ಮೇ 19 ಭಾನುವಾರ, ಐಪಿಎಲ್ 2024ರ ಟೂರ್ನಿ ಶುರುವಿನಲ್ಲಿ ಸತತ ಸೋಲಿನಿಂದ ಕಂಗೆಟ್ಟಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ಮತ್ತೆ ಪುಟಿದೇಳುವ ಮೂಲಕ ಬಲಿಷ್ಠ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್ಕೆ) ತಂಡವನ್ನು ತವರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಸೋಲಿಸಿದೆ.
ಈ ಗೆಲುವಿನ ಮೂಲಕ ಪ್ಲೇ ಆಫ್ ಕನಸನ್ನು ಜೀವಂತವಾಗಿಟ್ಟುಕೊಂಡಿದ್ದ ಆರ್ಸಿಬಿ ಐಪಿಎಲ್ನಲ್ಲಿ ದಾಖಲೆ ನಿರ್ಮಿಸಿದೆ. ಸಿಎಸ್ಕೆ ತಂಡವನ್ನು 27 ರನ್ಗಳಿಂದ ಸೋಲಿಸಿದ ಆರ್ಸಿಬಿ ಪ್ಲೇಆಫ್ನಲ್ಲಿ 4ನೇ ಸ್ಥಾನವನ್ನು ಭದ್ರಪಡಿಸಿಕೊಂಡಿದೆ. ಕೋಲ್ಕತ್ತಾ ನೈಟ್ ರೈಡರ್ಸ್, ರಾಜಸ್ಥಾನ್ ರಾಯಲ್ಸ್ ಮತ್ತು ಸನ್ರೈಸರ್ಸ್ ಹೈದರಾಬಾದ್ ತಂಡಗಳು ಈಗಾಗಲೇ ಪ್ಲೇ-ಆಫ್ಗೆ ಅರ್ಹತೆ ಪಡೆದಿವೆ.

ಸಿಎಸ್ಕೆ ವಿರುದ್ಧ ಆರ್ಸಿಬಿ ಗೆಲುವು ಸಾಧಿಸುತ್ತಿದ್ದಂತೆ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆಟಗಾರರ ಹಾಗು ಅಭಿಮಾನಿಗಳ ಸಂಭ್ರಮಾಚರಣೆಗೆ ಜಾಗವೇ ಇರಲಿಲ್ಲ. ಹೈವೋಲ್ಟೇಜ್ ಪಂದ್ಯ ನೋಡಲು ಬಂದಿದ್ದ ವಿರಾಟ್ ಕೊಹ್ಲಿ ಪತ್ನಿ ಹಾಗು ನಟಿ ಅನುಷ್ಕಾ ಶರ್ಮಾ ಗೆಲುವಿನ ಸಂತಸವನ್ನು ಕಣ್ಣೀರಿನ ಮೂಲಕ ವ್ಯಕ್ತಪಡಿಸಿದರು.
ಇದನ್ನು ನೋಡಿದ ವಿರಾಟ್ ಕೊಹ್ಲಿ ಕೂಡ ಓಡಿ ಬಂದು ಮೈದಾನದಲ್ಲೇ ನಾಯಕ ಫಾಫ್ ಡು ಪ್ಲೆಸಿಸ್ ಅವರನ್ನು ತಬ್ಬಿ ಕಣ್ಣೀರಿಟ್ಟರು. ಈ ಭಾವನಾತ್ಮಕ ಕ್ಷಣಕ್ಕೆ ಚಿನ್ನಸ್ವಾಮಿ ಸ್ಟೇಡಿಯಂ ಸಾಕ್ಷಿಯಾಯಿತು. ಈ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುವ ಮೂಲಕ ಅಭಿಮಾನಿಗಳ ಭಾವನೆಗಳಲ್ಲಿ ಬೆರೆತು ಹೋಗಿವೆ.
ಟೂರ್ನಿ ಮೊದಲಾರ್ಧದಲ್ಲಿ ಆರ್ಸಿಬಿ ಆಡಿದ 8 ಪಂದ್ಯಗಳಲ್ಲಿ ಕೇವಲ 1 ಗೆಲುವು ಹಾಗು 7 ಸೋಲು ಕಂಡಿತ್ತು. ಹೀಗಾಗಿ ಅಂಕಪಟ್ಟಿಯಲ್ಲಿ ಕೊನೆಯ 10ನೇ ಸ್ಥಾನದಲ್ಲಿ ಭದ್ರವಾಗಿತ್ತು. ಈ ಹಂತದಲ್ಲಿ ಯಾರೋಬ್ಬರು ಆರ್ಸಿಬಿ ಪ್ಲೇ ಆಫ್ಗೆ ಅರ್ಹತೆ ಪಡೆಯುತ್ತದೆ ಎಂದು ಭಾವಿಸಿರಲಿಲ್ಲ.
ಆದರೇ ದ್ವೀತಿಯಾರ್ಧದಲ್ಲಿ ಗೆಲುವಿನ ಲಯಕ್ಕೆ ಮರಳಿದ ಆರ್ಸಿಬಿ ಒಂದೊಂದೆ ಪಂದ್ಯಗಳನ್ನು ಭರ್ಜರಿಯಾಗಿ ಗೆಲ್ಲುವ ಮೂಲಕ ಪ್ಲೇ ಆಫ್ ರೇಸ್ನಲ್ಲಿ ಉಳಿದುಕೊಂಡಿತ್ತು. ಇದೀಗಾ ಚೆನ್ನೈ ವಿರುದ್ಧ ಗೆದ್ದು ಬೀಗಿದೆ.
ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಸಿಎಸ್ಕೆ ವಿರುದ್ಧ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್ಸಿಬಿ ಉತ್ತಮ ಆರಂಭ ಪಡೆಯಿತು. ಆರ್ಸಿಬಿ ನಾಯಕ ಫಾಫ್ ಡು ಪ್ಲೆಸಿಸ್(54), ವಿರಾಟ್ ಕೊಹ್ಲಿ(47) ಮೊದಲ ವಿಕೆಟ್ಗೆ 78 ರನ್ಗಳ ಜೊತೆಯಾಟವಾಡಿದರು.
ನಂತರ ಮೂರನೇ ಕ್ರಮಾಂಕದಲ್ಲಿ ಬಂದ ರಜತ್ ಪಾಟಿದಾರ್ ಹಾಗೂ ನಾಲ್ಕನೇ ಕ್ರಮಾಂಕದ ಬ್ಯಾಟರ್ ಕ್ಯಾಮರೋನ್ ಗ್ರೀನ್ 71 ರನ್ಗಳ ಜೊತೆಯಾಟವಾಡುವ ಮೂಲಕ ಆರ್ಸಿಬಿಗೆ ನೆರವಾದರು.
ರಜತ್ ಪಾಟೀದಾರ್ 41 ರನ್ ಸಿಡಿಸಿದರೆ, ಕ್ಯಾಮರೋನ್ ಗ್ರೀನ್ ಅಮೂಲ್ಯ 38 ರನ್ ಸಿಡಿಸಿದರು. ಹೀಗಾಗಿ ಆರ್ಸಿಬಿ ನಿಗದಿತ 20 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 218 ರನ್ ಕಲೆಹಾಕಿತು.
ಈ ಗುರಿ ಬೆನ್ನಟ್ಟಿದ ಸಿಎಸ್ಕೆ, ಆರ್ಸಿಬಿ ಸಂಘಟಿತ ಬೌಲಿಂಗ್ ದಾಳಿಗೆ ತತ್ತರಿಸಿ 7 ನಷ್ಟಕ್ಕೆ ಕೇವಲ 191 ರನ್ ಗಳಿಸಲಷ್ಟೇ ಶಕ್ತವಾಯಿತು. ಅಬ್ಬರ ಅರ್ಧಶತಕ ಬ್ಯಾಟಿಂಗ್ ಮಾಡಿದ ರಚಿನ್ ರವೀಂದ್ರ 37 ಎಸೆತಗಳಲ್ಲಿ 61 ರನ್, ರವೀಂದ್ರ ಜಡೇಜಾ 42 ಮತ್ತು ಅಜಿಂಕ್ಯ ರಹಾನೆ 33 ರನ್ ಗಳಿಸಿದರೂ ಸಿಎಸ್ಕೆ ಗೆಲುವಿನ ದಡ ಸೇರಿಸುವಲ್ಲಿ ಸಾಧ್ಯವಾಗಲಿಲ್ಲ.