ಐಪಿಎಲ್ 2024ರ ಸಿದ್ಧತೆಗಳು ಭರದಿಂದ ಸಾಗಿವೆ. ಈಗಾಗಲೇ ಐಪಿಎಲ್ ಮಿನಿ ಹರಾಜು ಪೂರ್ತಿಗೊಂಡಿದ್ದು, ತಮಗೆ ಬೇಕಿದ್ದ ಆಟಗಾರರನ್ನು ಮಾಲೀಕರು ಕಂಡುಕೊಂಡಿದ್ದಾರೆ. ತಂಡದ ಸಮತೋಲನವನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಫ್ರಾಂಚೈಸಿ ಆಟಗಾರರಿಗೆ ಮಣೆ ಹಾಕಿದೆ.
ಮಿನಿ ಹರಾಜಿನಲ್ಲಿ ಹಲವು ಸ್ಟಾರ್ ಆಟಗಾರರು ಕೋಟಿ ಕೋಟಿ ರೂಪಾಯಿ ಪಡೆದಿದ್ದಾರೆ. ಆರ್ಸಿಬಿ ಸಹ 11.50 ಕೋಟಿ ನೀಡಿ ಅಲ್ಜಾರಿ ಜೋಸೆಫ್ ಅವರನ್ನು ತಂಡಕ್ಕೆ ಸೇರಿಸಿಕೊಂಡಿದೆ. ಆರ್ಸಿಬಿ ಹಲವು ಸ್ಟಾರ್ ಆಟಗಾರರನ್ನು ಪೋಷಿಸುತ್ತಲೇ ಬಂದಿದೆ. ಈಗ ಆರ್ಸಿಬಿ ತಂಡ ಮೇಲ್ನೋಟಕ್ಕಂತೂ ಬಲಿಷ್ಠವಾಗಿದೆ. ಈ ಬಾರಿ ಕಪ್ ಗೆಲ್ಲುವ ಕನಸಿನೊಂದಿಗೆ ಆರ್ಸಿಬಿ ಕಣಕ್ಕೆ ಇಳಿಯಲಿದೆ.

ಕೆಂಪು ಮತ್ತು ಗೋಲ್ಡನ್ ಡ್ರೆಸ್ನಲ್ಲಿ ಅದೆಷ್ಟೋ ಸ್ಟಾರ್ ಆಟಗಾರರು ಮಿಂಚಿದ್ದಾರೆ. ಈಗಲೂ ಮಿಂಚುತ್ತಿದ್ದಾರೆ. ಈ ಜೆರ್ಸಿಯನ್ನು ಹಾಕಿಕೊಂಡು ಕಣಕ್ಕೆ ಇಳಿದರೆ ಮುಗಿದು ಹೋಯಿತು. ಕನ್ನಡಿಗರ ಮನಸ್ಸಿನಲ್ಲಿ ಶಾಶ್ವತ ಸ್ಥಾನ ಫಿಕ್ಸ್.. ಕರ್ನಾಟಕದ ಸ್ಟಾರ್ ಪ್ಲೇಯರ್ ಒಬ್ಬ ಆರ್ಸಿಬಿ ಪರ ಆಡಿ ಸೈ ಎನಿಸಿಕೊಂಡಿದ್ದರು. ಅಲ್ಲದೆ ಈಗ ಬೇರೆ ತಂಡದ ಚುಕ್ಕಾಣಿಯನ್ನು ಹಿಡಿದಿದ್ದಾರೆ.
ಆರ್ಸಿಬಿ ಆರಂಭದಲ್ಲಿ ಕರ್ನಾಟಕದ ಪ್ಲೇಯರ್ಗಳಿಗೆ ಮಣೆ ಹಾಕಿ ಅವಕಾಶಗಳನ್ನು ನೀಡಿದೆ. ಹೀಗೆ ಸಿಕ್ಕ ಅವಕಾಶದಲ್ಲಿ ಮಿಂಚಿದ ಪ್ರತಿಭೆ ಕೆ.ಎಲ್ ರಾಹುಲ್.. ಇಂದು ಕೆಎಲ್ ರಾಹುಲ್ ಅವರು ಟೀಮ್ ಇಂಡಿಯಾ ನಾಯಕನಾಗುವ ಮಟ್ಟಕ್ಕೆ ಬೆಳೆದಿದ್ದಾರೆ ಎಂದ್ರೆ ಆರ್ಸಿಬಿ ಪಾತ್ರವೂ ಇದೆ.

ರಾಹುಲ್ ಅವರನ್ನು ಆರ್ಸಿಬಿ 2013ರಲ್ಲಿ ತಂಡಕ್ಕೆ ಸೇರಿಸಿಕೊಂಡಿತ್ತು. ಅದರ ಮುಂದಿನ ವರ್ಷದಲ್ಲಿ ಸನ್ರೈಸರ್ಸ್ ಹೈದರಾಬಾದ್ 1 ಕೋಟಿ ನೀಡಿ ಇವರನ್ನು ಖರೀದಿಸಿತು. 2014ರಲ್ಲಿ 166 ರನ್ ಸಿಡಿಸಿದ್ದ ಕೆ.ಎಲ್ 2015ರಲ್ಲಿ 142 ರನ್ ಸಿಡಿಸಿದರು.
ವಿರಾಟ್ ಕೊಹ್ಲಿ ಅವರ ಉತ್ತರಾಧಿಕಾರಿ ಎಂದೇ ಬಿಂಬಿತರಾಗಿದ್ದ ಕೆ.ಎಲ್ ರಾಹುಲ್ ಅವರಿಗೆ ಮತ್ತೆ 2016ರಲ್ಲಿ ತವರಿನ ತಂಡದ ಪರ ಆಡುವ ಅವಕಾಶ ಲಭಿಸಿತು. ಇಲ್ಲಿಂದಲೇ ಕೆಎಲ್ ರಾಹುಲ್ ಅವರ ಕರಿಯರ್ ಇನ್ನೊಂದು ಮಗ್ಗಲು ತಲುಪಿದ್ದು. ಟಾಪ್ ಆರ್ಡರ್ನಲ್ಲಿ ಆಡುವ ಅವಕಾಶ ಕಲ್ಪಿಸಿದ ಆರ್ಸಿಬಿ ಅವಕಾಶಗಳನ್ನು ನೀಡಿತು. ಈ ಅವಧಿಯಲ್ಲಿ 397 ರನ್ ಸಿಡಿಸಿ ತಮ್ಮ ಕ್ಷಮತೆಯನ್ನು ಸಾಬೀತು ಮಾಡಿದರು. ವಿರಾಟ್ ಕೊಹ್ಲಿ ಅವರ ಜೊತೆ ಅವರು ಕಟ್ಟಿದ ಇನ್ನಿಂಗ್ಸ್ಗಳು ಅಮೋಘ..

2017ರಲ್ಲಿ ಗಾಯದ ಕಾರಣದಿಂದ ಐಪಿಎಲ್ನಿಂದ ದೂರ ಉಳಿದರು. ನಂತರ ಕಿಂಗ್ಸ್ ಇಲೆವೆನ್ ಪಂಜಾಬ್ ಈಗ ಲಖ್ನೋ ಸೂಪರ್ ಜೇಂಟ್ಸ್ ತಂಡದ ನಾಯಕನಾಗಿರುವ ಕೆ.ಎಲ್ ರಾಹುಲ್, ಕ್ರಿಕೆಟ್ ಅಂಗಳದಲ್ಲಿ ಬಹು ಎತ್ತರಕ್ಕೆ ಬೆಳದಿದ್ದಾರೆ.
ಕೆಎಲ್ ರಾಹುಲ್ ಇತ್ತೀಚಿಗೆ ನೀಡಿದ ಸಂದರ್ಶನವೊಂದರಲ್ಲಿ ನನಗೆ ಆರ್ಸಿಬಿ ಸಾಕಷ್ಟು ಅವಕಾಶಗಳನ್ನು ಕೊಟ್ಟಿದೆ ಎಂದು ಹೇಳಿದ್ದಾರೆ. ಇದನ್ನು ಕೇಳಿದ ಫ್ಯಾನ್ಸ್ ಇವರು ಆರ್ಸಿಬಿ ಪರ ಆಡಲಿದ್ದಾರೆ ಎಂಬ ಚರ್ಚೆ ಆರಂಭಿಸಿದ್ದಾರೆ.
ಅಂದಹಾಗೆ ಐಪಿಎಲ್ 2024 ಟ್ರೇಡ್ ವಿಂಡೋ ಇನ್ನು ಓಪನ್ ಇದೆ. ಯಾವ ಪ್ಲೇಯರ್ ಯಾವ ತಂಡಕ್ಕಾದರೂ ಹೋಗಬಹುದು. ಇದಕ್ಕೆ ಅವರನ್ನು ಹೊಂದಿದ ತಂಡದ ಹಾಗೂ ಹೋಗುವ ತಂಡದ ಒಪ್ಪಿಗೆ ಅವಶ್ಯಕ. ರಾಹುಲ್ ಆರ್ಸಿಬಿ ಜೆರ್ಸಿಯಲ್ಲಿ ಮತ್ತೆ ಆಡಲಿ ಎಂಬುವುದೆ ಅಭಿಮಾನಿಗಳ ಆಶಯ.