2023ರ ಐಪಿಎಲ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲವಾಗಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿರುವ ತಂಡದ ಆಡಳಿತ ಮಂಡಳಿ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದು, ಕೋಚಿಂಗ್ ವಿಭಾಗದಲ್ಲಿ ಬದಲಾವಣೆ ಮಾಡಲು ನಿರ್ಧರಿಸಿದೆ.
ಆರ್ಸಿಬಿ ತಂಡದ ಕ್ರಿಕೆಟ್ ನಿರ್ದೇಶಕ ಮೈಕ್ ಹೆಸ್ಸನ್ ಮತ್ತು ಕೋಚ್ ಸಂಜಯ್ ಬಂಗಾರ್ ಅವರನ್ನು ಕೈಬಿಡಲು ತೀರ್ಮಾನಿಸಿದೆ ಎಂದು ದಿ ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ. 2024ರ ಐಪಿಎಲ್ ಮಿನಿ ಹರಾಜಿಗೆ ಮುನ್ನವೇ ಆರ್ ಸಿಬಿ ತಂಡಕ್ಕೆ ಹೊಸ ಕೋಚ್, ಕ್ರಿಕೆಟ್ ನಿರ್ದೇಶಕರ ನೇಮಕವಾಗಲಿದೆ.

ತಂಡದ ಬ್ಯಾಟಿಂಗ್ ಕೋಚ್ ಸಂಜಯ್ ಬಂಗಾರ್ ಮತ್ತು ಕ್ರಿಕೆಟ್ ನಿರ್ದೇಶಕ ಮೈಕ್ ಹೆಸ್ಸನ್ ತಂಡದ ಭಾಗವಾಗಿರುವುದಿಲ್ಲ ಎನ್ನುವುದು ಖಚಿತವಾಗಿದೆ. ಆದರೆ ತಂಡದ ಬೌಲಿಂಗ್ ಕೋಚ್ ಆಡಮ್ ಗ್ರಿಫಿತ್ ಕೂಡ ಬದಲಾಗುತ್ತಾರಾ ಅಥವಾ ಅವರನ್ನೇ ಮುಂದುರೆಸುತ್ತದಾ ಎನ್ನುವುದು ಮುಂದಿನ ದಿನಗಳಲ್ಲಿ ತಿಳಿಯಲಿದೆ.
ಆರ್ ಸಿಬಿ ಕ್ರಿಕೆಟ್ ನಿರ್ದೇಶಕ ಹೆಸ್ಸನ್ ಮತ್ತು ಬ್ಯಾಟಿಂಗ್ ಕೋಚ್ ಸಂಜಯ್ ಬಂಗಾರ್ ವಿರಾಟ್ ಕೊಹ್ಲಿ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಕಳೆದ ವರ್ಷಗಳಿಂದ ಇವರಿಬ್ಬರೂ ತಂಡಕ್ಕಾಗಿ ಕೆಲಸ ಮಾಡಿದ್ದಾರೆ. ಆದರೂ ಆರ್ ಸಿಬಿ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲವಾಗಿದೆ.
ಬಲಿಷ್ಠ ತಂಡವನ್ನು ಹೊಂದಿದ್ದರೂ, ಪ್ರಮುಖ ಆಟಗಾರರನ್ನು ತಂಡಕ್ಕೆ ಸೇರ್ಪಡೆ ಮಾಡಿಕೊಂಡರೂ ಕಪ್ ಗೆಲ್ಲುವಲ್ಲಿ ಪ್ರತಿ ಬಾರಿ ವಿಫಲವಾಗುತ್ತಿರುವುದು ಅಭಿಮಾನಿಗಳ ಕೋಪಕ್ಕೆ ಕಾರಣವಾಗಿದೆ. ವಿರಾಟ್ ಕೊಹ್ಲಿ ಕೂಡ ಈ ಬಗ್ಗೆ ಬೇಸರ ಹೊಂದಿದ್ದಾರೆ. ಐದು ವರ್ಷಗಳಿಂದ ಕಾದ ಆಡಳಿತ ಮಂಡಳಿ ಮುಂದಿನ ಐಪಿಎಲ್ಗೆ ಮುನ್ನ ಮಹತ್ವದ ಬದಲಾವಣೆ ಮಾಡಲು ನಿರ್ಧರಿಸಿದೆ.
ಡಿಸೆಂಬರ್ ಅಥವಾ ಜನವರಿಯಲ್ಲಿ ಐಪಿಎಲ್ 2024ರ ಮಿನಿ ಹರಾಜು ನಡೆಯಲಿದ್ದು ಅದಕ್ಕೂ ಮುನ್ನವೇ ಹೊಸ ಕೋಚ್ ಮತ್ತು ಕ್ರಿಕೆಟ್ ನಿರ್ದೇಶಕರನ್ನು ನೇಮಕ ಮಾಡುವ ಸಾಧ್ಯತೆ ಇದೆ. ಮುಂದಿನ ಕೋಚ್ ಯಾರಾಗ್ತಾರೆ ಎನ್ನುವ ಕುತೂಹಲ ಕೂಡ ಇದೆ. ಈ ಬಾರಿ ಕೂಡ ಬ್ಯಾಟಿಂಗ್ ಕೋಚ್ ಆಗಿ ಭಾರತೀಯರನ್ನು ನೇಮಕ ಮಾಡುತ್ತಾರ ಅಥವಾ ವಿದೇಶಿ ಕೋಚ್ ನೇಮಕ ಆಗ್ತಾರ ಎನ್ನುವುದನ್ನು ಕಾದು ನೋಡಬೇಕಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ಉತ್ತಮ ತಂಡವನ್ನು ಹೊಂದಿದ್ದರೂ ನಿರೀಕ್ಷಿತ ಪ್ರದರ್ಶನ ನೀಡದೇ ಇರುವುದು ತಲೆನೋವಿಗೆ ಕಾರಣವಾಗಿದೆ. 2023ರ ಐಪಿಎಲ್ನಲ್ಲಿ ರಜತ್ ಪಟಿದಾರ್, ಜೋಶ್ ಹೇಜಲ್ವುಡ್, ರೀಸ್ ಟೋಪ್ಲೆ, ವಿಲ್ ಜ್ಯಾಕ್ಸ್, ವೇಯ್ನ್ ಪಾರ್ನೆಲ್ ಗಾಯಗೊಂಡಿದ್ದು ತಂಡಕ್ಕೆ ಹಿನ್ನಡೆಯಾಗಲು ಕಾರಣವಾಯಿತು.
ಬೌಲಿಂಗ್ ವಿಭಾಗದಲ್ಲಿ ಕೂಡ ಬದಲಾವಣೆ ಮಾಡುವ ಸಾಧ್ಯತೆ ಇದೆ. 2024ರ ಐಪಿಎಲ್ಗೆ ಮುನ್ನ ಮಿನಿ ಹರಾಜು ನಡೆಯಲಿದ್ದು ಆಟಗಾರರು ಕೂಡ ಬದಲಾಗುವ ಸಾಧ್ಯತೆ ಇದೆ. ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ ಮುಂದಿನ ಐಪಿಎಲ್ನಲ್ಲಿ ಆಡುವುದು ಅನುಮಾನ ಎನ್ನಲಾಗಿದೆ.