ಮುಂಬೈ ಇಂಡಿಯನ್ಸ್ ತಂಡದಲ್ಲಿ ಭುಗಿಲೆದ್ದಿದ್ದ ಅಸಮಾಧಾನ ತಣ್ಣಗಾದಂತೆ ಅಂತೂ ಕಾಣುತ್ತಿದೆ. ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್, ಜಸ್ಪ್ರಿತ್ ಬುಮ್ರಾ ಅವರನ್ನು ಬೇರೆ ತಂಡಗಳು ಖರೀದಿ ಮಾಡಬಹುದು ಎಂಬ ಲೆಕ್ಕಾಚಾರ ಎಲ್ಲ ಉಲ್ಟಾ ಹೊಡೆದಿದೆ. ಈ ಮೂವರು ಸ್ಟಾರ್ ಆಟಗಾರರು ಮತ್ತೊಮ್ಮೆ ಮುಂಬೈ ಜೆರ್ಸಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಗುಜರಾತ್ ತಂಡದಿಂದ ಟ್ರೇಡ್ ಮೂಲಕ ಮುಂಬೈ ತಂಡವನ್ನು ಸೇರಿಕೊಂಡಿದ್ದ ಹಾರ್ದಿಕ್ ಪಾಂಡ್ಯ ಅವರಿಗೆ ನಾಯಕತ್ವ ನೀಡಲಾಯಿತು. ಅಲ್ಲದೆ ಮುಂಬೈ ಇಂಡಿಯನ್ಸ್ ತಂಡದ ಯಶಸ್ವಿ ನಾಯಕ ಎಂದೇ ಪರಿಗಣಿಸಲ್ಪಡುವ ರೋಹಿತ್ ಶರ್ಮಾ ಅವರನ್ನು ಕಡೆಗಣನೆ ಮಾಡಲಾಯಿತು ಎಂದು ಅಭಿಮಾನಿಗಳು ಬೇಸರ ವ್ಯಕ್ತ ಪಡಿಸಿದ್ದರು. ಈ ಮುಸುಕಿನ ಗುದ್ದಾಟ ತೀವ್ರ ಸ್ವರೂಪ ಪಡೆಯುತ್ತದೆ ಎಂದೇ ಎಲ್ಲರೂ ಭಾವಿಸಿದ್ದರು. ಇದಕ್ಕೆ ಕಾರಣವೂ ಇದೆ.

ಒಂದು ಸಂದರ್ಶನದಲ್ಲಿ ಮುಂಬೈ ತಂಡದ ಕೋಚ್ ರೋಹಿತ್ ಶರ್ಮಾ ಅವರನ್ನು ನಾಯಕತ್ವದಿಂದ ಕೆಳಗೆ ಇಳಿಸಿದ್ದು, ಒಳ್ಳೆಯ ನಿರ್ಧಾರ. ಈ ಆವೃತ್ತಿಯಲ್ಲಿ ರೋಹಿತ್ ಶರ್ಮಾ ತಮ್ಮ ನೈಜ ಆಟವನ್ನು ಆಡಲಿದ್ದಾರೆ. ಈ ಮೂಲಕ ಮುಂಬೈ ಇಂಡಿಯನ್ಸ್ ತಂಡಕ್ಕೆ ನೆರವಾಗಲಿದ್ದಾರೆ ಎಂದು ತಿಳಿಸಿದ್ದರು. ಇದಕ್ಕೆ ರೋಹಿತ್ ಪತ್ನಿ ಇನ್ಸ್ಸ್ಟಾಗ್ರಾಮ್ನಲ್ಲಿ ಕೆಂಡ ಕಾರಿದ್ದರು.
ಈ ಘಟನೆಗಳ ಬಳಿಕ ಸಂದರ್ಶನ ಒಂದರಲ್ಲಿ ಹಾರ್ದಿಕ್ ಪಾಂಡ್ಯ, ರಿಶ್ತೆ ಮೆ ತೋ ಹಮ್ ತುಮಾರೆ ಕಪ್ತಾನ್ ಲಗತೆಹೇ ನಾಮ್ ಹೇ ಪಾಂಡೆ ಎಂದು ಹೇಳುವ ಮೂಲಕ ಅಭಿಮಾನಿಗಳಿಗೆ ಸಂದೇಶ ರವಾನಿಸಿದ್ದರು. ಈಗ ಹಾರ್ದಿಕ್ ಪಾಂಡ್ಯ ಮೌನ ಮುರಿದಿದ್ದಾರೆ.
ಮುಂಬೈ ಇಂಡಿಯನ್ಸ್ ತಂಡಕ್ಕೆ ವಾಪಸ್ ಬಂದಿದ್ದು ಮತ್ತೆ ತವರಿಗೆ ವಾಪಸ್ ಬಂದಷ್ಟೇ ಖುಷಿ ಇದೆ. ಎಲ್ಲಿಂದ ನನ್ನ ಕ್ರಿಕೆಟ್ ಆರಂಭವಾಗಿತ್ತೋ, ಅಲ್ಲಿಗೆ ಮತ್ತೆ ಬಂದಿದ್ದೇನೆ. ಬರೋಡಾದಲ್ಲಿನ ಒಬ್ಬ ಕ್ರಿಕೆಟ್ ಆಟಗಾರ ಮುಂಬೈ ವರೆಗಿನ ಪಯಣ ರೋಚಕ. ಮುಂಬೈ ನನಗೆ ತುಂಬ ಕಲಿಸಿದೆ. ಈ ನಗರ ಅಪಾರ ಪ್ರೀತಿ ನೀಡಿದೆ. ಮುಂಬೈ ಯಾವಾಗಲು ನಮ್ಮನ್ನು ನಾವು ಬಲಪಡಿಸಲು ಸವಾಲು ಎಸೆಯುತ್ತದೆ. ಐಪಿಎಲ್ ನಿಂದಾಗಿ ಮತ್ತೆ ಎರಡು ವರ್ಷದ ನಂತರ ಮುಂಬೈಗೆ ಮರಳಿದ್ದೇನೆ ಎಂದು ಹಾರ್ದಿಕ್ ಪಾಂಡ್ಯ ತಿಳಿಸಿದ್ದಾರೆ.

ಈ ಬಾರಿಯೂ ಪ್ರಶಸ್ತಿ ಗೆಲ್ಲುವ ಕನಸು ನನ್ನದಾಗಿದ್ದು, ಅಭಿಮಾನಿಗಳ ಬೆಂಬಲ ಅತ್ಯವಶ್ಯಕ. ಈ ಬಾರಿ ಅಂತ್ಯತ ರೋಚಕ ಐಪಿಎಲ್ ನೋಡಬಹುದು ಎಂಬ ಭರವಸೆಯನ್ನು ನಾನು ನೀಡಬಲ್ಲೆ. ಇದೊಂದು ಇಂತಹ ಪಯಣವಾಗಿದೆ ಇದರ ಮೂಲಕ ನಾವೆಲ್ಲರೂ ಒಟ್ಟಾಗಿ ಆನಂದವನ್ನು ಪಡೆಯೋಣ ಎಂದು ಹೇಳಿದ್ದಾರೆ.
ಅಸಲಿಗೆ ಹಾರ್ದಿಕ್ ಪಾಂಡ್ಯಗೆ ಹಾಗೂ ಮುಂಬೈ ಇಂಡಿಯನ್ಸ್ ತಂಡಕ್ಕೆ ಒಂದು ಅವಿನಾಭಾವ ಸಂಭದ ಇದೆ. ಬರೋಡಾದಲ್ಲಿ ಕ್ರಿಕೆಟ್ ಆಡಿದರೂ ಸಹ ಹಾರ್ದಿಕ್ ಅವರನ್ನು ವಿಶ್ವ ಮಟ್ಟದಲ್ಲಿ ಗುರುತಿಸುವಂತೆ ಮಾಡಿದ್ದರಲ್ಲಿ ಮುಂಬೈ ಇಂಡಿಯನ್ಸ್ ತಂಡದ ಶ್ರಮ ಇದ್ದೇ ಇದೆ. ಹೀಗಾಗಿ ಹಾರ್ದಿಕ್ ನಾನು ಮನೆಗೆ ಬಂದಷ್ಟೇ ಖುಷಿಯಾಗಿದ್ದೇನೆ ಎಂದು ಹೇಳಿದ್ದಾರೆ.
ಮಾರ್ಚ್ 22ರಿಂದ ಆರಂಭವಾಗುವ ಐಪಿಎಲ್ 17ನೇ ಆವೃತ್ತಿಯಲ್ಲಿ ಹಾರ್ದಿಕ್ ಪಾಂಡ್ಯ ಮುಂಬೈ ಇಂಡಿಯನ್ಸ್ ತಂಡವನ್ನು ಮುನ್ನಡೆಸಲಿದ್ದಾರೆ. ಅಲ್ಲದೆ ತಂಡಕ್ಕೆ ಆರನೇ ಬಾರಿ ಮುಕುಟವನ್ನು ತೊಡಿಸುವ ಕನಸು ಕಾಣುತ್ತಿದ್ದಾರೆ.