ಮೇ 14 ಮಂಗಳವಾರ, ಸನ್ ರೈಸರ್ಸ್ ಹೈದರಾಬಾದ್ ವಿರುದ್ಧದ ಸೋಲಿ ಬಳಿಕ ಲಕ್ನೋ ಸೂಪರ್ ಜೈಂಟ್ಸ್ ಫ್ರಾಂಚೈಸಿ ಮಾಲೀಕ ಸಂಜೀವ್ ಗೋಯೆಂಕಾ ಬಹಿರಂಗವಾಗಿಯೇ ನಾಯಕ ಕೆಎಲ್ ರಾಹುಲ್ ವಿರುದ್ಧ ಅಸಮಾಧಾನ ಹೊರಹಾಕಿರುವ ವಿಡಿಯೋ ವೈರಲ್ ಆಗುತ್ತಿದೆ. ಜೊತೆಗೆ ದಿನದಿಂದ ದಿನಕ್ಕೆ ರಾಹುಲ್ ಪರ ಒಬ್ಬೊಬ್ಬರಾಗಿ ತಮ್ಮ ನಿಲುವನ್ನು ವ್ಯಕ್ತಪಡಿಸುತ್ತಿದ್ದಾರೆ.
ಸೋಮವಾರ ಕೂಡ ಲಕ್ನೋ ತಂಡದ ಸಹಾಯಕ ಕೋಚ್ ಲ್ಯಾನ್ಸ್ ಕ್ಲೂಸೆನರ್ ಅವರು ಕೆಎಲ್ ರಾಹುಲ್ ಮತ್ತು ಸಂಜೀವ್ ಗೋಯೆಂಕಾ ನಡುವಿನ ವಿವಾದದ ಬಗ್ಗೆ ಮೌನ ಮುರಿದ್ದರು. ಇದು ಚಹಾ ಕಪ್ನಲ್ಲಿ ಬಿರುಗಾಳಿ ಎದ್ದಿದೆ. ಇಬ್ಬರು ಕ್ರಿಕೆಟ್ ಪ್ರೇಮಿಗಳ ನಡುವಿನ ಈ ಚರ್ಚೆಯಲ್ಲಿ ಯಾವುದೇ ಸಮಸ್ಯೆ ಇಲ್ಲ. ತಂಡದಲ್ಲಿ ಈ ರೀತಿಯ ಚರ್ಚೆಗಳನ್ನು ನಾವು ಇಷ್ಟಪಡುತ್ತೇವೆ. ಇದು ತಂಡಗಳ ಕಾರ್ಯಕ್ಷಮತೆಯನ್ನು ಸುಧಾರಿಸುತ್ತದೆ. ಇದು ನಮಗೆ ದೊಡ್ಡ ವಿಷಯವಲ್ಲ ಎಂದು ತಿಳಿಸಿದ್ದರು.

ತಮ್ಮದೇ ಆದ ವಿಶಿಷ್ಟ ಶೈಲಿಯನ್ನು ರಾಹುಲ್ ಹೊಂದಿದ್ದಾರೆ. ಅದು ಅವರನ್ನು ಶ್ರೇಷ್ಠ ಕ್ರಿಕೆಟಿಗನನ್ನಾಗಿ ಮಾಡಿದೆ. ಈ ಋತುವಿನ ಐಪಿಎಲ್ ಅವರಿಗೆ ಕಷ್ಟಕರವಾಗಿತ್ತು. ಏಕೆಂದರೆ ನಮ್ಮ ತಂಡ ಸ್ಥಿರ ಪ್ರದರ್ಶನ ನೀಡಲು ಸಾಧ್ಯವಾಗದೆ, ಪ್ರತಿ ಪಂದ್ಯದಲ್ಲೂ ನಿರಂತರವಾಗಿ ವಿಕೆಟ್ಗಳನ್ನು ಕಳೆದುಕೊಳ್ಳುತ್ತಲೇ ಇತ್ತು. ಇದರಿಂದಾಗಿ ರಾಹುಲ್ ಮುಕ್ತವಾಗಿ ಆಡಲು ಅವಕಾಶ ಸಿಗಲಿಲ್ಲ ಎಂದು ನಾಯಕನ ಪರ ಲ್ಯಾನ್ಸ್ ಕ್ಲೂಸೆನರ್ ಬ್ಯಾಟ್ ಬೀಸಿದ್ದರು.
ಇದೀಗ ಕೆಎಲ್ ರಾಹುಲ್ ಅವರ ಪತ್ನಿ ಹಾಗೂ ನಟಿ ಅಥಿಯಾ ಶೆಟ್ಟಿ ಅವರ ಇನ್ಸ್ಟಾಗ್ರಾಮ್ ಸ್ಟೋರಿ ಸಖತ್ ವೈರಲ್ ಆಗುತ್ತಿದೆ. ಜೊತೆಗೆ ಅಥಿಯಾ ಶೆಟ್ಟಿ ಅವರ ಸ್ಟೋರಿ ಎಲ್ಎಸ್ಜಿ ಫ್ರಾಂಚೈಸಿ ಮಾಲೀಕ ಸಂಜೀವ್ ಗೋಯೆಂಕಾ ಅವರಿಗೆ ತಿರುಗೇಟು ಕೊಟ್ಟಂತಿದೆ.
ಅಥಿಯಾ ಶೆಟ್ಟಿ ಹಾಕಿರುವ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಫೋಟೋ ಜೊತೆಗೆ ಬರೆದಿರುವ ಸಾಲುಗಳು ರಾಹುಲ್ ಅವರ ಹಿಂದಿನ ಘಟನೆಗಳ ಬಗ್ಗೆ ಹೇಳುತ್ತಿವೆ. "ದಿ ಕಾಮ್ ಆಫ್ಟರ್ ದಿ ಸ್ಟ್ರೋಮ್" (The clam after the strom) ಎಂದು ಅಥಿಯಾ ಶೆಟ್ಟಿ ಬರೆದುಕೊಂಡಿದ್ದಾರೆ. ಇದು "ಚಂಡುಮಾರುತದ ನಂತರ ಶಾಂತಿ" ಎಂದು ಅರ್ಥೈಸುತ್ತಿದೆ.
ಸಂಜೀವ್ ಗೋಯೆಂಕಾ ಅವರು ರಾಹುಲ್ ವಿರುದ್ಧ ಕೋಪಗೊಂಡರೂ, ತಾಳ್ಮೆಯಿಂದ ಇದ್ದ ಕೆಎಲ್ ರಾಹುಲ್ ಎಲ್ಲರ ಮನಗೆದ್ದಿದ್ದಾರೆ. ಹೀಗಾಗಿ ಈ ಸನ್ನಿವೇಶವನ್ನು ಅಥಿಯಾ ಶೆಟ್ಟಿ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಹೇಳುವ ಮೂಲಕ ಸಂಜೀವ್ ಗೋಯೆಂಕಾ ಅವರಿಗೆ ಟಕ್ಕರ್ ಕೊಟ್ಟಿದ್ದಾರೆ.
2024ರ ಐಪಿಎಲ್ ಟೂರ್ನಿಯಲ್ಲಿ ಕೆಎಲ್ ರಾಹುಲ್ ಆಡಿರುವ 12 ಇನ್ನಿಂಗ್ಸ್ಗಳಿಂದ 460 ರನ್ ಗಳಿಸಿದ್ದಾರೆ. ಅವರ ಸ್ಟ್ರೈಕ್ ರೇಟ್ 136.09 ಆಗಿದೆ. ಅಲ್ಲದೆ ಇತ್ತೀಚೆಗೆ ಪ್ರಕಟಿಸಿದ 2024ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಭಾರತ ತಂಡದಲ್ಲಿ ರಾಹುಲ್ ಸ್ಥಾನ ಪಡೆಯುವಲ್ಲಿ ವಿಫಲವಾಗಿದ್ದಾರೆ.
ಇಂದು ನಡೆಯಲಿರುವ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯಕ್ಕೂ ಸೋಮವಾರ ತಮ್ಮ ತಂಡದ ಜೊತೆ ದೆಹಲಿಗೆ ಕೆಎಲ್ ರಾಹುಲ್ ಹೋಗಿಲ್ಲ. ಇನ್ನೊಂದೆಡೆ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಆರ್ಸಿಬಿ ತಂಡಕ್ಕೆ ಮರಳಿ ಬರುವಂತೆ ಕೆಎಲ್ ರಾಹುಲ್ ಅವರಿಗೆ ಒತ್ತಾಯಿಸಿದ್ದಾರೆ.
ಈ ಹಿಂದೆ ಕೂಡ ಕೆಎಲ್ ರಾಹುಲ್ ಆರ್ಸಿಬಿ ಪರ ಆಡಿದ್ದಾರೆ. ಬಳಿಕ ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆಯುವ ಮೂಲಕ 2019 ಮತ್ತು 2023ರ ಐಸಿಸಿ ಏಕದಿನ ವಿಶ್ವಕಪ್ನಲ್ಲಿ ಪ್ರಮುಖ ಬ್ಯಾಟರ್ ಹಾಗೂ ವಿಕೆಟ್ ಕೀಪರ್ ಪಾತ್ರವನ್ನು ಚೆನ್ನಾಗಿ ನಿರ್ವಹಿಸಿದ್ದಾರೆ.