ಮೇ 20 ಸೋಮವಾರ, ಐಪಿಎಲ್ 2024ರ ಎಲಿಮಿನೇಟರ್ ಪಂದ್ಯ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ಮತ್ತು ರಾಜಸ್ಥಾನ್ ರಾಯಲ್ಸ್ (ಆರ್ಆರ್) ನಡುವೆ ನಡೆಯಲಿದೆ. ಈ ಪಂದ್ಯ ಅಭಿಮಾನಿಗಲ್ಲಿ ಸಾಕಷ್ಟು ಕುತೂಹಲ ಕೆರಳಿಸಿದೆ.
ಈ ಪಂದ್ಯವು ಬುಧವಾರ, ಮೇ 22 ರಂದು ಅಹಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಹೈವೋಲ್ಟೇಜ್ ಪಂದ್ಯದಲ್ಲಿ ಅತ್ಯುತ್ತಮ ಫಾರ್ಮ್ನಲ್ಲಿರುವ ಆರ್ಸಿಬಿ ಅನ್ನು ನೆಚ್ಚಿನ ತಂಡವೆಂದು ಪರಿಗಣಿಸಲಾಗಿದೆ.

ರಾಜಸ್ಥಾನ್ ರಾಯಲ್ಸ್ ವಿರುದ್ಧ ಪಂದ್ಯಕ್ಕೂ ಮುನ್ನ ವಿಶೇಷ ಕಾರ್ಯತಂತ್ರದೊಂದಿಗೆ ಮೈದಾನ ಪ್ರವೇಶಿಸಲು ಆರ್ಸಿಬಿ ತಂಡ ಸೋಮವಾರ ಅಹಮದಾಬಾದ್ ತಲುಪಿದೆ. ಈ ದೃಶ್ಯಗಳನ್ನು ಆರ್ಸಿಬಿ ತನ್ನ ಟ್ವೀಟರ್ (ಎಕ್ಸ್)ನಲ್ಲಿ ಹಂಚಿಕೊಂಡಿದೆ.
ವಿಡಿಯೋದಲ್ಲಿ ಅಹಮದಾಬಾದ್ನ ಹೋಟೆಲ್ ಆರ್ಸಿಬಿ ತಂಡದ ಆಟಗಾರರಿಗೆ ಸಾಂಪ್ರದಾಯಿಕ ಶೈಲಿಯಲ್ಲಿ ಸ್ವಾಗತಿಸಲಾಯಿತು. ಆಟಗಾರರಿಗೆ ತಿಲಕ ನೀಡಿ ಪಟ್ಟಾ ನೀಡಿ, ಪುಷ್ಪಾರ್ಚನೆ ಮಾಡುವ ಮೂಲಕ ಅದ್ದೂರಿ ಸ್ವಾಗತ ಕೋರಲಾಗಿದೆ.
ಆರ್ಸಿಬಿ ನಾಯಕ ಫಾಫ್ ಡು ಪ್ಲೆಸಿಸ್, ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ, ವೇಗದ ಬೌಲರ್ ಮೊಹಮ್ಮದ್ ಸಿರಾಜ್, ಸ್ಪಿನ್ನರ್ ಕರಣ್ ಶರ್ಮಾ ಮತ್ತು ಅತ್ಯುತ್ತಮ ಫಾರ್ಮ್ನಲ್ಲಿರುವ ಬಲಗೈ ಬ್ಯಾಟರ್ ರಜತ್ ಪಾಟಿದಾರ್ ಫೋಟೋಗಳಲ್ಲಿ ಕಾಣಿಸಿಕೊಂಡಿದ್ದಾರೆ. ಎಲ್ಲಾ ಆಟಗಾರರ ಮುಖದಲ್ಲಿ ಸಂತೋಷ ಸ್ಪಷ್ಟವಾಗಿ ಕಾಣುತ್ತಿದೆ.
ಶನಿವಾರ (ಮೇ18) ನಡೆದ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ 5 ಬಾರಿ ಐಪಿಎಲ್ ಚಾಂಪಿಯನ್ ಸಿಎಸ್ಕೆ ತಂಡವನ್ನು 27 ರನ್ಗಳಿಂದ ಸೋಲಿಸಿ ಆರ್ಸಿಬಿ ಪ್ಲೇ ಆಫ್ಗೆ ಲಗ್ಗೆ ಇಟ್ಟಿದೆ . ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಆರ್ಸಿಬಿ 5 ವಿಕೆಟ್ ನಷ್ಟಕ್ಕೆ 218 ರನ್ ಗಳಿಸಿತು.
ಇದಕ್ಕೆ ಉತ್ತರವಾಗಿ ಸಿಎಸ್ಕೆ 7 ವಿಕೆಟ್ ಕಳೆದುಕೊಂಡು 191 ರನ್ ಗಳಿಸಲು ಸಾಧ್ಯವಾಯಿತು. ಹೀಗಾಗಿ 27 ರನ್ಗಳಿಂದ ಸಿಎಸ್ಕೆ ಪಂದ್ಯವನ್ನು ಕಳೆದುಕೊಂಡಿತ್ತು.
ಟೂರ್ನಿಯ ಮೊದಲಾರ್ಧದಲ್ಲಿ ಸತತ ಸೋಲಿನಿಂದ ಕಂಗೆಟ್ಟಿದ ಆರ್ಸಿಬಿ ಈ ಬಾರಿ ಟೂರ್ನಿನಿಂದ ಹೊರ ಬೀಳುತ್ತದೆ ಎಂದು ಊಹಿಸಲಾಗಿತ್ತು. ಆರಂಭ ಪಂದ್ಯದಲ್ಲೇ ಸಿಎಸ್ಕೆ ವಿರುದ್ಧ ಸೋತು 17ನೇ ಐಪಿಎಲ್ ಆವೃತ್ತಿಯಲ್ಲಿ ಅಭಿಯಾನ ಶುರು ಮಾಡಿತ್ತು. ಬಳಿಕ ಪಂಜಾಬ್ ವಿರುದ್ಧ ತವರಿನಲ್ಲಿ ಆರ್ಸಿಬಿ ಗೆದ್ದಿತ್ತು.
ಇದಾದ ನಂತರ ಆರ್ಸಿಬಿ ಸೋಲಿನ ಸುಳಿಯಲ್ಲಿ ಸಿಲುಕಿಕೊಂಡಿತ್ತು. ಗೆಲ್ಲುವ ಹಲವು ಪಂದ್ಯಗಳನ್ನು ಆರ್ಸಿಬಿ ಸೋತಿದ್ದು, ಆಭಿಮಾನಿಗಳ ಹೃದಯವನ್ನು ಹಿಂಡಿತ್ತು. ಆದರೂ ಅಭಿಮಾನಿ ಎಂದಿನಂತೆ ಆರ್ಸಿಬಿಗೆ ತಮ್ಮ ಬೆಂಬಲವನ್ನು ನೀಡಿ ಪ್ರೋತ್ಸಾಹಿಸಿದರು.
ದ್ವೀತಿಯಾರ್ಧದಲ್ಲಿ ಗೆಲುವಿನ ಲಯಕ್ಕೆ ಮರಳಿದ ಆರ್ಸಿಬಿ ಸತತ 6 ಪಂದ್ಯಗಳನ್ನು ಗೆದ್ದು ಎಲ್ಲ ನಂಬಿಕೆ ಹುಸಿ ಮಾಡಿದೆ. ಜೊತೆಗೆ ಈ ಬಾರಿಯ ಐಪಿಎಲ್ನಲ್ಲಿ ಸತತ ಗೆಲುವು ಸಾಧಿಸಿದ ಮೊದಲ ತಂಡ ಎಂಬ ದಾಖಲೆಯನ್ನು ಆರ್ಸಿಬಿ ಬರೆದಿದ್ದು, ಪ್ಲೇ ಆಫ್ಗೂ ಅರ್ಹತೆ ಪಡೆದುಕೊಂಡು ಆರ್ಆರ್ ತಂಡವನ್ನು ಮಣಿಸಲು ಸಜ್ಜಾಗಿದೆ.