ಮೇ 19 ಭಾನುವಾರ, ತವರಿನಲ್ಲಿ ಎಂ ಚಿನ್ನಸ್ವಾಮಿ ಸ್ಟೇಡಿಯಂನ್ಲಿ ಐಪಿಎಲ್ 2024ರ ಪ್ಲೇ ಆಫ್ಗೆ ಆರ್ಹತೆ ಪಡೆಯಲು ನಡೆದ ಹೋರಾಟದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್ಕೆ) ತಂಡವನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ಬಗ್ಗು ಬಡಿದೆ. ಈ ಮೂಲಕ ಪ್ಲೇ ಆಫ್ಗೆ ಆರ್ಸಿಬಿ ಎಂಟ್ರಿ ಕೊಟ್ಟಿದೆ.
ಕೋಲ್ಕತ್ತಾ ನೈಟ್ ರೈಡರ್ಸ್, ರಾಜಸ್ಥಾನ ರಾಯಲ್ಸ್, ಸನ್ ರೈಸರ್ಸ್ ಹೈದರಾಬಾದ್ ಮತ್ತು ಆರ್ಸಿಬಿ ಪ್ಲೇ ಆಫ್ನ ಆಗ್ರ ನಾಲ್ಕು ತಂಡಗಳಾಗಿವೆ. ಮುಂದಿನ ಪ್ಲೇ ಆಫ್ ಪಂದ್ಯವನ್ನು ಆರ್ಸಿಬಿ ಬಲಿಷ್ಠ ಹೈದರಾಬಾದ್ ಎದುರು ಆಡಲಿದೆ.

ಟೂರ್ನಿಯ ಮೊದಲಾರ್ಧದಲ್ಲಿ ಸತತ ಸೋಲಿನಿಂದ ಕಂಗೆಟ್ಟಿದ ಆರ್ಸಿಬಿ ಈ ಬಾರಿ ಟೂರ್ನಿನಿಂದ ಹೊರ ಬೀಳುತ್ತದೆ ಎಂದು ಊಹಿಸಲಾಗಿತ್ತು. ಆರಂಭ ಪಂದ್ಯದಲ್ಲೇ ಸಿಎಸ್ಕೆ ವಿರುದ್ಧ ಸೋತು 17ನೇ ಐಪಿಎಲ್ ಆವೃತ್ತಿಯಲ್ಲಿ ಅಭಿಯಾನ ಶುರು ಮಾಡಿತ್ತು. ಬಳಿಕ ಪಂಜಾಬ್ ವಿರುದ್ಧ ತವರಿನಲ್ಲಿ ಆರ್ಸಿಬಿ ಗೆದ್ದಿತ್ತು.
ಇದಾದ ನಂತರ ಆರ್ಸಿಬಿ ಸೋಲಿನ ಸುಳಿಯಲ್ಲಿ ಸಿಲುಕಿಕೊಂಡಿತ್ತು. ಗೆಲ್ಲುವ ಹಲವು ಪಂದ್ಯಗಳನ್ನು ಆರ್ಸಿಬಿ ಸೋತಿದ್ದು, ಆಭಿಮಾನಿಗಳ ಹೃದಯವನ್ನು ಹಿಂಡಿತ್ತು. ಆದರೂ ಅಭಿಮಾನಿಗಳು ಎಂದಿನಂತೆ ಆರ್ಸಿಬಿಗೆ ತಮ್ಮ ಬೆಂಬಲವನ್ನು ನೀಡಿ ಪ್ರೋತ್ಸಾಹಿಸಿದರು.
ಮೊದಲಾರ್ಧದಲ್ಲಿ ಆರ್ಸಿಬಿ ಆಡಿದ 8 ಪಂದ್ಯಗಳ ಪೈಕಿ ಕೇವಲ 1 ರಲ್ಲಿ ಗೆದ್ದು, 7 ರಲ್ಲಿ ಸೋಲು ಕಂಡಿತ್ತು. ಈ ಹಂತದಲ್ಲಿ ಅಭಿಮಾನಿಗಳು ಸೇರಿದಂತೆ ಯಾರೋಬ್ಬರು ಆರ್ಸಿಬಿ ಪ್ಲೇ ಆಫ್ಗೆ ಬರುತ್ತೆ ಎಂದು ಭಾವಿಸಿರಲಿಲ್ಲ. ಆದರೆ ದ್ವೀತಿಯಾರ್ಧದಲ್ಲಿ ಗೆಲುವಿನ ಲಯಕ್ಕೆ ಆರ್ಸಿಬಿ ಮರಳಿತ್ತು.

ಪ್ಲೇ ಆಫ್ಗೆ ಆರ್ಹತೆ ಪಡೆಯಲು ಆರ್ಸಿಬಿಗೆ ಕೇವಲ 1% ರಷ್ಟು ಮಾತ್ರ ಅವಕಾಶವಿತ್ತು. ಈ ಅವಕಾಶವನ್ನು ಬಿಟ್ಟು ಕೊಡದ ಆರ್ಸಿಬಿ ಪ್ಲೇ ಆಫ್ಗೆ ಅರ್ಹತೆ ಪಡೆಯುವವರೆಗೂ ಒಂದು ಪಂದ್ಯ ಸೋಲಲಿಲ್ಲ. ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿ ಸತತ ಸೋಲಿನ ಬಳಿಕ ಗೆದ್ದು ಪ್ಲೇ ಆಫ್ಗೆ ಪ್ರವೇಶಿಸಿ ದಾಖಲೆ ಬರೆದಿದೆ.
ಈ ಹೋರಾಟದ ಹಾದಿಯನ್ನು ನೋಡಿದಾಗ ಆರ್ಸಿಬಿ ಕೇವಲ ಒಂದು ಕ್ರಿಕೆಟ್ ತಂಡವಲ್ಲ. ಸೋತು ಕೈ ಕಟ್ಟಿ ಕುಳಿತವರಿಗೆ ಗೆಲುವಿನ ದಾರಿ ತೋರಿಸುವ ಜೀವನದ ಪಾಠಶಾಲೆ ಎಂದು ಅನಿಸುತ್ತಿದೆ. ಏಕೆಂದರೆ ಜನರು ಒಂದು ಕೆಲಸದಲ್ಲಿ ಹಲವು ಬಾರಿ ಸೋತಾಗ ಅದರಿಂದ ಅಂತರ ಕಾಯ್ದಕೊಳ್ಳುತ್ತಾರೆ. ಆ ದಾರಿಯಲ್ಲಿ ಮುನ್ನೆಡೆಯಲು ಇಷ್ಟಪಡುವುದಿಲ್ಲ.
ಕೆಲವೊಂದು ಸಂದರ್ಭದಲ್ಲಿ ಕಷ್ಟಗಳು ಎದುರಾದಾಗ ತಾಳ್ಮೆಯಿಂದ ಇರುವುದನ್ನು ಇಂದಿನ ಬಹುತೇಕ ಯುವಜನರು ಮರೆಯುತ್ತಾರೆ. ಸೋಲಿನ ಬೇಸರದಲ್ಲಿ ತಮ್ಮ ಕೋಪವನ್ನು ಹಿಡಿದಿಟ್ಟುಕೊಳ್ಳುವಲ್ಲಿ ವಿಫಲವಾಗುತ್ತಾರೆ. ಅಲ್ಲದೆ ತಮ್ಮ ಗೆಲುವಿನ ಗುರಿಯನ್ನು ಯಾವ ರೀತಿ ತಲುಪಬೇಕು ಎಂಬ ತಂತ್ರಗಾರಿಕೆ ಮಾಡುವುದಕ್ಕೂ ಸಹಾ ಹೋಗುವುದಿಲ್ಲ.
ಹೀಗಾಗಿ ಜೀವನದಲ್ಲಿ ಏನಾದರೂ ಸಾಧನೆ ಮಾಡಲು ಎಲ್ಲರಿಂದ ಸಾಧ್ಯವಾಗುವುದಿಲ್ಲ. ಸಾಧನೆ ಮಾಡಲು ಪ್ರಯತ್ನದ ಜೊತೆಗೆ ಬೆಂಬಲ ಕೂಡ ಬಹಳ ಮುಖ್ಯವಾಗುತ್ತದೆ. ಸರಿಯಾದ ಬೆಂಬಲ ಸಿಗುವುದರಿಂದ ವಿಶ್ವಾಸ ಕಳೆದುಕೊಂಡವರು ಮತ್ತೆ ಪುಟಿದೇಳಲು ಸಹಾಯವಾಗುತ್ತದೆ. ಆದರೆ ಗುರಿ ಮುಟ್ಟುವ ಆ ಪ್ರಯತ್ನ ಎಂದಿಗೂ ಜೀವಂತವಾಗಿರಬೇಕು.
ಇಂತಹ ಹಲವು ಜೀವನ ಪಾಠಗಳನ್ನು ಆರ್ಸಿಬಿ ಆಟದಿಂದ ನೋಡಬಹುದಾಗಿದೆ. ಅವಕಾಶವಿದ್ದರೆ ಸಾಕು ಪ್ರಯತ್ನ ಪಟ್ಟು ಸಾಧನೆ ಮಾಡುವೆ ಎಂಬ ಆರ್ಸಿಬಿ ಛಲ ಎಲ್ಲರೂ ಮೆಚ್ಚುವಂತಹದ್ದು. ಒಟ್ಟಾರೆ ಯಶಸ್ಸು ಸಿಗಬೇಕಾದರೆ ಆರ್ಸಿಬಿಯ ಹೋರಾಟದ ಹಾದಿ, ಆತ್ಮವಿಶ್ವಾಸ, ಧೈರ್ಯ, ಪ್ರಯತ್ನ, ಛಲ ಹಾಗು ನಿಯತ್ತು ಪ್ರತಿಯೊಬ್ಬರು ಜೀವನದಲ್ಲಿ ಬಹಳ ಮುಖ್ಯ.