ಐಪಿಎಲ್ 2024 ರ ಮೊದಲು, ಕೋಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ ಮತ್ತೊಂದು ಪೆಟ್ಟು ಬಿದ್ದಿದೆ. ಸ್ಟಾರ್ ಪ್ಲೇಯರ್ ಒಬ್ಬರಿಗೆ ಗಾಯದ ಬರೆ ಬಿದ್ದಂತೆ ಕಾಣುತ್ತಿದೆ. ಇದು ನಿಜಕ್ಕೂ ಕೆಕೆಆರ್ ತಂಡಕ್ಕೆ ಬರೆ ಬೀಳುವ ಸಾಧ್ಯತೆ ಇದೆ.
ಕೆಕೆಆರ್ ನಾಯಕ ಶ್ರೇಯಸ್ ಅಯ್ಯರ್ ರೂಪದಲ್ಲಿ ದೊಡ್ಡ ಆಘಾತ ಬೀಳುವ ಸಾಧ್ಯತೆ ಇದೆ. ಈ ದಿನಗಳಲ್ಲಿ ಅಯ್ಯರ್ ಅವರು ವಿದರ್ಭ ವಿರುದ್ಧ ಆಡುತ್ತಿರುವ ಮುಂಬೈಗಾಗಿ ರಣಜಿ ಟ್ರೋಫಿಯ ಅಂತಿಮ ಪಂದ್ಯವನ್ನು ಆಡುತ್ತಿದ್ದಾರೆ. ಫೈನಲ್ ಪಂದ್ಯದಲ್ಲಿ, ಅಯ್ಯರ್ ಮುಂಬೈ ಪರ ಎರಡನೇ ಇನ್ನಿಂಗ್ಸ್ನಲ್ಲಿ 10 ಬೌಂಡರಿ ಮತ್ತು 3 ಸಿಕ್ಸರ್ಗಳೊಂದಿಗೆ 95 ರನ್ ಗಳಿಸಿದ್ದಾರೆ. ಇಲ್ಲಿಂದಲೇ ಗಾಯದ ಸುಳಿವು ಸಿಕ್ಕಂತೆ ಕಾಣುತ್ತಿದೆ.

ಮಾಧ್ಯಮ ವರದಿಗಳ ಪ್ರಕಾರ, ಎರಡನೇ ಇನ್ನಿಂಗ್ಸ್ನಲ್ಲಿ ಬ್ಯಾಟಿಂಗ್ ಮಾಡಿದ ನಂತರ, ಅಯ್ಯರ್ ಅವರ ಹಳೆಯ ಗಾಯ ಮತ್ತೊಮ್ಮೆ ಕಾಟ ನೀಡಿದೆ ಎಂದು ತಿಳಿದು ಬಂದಿದೆ. ಈಗ ಐಪಿಎಲ್ ಆರಂಭಕ್ಕೆ ಸ್ವಲ್ಪ ಸಮಯ ಮಾತ್ರ ಉಳಿದಿದೆ, ಅಯ್ಯರ್ ಗಾಯವು ಕೋಲ್ಕತ್ತಾ ನೈಟ್ ರೈಡರ್ಸ್ಗೆ ಆತಂಕ ಹೆಚ್ಚಿಸಿದೆ. ಅಯ್ಯರ್ ಅವರು ಕಳೆದ ಋತುವಿನಲ್ಲಿ ಗಾಯದ ಕಾರಣದಿಂದ ಹೊರಗುಳಿದಿದ್ದರು. ಮತ್ತು ಈಗ ಮತ್ತೊಮ್ಮೆ ಅವರು ಮೊದಲ ಕೆಲವು ಪಂದ್ಯಗಳನ್ನು ಮೈದಾನದಿಂದ ಹೊರಗುಳಿಯುವ ಸಾಧ್ಯತೆ ಇದೆ.
'ಟೈಮ್ಸ್ ಆಫ್ ಇಂಡಿಯಾ' ವರದಿಯ ಪ್ರಕಾರ, ರಣಜಿ ಟ್ರೋಫಿ ಫೈನಲ್ನ ಕೊನೆಯ ಐದನೇ ದಿನದಂದು ಅಯ್ಯರ್ ಮೈದಾನದಲ್ಲಿ ಕಾಣಿಸುವುದಿಲ್ಲ ಎಂದು ಉಲ್ಲೇಖಿಸಲಾಗಿದೆ. ಐಪಿಎಲ್ನಲ್ಲಿ ಅಯ್ಯರ್ ಆರಂಭಿಕ ಪಂದ್ಯಗಳನ್ನು ಆಡುವುದು ಕಷ್ಟ.

ರಣಜಿ ಫೈನಲ್ನ ನಾಲ್ಕನೇ ದಿನದಂದು ಅಯ್ಯರ್ ಮೈದಾನದಿಂದ ಹೊರನಡೆದಿದ್ದರು. ಮತ್ತು ಸ್ಕ್ಯಾನ್ಗಾಗಿ ಆಸ್ಪತ್ರೆಗೆ ಹೋಗಿದ್ದರು ಎಂದು ವರದಿ ತಿಳಿಸಿದೆ. ಇನಿಂಗ್ಸ್ನಲ್ಲಿ ಅವರು ಎರಡು ಬಾರಿ ಬೆನ್ನು ಸೆಳೆತವನ್ನು ಅನುಭವಿಸಿದ್ದರು. ಇದನ್ನು ಮುಂಬೈ ಫಿಸಿಯೋ ಚಿಕಿತ್ಸೆ ನೀಡಿದರು. ಇದು ಅಯ್ಯರ್ ಅವರ ಹಳೆಯ ಗಾಯವಾಗಿದ್ದು, ಕಳೆದ ವರ್ಷ ಅವರು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು ಎಂದು ಹೇಳಲಾಗುತ್ತಿದೆ.
ಇದಲ್ಲದೇ ಇತ್ತೀಚೆಗೆ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ವೇಳೆ ಅಯ್ಯರ್ ಗಾಯದ ಬಗ್ಗೆ ದೂರು ನೀಡಿದ್ದರು ಎಂದು ಮೂಲಗಳು ತಿಳಿಸಿವೆ. ಅಯ್ಯರ್ ಗಾಯದ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಬಹಿರಂಗವಾಗಿಲ್ಲ. ಅಯ್ಯರ್ ಅವರು ಐಪಿಎಲ್ನಲ್ಲಿ ಮೊದಲಿನಿಂದಲೂ ಆಡಬಹುದೇ ಅಥವಾ ಇಲ್ಲವೇ ಎಂಬುದು ಈಗ ಕುತೂಹಲಕಾರಿಯಾಗಿದೆ.