ ಅನುಭವಿಸಿದರೂ ವರುಣ್ ಚಕ್ರವರ್ತಿ ಹಾಗೂ ಸುಯಶ್ ಶರ್ಮಾ ತಂಡದ ಮಿಂಚುತ್ತಿದ್ದಾರೆ.

"ಮೊದಲಿಗೆ ನೀವು ಉತ್ತಮವಾದ ರಣತಂತ್ರವನ್ನು ಹೊಂದರಬೇಕಾಗುತ್ತದೆ. ಅದು ಪಿಚ್ನಲ್ಲಿ ನಿಮಗೆ ನೆರವು ನೀಡುತ್ತದೆ. ಆರ್ಸಿಬಿ ವಿರುದ್ಧದ ಪಂದ್ಯದಲ್ಲಿ ಸ್ಪಿನ್ನರ್ಗಳನ್ನು ಬಳಸಿಕೊಳ್ಳಲು ನಿರ್ಧರಿಸಿತ್ತು. ಸ್ಪಿನ್ನರ್ಗಳು ತಮಗೆ ನೀಡಿದ್ದ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಇದು ನಾಯಕತ್ವಕ್ಕೆ ಸಂಬಂಧಿಸಿದ ವಿಚಾರ ಮಾತ್ರವಲ್ಲ. ಅಷ್ಟೇ ಅದ್ಭುತವಾದ ಸಾಮರ್ಥ್ಯವನ್ನು ಹೊಂದಿರುವ ಬೌಲರ್ಗಳು ಕೂಡ ಬೇಕಾಗುತ್ತದೆ" ಎಂದಿದ್ದಾರೆ ಮಾಜಿ ಕ್ರಿಕೆಟಿಗ ಜಹೀರ್ ಖಾನ್.
ಈ ಪಂದ್ಯದಲ್ಲಿ ವರುಣ್ ಚಕ್ರವರ್ತಿ ಆರ್ಸಿಬಿ ವಿರುದ್ಧ ಅದ್ಭುತ ಬೌಲಿಂಗ್ ಪ್ರದರ್ಶಿಸಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದುಕೊಂಡಿದ್ದಾರೆ. ನಾಲ್ಕು ಓವರ್ಗಳಲ್ಲಿ ವರುಣ್ 27 ರನ್ ನೀಡಿ 3 ವಿಕೆಟ್ ಸಂಪಾದಿಸಿದರು. ಇನ್ನು ಮತ್ತೊಂದೆಡೆ ಸುಯಶ್ ಫಾಫ್ ಡು ಪ್ಲೆಸಿಸ್ ಹಾಗೂ ಶಹ್ಬಾಜ್ ಅಹ್ಮದ್ ಅವರ ಪ್ರಮುಖ ವಿಕೆಟ್ಗಳನ್ನು ಕಬಳಿಸಿದ್ದಾರೆ.
ಈ ಪಂದ್ಯದಲ್ಲಿ ಟಾಸ್ ಸೋತು ಮೊದಲಿಗೆ ಬ್ಯಾಟಿಂಗ್ ಮಾಡಿದ ಕೆಕೆಆರ್ ತಂಡಕ್ಕೆ ಅದ್ಭುತ ಆರಂಭ ಪಡೆಯಿತು. ಜೇಸನ್ ರಾಯ್ ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸಿ ಅಬ್ಬರದ ಆರಂಭ ನೀಡಿದರು. 29 ಎಸೆತಗಳಲ್ಲಿ 56 ರನ್ ಸಿಡಿಸಿ ಅಬ್ಬರಿಸಿದ ಪರಿಣಾಮ ಮೊದಲಾರ್ಧದಲ್ಲಿ ಕೊಹ್ಲಿ ಪಡೆಗೆ ಹಿನ್ನಡೆಯಾಗುವಂತೆ ಮಾಡಿದರು. ನಂತರ ನಿತೀಶ್ ರಾಣಾ ಕೂಡ ಸ್ಪೋಟಕ ಪ್ರದರ್ಶನ ನೀಡಿದ್ದು 21 ಎಸೆತಗಳಲ್ಲಿ 48 ರನ್ ಬಾರಿಸಿ ಆರ್ಭಟಿಸಿದರು. ಅಂತಿಮವಾಗಿ ನಿಗದಿತ 20 ಓವರ್ಗಳಲ್ಲಿ ಕೆಕೆಆರ್ 5 ವಿಕೆಟ್ ಕಳೆದುಕೊಂಡು ಭರ್ತಿ 200 ರನ್ಗಳಿಸಲು ಶಕ್ತವಾಯಿತು ಕೆಕೆಆರ್
ಇದಕ್ಕೆ ಪ್ರತಿಯಾಗಿ ಬ್ಯಾಟಿಂಗ್ ಆರಂಭಿಸಿದ ಆರ್ಸಿಬಿ ತಂಡಕ್ಕೆ ಉತ್ತಮ ಆರಂಭ ದೊರೆಯಿತಾದರೂ ಫಾಫ್ ಡು ಪ್ಲೆಸಿಸ್ 7 ಎಸೆತಗಳಲ್ಲಿ 17 ರನ್ ಸಿಡಿಸಿ ವಿಕೆಟ್ ಕಳೆದುಕೊಂಡರು. ಶಹ್ಬಾಜ್ ಅಹ್ಮದ್, ಗ್ಲೆನ್ ಮ್ಯಾಕ್ಸ್ವೆಲ್ ವಿಫಲವಾದ ಕಾರಣ ಸಂಕಷ್ಟಕ್ಕೆ ಸಿಲುಕಿದರೂ ಹಂಗಾಮಿ ನಾಯಕ ಕೊಹ್ಲಿ ಅದ್ಭುತ ಹೋರಾಟವನ್ನು ಮುಂದುವರಿಸಿದರು. ಮಹಿಪಾಲ್ ಲೋಮ್ರೋರ್ ಅವರಿಗೆ ಕೆಲ ಕಾಲ ಅದ್ಭುತ ಜೊತೆಯಾಟ ನೀಡುವ ಮೂಲಕ ಆರ್ಸಿಬಿ ಗೆಲುವಿನ ಭರವಸೆ ಮೂಡಿಸಿದರು. ಆದರೆ ಈ ಜೋಡಿ ಬೇರ್ಪಟ್ಟ ಬಳಿಕ ಉಳಿದ ಆಟಗಾರರಿಂದ ಹೋರಾಟದ ಪ್ರದರ್ಶನ ಬಾರಲಿಲ್ಲ. ದಿನೇಶ್ ಕಾರ್ತಿಕ್ ಮತ್ತೊಮ್ಮೆ ವೈಫಲ್ಯ ಕಂಡರು. ಅಂತಿಮವಾಗಿ ಆರ್ಸಿಬಿ ನಿಗದಿತ 20 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು 179 ರನ್ ಮಾತ್ರವೇ ಗಳಿಸಿದ್ದು 21 ರನ್ಗಳ ಅಂತರದ ಸೋಲು ಅನುಭವಿಸಿದೆ.