ಮೇ 27 ಸೋಮವಾರ, ಐಪಿಎಲ್ 2024ರ ಟ್ರೋಫಿಯನ್ನು ಕೋಲ್ಕತ್ತಾ ನೈಟ್ ರೈಡರ್ಸ್ ಗೆಲ್ಲುವಲ್ಲಿ ಮೆಂಟರ್ ಗೌತಮ್ ಗಂಭೀರ್ ಪ್ರಮುಖ ಪಾತ್ರವಹಿಸಿದ್ದಾರೆ. ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಗೆಲ್ಲುವ ಮೂಲಕ ಕೆಕೆಆರ್ ಮೂರನೇ ಬಾರಿಗೆ ಚಾಂಪಿಯನ್ ಆಗಿದೆ.
ಈ ಹಿಂದೆ ಗಂಭೀರ್ ನಾಯಕನಾಗಿ 2012 ಮತ್ತು 2014ರಲ್ಲಿ ಕೆಕೆಆರ್ ತಂಡವನ್ನು ಚಾಂಪಿಯನ್ ಮಾಡುವಲ್ಲಿ ಯಶಸ್ವಿಯಾಗಿದ್ದರು. 10 ವರ್ಷಗಳ ಬಳಿಕ ಗಂಭೀರ್ ತಮ್ಮ ನೆಚ್ಚಿನ ಕೆಕೆಆರ್ ತಂಡಕ್ಕೆ ಮೆಂಟರ್ ಆಗಿ ಮತ್ತೊಮ್ಮೆ ಟ್ರೋಫಿ ತಂದುಕೊಟ್ಟಿದ್ದಾರೆ.

ಭಾನುವಾರ ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ ಫೈನಲ್ನಲ್ಲಿ ಎಸ್ಆರ್ಹೆಚ್ ಎದುರು ಕೆಕೆಆರ್ ಗೆಲ್ಲುತ್ತಿದ್ದಂತೆ ಆಟಗಾರರು ಅದ್ಧೂರಿ ಸಂಭ್ರಮಾಚರಣೆ ಮಾಡಿದರು. ಜೊತೆಗೆ ಕೆಕೆಆರ್ ಮಾಲೀಕ, ನಟ ಶಾರುಖ್ ಖಾನ್ ಕೂಡ ಆಟಗಾರರಿಗೆ ಹಾಗು ಮೆಂಟರ್ ಗಂಭೀರ್ ಹಣೆಗೆ ಮುತ್ತಿಟ್ಟು ಅಭಿನಂದನೆ ಸಲ್ಲಿಸಿದ್ದರು.
ಮೈದಾನದಲ್ಲಿ ನಡೆಯುತ್ತಿದ್ದ ಸಂಭ್ರಮಾಚರಣೆ ವೇಳೆ ಸಂತಸ ವ್ಯಕ್ತಪಡಿಸಿದ ಕೆಕೆಆರ್ ಬ್ಯಾಟರ್ ನಿತೀಶ್ ರಾಣಾ ಅವರು ಗೌತಮ್ ಗಂಭೀರ್ ಅವರನ್ನು ಹೊಗಳಿದ್ದರು. ಮತ್ತೆ ಕೆಕೆಆರ್ ತಂಡಕ್ಕೆ ಗೌತಮ್ ಗಂಭೀರ್ ಮೆಂಟರ್ ಆಗಿ ಬಂದಾಗ ತಮಗೆ ಕಳುಹಿಸಿದ ಮೇಸೆಜ್ ಬಗ್ಗೆ ಕೂಡ ಮುಕ್ತವಾಗಿ ಮಾತನಾಡಿದರು.
ಗೌತಮ್ ಗಂಭೀರ್ ಅವರನ್ನು ಕೋಲ್ಕತ್ತಾದ ಮೆಂಟರ್ ಆಗಿ ಮತ್ತೆ ನೇಮಿಸಿದಾಗ ನನಗೆ ತುಂಬಾ ಸಂತೋಷವಾಗಿತ್ತು. ಆಗ ನಾನು ಅವರಿಗೆ ದೀರ್ಘ ಸಂದೇಶವನ್ನು ಕಳುಹಿಸಿ ಅಭಿನಂದನೆ ಸಲ್ಲಿಸಿದೆ. ಆ ನಂತರ ನನಗೆ ಅವರು ಕಳುಹಿಸಿದ ಮೇಸೆಜ್ ಇನ್ನೂ ನೆನಪಿದೆ.
ಗೆಲುವಿನ ನಂತರ ನಾವು ಟ್ರೋಫಿಯೊಂದಿಗೆ ನಿಂತಾಗ ನನಗೆ ಸಂತೋಷವಾಗುತ್ತದೆ, ಧನ್ಯವಾದಗಳು ಎಂದು ಗೌತಮ್ ಗಂಭೀರ್ ಸಂದೇಶ ಕಳುಹಿಸಿದ್ದರು. ಇಂದು ಆ ದಿನ ಬಂದಿದ್ದು, ನಾವು ಐಪಿಎಲ್ ಟ್ರೋಫಿಯನ್ನು ಗೆದ್ದಿದ್ದೇವೆ ಎಂದು ನಿತೀಶ್ ರಾಣಾ ಹೇಳಿದ್ದಾರೆ.

ಯಾವಾಗಲೂ ಗೆಲುವಿನ ಹಸಿವಿನೊಂದಿಗೆ ಗಂಭೀರ್ ಮೈದಾನಕ್ಕೆ ಬರುತ್ತಾರೆ. ಇದೀಗಾ ಗಂಭೀರ್ ಮೆಂಟರ್ ಆದ ಮೇಲೆ ಕೆಕೆಆರ್ ತಂಡವನ್ನು ಚಾಂಪಿಯನ್ ಮಾಡಿದ್ದಾರೆ. ಆದರಿಂದ ಗಂಭೀರ್ ಅಂದು ಕಳುಹಿಸಿದ ಸಂದೇಶ ಇಂದು ನಿಜಾವಾಗಿದೆ ಎಂದು ನಿತೀಶ್ ರಾಣಾ ತಿಳಿಸಿದ್ದಾರೆ.
ಗೌತಮ್ ಗಂಭೀರ್ ಕೆಕೆಆರ್ ತಂಡಕ್ಕೆ ಬರುವ ಮೊದಲು ಎರಡು ವರ್ಷಗಳ ಕಾಲ ಲಕ್ನೋ ಸೂಪರ್ಜೈಂಟ್ಸ್ ತಂಡದ ಮೆಂಟರ್ ಆಗಿದ್ದರು. ಈ ಋತುಗಳಲ್ಲಿ ಲಕ್ನೋ ತಂಡ ಯಶಸ್ವಿಯಾಗಿ ಪ್ಲೇ ಆಫ್ಗೆ ತಲುಪಿತು. ಆಗ ಕೆಕೆಆರ್ ಅಗ್ರ-4 ಸ್ಥಾನವನ್ನೂ ಗಳಿಸಲು ಸಾಧ್ಯವಾಗಿರಲಿಲ್ಲ.
ಈ ವರ್ಷ ಗಂಭೀರ್ ಮತ್ತೆ ಮೆಂಟರ್ ಆಗಿ ಕೆಕೆಆರ್ ತಂಡಕ್ಕೆ ಪ್ರಶಸ್ತಿ ಗೆದ್ದಿದ್ದಾರೆ. ಆದರೆ ಲಕ್ನೋ ಈ ಬಾರಿ ಪ್ಲೇ ಆಫ್ಗೆ ಬಂದಿಲ್ಲ. ತಮ್ಮ ಕಟ್ಟುನಿಟ್ಟಿನ ವ್ಯಕ್ತಿತ್ವದಿಂದ ಗಂಭೀರ್ ಹೆಚ್ಚು ಜನಪ್ರಿಯತೆ ಪಡೆದಿದ್ದು, ಮುಂದಿನ ಟೀಮ್ ಇಂಡಿಯಾ ಹೆಡ್ ಕೋಚ್ ಆಗುವ ಸಾಧ್ಯತೆಗಳಿವೆ.