2024ರ ಐಪಿಎಲ್ಗಾಗಿ ಉಳಿಸಿಕೊಂಡ ಆಟಗಾರರ ಘೋಷಣೆಯ ದಿನದಂದು ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ಬಹುಶಃ ಅತಿ ಹೆಚ್ಚು ಸೌಂಡ್ ಮಾಡಿದ ತಂಡವಾಗಿದೆ.
ಏಕೆಂದರೆ, ಗುಜರಾತ್ ಟೈಟನ್ಸ್ ತನ್ನ ನಾಯಕ ಹಾರ್ದಿಕ್ ಪಾಂಡ್ಯವನ್ನು ಉಳಿಸಿಕೊಂಡ ಬಳಿಕವೂ ಸ್ಟಾರ್ ಆಲ್ರೌಂಡರ್ನನ್ನು ಮುಂಬೈ ಇಂಡಿಯನ್ಸ್ ತಂಡಕ್ಕೆ ವ್ಯಾಪಾರ ಮಾಡಲಾಗಿದೆ ಎಂಬ ಸುದ್ದಿ ವೈರಲ್ ಆಯಿತು.
ಅಂತಿಮವಾಗಿ ಈ ಸುದ್ದಿ ಸತ್ಯವಾಗಿತ್ತು. ಹಾರ್ದಿಕ್ ಪಾಂಡ್ಯ ಅವರು ತಾನು ಮೊದಲು ಹೆಸರು ಮಾಡಿದ ಫ್ರಾಂಚೈಸಿಗೆ ಭರ್ಜರಿಯಾಗಿ ಮರಳಿದರು, ಅದು ತೆರೆಮರೆಯ ವ್ಯವಹಾರಗಳೊಂದಿಗೆ.

ಹಾರ್ದಿಕ್ ಪಾಂಡ್ಯ ಪುನರಾಗಮನ ಮಾಡುವುದಕ್ಕಾಗಿ, ಮುಂಬೈ ಇಂಡಿಯನ್ಸ್ ಐಪಿಎಲ್ 2024ರ ಹರಾಜಿಗಾಗಿ ಸ್ವಲ್ಪ ಹಣವನ್ನು ಮುಕ್ತಗೊಳಿಸಬೇಕಾಗಿತ್ತು. ಹೀಗಾಗಿ ತನ್ನ ದುಬಾರಿ ಆಟಗಾರರಾದ ಕ್ಯಾಮೆರಾನ್ ಗ್ರೀನ್ ಮತ್ತು ಜೋಫ್ರಾ ಆರ್ಚರ್ ಅವರಂತಹ ಸ್ಟಾರ್ ಆಟಗಾರರನ್ನು ಕೈಬಿಡಬೇಕಾಯಿತು.
ಇದೇ ಡಿಸೆಂಬರ್ 19ರಂದು ದುಬೈನಲ್ಲಿ ನಡೆಯಲಿರುವ 2024ರ ಐಪಿಎಲ್ಗಾಗಿ ನಡೆಯುವ ಮಿನಿ ಹರಾಜಿನಲ್ಲಿ ಮುಂಬೈ ಇಂಡಿಯನ್ಸ್ ಗುರಿಯಾಗಿಸಿರುವ ಆಟಗಾರರು ಯಾರು ಎಂಬುದು ಸದ್ಯದ ಕುತೂಹಲವಾಗಿದೆ.
"ಏಕದಿನ ವಿಶ್ವಕಪ್ನಲ್ಲಿ ಆಸ್ಟ್ರೇಲಿಯದ ಇತ್ತೀಚಿನ ಗೆಲುವಿನೊಂದಿಗೆ, ಬಹಳಷ್ಟು ಆಸ್ಟ್ರೇಲಿಯನ್ ಆಟಗಾರರನ್ನು ಕಾಣಬಹುದು. ವಿಶೇಷವಾಗಿ ಪ್ಯಾಟ್ ಕಮ್ಮಿನ್ಸ್, ಜೋಶ್ ಹ್ಯಾಜಲ್ವುಡ್ ಮತ್ತು ಮಿಚೆಲ್ ಸ್ಟಾರ್ಕ್ ಅವರಂತಹ ಆಟಗಾರರು".

"ಹೀಗಾಗಿ ಪ್ಯಾಟ್ ಕಮಿನ್ಸ್ ಮತ್ತು ಮಿಚೆಲ್ ಸ್ಟಾರ್ಕ್ ಅವರನ್ನು ಹರಾಜಿನಲ್ಲಿ ಮುಂಬೈ ಇಂಡಿಯನ್ಸ್ ಟಾರ್ಗೆಟ್ ಮಾಡುವ ಇಬ್ಬರು ಬೌಲರ್ಗಳಾಗಬಹುದು," ಎಂದು ಖ್ಯಾತ ವೀಕ್ಷಕ ವಿವರಣೆಗಾರ ಸಂಜಯ್ ಮಂಜ್ರೇಕರ್ ಅಭಿಪ್ರಾಯಪಟ್ಟಿದ್ದಾರೆ.
"ಅಲ್ಲದೆ, ಜೋಶ್ ಹ್ಯಾಜಲ್ವುಡ್ ಅವರನ್ನು ಮತ್ತೊಂದು ಸಾಗರೋತ್ತರ ಆಯ್ಕೆಯನ್ನು ಹೊಂದಲು ಬಯಸಬಹುದು," ಎಂದು ಸಂಜಯ್ ಮಂಜ್ರೇಕರ್ ಅವರು ಸ್ಟಾರ್ ಸ್ಪೋರ್ಟ್ಸ್ನಲ್ಲಿ ಹೇಳಿರುವುದಾಗಿ ಟೈಮ್ಸ್ ನೌ ವರದಿ ಮಾಡಿದೆ.
"ಕ್ಯಾಮೆರಾನ್ ಗ್ರೀನ್ ವ್ಯಾಪಾರ ಮಾಡುವ ಮೂಲಕ ಆರ್ಸಿಬಿ ತಂಡದಿಂದ ಮುಂಬೈ ಇಂಡಿಯನ್ಸ್ ಸುಮಾರು 17.5 ಕೋಟಿ ರೂಪಾಯಿಗಳನ್ನು ಪಡೆದಿದ್ದಾರೆ. ಹಾಗಾಗಿ ಮುಂಬೈ ಪ್ಯಾಟ್ ಕಮಿನ್ಸ್ ಮತ್ತು ಮಿಚೆಲ್ ಸ್ಟಾರ್ಕ್ ಪಡೆಯಲು ಬಿಡ್ಡಿಂಗ್ ವಾರ್ ನಡೆಸಲಿದ್ದಾರೆ ಎಂದು ನಾನು ನಿರೀಕ್ಷಿಸುತ್ತೇನೆ," ಎಂದು ಭಾರತದ ಮಾಜಿ ಕ್ರಿಕೆಟಿಗ ಸಂಜಯ್ ಮಂಜ್ರೇಕರ್ ತಿಳಿಸಿದ್ದಾರೆ.

"ನಾನು ಅಗ್ರ ಕ್ರಮಾಂಕದಲ್ಲಿ ಯೋಚಿಸುವುದಾದರೆ, ಕ್ಯಾಮೆರಾನ್ ಗ್ರೀನ್ ಅವರು ಕ್ರಮಾಂಕದ ಮೇಲ್ಭಾಗದಲ್ಲಿ ಬ್ಯಾಟ್ ಮಾಡಲು ಮತ್ತು ನಂ.3 ಅಥವಾ ಇನ್ನಿಂಗ್ಸ್ ಆರಂಭಿಸಲು ಅತ್ಯುತ್ತಮ ಆಯ್ಕೆಯಾಗಿದ್ದರು. ಅವರನ್ನು ಬಿಟ್ಟುಕೊಟ್ಟಿರುವುದರಿಂದ ಆರಂಭಿಕ ಸ್ಥಾನಕ್ಕಾಗಿ ಆಯ್ಕೆಯನ್ನು ಹೊಂದಲು ಬಯಸಬಹುದು," ಎಂದು ತಿಳಿಸಿದರು.
ಇದಕ್ಕೂ ಮುನ್ನ, ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಮಾಜಿ ಸ್ಟಾರ್ ಸ್ಪಿನ್ನರ್ ಬ್ರಾಡ್ ಹಾಗ್ ಅವರು ಕ್ಯಾಮೆರಾನ್ ಗ್ರೀನ್ ಅವರನ್ನು ಖರೀದಿಸುವ ಬದಲು, ಆರ್ಸಿಬಿ ತಂಡ ತಮ್ಮ ಬೌಲಿಂಗ್ ವಿಭಾಗದ ಗುಣಮಟ್ಟವನ್ನು ಸುಧಾರಿಸಲು ತಮ್ಮ ಹಣವನ್ನು ಹೂಡಿಕೆ ಮಾಡಬೇಕಾಗಿತ್ತು ಎಂದು ಭಾವಿಸಿದ್ದರು.