ಮೇ 14 ಮಂಗಳವಾರ, ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ 10 ವಿಕೆಟ್ಗಳ ಹೀನಾಯ ಸೋಲನುಭವಿಸಿದ ಬಳಿಕ ಲಕ್ನೋ ಸೂಪರ್ ಜೈಂಟ್ಸ್ ಫ್ರಾಂಚೈಸಿ ಮಾಲೀಕ ಸಂಜೀವ್ ಗೋಯೆಂಕಾ ಬಹಿರಂಗವಾಗಿಯೇ ನಾಯಕ ಕೆಎಲ್ ರಾಹುಲ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದರು. ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿತ್ತು.
ಸಾಮಾಜಿಕ ಜಾಲತಾಣದಲ್ಲಿ ಪ್ರತ್ಯೇಕವಾಗಿ ಆರ್ಸಿಬಿ ಅಭಿಮಾನಿಗಳು ತಂಡಕ್ಕೆ ಮರಳಿ ಬರುವಂತೆ ಪೋಸ್ಟ್ಗಳ ಮೂಲಕ ಕೆಎಲ್ ರಾಹುಲ್ ಮನವೊಲಿಸಲು ಪ್ರಯತ್ನಿಸಿದ್ದರು. ಇದರ ಬೆನ್ನಲ್ಲೇ ಲಕ್ನೋ ತಂಡದ ಸಹಾಯಕ ಕೋಚ್ ಲ್ಯಾನ್ಸ್ ಕ್ಲೂಸೆನರ್ ಅವರು ಕೆಎಲ್ ರಾಹುಲ್ ಮತ್ತು ಸಂಜೀವ್ ಗೋಯೆಂಕಾ ನಡುವಿನ ವಿವಾದದ ಬಗ್ಗೆ ಮೌನ ಮುರಿದ್ದಾರೆ.

ಪ್ರತಿಕಾಗೋಷ್ಠಿಯಲ್ಲಿ ಮಾತನಾಡಿರುವ ಲ್ಯಾನ್ಸ್ ಕ್ಲೂಸೆರ್, ಇದು ಚಹಾ ಕಪ್ನಲ್ಲಿ ಬಿರುಗಾಳಿ ಎದ್ದಿದೆ. ಇಬ್ಬರು ಕ್ರಿಕೆಟ್ ಪ್ರೇಮಿಗಳ ನಡುವಿನ ಈ ಚರ್ಚೆಯಲ್ಲಿ ಯಾವುದೇ ಸಮಸ್ಯೆ ಇಲ್ಲ. ತಂಡದಲ್ಲಿ ಈ ರೀತಿಯ ಚರ್ಚೆಗಳನ್ನು ನಾವು ಇಷ್ಟಪಡುತ್ತೇವೆ. ಇದು ತಂಡಗಳ ಕಾರ್ಯಕ್ಷಮತೆಯನ್ನು ಸುಧಾರಿಸುತ್ತದೆ. ಇದು ನಮಗೆ ದೊಡ್ಡ ವಿಷಯವಲ್ಲ ಎಂದು ತಿಳಿಸಿದ್ದಾರೆ.
ತಮ್ಮದೇ ಆದ ವಿಶಿಷ್ಟ ಶೈಲಿಯನ್ನು ರಾಹುಲ್ ಹೊಂದಿದ್ದಾರೆ. ಅದು ಅವರನ್ನು ಶ್ರೇಷ್ಠ ಕ್ರಿಕೆಟಿಗನನ್ನಾಗಿ ಮಾಡಿದೆ. ಈ ಋತುವಿನ ಐಪಿಎಲ್ ಅವರಿಗೆ ಕಷ್ಟಕರವಾಗಿತ್ತು. ಏಕೆಂದರೆ ನಮ್ಮ ತಂಡ ಸ್ಥಿರ ಪ್ರದರ್ಶನ ನೀಡಲು ಸಾಧ್ಯವಾಗದೆ, ಪ್ರತಿ ಪಂದ್ಯದಲ್ಲೂ ನಿರಂತರವಾಗಿ ವಿಕೆಟ್ಗಳನ್ನು ಕಳೆದುಕೊಳ್ಳುತ್ತಲೇ ಇತ್ತು. ಇದರಿಂದಾಗಿ ರಾಹುಲ್ ಮುಕ್ತವಾಗಿ ಆಡಲು ಅವಕಾಶ ಸಿಗಲಿಲ್ಲ.

ರಾಹುಲ್ ಈ ಆವೃತ್ತಿಯಲ್ಲಿ ಒಂದು ಅಥವಾ ಎರಡು ಶತಕಗಳನ್ನು ಬಾರಿಸಲು ಬಯಸಿದ್ದರು. ಆದರೆ ತಂಡದ ಅಸ್ಥಿರ ಪ್ರದರ್ಶನದಿಂದಾಗಿ ಸಾಧಗ್ಯವಾಗಿಲ್ಲ. ಶೀಘ್ರದಲ್ಲೇ ರಾಹುಲ್ ದೊಡ್ಡ ಇನ್ನಿಂಗ್ಸ್ ಆಡುವ ಬಗ್ಗೆ ನನಗೆ ನಂಬಿಕೆ ಇದೆ ಎಂದು ಲ್ಯಾನ್ಸ್ ಕ್ಲೂಸೆನರ್ ಹೇಳಿದ್ದಾರೆ.
ಮತ್ತೊಂದೆಡೆ ಇಂದು ನಡೆಯಲಿರುವ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯಕ್ಕೂ ಸೋಮವಾರ ತಮ್ಮ ತಂಡದ ಜೊತೆ ದೆಹಲಿಗೆ ಕೆಎಲ್ ರಾಹುಲ್ ಹೋಗಿಲ್ಲ. ಈ ಬೆಳವಣಿಗೆ ಹಲವು ಅನುಮಾನಗಳಿಗೆ ಕಾರಣವಾಗಿದೆ.
2024ರ ಐಪಿಎಲ್ ಟೂರ್ನಿಯಲ್ಲಿ ಕೆಎಲ್ ರಾಹುಲ್ ಆಡಿರುವ 12 ಇನ್ನಿಂಗ್ಸ್ಗಳಿಂದ 460 ರನ್ ಗಳಿಸಿದ್ದಾರೆ. ಅವರ ಸ್ಟ್ರೈಕ್ ರೇಟ್ 136.09 ಆಗಿದೆ. ಅಲ್ಲದೆ ಇತ್ತೀಚೆಗೆ ಪ್ರಕಟಿಸಿದ 2024ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಭಾರತ ತಂಡದಲ್ಲಿ ರಾಹುಲ್ ಸ್ಥಾನ ಪಡೆಯುವಲ್ಲಿ ವಿಫಲವಾಗಿದ್ದಾರೆ.
ಎಸ್ಆರ್ಹೆಚ್ vs ಎಲ್ಎಸ್ಜಿ
ಕಳೆದ ವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಎಲ್ಎಸ್ಜಿ ಒಟ್ಟು 165/4 ಗಳಿಸಿತ್ತು. ನಾಯಕ ಕೆಎಲ್ ರಾಹುಲ್ 33 ಎಸೆತಗಳಲ್ಲಿ 29 ರನ್ಗಳ ಬಾರಿಸಿ ನಿಧಾನಗತಿಯ ಆಟವಾಡಿದ್ದರು. ಲಕ್ನೋ ಇನ್ನಿಂಗ್ಸ್ ಉದ್ದಕ್ಕೂ ರನ್ ಗಳಿಸಲು ಹೆಣಗಾಡಿತು ಮತ್ತು ಮೊದಲ 10 ಓವರ್ಗಳಲ್ಲಿ ಬ್ಯಾಟರ್ಗಳು ಬೌಂಡರಿ ಸಿಡಿಸಲು ಸಾಧ್ಯವಾಗಿರಲಿಲ್ಲ.
ಲಕ್ನೋ ನೀಡಿದ 166 ರನ್ಗಳ ಗುರಿಯನ್ನು ಕೇವಲ 9.4 ಓವರ್ಗಳಲ್ಲಿ ಸನ್ರೈಸರ್ಸ್ ಹೈದರಾಬಾದ್ ಬೆನ್ನಟ್ಟಿದ ಕಾರಣ ಲಕ್ನೋ ಸೂಪರ್ ಜೈಂಟ್ಸ್ ಹೀನಾಯ ಸೋಲು ಅನುಭವಿಸಿತ್ತು. ಹೈದರಾಬಾದ್ ಪರ ಆರಂಭಿಕರಾದ ಟ್ರಾವಿಸ್ ಹೆಡ್ ಮತ್ತು ಅಭಿಷೇಕ್ ಶರ್ಮಾ ಸ್ಪೋಟಕ ಬ್ಯಾಟಿಂಗ್ ಮಾಡಿದ್ದರು.