ಇತ್ತೀಚಿನ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಸೋಲಿನೊಂದಿಗೆ ಆರ್ಸಿಬಿ ತಂಡ ಐಪಿಎಲ್ 2024ರಲ್ಲಿ ಆಡಿದ ಐದು ಪಂದ್ಯಗಳಲ್ಲಿ ನಾಲ್ಕು ಸೋಲು ಮತ್ತು ಒಂದು ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಎಂಟನೇ ಸ್ಥಾನ ತೃಪ್ತಿಪಟ್ಟುಕೊಂಡಿದೆ.
ಪ್ರಸಕ್ತ ಆವೃತ್ತಿಯ ರನ್-ಸ್ಕೋರಿಂಗ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಸ್ಟಾರ್ ಬ್ಯಾಟರ್ ಹಾಗೂ ಮಾಜಿ ನಾಯಕ ವಿರಾಟ್ ಕೊಹ್ಲಿ ಅವರ ಧನಾತ್ಮಕ ಬ್ಯಾಟಿಂಗ್ ಫಾರ್ಮ್ ಹೊರತುಪಡಿಸಿ, ಉಳಿದೆಲ್ಲವೂ ನಕರಾತ್ಮಕವಾಗಿದೆ.
ಶನಿವಾರದ ಪಂದ್ಯದಲ್ಲಿ ಅಜೇಯ 113 ರನ್ಗಳೊಂದಿಗೆ ವಿರಾಟ್ ಕೊಹ್ಲಿ ಐಪಿಎಲ್ 2024ರ ಮೊದಲ ಶತಕ ಗಳಿಸಿದರು ಮತ್ತು ಒಟ್ಟಾರೆಯಾಗಿ ಐಪಿಎಲ್ನಲ್ಲಿ ಎಂಟನೇ ಶತಕ ದಾಖಲಿಸಿದರು. ಇದು ಆರ್ಸಿಬಿ ತಂಡವು 20 ಓವರ್ಗಳಲ್ಲಿ 3 ವಿಕೆಟ್ಗೆ 183 ರನ್ ಗಳಿಸುವಂತಾಯಿತು.

ಆದರೆ, ಆರ್ಸಿಬಿ ತಂಡದ ಗೆಲುವಿಗೆ ಅವರ ಶತಕ ಸಾಕಾಗಲಿಲ್ಲ. ಏಕೆಂದರೆ ರಾಜಸ್ಥಾನ್ ರಾಯಲ್ಸ್ನ ಜೋಸ್ ಬಟ್ಲರ್ ಪಂದ್ಯ ವಿಜೇತ ಅಜೇಯ ಶತಕ ಬಾರಿಸಿ ಆತಿಥೇಯ ತಂಡ ಇನ್ನೂ ಐದು ಎಸೆತಗಳು ಬಾಕಿ ಇರುವುಂತಯೇ ಗೆದ್ದಿ ಬೀಗಲು ಮಾರ್ಗದರ್ಶನ ಮಾಡಿದರು.
ಇದೇ ವೇಳೆ ಭಾರತದ ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ಅವರು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜಸ್ಥಾನ್ ರಾಯಲ್ಸ್ ವಿರುದ್ಧ ಆರ್ಸಿಬಿ ತಂಡದ ಹೀನಾಯ ಸೋಲನ್ನು ವಿಶ್ಲೇಷಿಸಿದ ಆಕಾಶ್ ಚೋಪ್ರಾ, ಆರ್ಸಿಬಿ ಫ್ರಾಂಚೈಸಿ ತಮ್ಮ ಹೆಸರನ್ನು ಬದಲಾಯಿಸಿರಬಹುದು, ಆದರೆ ಅವರಲ್ಲಿ ಯಾವುದೇ ಬದಲಾವಣೆ ಅಥವಾ ಸುಧಾರಣೆಯಾಗಿಲ್ಲ. ಒಬ್ಬ ಆಟಗಾರ ತಂಡವನ್ನು ತನ್ನ ಹೆಗಲ ಮೇಲೆ ಹೊತ್ತುಕೊಂಡಿದ್ದಾನೆ ಎಂದು ಹೇಳಿದರು.

"ಈ ಪಂದ್ಯಾವಳಿಯಲ್ಲಿ ಟ್ವಿಸ್ಟ್ಗಳು ಮತ್ತು ಥ್ರಿಲ್ಲರ್ಗಳಿವೆ ಎಂದು ಎಲ್ಲರೂ ಹೇಳಿದರು. ಆದರೆ, ಬೆಂಗಳೂರಿನ ಆಟಗಾರರು ಮಾತ್ರ 'ನಮ್ಮ ವಿಷಯದಲ್ಲಿ ಅದು ಅಲ್ಲ' ಎಂದು ಹೇಳುತ್ತಿದ್ದಾರೆ," ಎಂದು ವ್ಯಂಗ್ಯವಾಡಿದರು.
"ಆರ್ಸಿಬಿ ತಂಡವು ಗೆಲ್ಲಲು ಅಥವಾ ಹೋರಾಡಲು ಶಕ್ತರಾಗಿಲ್ಲ. ವಿರಾಟ್ ಕೊಹ್ಲಿ ರನ್ ಗಳಿಸಬೇಕೆಂದು ನಾವು ಬಯಸಿದ್ದೇವೆ, ಅವರು ಅದನ್ನು ಮಾಡುತ್ತಿದ್ದಾರೆ. ಆದರೆ ಬೇರೆ ಯಾರೂ ಸ್ಕೋರ್ ಮಾಡಲು ಸಾಧ್ಯವಾಗುತ್ತಿಲ್ಲ ಮತ್ತು ಅವರು ಏನು ಗಳಿಸಿದರೂ ಸಾಕಾಗುವುದಿಲ್ಲ," ಎಂದರು.
ಆರ್ಸಿಬಿ ತಂಡದಲ್ಲಿ ಏನಾಗುತ್ತಿದೆ? ಐದು ಪಂದ್ಯಗಳನ್ನು ಆಡಿದ್ದು, ನಾಲ್ಕರಲ್ಲಿ ಸೋತಿದೆ. ಅವರ ಪರಿಸ್ಥಿತಿ ತುಂಬಾ ಕೆಟ್ಟದಾಗಿದೆ. ಫ್ರಾಂಚೈಸಿ ತಮ್ಮ ಹೆಸರನ್ನು ಬದಲಾಯಿಸಿದೆ. ಆದರೆ ಅವರ ಕಾರ್ಯಗಳನ್ನು ಅಲ್ಲ. ತಂಡವು ಕಷ್ಟಪಡುತ್ತಿದೆ, ಅದರಲ್ಲಿ ಯಾವುದೇ ಸಂದೇಹವಿಲ್ಲ,'' ಎಂದು ಭಾರತ ಮಾಜಿ ಬ್ಯಾಟರ್ ಆಕಾಶ್ ಚೋಪ್ರಾ ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ತಿಳಿಸಿದರು.

ಟೀಕೆಗಳು ಇದ್ದಾಗ ನಾಯಕ ಫಾಫ್ ಡು ಪ್ಲೆಸಿಸ್ ಮತ್ತು ಉಳಿದ ಬ್ಯಾಟರ್ಗಳು ತಮ್ಮ ಜವಾಬ್ದಾರಿಯನ್ನು ಅರಿತುಕೊಂಡು ಆಡುತ್ತಿಲ್ಲ ಎಂದು ಆಕಾಶ್ ಚೋಪ್ರಾ ಟೀಕಿಸಿದರು.
"ಫಾಫ್ ಡು ಪ್ಲೆಸಿಸ್ ಸ್ವಲ್ಪ ರನ್ ಗಳಿಸಿದರು. ಅವರು ಈ ಋತುವಿನಲ್ಲಿ ಮೊದಲ ಬಾರಿಗೆ ಸ್ವಲ್ಪ ಉತ್ತಮ ಬ್ಯಾಟಿಂಗ್ ಮಾಡಿದರು. ವಿರಾಟ್ ಕೊಹ್ಲಿ ಇನ್ನೊಂದು ತುದಿಯಲ್ಲಿ ಗಟ್ಟಿಯಾಗಿ ನಿಂತಿದ್ದರು. ಆದರೂ, ಮನೀಶ್ ಪಾಂಡೆ ಅವರ 67 ಎಸೆತಗಳಲ್ಲಿ ನಿಧಾನಗತಿಯ ಶತಕವನ್ನು ವಿರಾಟ್ ಕೊಹ್ಲಿ ಸರಿಗಟ್ಟಿದರು," ಎಂದರು.
"ವಿಷಯವೆಂದರೆ ವಿರಾಟ್ ಕೊಹ್ಲಿ ಎಷ್ಟು ದಿನ ಒಬ್ಬಂಟಿಯಾಗಿ ಆಡುತ್ತಾನೆ? ಒಬ್ಬ ಆಟಗಾರನೊಂದಿಗೆ ನೀವು ಪಂದ್ಯವನ್ನು ಗೆಲ್ಲಲು ಸಾಧ್ಯವಿಲ್ಲ. ಮೊದಲ 12-13 ಓವರ್ಗಳಲ್ಲಿ ನೀವು ವಿಕೆಟ್ ಕಳೆದುಕೊಳ್ಳದಿದ್ದರೆ, ನೀವು 200 ರನ್ ಗಳಿಸಬೇಕಿತ್ತು. ಆದರೆ, ಆರ್ಸಿಬಿ ತಂಡವು 200ಕ್ಕಿಂತ ಹಿಂದೆ ಉಳಿಯಿತು. ಬೌಲರ್ಗಳು ಕೆಟ್ಟದಾಗಿ ಹೊಡೆಸಿಕೊಂಡರು," ಎಂದು ಆಕಾಶ್ ಚೋಪ್ರಾ ಆರ್ಸಿಬಿ ತಂಡದ ಪ್ರದರ್ಶನದ ಬಗ್ಗೆ ಲೇವಡಿ ಮಾಡಿದರು.