ಬುಧವಾರ, ಏಪ್ರಿಲ್ 3ರಂದು ವಿಶಾಖಪಟ್ಟಣಂನಲ್ಲಿ ನಡೆದ 2024ರ ಇಂಡಿಯನ್ ಪ್ರೀಮಿಯರ್ ಲೀಗ್ನ (ಐಪಿಎಲ್) ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ 106 ರನ್ಗಳ ಬೃಹತ್ ಸೋಲು ಅನುಭವಿಸಿತು.
ಇದು 2024ರ ಐಪಿಎಲ್ನಲ್ಲಿ ರಿಷಭ್ ಪಂತ್ ನಾಯಕತ್ವದ ತಂಡಕ್ಕೆ ಮೂರನೇ ಸೋಲು ಎದುರಾಗಿದ್ದರೆ, ಶ್ರೇಯಸ್ ಅಯ್ಯರ್ ನಾಯಕತ್ವದ ಕೆಕೆಆರ್ ತಂಡ ಸತತ ಮೂರನೇ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.

ಇನ್ನು ಪಂದ್ಯದ ನಂತರ ಕೆಕೆಆರ್ ಫ್ರಾಂಚೈಸಿ ಸಹ-ಮಾಲೀಕ ಹಾಗೂ ಬಾಲಿವುಡ್ ನಟ ಶಾರುಖ್ ಖಾನ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಾಯಕ ರಿಷಭ್ ಪಂತ್ ಅವರ ಹೃದಯಸ್ಪರ್ಶಿ ಸಮ್ಮಿಲನವು ವಿಶಾಖಪಟ್ಟಣ ಪಂದ್ಯದ ಮುಖ್ಯಾಂಶಗಳಲ್ಲಿ ಒಂದಾಯಿತು.
ಶಾರುಖ್ ಖಾನ್ ಅವರು ಇತರ ಭಾರತೀಯ ಕ್ರಿಕೆಟ್ ಅಭಿಮಾನಿಗಳಂತೆ ರಿಷಭ್ ಪಂತ್ ಅವರನ್ನು ಭೇಟಿಯಾಗಲು ರೋಮಾಂಚನಗೊಂಡರು. ಇಬ್ಬರು ಭಾವನಾತ್ಮಕ ಅಪ್ಪುಗೆ ಹಂಚಿಕೊಂಡರು ಮತ್ತು ಹೃದಯಸ್ಪರ್ಶಿ ಸೂಚಕವಾಗಿ ಕ್ಯಾಪಿಟಲ್ಸ್ ನಾಯಕನ ಹಣೆಗೆ ಬಾಲಿವುಡ್ ಸೂಪರ್ಸ್ಟಾರ್ ಚುಂಬಿಸಿದರು.
ಕ್ರಿಕೆಟ್ ಮತ್ತು ಸಿನಿಮಾ ಲೋಕದ ತಾರೆಯರು ಸುದೀರ್ಘ ಮಾತುಕತೆಯಲ್ಲಿ ತೊಡಗಿದ್ದರಿಂದ ಮೈದಾನದ ಕ್ಯಾಮೆರಾಗಳು ಶಾರುಖ್ ಖಾನ್ ಮತ್ತು ರಿಷಭ್ ಪಂತ್ ಅವರಿಂದ ಹೊರಬರಲು ಸಾಧ್ಯವಾಗಲಿಲ್ಲ. ತಮ್ಮ ಸಂಭಾಷಣೆಯುದ್ದಕ್ಕೂ ಶಾರುಖ್ ಖಾನ್ ಮತ್ತು ರಿಷಭ್ ಪಂತ್ ಇಬ್ಬರೂ ರೋಮಾಂಚನಗೊಂಡಿದ್ದರು ಹಾಗೂ ಪರಸ್ಪರರ ಅಭಿಮಾನವು ಸ್ಪಷ್ಟವಾಗಿ ಕಾಣುತ್ತಿತ್ತು.

ಶಾರುಖ್ ಖಾನ್ ತನ್ನ ಕಡೆಗೆ ಬರುತ್ತಿರುವುದನ್ನು ಕಂಡ ರಿಷಭ್ ಪಂತ್ ತಕ್ಷಣವೇ ನೆಲದಿಂದ ಮೇಲೇಳಲು ಪ್ರಯತ್ನಿಸಿದರು. ಆದರೆ ಶಾರುಖ್ ಖಾನ್ ಕುಳಿತುಕೊಳ್ಳಲು ತಿಳಿಸಿದರು. ರಿಷಭ್ ಪಂತ್ ವಿನಮ್ರವಾಗಿ ಎದ್ದು ಅಂತಿಮವಾಗಿ ತಬ್ಬಿಕೊಂಡರು. ಕಳೆದ ವರ್ಷ ರಸ್ತೆ ಅಪಘಾತದ ಬಳಿಕ ಸಂಪೂರ್ಣ ಫಿಟ್ನೆಸ್ಗೆ ಮರಳಲು ಎಡಗೈ ಬ್ಯಾಟರ್ ರಿಷಭ್ ಪಂತ್ ಅವರ ಹೋರಾಟಕ್ಕೆ ಶಾರುಖ್ ಖಾನ್ ಮೆಚ್ಚುಗೆ ಸೂಚಿಸಿದರು.
ಕೆಕೆಆರ್ ತಂಡದ ನಾಯಕ ಶ್ರೇಯಸ್ ಅಯ್ಯರ್ ಮಾತುಕತೆಗೆ ಸೇರುವ ಮುನ್ನ ಶಾರುಖ್ ಖಾನ್ ಮತ್ತು ಕೆಕೆಆರ್ ಫ್ರಾಂಚೈಸಿಯ ಇತರ ಸದಸ್ಯರು ರಿಷಭ್ ಪಂತ್ ಅವರೊಂದಿಗೆ ಸುದೀರ್ಘ ಮಾತುಕತೆ ನಡೆಸಿದರು.
ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಕೆಕೆಆರ್ ತಂಡಗಳ ನಡುವಿನ ರೋಚಕ ಪಂದ್ಯವನ್ನು ವೀಕ್ಷಿಸಲು ಬಂದಿದ್ದ ಬಾಲಿವುಡ್ ತಾರೆ ಶಾರೂಖ್ ಖಾನ್, ಮೈದಾನದಲ್ಲಿ 15 ನಿಮಿಷಕ್ಕೂ ಹೆಚ್ಚು ಕಾಲ ಕಳೆದರು. ಪಂದ್ಯದ ನಂತರ ಎರಡು ತಂಡಗಳ ಸದಸ್ಯರನ್ನು ಭೇಟಿ ಮಾಡಿ ಶುಭಾಶಯ ಕೋರಿದರು.
ಕೋಲ್ಕತ್ತಾ ನೈಟ್ ರೈಡರ್ಸ್ ತಂಡ 272 ರನ್ಗಳನ್ನು ಕಲೆಹಾಕಿದ ನಂತರ, ಆರ್ಸಿಬಿ ತಂಡದ 263 ರನ್ಗಳ ದಾಖಲೆಯನ್ನು ಹಿಂದಿಕ್ಕಿ ಐಪಿಎಲ್ ಇತಿಹಾಸದಲ್ಲಿ ಎರಡನೇ ಗರಿಷ್ಠ ಮೊತ್ತ ಗಳಿಸಿದ ತಂಡವೆನಿಸಿತು. ಸನ್ ರೈಸರ್ಸ್ ಹೈದರಾಬಾದ್ ತಂಡ 277 ರನ್ಗಳ ದಾಖಲೆಯೊಂದಿಗೆ ಮೊದಲ ಸ್ಥಾನದಲ್ಲಿದೆ.
ಇನ್ನು 273 ರನ್ಗಳ ಗುರಿ ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ 17.2 ಓವರ್ಗಳಲ್ಲಿ 166 ರನ್ಗಳಿಗೆ ಗಂಟುಮೂಟೆ ಕಟ್ಟಿತು. ಇದರಿಂದ 106 ರನ್ಗಳ ಬೃಹತ್ ಗೆಲುವು ಪಡೆದ ಕೆಕೆಆರ್ ತಮ್ಮ ನೆಟ್ ರನ್ ರೇಟ್ ಅನ್ನು +2.518 ಕ್ಕೆ ಹೆಚ್ಚಿಸಿಕೊಂಡಿತು.
ಮೆಂಟರ್ ಗೌತಮ್ ಗಂಭೀರ್ ಮತ್ತು ಮುಖ್ಯ ಕೋಚ್ ಚಂದ್ರಕಾಂತ್ ಪಂಡಿತ್ ಅವರನ್ನೂ ಸಹ ಅಪ್ಪಿಕೊಂಡ ಕೆಕೆಆರ್ ಸಹ-ಮಾಲೀಕ ಶಾರುಖ್ ಖಾನ್ ಅವರ ಮುಖದಲ್ಲಿ ಸಂತೋಷವು ಎದ್ದು ಕಾಣುತ್ತಿತ್ತು.
ಇನ್ನು ಕೆಕೆಆರ್ ಮಾಜಿ ಆಟಗಾರ ಕುಲದೀಪ್ ಯಾದವ್ ಅವರೊಂದಿಗೆ ಶಾರುಖ್ ಖಾನ್ ಕೆಲಕಾಲ ಮಾತುಕತೆ ನಡೆಸಿದರು. ನಂತರ ಖಲೀಲ್ ಅಹ್ಮದ್ ಅವರ ಬೆನ್ನುತಟ್ಟಿ ಹೊಸ ಚೆಂಡಿನೊಂದಿಗೆ ತಮ್ಮ ಉತ್ತಮ ಪ್ರದರ್ಶನ ಮುಂದುವರಿಸಲು ತಿಳಿಸಿದರು.
ರಿಷಭ್ ಪಂತ್ ತಮ್ಮ 25 ಎಸೆತಗಳಲ್ಲಿ 4 ಬೌಂಡರಿ ಮತ್ತು 5 ಸಿಕ್ಸರ್ ಬಾರಿಸಿ ತಮ್ಮ ಎರಡನೇ ಸತತ ಅರ್ಧಶತಕವನ್ನು ಪೂರ್ಣಗೊಳಿಸಿ ಬ್ಯಾಟ್ನೊಂದಿಗೆ ಉತ್ತಮವಾಗಿದ್ದರು.
ರಿಷಭ್ ಪಂತ್ ಸಿಎಸ್ಕೆ ವಿರುದ್ಧ 51 ರನ್ ಗಳಿಸಿದ್ದರು. ಇದು ಈ ಅವೃತ್ತಿಯ ಡೆಲ್ಲಿ ಕ್ಯಾಪಿಟಲ್ಸ್ ಏಕೈಕ ಗೆಲುವಿಗೆ ಕಾರಣವಾಗಿತ್ತು. ಆದರೆ ಕೆಕೆಆರ್ ವಿರುದ್ಧದ ಪ್ರದರ್ಶನ ವ್ಯರ್ಥವಾಯಿತು.