ಜೈಪುರದ ಸವಾಯಿ ಮಾನ್ಸಿಂಗ್ ಸ್ಟೇಡಿಯಂನಲ್ಲಿ ನಡೆದ 2024ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ 38ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ತಂಡವು ಕೇವಲ ಒಂದು ವಿಕೆಟ್ ಕಳೆದುಕೊಂಡು ಗೆದ್ದು ಬೀಗಿತ್ತು.
ಈ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡದ ಪ್ರಮುಖ ಲೆಗ್ ಸ್ಪಿನ್ನರ್ ಯುಜ್ವೇಂದ್ರ ಚಹಾಲ್ ಅವರು ಹೊಸ ದಾಖಲೆ ಬರೆದರು. 17 ವರ್ಷಗಳ ಐಪಿಎಲ್ನಲ್ಲಿ 200 ವಿಕೆಟ್ ಪಡೆದ ಮೊದಲು ಬೌಲರ್ ಎಂಬ ಹೆಗ್ಗಳಿಕೆ ಯುಜ್ವೇಂದ್ರ ಚಹಾಲ್ ಪಾತ್ರರಾದರು. ಈ ಮೂಲಕ ಟಿ20 ವಿಶ್ವಕಪ್ ಆಯ್ಕೆ ಪ್ರಕ್ರಿಯೆ ರೇಸ್ನಲ್ಲಿ ನಾನು ಇದ್ದೇನೆ ಎಂಬ ಸಂದೇಶವನ್ನು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ)ಗೆ ಕಳುಹಿಸಿದ್ದಾರೆ.

ಇಂತಹ ಚಾಣಾಕ್ಷ ಲೆಗ್ ಸ್ಪಿನ್ನರ್ ಅನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು 2022ರಲ್ಲಿ ಕೈ ಬಿಟ್ಟಿತ್ತು. ಪರಿಣಾಮ ಸಾಕಷ್ಟು ಪಂದ್ಯಗಳನ್ನು ಚಹಾಲ್ ಇಲ್ಲದೆ ಆರ್ಸಿಬಿ ಸೋತಿತ್ತು. ಈ ತಪ್ಪು ನಿರ್ಧಾರದಿಂದ ಈಗಲೂ ಆರ್ಸಿಬಿ ಕೊರುಗುವಂತೆ ಮಾಡಿದೆ. ಆದರೆ ಯಾವ ಕಾರಣಕ್ಕೆ ಆರ್ಸಿಬಿಯಿಂದ ಚಹಾಲ್ ಅವರನ್ನು ಕೈ ಬಿಡಲಾಯಿತು ಎಂಬುದರ ಬಗ್ಗೆ ಈವರೆಗೆ ಮಾಹಿತಿ ಸಿಕ್ಕಿರಲಿಲ್ಲ.
ಈ ನಡುವೆ ಆರ್ಸಿಬಿ ಫ್ರಾಂಚೈಸಿ 17ನೇ ಐಪಿಎಲ್ ಆವೃತ್ತಿಗಾಗಿ ಬಹು ದೊಡ್ಡದಾದ ಅಪರೇಷನ್ಗೆ ಕೈ ಹಾಕುವ ಮೂಲಕ ಮಾಜಿ ನಿರ್ದೇಶಕ ಮೈಕ್ ಹೆಸ್ಸನ್ ಮತ್ತು ಮುಖ್ಯ ಬ್ಯಾಟಿಂಗ್ ಕೋಚ್ ಸಂಜಯ್ ಬಂಗಾರ್ ಅವರನ್ನು ವಜಾಗೊಳಿಸಿತ್ತು. ಇದೀಗ ಪಂಜಾಬ್ ಕಿಂಗ್ಸ್ ತಂಡ ನಿರ್ದೇಶಕರಾಗಿರುವ ಮೈಕ್ ಹೆಸ್ಸನ್ ಅವರು ಅಂದು ಆರ್ಸಿಬಿಯ ಪ್ರಮುಖ ಅಸ್ತ್ರವಾಗಿದ್ದ ಯುಜ್ವೇಂದ್ರ ಚಹಾಲ್ ಅವರನ್ನು ಏಕೆ ತಂಡದಿಂದ ಬಿಟ್ಟುಕೊಡಬೇಕಾಯಿತು ಎಂದು ತಿಳಿಸಿದ್ದಾರೆ.
2022ರ ಐಪಿಎಲ್ ಹರಾಜಿನ ಮೊದಲು ಎಲ್ಲಾ ಫ್ರಾಂಚೈಸಿಗಳು ಕೇವಲ ಮೂರು ಅಥವಾ ನಾಲ್ಕು ಆಟಗಾರರನ್ನು ಉಳಿಸಿಕೊಳ್ಳುವ ಆಯ್ಕೆಗಳನ್ನು ಹೊಂದಿದ್ದರು. ಆದರೆ ಆರ್ಸಿಬಿ ಕೇವಲ ಮೂರು ಆಟಗಾರರನ್ನು ಉಳಿಸಿಕೊಂಡಿತ್ತು. ಏಕೆಂದರೆ ಫ್ರಾಂಚೈಸಿಗೆ ಹೆಚ್ಚುವರಿ ನಾಲ್ಕು ಕೋಟಿಗಳು ಸೇರಿಸುತ್ತದೆ ಎಂಬುದಾಗಿತ್ತು.
ಈ ವೇಳೆ ತಂಡದಲ್ಲಿ ಯುಜ್ವೇಂದ್ರ ಚಹಾಲ್ ಮತ್ತು 2021ರ ಐಪಿಎಲ್ನಲ್ಲಿ ಅದ್ಭುತ ಬೌಲಿಂಗ ಪ್ರದರ್ಶನ ನೀಡಿ ಪರ್ಪಲ್ ಕ್ಯಾಪ್ ಗೆದ್ದುಕೊಂಡಿದ್ದ ಹರ್ಷಲ್ ಪಟೇಲ್ ಇಬ್ಬರನ್ನೂ ಉಳಿಸಿಕೊಳ್ಳುವ ಗುರಿಯನ್ನು ಆರ್ಸಿಬಿ ಹೊಂದಿತ್ತು, ಆದರೆ ಇದು ಅಸಾಧ್ಯಾವಾಗಿತ್ತು. ಏಕೆಂದರೆ ಹರಾಜಿನಲ್ಲಿ ಯುಜುವೇಂದ್ರ ಚಾಹಲ್ 65 ನೇ ಸ್ಥಾನದಲ್ಲಿದ್ದರು. ಇದಕ್ಕೂ ಮೊದಲ ಮೂರು ಸೆಟ್ಗಳಲ್ಲಿ ಹರ್ಷಲ್ ಪಟೇಲ್ ಹೆಸರು ಬಂದ ಕಾರಣ ಖರೀಸಲಾಗಿತ್ತು.
ಒಂದು ವೇಳೆ ನಾವು ಯುಜಿ ಅವರನ್ನು ತಂಡಕ್ಕೆ ಕರೆತರಲು ಕೊನೆವರೆಗೆ ಪ್ರಯತ್ನಿಸಿ ವಿಫಲರಾಗಿದ್ದರೆ, ಅಗ ನಾವು ಯಾವುದೇ ಲೆಗ್ ಸ್ಪಿನ್ನರ್ ಇಲ್ಲದೆ ಉಳಿಯುತ್ತಿದ್ದೆವು. ಹೀಗಾಗಿ ಆರ್ಸಿಬಿ ಶ್ರೀಲಂಕಾ ಆಲ್ ರೌಂಡರ್ ಸ್ಪಿನ್ನರ್ ವನಿಂದು ಹಸರಂಗ ಅವರನ್ನು ಖರೀದಿಸಿತ್ತು ಎಂದು ಮೈಕ್ ಹೆಸ್ಸನ್ ಹೇಳಿದ್ದಾರೆ.