ಭಾನುವಾರ, ಮೇ 12ರಂದು ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ 2024ರ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ 47 ರನ್ಗಳ ನಿರ್ಣಾಯಕ ಗೆಲುವು ಸಾಧಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪ್ರಸಕ್ತ ಆವೃತ್ತಿಯ ಪ್ಲೇಆಫ್ ಭರವಸೆಯನ್ನು ಜೀವಂತವಾಗಿರಿಸಿಕೊಂಡಿದೆ.
ಐಪಿಎಲ್ 2024ರ ದ್ವಿತೀಯಾರ್ಧದಲ್ಲಿ ತಮ್ಮ ತಂಡದ ಅದ್ಭುತ ಪುನರಾಗಮನಕ್ಕೆ ಹೊಸ ಆತ್ಮವಿಶ್ವಾಸ ಮತ್ತು ತೆರೆಮರೆಯಲ್ಲಿ ಆಟಗಾರರು ಮಾಡಿದ ಕಠಿಣ ಪರಿಶ್ರಮ ಕಾರಣವೆಂದು ಆರ್ಸಿಬಿ ನಾಯಕ ಫಾಫ್ ಡು ಪ್ಲೆಸಿಸ್ ತಿಳಿಸಿದ್ದಾರೆ.

ಐಪಿಎಲ್ ಇತಿಹಾಸದಲ್ಲಿ ಆರ್ಸಿಬಿ ತಂಡ ತಮ್ಮ ಎರಡನೇ ಅತ್ಯುತ್ತಮ ಗೆಲುವಿನ ಸರಣಿಯ ಸಾಧನೆಯನ್ನು ಸರಿಗಟ್ಟಲು ಐಪಿಎಲ್ 2024ರಲ್ಲಿ ಸತತ 5ನೇ ಪಂದ್ಯವನ್ನು ಗೆದ್ದಿದೆ.
ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಯಶಸ್ವಿಯಾಗಿ 187 ರನ್ಗಳನ್ನು ರಕ್ಷಿಸಿಕೊಂಡ ಆರ್ಸಿಬಿ ಅದ್ಭುತ ಪ್ರದರ್ಶನ ನೀಡಿದರು. ಖಾಯಂ ನಾಯಕ ರಿಷಭ್ ಪಂತ್ ಅನುಪಸ್ಥಿತಿಯಲ್ಲಿ ಕಣಕ್ಕಿಳಿದ ಡೆಲ್ಲಿ ಕ್ಯಾಪಿಟಲ್ಸ್ ದೊಡ್ಡ ನಷ್ಟ ಅನುಭವಿಸಿತು. ಗಮನಾರ್ಹವಾಗಿ, 2019ರ ನಂತರ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾತ್ರಿ ಪಂದ್ಯದಲ್ಲಿ ಆರ್ಸಿಬಿ ತಂಡ ಮೊದಲ ಬಾರಿಗೆ ತನ್ನ ಮೊತ್ತವನ್ನು ರಕ್ಷಿಸಿತು.

"ಗೆಲುವು ಅದ್ಭುತವಾಗಿದೆ ಮತ್ತು ನಾವು ಉತ್ತಮ ಪ್ರದರ್ಶನ ನೀಡಿದ್ದೇವೆ. ಇದು ಕೇವಲ ಆತ್ಮವಿಶ್ವಾಸ. ಅವೃತ್ತಿಯ ಮೊದಲಾರ್ಧದಲ್ಲಿ, ನಾವು ಗೆಲುವಿಗಾಗಿ ಹೋರಾಡುತ್ತಿದ್ದೆವು. ಮೊದಲ ಐದು ಅಥವಾ ಆರು ಪಂದ್ಯಗಳಲ್ಲಿ ನಮಗೆ ವಿಕೆಟ್ಗಳನ್ನು ಪಡೆಯಲು ಸಾಧ್ಯವಾಗಲಿಲ್ಲ. ಇದೀಗ ಕೊನೆಯ ಮೂರು ಪಂದ್ಯಗಳಲ್ಲಿ ಎದುರಾಳಿಗಳನ್ನು ಆಲೌಟ್ ಮಾಡಿದ್ದೇವೆ," ಎಂದು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಗೆದ್ದ ನಂತರ ಆರ್ಸಿಬಿ ನಾಯಕ ಫಾಫ್ ಡು ಪ್ಲೆಸಿಸ್ ಹೇಳಿದರು.
ಆರ್ಸಿಬಿ ಐಪಿಎಲ್ 2024ರ ತನ್ನ ಮೊದಲ 8 ಪಂದ್ಯಗಳಲ್ಲಿ ಕೇವಲ 1 ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿತ್ತು. ಆರ್ಸಿಬಿ ತಂಡ ಪ್ಲೇಆಫ್ಗೆ ಅರ್ಹತೆ ಪಡೆಯುವ ಸ್ಪರ್ಧೆಯಲ್ಲಿರುತ್ತದೆ ಎಂದು ಬಹುತೇಕರು ಊಹಿಸಿರಲಿಲ್ಲ. ಆದಾಗ್ಯೂ, ಭಾನುವಾರ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಗೆದ್ದ ನಂತರ ಫಾಫ್ ಡು ಪ್ಲೆಸಿಸ್ ನಾಯಕತ್ವದ ತಂಡವು ಅಂಕಪಟ್ಟಿಯಲ್ಲಿ 5ನೇ ಸ್ಥಾನಕ್ಕೇರಿತು.
ಆದಾಗ್ಯೂ, ಶನಿವಾರ, ಮೇ 18ರಂದು ತನ್ನ ಅಂತಿಮ ಲೀಗ್ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಸಿಎಸ್ಕೆ ತಂಡವನ್ನು ಎದುರಿಸಲಿರುವ ಆರ್ಸಿಬಿ ತಂಡವು ಪ್ಲೇಆಫ್ಗೆ ಪ್ರವೇಶ ಪಡೆಯಲು ಕೆಲವು ಇತರೆ ಪಂದ್ಯಗಳ ಫಲಿತಾಂಶಗಳು ಮುಖ್ಯವಾಗಿವೆ.
"ಮುಚ್ಚಿದ ಬಾಗಿಲುಗಳ ಹಿಂದೆ ಬಹಳಷ್ಟು ಕೆಲಸಗಳು ತೆರೆಮರೆಯಲ್ಲಿ ಸಾಗಿವೆ ಎಂದು ನನಗೆ ಅನಿಸುತ್ತಿದೆ. ನಾವು ಪ್ಲೇಆಫ್ಗೆ ಅರ್ಹತೆ ಪಡೆಯುವ ಭರವಸೆ ಇದೆ. ನಾವು ಏನು ಸಾಧಿಸಬೇಕು ಮತ್ತು ನಾವು ನಮ್ಮ ಪ್ರಕ್ರಿಯೆಯ ಬಗ್ಗೆ ಮಾತ್ರ ಮಾತನಾಡುತ್ತಿದ್ದೇವೆ," ಎಂದು ಫಾಫ್ ಡು ಪ್ಲೆಸಿಸ್ ತಿಳಿಸಿದರು.
ಫಾಫ್ ಡು ಪ್ಲೆಸಿಸ್ ಆರ್ಸಿಬಿ ತಂಡದ ಬೌಲಿಂಗ್ ವಿಭಾಗದ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ಮೊಹಮ್ಮದ್ ಸಿರಾಜ್, ಯಶ್ ದಯಾಳ್ ಮತ್ತು ಲಾಕಿ ಫರ್ಗ್ಯೂಸನ್ ಹಾಗೂ ಸ್ಪಿನ್ ಅವಳಿಗಳಾದ ಕರ್ಣ್ ಶರ್ಮಾ ಮತ್ತು ಸ್ವಪ್ನಿಲ್ ಸಿಂಗ್ ಕೊನೆಯ ಐದು ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ ಎಂದರು.
ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡ 287 ರನ್ಗಳನ್ನು ಗಳಿಸಿದಾಗ, ಆರ್ಸಿಬಿ ಬೌಲರ್ಗಳು ಅತ್ಯಧಿಕ ಐಪಿಎಲ್ ಮೊತ್ತವನ್ನು ಬಿಟ್ಟುಕೊಟ್ಟಿತು. ಸತತವಾಗಿ ರನ್ ಸೋರಿಕೆಗಾಗಿ ಅವರ ಬೌಲಿಂಗ್ಗೆ ಭಾರಿ ಟೀಕೆಗೆ ಒಳಗಾಗಿತ್ತು.
ಆದಾಗ್ಯೂ, ಮೊಹಮ್ಮದ್ ಸಿರಾಜ್ ನೇತೃತ್ವದ ಬೌಲಿಂಗ್ ವಿಭಾಗವು ನಂಬಲಾಗದ ತಿರುವು ಮೂಡಿಸಿದ್ದಾರೆ. ಈ ಋತುವಿನಲ್ಲಿ ಅಡಿದ 12 ಪಂದ್ಯಗಳಿಂದ 12 ವಿಕೆಟ್ ಪಡೆದಿರುವ ಮೊಹಮ್ಮದ್ ಸಿರಾಜ್, ತಮ್ಮ ಕೊನೆಯ ನಾಲ್ಕು ಪಂದ್ಯಗಳಲ್ಲೇ 7 ವಿಕೆಟ್ ಪಡೆದಿದ್ದಾರೆ.
ಆರ್ಸಿಬಿ ತಂಡ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಎದುರಿಸುವ ಮೊದಲು ಐದು ದಿನಗಳ ವಿರಾಮವನ್ನು ಹೊಂದಿದ್ದು, ಅದು 'ಮಾಡು ಇಲ್ಲವೇ ಮಡಿ' ಪಂದ್ಯವಾಗಿರಲಿದೆ.