2024ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ಆರೆಂಜ್ ಕ್ಯಾಪ್ ಗೆದ್ದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಮತ್ತು ಆರ್ಸಿಬಿ ತಂಡದ ವಿರುದ್ಧ ಮಾಜಿ ಕ್ರಿಕೆಟಿಗ ಅಂಬಟಿ ರಾಯುಡು ಮತ್ತೆ ಕಿಡಿಕಾರಿದ್ದಾರೆ.
ಐಪಿಎಲ್ 2024ರ ಪಂದ್ಯಾವಳಿಯ ಲೀಗ್ ಹಂತದಲ್ಲಿ ಆರ್ಸಿಬಿ ವಿರುದ್ಧ ಸಿಎಸ್ಕೆ ಸೋತು ಪ್ಲೇಆಫ್ ರೇಸ್ನಿಂದ ಹೊರಬಿದ್ದ ಬಳಿಕ, ಸಿಎಸ್ಕೆ ಮಾಜಿ ಆಟಗಾರ ಅಂಬಟಿ ರಾಯುಡು ತೀವ್ರವಾಗಿ ಹತಾಶರಾಗಿದ್ದಾರೆ. ಹೋದಲ್ಲಿ ಬಂದಲ್ಲಿ, ಕುಂತಲ್ಲಿ ನಿಂತಲ್ಲಿ ಆರ್ಸಿಬಿ ತಂಡವನ್ನು ಟಾರ್ಗೆಟ್ ಮಾಡಿ ಮಾತನಾಡುತ್ತಿದ್ದಾರೆ.

ವಿರಾಟ್ ಕೊಹ್ಲಿ 2ನೇ ಬಾರಿಗೆ ಆರೆಂಜ್ ಕ್ಯಾಪ್ ಗೆಲ್ಲುವ ಮೂಲಕ ಕ್ರಿಸ್ ಗೇಲ್ ಮತ್ತು ಡೇವಿಡ್ ವಾರ್ನರ್ ನಂತರ ಒಂದಕ್ಕಿಂತ ಹೆಚ್ಚು ಬಾರಿ ಕ್ಯಾಪ್ ಗೆದ್ದ ಭಾರತದ 1ನೇ ಮತ್ತು ಒಟ್ಟಾರೆ 3ನೇ ಆಟಗಾರ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ.
ಫೈನಲ್ ಪಂದ್ಯದ ನಂತರದ ಗೆಲುವಿನ ಸಂಭ್ರಮದ ಸಂದರ್ಭದಲ್ಲಿ ಸ್ಟಾರ್ ಸ್ಪೋರ್ಟ್ಸ್ನೊಂದಿಗೆ ಮಾತನಾಡಿದ ಸಿಎಸ್ಕೆ ಮಾಜಿ ಆಟಗಾರ ಅಂಬಟಿ ರಾಯುಡು, ಆರೆಂಜ್ ಕ್ಯಾಪ್ನಂತಹ ವೈಯಕ್ತಿಕ ಪ್ರಶಸ್ತಿಗಳನ್ನು ಪಡೆದರೆ, ಫ್ರಾಂಚೈಸಿಗೆ ಐಪಿಎಲ್ ಟ್ರೋಫಿಯನ್ನು ಗೆಲ್ಲಲು ಸಾಧ್ಯವಿಲ್ಲ, ಇದು ತಂಡದಿಂದ ಸಾಮೂಹಿಕ ಪ್ರಯತ್ನವನ್ನು ತೆಗೆದುಕೊಳ್ಳುತ್ತದೆ ಎಂದು ಹೀಯಾಳಿಸಿದರು.

2024ರ ಆವೃತ್ತಿಯಲ್ಲಿ ಐಪಿಎಲ್ ಟ್ರೋಫಿ ಗೆಲ್ಲಲು ಕೆಕೆಆರ್ ತಂಡ ಎಲ್ಲಾ ವಿಭಾಗಗಳಲ್ಲಿ ಸಾಮೂಹಿಕ ಪ್ರಯತ್ನ ನಡೆಸಿದೆ ಎಂದು ಅಂಬಟಿ ರಾಯುಡು ಶ್ಲಾಘಿಸಿದರು.
"ಸುನಿಲ್ ನರೇನ್, ಆಂಡ್ರೆ ರಸೆಲ್ ಮತ್ತು ಮಿಚೆಲ್ ಸ್ಟಾರ್ಕ್ರಂತಹ ದಿಗ್ಗಜರ ಪರವಾಗಿ ನಿಂತಿದ್ದಕ್ಕಾಗಿ ಕೆಕೆಆರ್ ಫ್ರಾಂಚೈಸಿಗೆ ಅಭಿನಂದನೆಗಳು ಮತ್ತು ತಂಡದ ಗೆಲುವಿನಲ್ಲಿ ತಮ್ಮ ಪಾಲನ್ನು ಸಹ ಕೊಡುಗೆಯಾಗಿ ನೀಡುತ್ತವೆ. ಹೀಗಾಗಿ ತಂಡವು ಐಪಿಎಲ್ ಟ್ರೋಫಿಯನ್ನು ಗೆಲ್ಲುತ್ತದೆ," ಎಂದರು.
"ನಾವು ಇದನ್ನು ಹಲವು ವರ್ಷಗಳಲ್ಲಿ ನೋಡಿದ್ದೇವೆ. ನಿಮಗೆ ಐಪಿಎಲ್ ಗೆಲ್ಲುವುದು ಆರೆಂಜ್ ಕ್ಯಾಪ್ ಅಲ್ಲ. ಆದರೆ ತಲಾ 300 ರನ್ ಅಥವಾ ತಲಾ 400 ರನ್ಗಳಂತಹ ಕೊಡುಗೆಗಳು," ಎಂದು ಅಂಬಟಿ ರಾಯುಡು ಹೇಳಿದರು.
ಐಪಿಎಲ್ 2024ರಲ್ಲಿ ವಿರಾಟ್ ಕೊಹ್ಲಿ ಆಡಿದ 15 ಪಂದ್ಯಗಳಲ್ಲಿ 741 ರನ್ ಗಳಿಸಿದ್ದಕ್ಕಾಗಿ ಆರೆಂಜ್ ಕ್ಯಾಪ್ ಪಡೆದರು. ಇದರಲ್ಲಿ 61.75ರ ಸರಾಸರಿ ಮತ್ತು 154ಕ್ಕಿಂತ ಹೆಚ್ಚಿನ ಸ್ಟ್ರೈಕ್ ರೇಟ್ನೊಂದಿಗೆ ಒಂದು ಶತಕ ಮತ್ತು ಐದು ಅರ್ಧಶತಕಗಳು ಸೇರಿದೆ. ವಿರಾಟ್ ಕೊಹ್ಲಿಯ ಅದ್ಭುತ ಪ್ರದರ್ಶನದ ನಡುವೆಯೂ ಆರ್ಸಿಬಿ 17ನೇ ಬಾರಿಗೆ ಐಪಿಎಲ್ ಪ್ರಶಸ್ತಿಯನ್ನು ತಪ್ಪಿಸಿಕೊಂಡಿತು.

ತಂಡದ ಹಿತಾಸಕ್ತಿಗಳಿಗಿಂತ ವೈಯಕ್ತಿಕ ಮೈಲಿಗಲ್ಲುಗಳಿಗೆ ಆದ್ಯತೆ ನೀಡುವುದು ತಂಡದ ಯಶಸ್ಸಿಗೆ ಅಡ್ಡಿಯಾಗುತ್ತದೆ ಎಂದು ಅಂಬಟಿ ರಾಯುಡು ಎಕ್ಸ್ (ಟ್ವಿಟ್ಟರ್)ನಲ್ಲಿ ಬರೆದಿದ್ದಾರೆ.
"ಇಷ್ಟು ವರ್ಷಗಳಿಂದ ತಂಡವನ್ನು ಉತ್ಸಾಹದಿಂದ ಬೆಂಬಲಿಸಿದ ಎಲ್ಲಾ ಆರ್ಸಿಬಿ ಬೆಂಬಲಿಗರಿಗೆ ನನ್ನ ಹೃದಯವು ನಿಜವಾಗಿಯೂ ಮಿಡಿಯುತ್ತದೆ. ವೈಯಕ್ತಿಕ ಮೈಲಿಗಲ್ಲುಗಳಿಗಿಂತ ಮುಂಚಿತವಾಗಿ ಮ್ಯಾನೇಜ್ಮೆಂಟ್ ಮತ್ತು ನಾಯಕರು ತಂಡದ ಹಿತಾಸಕ್ತಿಗಳನ್ನು ಹೊಂದಿದ್ದರೆ, ಆರ್ಸಿಬಿ ಹಲವು ಪ್ರಶಸ್ತಿಗಳನ್ನು ಗೆಲ್ಲುತ್ತಿತ್ತು".
"ಎಷ್ಟು ಅದ್ಭುತ ಆಟಗಾರರನ್ನು ಕೈ ಬಿಡಲಾಗಿದೆ ಎಂಬುದನ್ನು ನೆನಪಿಸಿಕೊಳ್ಳಿ. ತಂಡದ ಹಿತಾಸಕ್ತಿಗಳನ್ನು ಮೊದಲು ಇರಿಸುವ ಆಟಗಾರರನ್ನು ತರಲು ನಿಮ್ಮ ಮ್ಯಾನೇಜ್ಮೆಂಟ್ ಒತ್ತಾಯಿಸಿ. ಮುಂಬರುವ ಮೆಗಾ ಹರಾಜಿನಿಂದ ಹೊಸ ಅಧ್ಯಾಯ ಪ್ರಾರಂಭವಾಗಬಹುದು," ಎಂದು ಅಂಬಟಿ ರಾಯುಡು ತಿಳಿಸಿದ್ದಾರೆ.