ರಾಯಲ್ ಚಾಲೆಂಜರ್ಸ್ ಬೆಂಗಳೂರು ಐಪಿಎಲ್ನ ಸ್ಟಾರ್ ತಂಡ.. ವಿಶ್ವದ ಅತಿ ಹೆಚ್ಚು ಪ್ರಸಿದ್ಧ ತಂಡಗಳಲ್ಲಿ ಬೆಂಗಳೂರು ತಂಡಕ್ಕೂ ಸ್ಥಾನ ಇದೆ. ಆರ್ಸಿಬಿ ತಂಡ ತನ್ನ ಒಡಲಿನೊಳಗೆ ಅದೆಷ್ಟೋ ಸ್ಟಾರ್ಗಳಿಗೆ ಅವಕಾಶ ನೀಡಿದೆ. ಆದರೆ, ತಂಡ ತನ್ನ ಕಿರೀಟಕ್ಕೆ ಒಮ್ಮೆಯೂ ಐಪಿಎಲ್ ಗರಿಯನ್ನು ಹಚ್ಚಿಕೊಂಡಿಲ್ಲ.
ನಿಜಕ್ಕೂ ಇದು ಆರ್ಸಿಬಿ ಅಭಿಮಾನಿಗಳಿಗೆ ಕಾಡುವ ಪ್ರಶ್ನೆ.. ಆದರೆ ಅಭಿಮಾನಿಗಳು ಎಂದಿಗೂ ಈ ಬಗ್ಗೆ ಹತಾಶರಾಗದೆ, ತಮ್ಮ ತಂಡಕ್ಕೆ ಬೆಂಬಿಲಿಸುತ್ತಲ್ಲೇ ಬಂದಿದ್ದಾರೆ. ಇನ್ನು ಫ್ರಾಂಚೈಸಿ ಸಹ ತನ್ನ ಅಭಿಮಾನಿಗಳಿಗೆ ಯಾವಾಗಲೂ ಬೇರೆಯ ಸ್ಥಾನವನ್ನೇ ನೀಡಿದೆ. ಕೆಂಪು, ಗೋಲ್ಡನ್ ಬಣ್ಣದ ಬಟ್ಟೆ ತೊಟ್ಟು ಆಟಗಾರರು ಮೈದಾನಕ್ಕೆ ಇಳಿಯುತ್ತಿದ್ದರೆ ಮೈದಾನದಲ್ಲಿ ಒಂದು ವೇವ್ ಕ್ರಿಯೇಟ್ ಆಗುತ್ತದೆ.

ಅಭಿಮಾನಿಗಳ ಜೋಶ್ ಕಂಡು, ಆಟಗಾರರ ಉತ್ಸಾಹ ಇಮ್ಮಡಿಯಾಗುತ್ತದೆ. ಒತ್ತಡವನ್ನು ಮೆಟ್ಟಿನಿಲ್ಲುವ ಕ್ಷಮತೆ ಹೆಚ್ಚುತ್ತದೆ. ಫ್ಯಾನ್ಸ್ ಬೆಂಬಲ ಕಂಡು ಆಟಗಾರರ ಎದೆ ಉಬ್ಬುತ್ತದೆ. ಸೋಲಲಿ, ಗೆಲ್ಲಲಿ ಆರ್ಸಿಬಿ, ಆರ್ಸಿಬಿ ಎಂಬ ಕೂಗು ನಿಜಕ್ಕೂ ಪ್ಲೇಯರ್ಗಳಿಗೆ ಗೆಲ್ಲುವ ಹುಮ್ಮಸ್ಸು ತರುತ್ತದೆ. ಆದರೆ, ತಂಡಕ್ಕಾಗಿ ಒಮ್ಮೆಯೂ ಪ್ರಶಸ್ತಿ ಗೆಲ್ಲದ ಹಂಬಲ ಆಟಗಾರರಲ್ಲಿ ಇಂದಿಗೂ ಕಾಡುತ್ತಿದೆ. ಆರ್ಸಿಬಿ ಈ ಬಾರಿ ಕಪ್ ಗೆಲ್ಲ ಬೇಕಾದರೆ ಏನ್ ಮಾಡಬೇಕು ಎಂಬುದರ ಕುರಿತಾದ ಮಾಹಿತಿ ಇಲ್ಲಿದೆ.
ಆರ್ಸಿಬಿ ತಂಡದಲ್ಲಿ ಸ್ಟಾರ್ ಆಟಗಾರರ ದಂಡೇ ಇದೆ. ಇವರು ಸಹ ತಮ್ಮ ಘನತೆಗೆ ತಕ್ಕ ಪ್ರದರ್ಶನವನ್ನೇ ನೀಡುತ್ತಾ ಬಂದಿದ್ದಾರೆ. ಆದರೆ, ಕ್ರಿಕೆಟ್ ಎಂಬುದು ಒಂದು ಟೀಮ್ ವರ್ಕ್ ಇಲ್ಲಿ, ಒಬ್ಬನ ಆಟ ನಡೆಯುವುದಿಲ್ಲ. ಹೀಗಾಗಿ ಮೈದಾನಕ್ಕೆ ಇಳಿಯುವ ಹನ್ನೊಂದು ಜನ ಸಹ ತಮ್ಮ ತಮ್ಮ ಕರ್ತವ್ಯವನ್ನು ಅಚ್ಚುಕಟ್ಟಾಗಿ ಅರಿತಾಗ ಮಾತ್ರ ಗೆಲುವು ಸಾಧ್ಯ.
ಆರ್ಸಿಬಿ ಟೂರ್ನಿಯಲ್ಲಿ ಹಿಂದಿನಿಂದ ಇಲ್ಲಿಯವರೆಗೆ ತನ್ನ ಬ್ಯಾಟಿಂಗ್ನಿಂದಲೇ ಹೆಚ್ಚು ಗುರುತಿಸಿಕೊಂಡಿದೆ. ಯುನಿವರ್ಸಲ್ ಬಾಸ್ ಖ್ಯಾತಿಯ ಕ್ರಿಸ್ ಗೇಲ್, ಮಿಸ್ಟರ್ 360 ಡಿಗ್ರಿ ಖ್ಯಾತಿಯ ಎಬಿ ಡಿವಿಲಿಯರ್ಸ್, ಚೇಸಿಂಗ್ ಸ್ಟಾರ್ ವಿರಾಟ್ ಕೊಹ್ಲಿ ತಮ್ಮ ಬ್ಯಾಟಿಂಗ್ ಕಲಾತ್ಮಕತೆಯಿಂದಲೇ ಅದೆಷ್ಟೋ ಪಂದ್ಯಗಳನ್ನು ಏಕಾಂಗಿಯಾಗಿ ಗೆಲ್ಲಿಸಿದ್ದಾರೆ. ಈ ಲೀಸ್ಟ್ಗೆ ಈಗ ನಾಯಕ ಫಾಫ್ ಡುಪ್ಲೇಸಿಸ್ ಹಾಗೂ ಆಸ್ಟ್ರೇಲಿಯಾ ಆಲ್ ರೌಂಡರ್ ಗ್ಲೇನ್ ಮ್ಯಾಕ್ಸ್ವೆಲ್ ಸೇರುತ್ತಾರೆ.

ಈ ಸ್ಟಾರ್ ಆಟಗಾರರ ಮೇಲಿನ ಒತ್ತಡವನ್ನು ಕಡಿಮೆ ಮಾಡಲು ಆರ್ಸಿಬಿ ಟೀಮ್ ಮ್ಯಾನೇಜ್ಮೆಂಟ್ ಪ್ಲ್ಯಾನ್ ಮಾಡಿಕೊಂಡು ಹರಾಜಿನಲ್ಲಿ ಪ್ರಮುಖ ಆಟಗಾರರಿಗೆ ಬಿಡ್ ಮಾಡಬೇಕಿದೆ.
ಆರ್ಸಿಬಿ ಟೀಮ್ ಮ್ಯಾನೇಜ್ಮೆಂಟ್ ಈ ಬಾರಿಯ ಹರಾಜಿನಲ್ಲಿ ದೇಶೀಯ ಆಲ್ ರೌಂಡರ್ಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕಿದೆ. ತಂಡದಲ್ಲಿ ಟಾಪ್ ಆರ್ಡರ್ ಆಟಗಾರರ ಸಮಸ್ಯೆ ಇಲ್ಲವೇ ಇಲ್ಲ. ಆದರೆ ಮಿಡ್ಲ್ ಆರ್ಡರ್ ಬ್ಯಾಟರ್ಗಳ ಸಮಸ್ಯೆ ತಂಡಕ್ಕೆ ಬಹುವಾಗಿ ಕಾಡುತ್ತಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಆರ್ಸಿಬಿ ಆಟಗಾರರಿಗೆ ಮಣೆ ಹಾಕಬೇಕಿದೆ. ಅಂದಾಗ ಕಪ್ ಆರ್ಸಿಬಿಯ ಶೋಕೇಸ್ ಸೇರುತ್ತದೆ.
ಇನ್ನು ಆರ್ಸಿಬಿ ವಿದೇಶಿ ಆಟಗಾರರಿಗೆ ಪ್ರಾಮುಖ್ಯ ನೀಡುವ ಬದಲು, ದೇಶೀಯ ಆಟಗಾರರಿಗೆ ಮಣೆ ಹಾಕಬೇಕು. ಒಂದು ತಂಡದಲ್ಲಿ ನಾಲ್ಕು ಜನ ವಿದೇಶಿ ಆಟಗಾರರಿಗೆ ಅಷ್ಟೇ ತಂಡದಲ್ಲಿ ಆಡುವ ಅವಕಾಶ ಲಭಿಸುತ್ತದೆ. ಆದರೆ ಏಳು ಭಾರತೀಯ ಆಟಗಾರರು ಮೈದಾನದಲ್ಲಿ ಇಳಿಯುವ ಅವಕಾಶ ಪಡೆಯುತ್ತಾರೆ. ಇದನ್ನು ಗಮನದಲ್ಲಿಟ್ಟುಕೊಂಡು ದೇಶೀಯ ಟೂರ್ನಿಗಳಲ್ಲಿ ಮಿಂಚಿದ ಆಟಗಾರರಿಗೆ ಮಣೆ ಹಾಕಬೇಕಿದೆ. ಈ ನಿಟ್ಟಿನಲ್ಲಿ ಟೀಮ್ ಮ್ಯಾನೇಜ್ಮೆಂಟ್ ಗಮನ ಹರಿಸಿ, ಹರಾಜಿನಲ್ಲಿ ಬಾಜಿ ಕಟ್ಟಬೇಕಿದೆ.

ಆರ್ಸಿಬಿ ತಂಡದಲ್ಲಿ ಸ್ಟಾರ್ ವೇಗದ ಬೌಲರ್ ಆಗಿ ಮೊಹಮ್ಮದ್ ಸಿರಾಜ್ ಕಾಣಿಸಿಕೊಳ್ಳಲಿದ್ದಾರೆ. ಇವರಿಗ ಸಾಥ್ ನೀಡ ಬಲ್ಲ ಇನ್ನೊಬ್ಬ ವೇಗಿಯ ಆಗಮನ ಆಗಬೇಕಿದೆ. ಇನ್ನು ತಂಡದಲ್ಲಿ ಕ್ವಾಲಿಟಿ ಸ್ಪಿನ್ನರ್ಸ್ ಇಲ್ಲದೇ ಇರುವುದು ತಂಡಕ್ಕೆ ಪೆಟ್ಟು ನೀಡಿದೆ. ಆರ್ಸಿಬಿ ಡೆತ್ ಓವರ್ಗಳಲ್ಲಿ ನಿರಂತರವಾಗಿ ರನ್ಗಳನ್ನು ನೀಡಿ ಕೈ ಸುಟ್ಟುಕೊಂಡಿದೆ. ಈ ನಿಟ್ಟಿನಲ್ಲೂ ಯೋಚಿಸಬೇಕಿದೆ. ಅಂದಾಗ ಮಾತ್ರ ಈ ಸಲ ಕಪ್ ನಮ್ದೇ ಎನ್ನುವ ಘೋಷ ವಾಕ್ಯ ನಿಜವಾಗುತ್ತದೆ.