ಐಪಿಎಲ್ ಆರಂಭಕ್ಕೂ ಮುನ್ನವೇ ಕೋಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ ಖುಷಿ ಸುದ್ದಿ ಸಿಕ್ಕಿದೆ. ರಣಜಿ ಟೂರ್ನಿಯ ಫೈನಲ್ ಪಂದ್ಯದಲ್ಲಿ ಸ್ಟಾರ್ ಆಟಗಾರ ಶ್ರೇಯಸ್ ಅಯ್ಯರ್ ಭರ್ಜರಿ ಪಾರ್ಮ್ಗೆ ಮರಳಿದ್ದಾರೆ. ಈ ಮೂಲಕ ಸ್ಟಾರ್ ವಿದೇಶಿ ಆಟಗಾರ ಜೇಸನ್ ರಾಯ್ ಇಲ್ಲದಿದ್ದರೂ ಏನು ನಾನೇ ಬ್ಯಾಟಿಂಗ್ ವಿಭಾಗವನ್ನು ಮುನ್ನಡೆಸುತ್ತೇನೆ ಎಂದು ಸಾರಿ ಹೇಳಿದ್ದಾರೆ.
ಮುಂಬೈನ ವಾಂಖೆಡೆ ಅಂಗಳದಲ್ಲಿ ನಡೆಯುತ್ತಿರುವ ರಣಜಿ ಟೂರ್ನಿಯ ಫೈನಲ್ ಪಂದ್ಯದಲ್ಲಿ ಶ್ರೇಯಸ್ ಅಯ್ಯರ್ ಸೊಗಸಾದ ಬ್ಯಾಟಿಂಗ್ ಪ್ರದರ್ಶನ ನೀಡಿದ್ದಾರೆ. ಈ ಮೂಲಕ ಐಪಿಎಲ್ಗೂ ಮುನ್ನ ಫಾರ್ಮ್ ಕಂಡುಕೊಂಡಿದ್ದು ಅಭಿಮಾನಿಗಳಿಗೆ ಖುಷಿ ನೀಡಿದ್ದಾರೆ. ಫೈನಲ್ ಪಂದ್ಯದ ಎರಡನೇ ಇನ್ನಿಂಗ್ಸ್ನಲ್ಲಿ ನಾಯಕ ಅಜಿಂಕ್ಯ ರಹಾನೆ ಔಟ್ ಆಗುತ್ತಿದ್ದಂತೆ ಕ್ರೀಸ್ಗೆ ಇಳಿದ ಶ್ರೇಯಸ್ ಅಯ್ಯರ್ ಮನಮೋಹಕ ಬ್ಯಾಟಿಂಗ್ ನಡೆಸಿದರು.

ಶ್ರೇಯಸ್ ಅಯ್ಯರ್ ಮನಮೋಹಕ ಬ್ಯಾಟಿಂಗ್ ಪ್ರದರ್ಶನ ನೀಡಿ ವಿದರ್ಭ ತಂಡದ ಬೌಲರ್ಗಳನ್ನು ಕಾಡಿದರು. ತಮ್ಮ ನೈಜ ಶೈಲಿಯಲ್ಲಿ ಬ್ಯಾಟಿಂಗ್ ಮಾಡಿದ ಶ್ರೇಯಸ್ ಭೋಜನ ವಿರಾಮದ ವೇಳೆಗೆ 68 ರನ್ ಸಿಡಿಸಿದ್ದಾರೆ. ಇವರ ಮನಮೋಹಕ ಇನಿಂಗ್ಸ್ನಲ್ಲಿ 8 ಬೌಂಡರಿ, 2 ಸಿಕ್ಸರ್ಗಳು ಸೇರಿವೆ. ಶ್ರೇಯಸ್ ಅಯ್ಯರ್ ಅವರ ಬ್ಯಾಟಿಂಗ್ ನೋಡಿದ ಕೆಕೆಆರ್ ಮ್ಯಾನೇಜ್ಮೆಂಟ್ ಫುಲ್ ಖುಷ್ ಆಗಿದೆ.
ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಆಡಿದ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಶ್ರೇಯಸ್ ಅಯ್ಯರ್ ಸಂಪೂರ್ಣವಾಗಿ ರನ್ ಕಲೆ ಹಾಕುವಲ್ಲಿ ವಿಫಲರಾಗಿದ್ದರು. ಇದಾದ ಬಳಿಕ ರಣಜಿ ಪಂದ್ಯಗಳನ್ನು ಆಡುವ ಮೂಲಕ ಲಯ ಕಂಡುಕೊಳ್ಳುವಂತೆ ಟೀಂ ಮ್ಯಾನೇಜ್ಮೆಂಟ್ ಸಲಹೆ ನೀಡಿತ್ತು. ಇದೇ ವೇಳೆ ಶ್ರೇಯಸ್ ಒಂದು ರಣಜಿ ಪಂದ್ಯವನ್ನು ಆಡಿದರು. ಮತ್ತು ಇಂಗ್ಲೆಂಡ್ ವಿರುದ್ಧ ಮೊದಲ ಎರಡು ಟೆಸ್ಟ್ ಪಂದ್ಯಗಳನ್ನು ಆಡುವ ಅವಕಾಶವನ್ನು ಪಡೆದರು. ಈ ಸರಣಿಯಲ್ಲೂ ಲಯ ಕಂಡುಕೊಳ್ಳುವಲ್ಲಿ ಸಾಧ್ಯವೇ ಆಗಲಿಲ್ಲ.

ಇದಾದ ನಂತರ ಭಾರತದ ಆಯ್ಕೆಗಾರರು ಅವರನ್ನು ಇಂಗ್ಲೆಂಡ್ ವಿರುದ್ಧದ ಕೊನೆಯ ಮೂರು ಪಂದ್ಯಗಳ ತಂಡದಿಂದ ಕೈಬಿಟ್ಟರು. ರಣಜಿ ಪಂದ್ಯಗಳಲ್ಲಿ ಭಾಗವಹಿಸುವಂತೆ ಮತ್ತೊಮ್ಮೆ ಸೂಚನೆ ನೀಡಲಾಗಿತ್ತು ಆದರೆ ಈ ಬಾರಿ ಶ್ರೇಯಸ್ ಬೆನ್ನುನೋವಿನ ಕಾರಣ ನೀಡಿ ರಣಜಿ ಪಂದ್ಯಗಳಿಂದ ಹೊರಗುಳಿದಿದ್ದರು. ಅಲ್ಲದೆ ಬಿಸಿಸಿಐ ಶ್ರೇಯಸ್ ಅಯ್ಯರ್ ಅವರನ್ನು ಕೇಂದ್ರ ಗುತ್ತಿಗೆಯಿಂದ ಕೈ ಬಿಟ್ಟಿತ್ತು.
ಇದಾದ ಬಳಿಕ ಎಚ್ಚೆತ್ತುಕೊಂಡಿರುವ ಶ್ರೇಯಸ್ ಅಯ್ಯರ್ ಸೆಮಿಫೈನಲ್ ಪಂದ್ಯವನ್ನು ಆಡಲು ಮುಂದಾದರು. ಅಲ್ಲದೆ ಶ್ರೇಯಸ್ ಅಯ್ಯರ್ ಈ ಪಂದ್ಯದಲ್ಲಿ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಿರಲಿಲ್ಲ. ಆದರೆ ಫೈನಲ್ ಪಂದ್ಯದಲ್ಲಿ ಶ್ರೇಯಸ್ ನೀಡಿರುವ ಪ್ರದರ್ಶನ ನಿಜಕ್ಕೂ ಕೆಕೆಆರ್ ತಂಡಕ್ಕೆ ಖುಷಿ ನೀಡಿದೆ.
ಎರಡು ದಿನಗಳ ಹಿಂದೆ, ಜೇಸನ್ ರಾಯ್ ಐಪಿಎಲ್ನಿಂದ ಹಿಂದೆ ಸರಿಯಲು ನಿರ್ಧರಿಸಿದ್ದರು. ಇಂಗ್ಲೆಂಡ್ನ ಜೇಸನ್ ರಾಯ್ ಐಪಿಎಲ್ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಪರ ಆಡುತ್ತಿದ್ದಾರೆ. ಜೇಸನ್ ರಾಯ್ ಇತ್ತೀಚಿನ ದಿನಗಳಲ್ಲಿ ಅತ್ಯುತ್ತಮ ಫಾರ್ಮ್ನಲ್ಲಿದ್ದಾರೆ. ಹೀಗಾಗಿ ಅವರು ಐಪಿಎಲ್ನಿಂದ ಹಿಂದೆ ಸರಿದಿರುವುದು ಕೆಕೆಆರ್ಗೆ ದೊಡ್ಡ ಹೊಡೆತವಾಗಿದೆ. ಕೆಕೆಆರ್ ಜೇಸನ್ ರಾಯ್ ಬದಲಿಗೆ ಫಿಲ್ ಸಾಲ್ಟ್ ಅವರನ್ನು ತಂಡಕ್ಕೆ ಸೇರಿಸಿಕೊಂಡಿದೆ.