ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2024ರ ಆವೃತ್ತಿಗೆ ಮಿನಿ ಹರಾಜು ಮಂಗಳವಾರ, ಡಿಸೆಂಬರ್ 19ರಂದು ದುಬೈನಲ್ಲಿ ನಡೆಯಲಿದೆ. ಎಲ್ಲಾ ಹತ್ತು ಫ್ರಾಂಚೈಸಿಗಳು ತಂಡಗಳು ಪ್ರಮುಖ ದಿನಕ್ಕಾಗಿ ತಮ್ಮ ಕೊನೆಯ ಕ್ಷಣದ ಸಿದ್ಧತೆಗಳನ್ನು ಮಾಡುತ್ತಿವೆ.
ಡಿಸೆಂಬರ್ 19ರಂದು ದುಬೈನಲ್ಲಿ ನಡೆಯಲಿರುವ ಐಪಿಎಲ್ ಮಿನಿ ಹರಾಜಿಗೂ ಮುನ್ನ ಆಸ್ಟ್ರೇಲಿಯಾದ ಸ್ಟಾರ್ ಆಲ್ರೌಂಡರ್ ಕ್ಯಾಮೆರಾನ್ ಗ್ರೀನ್ ವ್ಯಾಪಾರ ಮಾಡಿಕೊಂಡಿದ್ದಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡವನ್ನು ಭಾರತದ ಮಾಜಿ ಆಲ್ರೌಂಡರ್ ಇಫಾನ್ ಪಠಾಣ್ ಶ್ಲಾಘಿಸಿದ್ದಾರೆ.
ಇದೇ ವೇಳೆ, ಆರ್ಸಿಬಿ ತಂಡದಿಂದ ಬಿಡುಗಡೆ ಮಾಡಿದ ಶ್ರೀಲಂಕಾದ ವನಿಂದು ಹಸರಂಗ ಬದಲಿಗೆ ಮಿನಿ ಹರಾಜಿನಲ್ಲಿ ಆಯ್ಕೆ ಮಾಡಬಹುದಾದ ಸ್ಪಿನ್ನರ್ ಆಗಿ ಅಫ್ಘಾನಿಸ್ತಾನದ ಮುಜೀಬ್-ಉರ್-ರೆಹಮಾನ್ ಹೆಸರನ್ನು ಇಫಾನ್ ಪಠಾಣ್ ಸೂಚಿಸಿದರು.

ವೇಗದ ಬೌಲಿಂಗ್ ಆಲ್ರೌಂಡರ್ ಕ್ಯಾಮೆರಾನ್ ಗ್ರೀನ್ ಕಳೆದ ಋತುವಿನಲ್ಲಿ ಮುಂಬೈ ತಂಡದ ಪರ 16 ಪಂದ್ಯಗಳನ್ನು ಆಡಿದರು, 50.22ರ ಸರಾಸರಿಯಲ್ಲಿ ಮತ್ತು 160.28ರ ಸ್ಟ್ರೈಕ್ ರೇಟ್ನಲ್ಲಿ 452 ರನ್ ಗಳಿಸಿದರು ಮತ್ತು ಆರು ವಿಕೆಟ್ಗಳನ್ನು ಕಬಳಿಸಿದರು.
ಫಾಫ್ ಡು ಪ್ಲೆಸಿಸ್ ನಾಯಕತ್ವದ ಆರ್ಸಿಬಿ ಫ್ರಾಂಚೈಸಿಗೆ ಕ್ಯಾಮೆರಾನ್ ಗ್ರೀನ್ ದೊಡ್ಡ ತಲೆನೋವು ಬಗೆಹರಿಸಿದ್ದಾರೆ ಎಂದು ಭಾರತದ ಮಾಜಿ ಆಲ್ರೌಂಡರ್ ಇರ್ಫಾನ್ ಪಠಾಣ್ ಹೇಳಿದರು.
ವನಿಂದು ಹಸರಂಗರನ್ನು ಕಡಿಮೆ ಮೊತ್ತಕ್ಕೆ ಪಡೆಯದಿದ್ದರೆ, ಮಿನಿ ಹರಾಜಿನ ಸಮಯದಲ್ಲಿ ಅಫ್ಘಾನಿಸ್ತಾನ ಸ್ಪಿನ್ನರ್ ಮುಜೀಬ್ ಉರ್ ರೆಹಮಾನ್ ಅವರು ಆರ್ಸಿಬಿ ಪರಿಗಣಿಸಬಹುದಾದ ಬೌಲರ್ ಆಗಬಹುದು ಎಂದು ಜನಪ್ರಿಯ ಕಾಮೆಂಟೇಟರ್ ಅಭಿಪ್ರಾಯಪಟ್ಟಿದ್ದಾರೆ.

ಶ್ರೀಲಂಕಾದ ಸ್ಪಿನ್ನರ್ ಹಸರಂಗರನ್ನು ಬಿಡುಗಡೆ ಮಾಡುವ ಮೂಲಕ ಆರ್ಸಿಬಿ ತಮ್ಮ ಬಜೆಟ್ಗೆ 10.75 ಕೋಟಿ ರೂಪಾಯಿಗಳನ್ನು ಸೇರಿಸಿಕೊಂಡಿತು.
"ನೀವು ಆರ್ಸಿಬಿ ತಂಡವನ್ನು ಗಮನಿಸಿದರೆ, ಕ್ಯಾಮೆರಾನ್ ಗ್ರೀನ್ ಬಂದಿರುವುದು ಅವರಿಗೆ ದೊಡ್ಡ ತಲೆನೋವು ಬಗೆಹರಿದಿದೆ. ಮಧ್ಯಮ ಕ್ರಮಾಂಕದ ಗೊಂದಲವನ್ನು ಬಗೆಹರಿಸಿದ್ದಾರೆ. ಅದೇ ರೀತಿ ತಮ್ಮ ಬೌಲಿಂಗ್ ವಿಭಾಗವನ್ನು ಬಲಗೊಳಿಸಬೇಕಾಗುತ್ತದೆ. ವನಿಂದು ಹಸರಂಗ ಅವರನ್ನು ಕಡಿಮೆ ಬೆಲೆಗೆ ಮರಳಿ ಪಡೆದರೆ ಒಳ್ಳೆಯದು," ಎಂದರು.
"ಒಂದು ವೇಳೆ ಹಸರಂಗ ಅವರನ್ನು ತೆಗೆದುಕೊಳ್ಳದಿದ್ದರೆ, ಬದಲಿಗೆ ಮುಜೀಬ್-ಉರ್-ರೆಹಮಾನ್ನಂತಹ ಸ್ಪಿನ್ನರ್ ಕಡೆ ನೋಡಬಹುದು. ಮುಜೀಬ್-ಉರ್-ರೆಹಮಾನ್ ವಾಸ್ತವವಾಗಿ ನಿಗೂಢ ಬೌಲರ್ ಆಗಿದ್ದು, ಅವರು ಹೊಸ ಚೆಂಡಿನೊಂದಿಗೆ ಬೌಲಿಂಗ್ ಮಾಡಬಹುದು ಮತ್ತು ಕಠಿಣ ಪರಿಸ್ಥಿತಿಗಳಲ್ಲಿ ಅವರು ಸಾಕಷ್ಟು ಸೂಕ್ತ ಆಯ್ಕೆಯಾಗಿರಬಹುದು," ಎಂದು ಇರ್ಫಾನ್ ಪಠಾಣ್ ಸ್ಟಾರ್ ಸ್ಪೋರ್ಟ್ಸ್ನಲ್ಲಿ ಹೇಳಿದರು.
2023ರ ಐಪಿಎಲ್ನಲ್ಲಿ ಮುಜೀಬ್-ಉರ್-ರೆಹಮಾನ್ ಮಾರಾಟವಾಗದೆ ಉಳಿದರು. 2023ರ ಏಕದಿನ ವಿಶ್ವಕಪ್ ವೇಳೆ ಯುವ ಸ್ಪಿನ್ನರ್ ಉತ್ತಮವಾಗಿ ಬೌಲಿಂಗ್ ಮಾಡಿದರು ಮತ್ತು 5.59ರ ಎಕಾನಮಿ ದರದಲ್ಲಿ 10 ಪಂದ್ಯಗಳಲ್ಲಿ ಎಂಟು ವಿಕೆಟ್ಗಳನ್ನು ಪಡೆದರು.

ಆಸ್ಟ್ರೇಲಿಯಾ ತಂಡದ ವೇಗಿ ಮಿಚೆಲ್ ಸ್ಟಾರ್ಕ್ ಅವರು ಎಂಟು ವರ್ಷಗಳ ನಂತರ ಐಪಿಎಲ್ಗೆ ಮರಳಲಿದ್ದಾರೆ. ಸ್ಟಾರ್ಕ್ ಮಿನಿ ಹರಾಜಿನಲ್ಲಿ ಹಾಟ್ ಪಿಕ್ ಆಗುವ ನಿರೀಕ್ಷೆಯಿದೆ.
ಈ ಹಿಂದೆ 2014 ಮತ್ತು 2015ರಲ್ಲಿ ಆರ್ಸಿಬಿ ತಂಡವನ್ನು ಪ್ರತಿನಿಧಿಸಿದ್ದ ಅನುಭವಿ ಬೌಲರ್ ಮಿಚೆಲ್ ಸ್ಟಾರ್ಕ್ ಅವರನ್ನು ಮತ್ತೆ ಆರ್ಸಿಬಿ ಆಯ್ಕೆ ಮಾಡುವುದನ್ನು ಇರ್ಫಾನ್ ಪಠಾಣ್ ನಿರೀಕ್ಷಿಸುತ್ತಾರೆ.
ಇನ್ನು ಕರ್ನಾಟಕದ ವೇಗದ ಬೌಲರ್ ವಿಜಯ್ಕುಮಾರ್ ವೈಶಾಕ್ ಅವರ ಪ್ರದರ್ಶನವು ಅನುಭವಿ ವೇಗಿ ಹರ್ಷಲ್ ಪಟೇಲ್ ಅವರನ್ನು ಬಿಡುಗಡೆ ಮಾಡಲು ಮತ್ತು ಅವರ ಪರ್ಸ್ಗೆ 10.75 ಕೋಟಿ ರೂಪಾಯಿ ಮೊತ್ತವನ್ನು ಸೇರಿಸಿಕೊಳ್ಳಲು ಆರ್ಸಿಬಿಗೆ ಆತ್ಮವಿಶ್ವಾಸವ ನೀಡಿತು ಎಂದು 2007ರ ಟಿ20 ವಿಶ್ವಕಪ್ ವಿಜೇತ ಇರ್ಫಾನ್ ಪಠಾಣ್ ಭಾವಿಸಿದರು.
ವಿಜಯ್ಕುಮಾರ್ ವೈಶಾಕ್ ಕಳೆದ ಋತುವಿನಲ್ಲಿ ಏಳು ಪಂದ್ಯಗಳನ್ನು ಆಡಿದರು ಮತ್ತು ಒಂಬತ್ತು ವಿಕೆಟ್ಗಳನ್ನು ಪಡೆದರು. ಅವರು ವಿವಿಧ ರೀತಿಯ ನಿಧಾನಗತಿಯ ಎಸೆತಗಳನ್ನು ಬೌಲ್ ಮಾಡಿದರು ಮತ್ತು ತವರಿನ ಅಭಿಮಾನಿಗಳ ಗಮನ ಸೆಳೆದರು.