ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಆರಂಭವಾಗಿ 17 ವರ್ಷಗಳಾಗಿದ್ದು, ಮೂರಕ್ಕೂ ಹೆಚ್ಚು ತಂಡಗಳು ಇನ್ನೂ ಚಾಂಪಿಯನ್ ಆಗಲು ಹೋರಾಟ ನಡೆಸುತ್ತಿವೆ. ಆದರೆ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳು ತಲಾ ಐದು ಬಾರಿ ಐಪಿಎಲ್ ಟ್ರೋಫಿ ಗೆದ್ದು ಇತಿಹಾಸ ಸೃಷ್ಟಿಸಿವೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ಈ 17 ವರ್ಷಗಳ ಸುದೀರ್ಘ ಪ್ರಯಾಣದಲ್ಲಿ ಒಟ್ಟು ಮೂರು ಬಾರಿ ಫೈನಲ್ ಪ್ರವೇಶಿಸಿದೆ. ದುರದೃಷ್ಟಕರ ಆರ್ಸಿಬಿ ಪಾಲಿಗೆ ಒಮ್ಮೆಯೂ ಅದೃಷ್ಟ ಎಂಬುದು ಕೈ ಹಿಡಿದಿಲ್ಲ. ಆದರೂ ಐಪಿಎಲ್ನ ಇತರೆ ತಂಡಗಳಿಗೆ ಹೋಲಿಸಿದರೆ ಆರ್ಸಿಬಿ ಅಪಾರ ಸಂಖ್ಯೆಯಲ್ಲಿ ವಿಶ್ವದಾದ್ಯಂತ ಅಭಿಮಾನಿಗಳನ್ನು ಹೊಂದಿದೆ.

2008ರಲ್ಲಿ ಶುರುವಾದ ಐಪಿಎಲ್ ಮೊದಲ ಆವೃತ್ತಿಯಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವು ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮಣಿಸಿ ಪ್ರಶಸ್ತಿ ಗೆದ್ದಿತ್ತು. ರಾಜಸ್ಥಾನ್ ರಾಯಲ್ಸ್ ತಂಡವನ್ನು ಆಸ್ಟ್ರೇಲಿಯಾದ ದಂತಕಥೆ ಶೇನ್ ವಾರ್ನ್ ಅವರು ನಾಯಕನಾಗಿ ಮುನ್ನೆಡಿಸಿದ್ದರು.
ಬಳಿಕ 2009ರ ಐಪಿಎಲ್ ಹಲವು ರೋಚಕಗಳಿಂದ ಕೂಡಿತ್ತು. ಇದೇ ಆವೃತ್ತಿಯಲ್ಲಿ ಆರ್ಸಿಬಿ ಮೊದಲ ಬಾರಿಗೆ ಕಪ್ ಗೆಲ್ಲುವ ಸನಿಹ ಬಂದಿತ್ತು. ಆದರೇ ಫೈನಲ್ ಪಂದ್ಯದಲ್ಲಿ ಡೆಕ್ಕನ್ ಚಾರ್ಜರ್ಸ್ ತಂಡದ ಎದುರು ಆರ್ಸಿಬಿ ಕೊನೆಯ ಹಂತದ ವರೆಗೆ ಹೋರಾಡಿ 6 ರನ್ಗಳಿಂದ ಸೋಲು ಕಂಡಿತ್ತು.
ಈ ಫೈನಲ್ ಪಂದ್ಯದಲ್ಲಿ ಆರ್ಸಿಬಿ ಆಟಗಾರರು ಮಾಡಿದ ಕೆಲ ತಪ್ಪುಗಳು ಅವರನ್ನು ಸದಾ ಕಾಡುತ್ತಿರುವುದು ಸತ್ಯ. ಏಕೆ 2009ರಲ್ಲಿ ಆರ್ಸಿಬಿ ಕಪ್ ಗೆಲ್ಲಲು ಸಾಧ್ಯವಾಗಲಿಲ್ಲ ಎಂಬುದರ ಬಗ್ಗೆ ಅಂದಿನ ಆರ್ಸಿಬಿ ತಂಡದಲ್ಲಿದ್ದ ಮಾಜಿ ಭಾರತ ತಂಡದ ಕ್ರಿಕೆಟಿಗ ಹಾಗು ಆರ್ಸಿಬಿ ನಾಯಕ ಅನಿಲ್ ಕುಂಬ್ಳೆ ತಿಳಿಸಿದ್ದಾರೆ.
2009ರ ಆರ್ಸಿಬಿ ಫೈನಲ್ ಸೋಲು ನನ್ನನ್ನು ಕಾಡುತ್ತಲೆ ಇದೆ. ಆ ಪಂದ್ಯವನ್ನು ನಾವು ಗೆಲ್ಲಬೇಕಿತ್ತು. ಆದರೆ ಒಂದಷ್ಟು ಅವಕಾಶ ಕೈ ಚೆಲ್ಲುವ ಮೂಲಕ ಸೋಲಬೇಕಾಯಿತು. ಕೊನೆಯ ಎಸೆತವನ್ನು ಬೌಲರ್ ಲೆಂಥ್ ಬಾಲ್ ಹಾಕುತ್ತಾನೆ ಎಂದು ಗೊತ್ತಿದ್ದರೂ ಸ್ಕೂಪ್ ಟ್ರೈ ಮಾಡಬಾರದಾಗಿತ್ತು. ಇನ್ನೊಂದು ಸಿಕ್ಸ್ ಬಾರಿಸಬೇಕಿತ್ತು. ಅಥವಾ ನನಗೆ ಸ್ಟ್ರೈಕ್ ಕೊಟ್ಟಿದ್ದರೆ, ನಾನಾದರೂ ಸಿಕ್ಸ್ಗೆ ಟ್ರೈ ಮಾಡುತ್ತಿದ್ದೆ ಎಂದು ರಾಬಿನ್ ಉತ್ತಪ್ಪನ ಬಳಿ ಈಗಲೂ ಹೇಳುತ್ತಿರುತ್ತೇನೆ ಎಂದು ಜಂಬೋ ಖ್ಯಾತಿಯ ಅನಿಲ್ ಕುಂಬ್ಳೆ ಅಂದಿನ ಆರ್ಸಿಬಿ ಫೈನಲ್ ಸೋಲನ್ನು ಮೆಲುಕು ಹಾಕಿದ್ದಾರೆ.
2009ರ ಬಳಿಕ 2011ರಲ್ಲಿ ಆರ್ಸಿಬಿ ತಂಡವು ಫೈನಲ್ನಲ್ಲಿ ಚೆನ್ನೈ ಸೂಪರ್ ತಂಡದ ಎದುರು ಸೋತಿದೆ. ನಂತರ 2016ರ ಐಪಿಎಲ್ ಟ್ರೋಫಿ ಗೆಲ್ಲುವ ತಂಡವಾಗಿ ಬಂದಿದ್ದ ಆರ್ಸಿಬಿ, ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಕಪ್ ಕಳೆದುಕೊಂಡಿದೆ. ಈ ಎರಡು ಫೈನಲ್ ಪಂದ್ಯಗಳಲ್ಲಿ ಆರ್ಸಿಬಿ 200ಕ್ಕೂ ಅಧಿಕ ಟಾರ್ಗೆಟ್ ಚೇಸ್ ಮಾಡಲು ಹೋಗಿ ಮುಗ್ಗರಿಸಿದೆ.