2024ರ ಇಂಡಿಯನ್ ಪ್ರೀಮಿಯರ್ ಲೀಗ್ನ (ಐಪಿಎಲ್) 17ನೇ ಆವೃತ್ತಿಯಲ್ಲಿ ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ಗೆ ಎಲ್ಲವೂ ವಿರುದ್ಧವಾಗಿ ನಡೆಯುತ್ತಿದೆ. ಈವರೆಗೆ ಆಡಿದ ಮೂರು ಪಂದ್ಯಗಳನ್ನೂ ಸೋತು ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ.
ಅಲ್ಲದೆ, ಮುಂಬೈ ಇಂಡಿಯನ್ಸ್ ತಂಡದ ನಾಯಕತ್ವ ವಿವಾದವು ಜಗಜ್ಜಾಹೀರಾಗಿದ್ದು, ಹೊಸ ನಾಯಕ ಹಾರ್ದಿಕ್ ಪಾಂಡ್ಯಗೆ ತಂಡದಲ್ಲಾಗಲಿ ಅಥವಾ ಅಭಿಮಾನಿಗಳಿಂದಾಗಲಿ ಸೂಕ್ತ ಬೆಂಬಲ ಸಿಗುತ್ತಿಲ್ಲ. ಇದು ತಂಡದ ಪ್ರದರ್ಶನದ ಮೇಲೂ ಪರಿಣಾಮ ಬೀರುತ್ತಿದೆ.
ಹಾರ್ದಿಕ್ ಪಾಂಡ್ಯ ಹಾಗೂ ರೋಹಿತ್ ಶರ್ಮಾ ನಡುವಿನ ಮುಂಬೈ ಇಂಡಿಯನ್ಸ್ ತಂಡದ ನಾಯಕತ್ವದ ಚರ್ಚೆಯ ಕುರಿತು ಇದೀಗ ಮಾಜಿ ಕ್ರಿಕೆಟಿಗ ಹಾಗೂ ವೀಕ್ಷಕ ವಿವರಣೆಗಾರ ರವಿಶಾಸ್ತ್ರಿ ಮೌನ ಮುರಿದು ಮಾತನಾಡಿದ್ದಾರೆ.

ಇದೇ ವೇಳೆ, ಮುಂಬೈ ಇಂಡಿಯನ್ಸ್ ನೂತನ ನಾಯಕ ಹಾರ್ದಿಕ್ ಪಾಂಡ್ಯಗೆ ತಾಳ್ಮೆಯಿಂದಿರಲು ಮತ್ತು ಅತ್ಯುತ್ತಮ ಪ್ರದರ್ಶನದೊಂದಿಗೆ ಟೀಕಾಕಾರರ ಬಾಯಿ ಮುಚ್ಚಿಸಲು ರವಿಶಾಸ್ತ್ರಿ ಸಲಹೆ ನೀಡಿದರು.
"ಇದು ಭಾರತ ಕ್ರಿಕೆಟ್ ತಂಡವಲ್ಲ, ಇದು ಫ್ರಾಂಚೈಸ್ ಕ್ರಿಕೆಟ್. ಮಾಲೀಕರು ದೊಡ್ಡ ಮೊತ್ತ ಪಾವತಿಸಿದ್ದಾರೆ. ಮಾಲೀಕರು ತಮ್ಮ ತಂಡದ ನಾಯಕರಾಗಿ ಯಾರನ್ನು ಬಯಸುತ್ತಾರೆ ಎಂಬುದು ಅವರ ನಿರ್ಧಾರ. ಆದರೆ, ಇದನ್ನು ಸಂವಹನದಲ್ಲಿ ಹೆಚ್ಚು ಸ್ಪಷ್ಟತೆಯೊಂದಿಗೆ ಇನ್ನೂ ಉತ್ತಮವಾಗಿ ನಿಭಾಯಿಸಬಹುದಿತ್ತು ಎಂದು ನಾನು ಭಾವಿಸುತ್ತೇನೆ," ಎಂದು ರವಿಶಾಸ್ತ್ರಿ ಅವರು ಸ್ಟಾರ್ ಸ್ಪೋರ್ಟ್ಸ್ಗೆ ತಿಳಿಸಿದರು.
"ನಿಮಗೆ (ಮುಂಬೈ ಇಂಡಿಯನ್ಸ್) ಹಾರ್ದಿಕ್ ಪಾಂಡ್ಯ ನಾಯಕನಾಗಲು ಬಯಸಿದರೆ, ನಾವು ಭವಿಷ್ಯದ ತಂಡವನ್ನು ನಿರ್ಮಿಸಲು ಯೋಚಿಸುತ್ತಿದ್ದೇವೆ ಎಂದು ಹೇಳಿ. ಎಲ್ಲರಿಗೂ ತಿಳಿದಿರುವಂತೆ ರೋಹಿತ್ ಶರ್ಮಾ ಈವರೆಗೆ ಫ್ರಾಂಚೈಸಿಗಾಗಿ ಅಸಾಧಾರಣ ಕೆಲಸವನ್ನು ಮಾಡಿದ್ದಾರೆ. ಮುಂದಿನ ಮೂರು ವರ್ಷಗಳಲ್ಲಿ ಹಾರ್ದಿಕ್ ಪಾಂಡ್ಯಗೆ ಸಹಾಯ ಮಾಡಬೇಕೆಂದು ನಾವು ಬಯಸುತ್ತೇವೆ," ಎಂದು ರವಿಶಾಸ್ತ್ರಿ ಹೇಳಿದರು.
"ವಿವಾದ ರಹಿತವಾಗಲು ಆ ಸಂವಹನ, ಆ ಸ್ಪಷ್ಟತೆ ಸ್ವಲ್ಪ ಹೆಚ್ಚು ಹೊರಬರಬೇಕಿತ್ತು. ಹೀಗಾಗಿ ನೀವು ನಮಗೆ ರೋಹಿತ್ ಶರ್ಮಾ ಬೇಡ ಅಥವಾ ಅವನನ್ನು ಕೆಟ್ಟದಾಗಿ ನಡೆಸಿಕೊಳ್ಳಲಾಯಿತು ಎಂದು ಹೇಳುವ ಸಂದರ್ಭವಲ್ಲ. ಆದರೆ ಎಲ್ಲಾ ವಿಷಯಗಳು ಇದೀಗ ಸಾಮಾಜಿಕ ಮಾಧ್ಯಮದಲ್ಲಿ ಹೊರಬರುತ್ತಿವೆ," ಎಂದು ಮಾಜಿ ಕ್ರಿಕೆಟಿಗ ರವಿಶಾಸ್ತ್ರಿ ತಿಳಿಸಿದರು.

ಐಪಿಎಲ್ 2024ರಲ್ಲಿ ಸದ್ಯ ಸತತ ಮೂರು ಪಂದ್ಯಗಳ ಸೋಲಿನ ಸುಳಿಯಲ್ಲಿರುವ ಮುಂಬೈ ಇಂಡಿಯನ್ಸ್ ತಂಡ ಗೆಲ್ಲಲು ಪ್ರಾರಂಭಿಸಿದ ನಂತರ, ತಮ್ಮ ಪರವಾದ ಅಲೆಯು ತಿರುಗುತ್ತದೆ ಎಂದು ರವಿಶಾಸ್ತ್ರಿ ನಿರೀಕ್ಷಿಸಿದ್ದಾರೆ.
"ನಾಯಕ ಹಾರ್ದಿಕ್ ಪಾಂಡ್ಯಗೆ ನನ್ನ ಸಲಹೆಯೆಂದರೆ ಶಾಂತವಾಗಿರಿ, ತಾಳ್ಮೆಯಿಂದಿರಿ, ಟೀಕೆಗಳನ್ನು ನಿರ್ಲಕ್ಷಿಸಿ ಮತ್ತು ನಿಮ್ಮ ಆಟದ ಮೇಲೆ ಕೇಂದ್ರೀಕರಿಸಿ. ಒಂದೆರಡು ಉತ್ತಮ ಪ್ರದರ್ಶನಗಳನ್ನು ಮುಂದುವರಿಸಿ. ಮುಂಬೈ ಇಂಡಿಯನ್ಸ್ ಅದ್ಭುತ ತಂಡವಾಗಿದೆ. ಅವರು ಫಾರ್ಮ್ಗೆ ಬಂದರೆ, ಸತತ ಮೂರು ಅಥವಾ ನಾಲ್ಕು ಪಂದ್ಯಗಳನ್ನು ಗೆದ್ದರೆ, ಇದೆಲ್ಲವೂ ಕಡಿಮೆಯಾಗುತ್ತದೆ," ಎಂದು ರವಿಶಾಸ್ತ್ರಿ ಅಭಿಪ್ರಾಯಪಟ್ಟರು.
ಇದೇ ವೇಳೆ ಆಸ್ಟ್ರೇಲಿಯಾದ ಮಾಜಿ ಬ್ಯಾಟರ್ ಮ್ಯಾಥ್ಯೂ ಹೇಡನ್ ಕೂಡ ರೋಹಿತ್ ಶರ್ಮಾ ಅವರ 11 ವರ್ಷಗಳ ಮುಂಬೈ ಇಂಡಿಯನ್ಸ್ ನಾಯಕತ್ವವನ್ನು ಗಮನಿಸಿದರೆ, ಅಭಿಮಾನಿಗಳ ಪ್ರೀತಿಯನ್ನು ಅರ್ಥಮಾಡಿಕೊಳ್ಳಬಹುದು ಎಂದು ಭಾವಿಸಿದರು.
"ತಂಡದ ಸೋಲು ಮತ್ತು ಗೆಲುವಿನ ಭಾಗದಲ್ಲಿ ಅಭಿಮಾನಿಗಳು ದೊಡ್ಡ ಪಾಲುದಾರರಾಗಿದ್ದಾರೆ. ಅವರಿಗೆ ರಾಜಕೀಯ, ತಂಡದ ಒಳನೋಟಗಳು ಕಾಣುವುದಿಲ್ಲ. ಆದರೆ ಅಭಿಮಾನಿಗಳು ಇದನ್ನು ಅರ್ಥಮಾಡಿಕೊಳ್ಳಲು ಬಯಸುತ್ತಾರೆ, ಅವರು ರೋಹಿತ್ ಶರ್ಮಾ ಅವರನ್ನು ಪ್ರೀತಿಸುತ್ತಾರೆ," ಎಂದರು ಹೇಳಿದರು.