ಮೇ 17 ಶುಕ್ರವಾರ, ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಆರಂಭಕ್ಕೂ ಮುನ್ನ 5 ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಆಘಾತಕಾರಿ ನಿರ್ಧಾರ ಕೈಗೊಂಡಿತ್ತು. ಬಳಿಕ ಸಾಮಾಜಿಕ ಜಾಲತಾಣದಲ್ಲೂ ಈ ನಿರ್ಧಾರದ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿದ್ದವು.
ಐಪಿಎಲ್ನಲ್ಲಿ ಅತ್ಯಂತ ಯಶಸ್ವಿ ನಾಯಕ ಎಂಬ ಹೆಗ್ಗಳಿಕೆ ಪಾತ್ರರಾಗಿದ್ದ ರೋಹಿತ್ ಶರ್ಮಾ ಅವರನ್ನು ಮುಂಬೈ ನಾಯಕತ್ವದಿಂದ ಕೆಳಗಿಳಿಸಿ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಅವರನ್ನು ಕ್ಯಾಪ್ಟನ್ ಮಾಡಲಾಗಿತ್ತು. ಪಾಂಡ್ಯ ಅವರು ಕೂಡ ಎರಡು ಋತುಗಳಲ್ಲಿ ಗುಜರಾತ್ ಟೈಟನ್ಸ್ ತಂಡವನ್ನು ಚಾಂಪಿಯನ್ ಮತ್ತು ರನ್ನರ್ ಆಪ್ ಮಾಡುವಲ್ಲಿ ಶ್ರಮವಹಿಸಿದ್ದರು.

ಹೀಗಾಗಿ ಐಪಿಎಲ್ ಟೂರ್ನಿ ಆರಂಭವಾದ ನಂತರ ಮುಂಬೈ ಇಂಡಿಯನ್ಸ್ ತಂಡದಿಂದ ಉತ್ತಮ ಪ್ರದರ್ಶನ ನಿರೀಕ್ಷಿಸಲಾಗಿತ್ತು. ಆದರೆ ಮುಂಬೈ ತನ್ನ ಐಪಿಎಲ್ ಇತಿಹಾಸದಲ್ಲೇ ಅತ್ಯಂತ ಕಳಪೆ ಪ್ರದರ್ಶನ ನೀಡಿತ್ತು. ಹೀಗಾಗಿ ಪ್ಲೇ ಆಫ್ಗೆ ಆರ್ಹತೆ ಪಡೆಯಲು ವಿಫಲವಾಗಿ ಟೂರ್ನಿಯಿಂದ ಹೊರ ಬಿದ್ದಿದೆ.
ಈ ಋತುವಿನಲ್ಲಿ ಇದುವರೆಗೆ ಮುಂಬೈ 13 ಪಂದ್ಯಗಳಲ್ಲಿ ಕೇವಲ 4 ಗೆಲುವುಗಳನ್ನು ದಾಖಲಿಸಿದ್ದು, 8 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಕೊನೆಯ 10ನೇ ಸ್ಥಾನದಲ್ಲಿದೆ. ಮುಂಬೈ ತಂಡದ ಈ ಕಳಪೆ ಪ್ರದರ್ಶನಕ್ಕೆ ನಾಯಕ ಹಾರ್ದಿಕ್ ಪಾಂಡ್ಯ ಅವರನ್ನು ಹೆಚ್ಚು ಹೊಣೆಗಾರರನ್ನಾಗಿ ಮಾಡಿರುವುದು ಮತ್ತೊಮ್ಮೆ ಕ್ರಿಕೆಟ್ ಗಲ್ಲಿಯಲ್ಲಿ ಚರ್ಚೆಗೆ ವೇದಿಕೆಯಾಗಿದೆ.
ಕಾರಣ, ಪಾಂಡ್ಯ ಬೌಲಿಂಗ್, ಬ್ಯಾಟಿಂಗ್ ಮತ್ತು ನಾಯಕತ್ವದಲ್ಲಿ ಯಾವುದೇ ವಿಶೇಷವಾದುದ್ದನ್ನು ತಂಡಕ್ಕಾಗಿ ಈ ಬಾರಿ ಮಾಡಿಲ್ಲ. ಹೀಗಾಗಿ ಸತತ ಮುಂಬೈ ಸೋಲು ಕಂಡಿದೆ ಎನ್ನಲಾಗಿದೆ. ಜೊತೆ ತಂಡದಲ್ಲಿ ಆಟಗಾರರು ಒಗ್ಗಟ್ಟಿನ ಮಂತ್ರ ಜಪಿಸುವಲ್ಲಿ ಹಿಂದೆಟ್ಟು ಹಾಕಿದ್ದರಿಂದ ಮುಂಬೈ ಗೆಲುವು ಸಾಧಿಸಲು ಸಾಧ್ಯವಾಗಲ್ಲ ಎಂದು ಅಭಿಮಾನಿಗಳು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಈ ಐಪಿಎಲ್ನಲ್ಲಿ ಟಿ20 ಸ್ಪೆಷಲಿಸ್ಟ್ ಹಾರ್ದಿಕ್ ಪಾಂಡ್ಯ ಹೆಚ್ಚು ರನ್ ಹೊಡೆದಿಲ್ಲ. 12 ಇನ್ನಿಂಗ್ಸ್ಗಳಲ್ಲಿ ಬ್ಯಾಟಿಂಗ್ ಮಾಡಿರುವ ಪಾಂಡ್ಯ 18.18 ಸರಾಸರಿಯಲ್ಲಿ 200 ರನ್ ಗಳಿಸಿದ್ದಾರೆ. ಅಲ್ಲದೆ, ತಂಡಕ್ಕೆ ಬೇಕಾದ ಸಂದರ್ಭದಲ್ಲಿ ಪಾಂಡ್ಯ ಉತ್ತಮ ಬ್ಯಾಟಿಂಗ್ ಮಾಡುವ ಮೂಲಕ ನೆರವಾಗಿಲ್ಲ.
ಮತ್ತೊಂದು ಅಚ್ಚರಿ ವಿಷಯವೆಂದರೆ ಪಾಂಡ್ಯ ಅವರಿಂದ ಒಮ್ಮೆಯೂ ಅರ್ಧಶತಕ ಗಳಿಸಲು ಸಾಧ್ಯವಾಗಿಲ್ಲ. ಐಪಿಎಲ್ನ ಅತ್ಯಂತ ಯಶಸ್ವಿ ತಂಡಗಳಲ್ಲಿ ಒಂದಾದ ಮುಂಬೈ ಕಳಪೆ ಪ್ರದರ್ಶನಕ್ಕೆ ಹಾರ್ದಿಕ್ ಅವರ ಬ್ಯಾಟ್ ಸೈಲೆಂಟ್ ಆಗಿರುವುದು ಕೂಡ ಒಂದು ಕಾರಣವಾಗಿದೆ.
ಬಲಗೈ ವೇಗದ ಬೌಲಿಂಗ್ ಆಲ್ರೌಂಡರ್ ಆಗಿರುವ ಹಾರ್ದಿಕ್ ಪಾಂಡ್ಯ ಹೇಳಿಕೊಳ್ಳುವಂತ ಪ್ರದರ್ಶನ ನೀಡಿಲ್ಲ. ಪಾಂಡ್ಯ 11 ಪಂದ್ಯಗಳಲ್ಲಿ 11 ವಿಕೆಟ್ ಪಡೆದಿದ್ದಾರೆ. ಈ ಅವಧಿಯಲ್ಲಿ ಅವರ ಬೌಲಿಂಗ್ ಸರಾಸರಿ 32.72 ಮತ್ತು 10.58 ಎಕಾನಮಿ ಆಗಿದೆ.
4 ಓವರ್ ಗಳಲ್ಲಿ 31 ರನ್ ನೀಡಿ 3 ವಿಕೆಟ್ ಪಡೆದಿರುವುದು ಪಾಂಡ್ಯ ಅವರ ಅತ್ಯುತ್ತಮ ಪ್ರದರ್ಶನವಾಗಿದೆ. ಈ ಎಲ್ಲ ಅಂಕಿ ಅಂಶಗಳನ್ನು ನೋಡಿದ ಮೇಲೆ ಮುಂಬೈ ನಾಯಕತ್ವದ ಅದೃಷ್ಟ ಹಾರ್ದಿಕ್ ಪಾಂಡ್ಯ ಅವರ ಕೈ ಹಿಡಿದಿಲ್ಲ ಎಂದು ಅಭಿಮಾನಿಗಳು ಅಭಿಪ್ರಾಯ ತಿಳಿಸಿದ್ದಾರೆ.