ಬುಧವಾರ, ಮೇ 23ರಂದು ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ 2024ರ ಇಂಡಿಯನ್ ಪ್ರೀಮಿಯರ್ ಲೀಗ್ನ (ಐಪಿಎಲ್) ಎಲಿಮಿನೇಟರ್ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡ 4 ವಿಕೆಟ್ಗಳಿಂದ ಸೋತು ಪಂದ್ಯಾವಳಿಯಿಂದ ಹೊರಬಿದ್ದಿತು.
ಈ ಮೂಲಕ ಸತತ 17ನೇ ವರ್ಷವೂ ಆರ್ಸಿಬಿ ಮತ್ತು ವಿರಾಟ್ ಕೊಹ್ಲಿ ಐಪಿಎಲ್ ಟ್ರೋಫಿ ರಹಿತವಾಗಿ ಖಾಲಿ ಕೈಯಲ್ಲಿ ನಿರ್ಗಸಿದರು. ಈ ಬಾರಿಯಾದರೂ ಟ್ರೋಫಿ ಗೆಲ್ಲುವ ನಿರೀಕ್ಷೆಯಲ್ಲಿದ್ದ ಆರ್ಸಿಬಿ ತಂಡ ಮತ್ತು ಕೋಟ್ಯಂತರ ನಿಷ್ಠಾವಂತ ಅಭಿಮಾನಿಗಳ ಕಾಯುವಿಕೆ ಮುಂದುವರೆದಿದೆ.

ಇದೇ ವೇಳೆ ವಿರಾಟ್ ಕೊಹ್ಲಿ ಐಪಿಎಲ್ ಟ್ರೋಫಿ ಗೆಲ್ಲಲು ಅರ್ಹರು ಮತ್ತು ಭವಿಷ್ಯದಲ್ಲಿ ತಮ್ಮ ಕನಸನ್ನು ನನಸಾಗಿಸಲು ಆರ್ಸಿಬಿ ತಂಡವನ್ನು ತೊರೆಯಬೇಕು ಎಂದು ಇಂಗ್ಲೆಂಡ್ ಮಾಜಿ ನಾಯಕ ಹಾಗೂ ಆರ್ಸಿಬಿ ಮಾಜಿ ಆಟಗಾರ ಕೆವಿನ್ ಪೀಟರ್ಸನ್ ಒತ್ತಾಯಿಸಿದ್ದಾರೆ.
ಐಪಿಎಲ್ 2024ರಲ್ಲಿ ಆರ್ಸಿಬಿ ತಂಡದ ರನ್ ಸ್ಕೋರಿಂಗ್ ಭಾರವನ್ನು ತನ್ನ ಹೆಗಲ ಮೇಲೆ ಹೊತ್ತುಕೊಂಡು ಬ್ಯಾಟಿಂಗ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದರೂ ವಿರಾಟ್ ಕೊಹ್ಲಿ ಬರಿಗೈಯಲ್ಲಿ ಪಂದ್ಯಾವಳಿ ಮುಗಿಸಿದ ಬಗ್ಗೆ ಕೆವಿನ್ ಪೀಟರ್ಸನ್ ಹತಾಶೆ ವ್ಯಕ್ತಪಡಿಸಿದರು.
ಅಹಮದಾಬಾದ್ನಲ್ಲಿ ನಡೆದ ಐಪಿಎಲ್ 2024ರ ಎಲಿಮಿನೇಟರ್ ಪಂದ್ಯದಲ್ಲಿ ಆರ್ಸಿಬಿ ತಂಡದ 17 ವರ್ಷಗಳ ಸುದೀರ್ಘ ಪ್ರಶಸ್ತಿಯಿಲ್ಲದೆ ಓಟವು ಮುಂದುವರಿದ ನಂತರ, ಇಂಗ್ಲೆಂಡ್ನ ಮಾಜಿ ಕ್ರಿಕೆಟಿಗನಿಂದ ಈ ಹೇಳಿಕೆ ಬಂದಿದೆ.
ಕ್ರಿಸ್ಟಿಯಾನೋ ರೊನಾಲ್ಡೊ ಮತ್ತು ಹ್ಯಾರಿ ಕೇನ್ ಸೇರಿದಂತೆ ಫುಟ್ಬಾಲ್ ಸೂಪರ್ಸ್ಟಾರ್ಗಳ ಉದಾಹರಣೆ ನೀಡಿದ ಕೆವಿನ್ ಪೀಟರ್ಸನ್, ಅವರೆಲ್ಲರೂ ಉತ್ತಮ ಭವಿಷ್ಯಕ್ಕಾಗಿ ಮತ್ತು ಹೆಚ್ಚಿನ ಯಶಸ್ಸನ್ನು ಪಡೆಯಲು ತಮ್ಮ ಹಿಂದಿನ ಕ್ಲಬ್ಗಳನ್ನು ತೊರೆದರು ಎಂದು ತಿಳಿಸಿದರು.

ಭಾರತದ ಸೂಪರ್ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ತನ್ನ ಸುದೀರ್ಘ ಆರ್ಸಿಬಿ ಜೊತೆಗಿನ ಒಡನಾಟವನ್ನು ಕೊನೆಗೊಳಿಸಲು ನಿರ್ಧರಿಸಿದರೆ, ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿಯು ವಿರಾಟ್ ಕೊಹ್ಲಿಯ ಮುಂದಿನ ತಾಣವಾಗಬಹುದು ಎಂದು ಕೆವಿನ್ ಪೀಟರ್ಸನ್ ಹೇಳಿದರು.
ತಮ್ಮ ಟ್ರೋಫಿಯ ಬರವನ್ನು ಕೊನೆಗೊಳಿಸುವ ಆರ್ಸಿಬಿ ತಂಡದ ಭರವಸೆಯು ಐಪಿಎಲ್ 2024ರ ಪ್ಲೇಆಫ್ಗೆ ಪ್ರವೇಶಿಸಲು ಒಂದು ಅದ್ಭುತವಾದ ಪುನರಾಗಮನದೊಂದಿಗೆ ನಿರೀಕ್ಷೆ ಹೆಚ್ಚಿಸಿತ್ತು.
ಫಾಫ್ ಡು ಪ್ಲೆಸಿಸ್ ನಾಯಕತ್ವದ ಆರ್ಸಿಬಿ ತಂಡ ತನ್ನ ಮೊದಲ ಎಂಟು ಪಂದ್ಯಗಳಿಂದ ಕೇವಲ ಒಂದು ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿತ್ತು. ನಂತರ ಪ್ಲೇಆಫ್ಗೆ ಪ್ರವೇಶಿಸಲು ತಮ್ಮ ಕೊನೆಯ ಆರು ಲೀಗ್ ಪಂದ್ಯಗಳನ್ನು ಗೆದ್ದರು.
ಆದಾಗ್ಯೂ, ಬುಧವಾರ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಆರ್ಸಿಬಿ ತಂಡ ಕೇವಲ 172 ರನ್ ಕಲೆಹಾಕಿದ ಕಾರಣ, ರಾಜಸ್ಥಾನ್ ರಾಯಲ್ಸ್ ವಿರುದ್ಧ 4 ವಿಕೆಟ್ಗಳಿಂದ ಸೋಲು ಕಂಡಿತು.

"ನಾನು ಇದನ್ನು ಮೊದಲೇ ಹೇಳಿದ್ದೇನೆ ಮತ್ತು ನಾನು ಅದನ್ನು ಮತ್ತೆ ಹೇಳುತ್ತೇನೆ. ಇತರ ಕ್ರೀಡೆಗಳಲ್ಲಿನ ಶ್ರೇಷ್ಠ ಆಟಗಾರರು, ಬೇರೆಡೆಗೆ ಹೋಗಿ ತಮ್ಮ ಯಶಸ್ಸನ್ನು ಹುಡುಕಲು ತಂಡಗಳನ್ನು ತೊರೆದಿದ್ದಾರೆ. ಕೊಹ್ಲಿ ತುಂಬಾ ಕಠಿಣವಾಗಿ ಪ್ರಯತ್ನಿಸಿದಾಗ, ಮತ್ತೊಮ್ಮೆ ಆರೆಂಜ್ ಕ್ಯಾಪ್ ಗೆದ್ದುಕೊಂಡ ನಂತರವೂ, ಆರ್ಸಿಬಿ ಫ್ರಾಂಚೈಸಿ ಟ್ರೋಫಿ ಗೆಲ್ಲಲು ಮತ್ತೆ ವಿಫಲವಾಗಿದೆ".
"ಆರ್ಸಿಬಿ ಫ್ರಾಂಚೈಸಿ ಬ್ರ್ಯಾಂಡ್ ಮತ್ತು ತಂಡಕ್ಕೆ ವಿರಾಟ್ ಕೊಹ್ಲಿ ತರುವ ವಾಣಿಜ್ಯ ಮೌಲ್ಯಕ್ಕಾಗಿ ನಾನು ಅರ್ಥಮಾಡಿಕೊಂಡಿದ್ದೇನೆ. ಆದರೆ ವಿರಾಟ್ ಕೊಹ್ಲಿ ಐಪಿಎಲ್ ಟ್ರೋಫಿಗೆ ಅರ್ಹರು ಮತ್ತು ಆ ಟ್ರೋಫಿಯನ್ನು ಪಡೆಯಲು ಸಹಾಯ ಮಾಡುವ ತಂಡದಲ್ಲಿ ಆಡಲು ಅವರು ಅರ್ಹರಾಗಿದ್ದಾರೆ," ಎಂದು ಆರ್ಸಿಬಿ ಮಾಜಿ ಆಟಗಾರ ಕೆವಿನ್ ಪೀಟರ್ಸನ್ ಸ್ಟಾರ್ ಸ್ಪೋರ್ಟ್ಸ್ಗೆ ತಿಳಿಸಿದರು.
"ವಾಸ್ತವವಾಗಿ ಅದು ಡೆಲ್ಲಿ ಕ್ಯಾಪಿಟಲ್ಸ್ ತಂಡವಾಗಿರಬೇಕು ಎಂದು ನಾನು ಭಾವಿಸುತ್ತೇನೆ. ದೆಹಲಿಯು ವಿರಾಟ್ ಕೊಹ್ಲಿ ಹೋಗಬೇಕಾದ ಸ್ಥಳವಾಗಿದೆ. ವಿರಾಟ್ ಕೊಹ್ಲಿ ದೂರ ಹೋಗಬಹುದು ಮತ್ತು ಹೆಚ್ಚಿನ ಸಮಯ ಮನೆಯಲ್ಲಿಯೇ ಇರಬಹುದು, ಅವರಿಗೆ ದೆಹಲಿಯಲ್ಲಿ ಮನೆ ಇದೆ ಎಂದು ನನಗೆ ತಿಳಿದಿದೆ".
"ವಿರಾಟ್ ಕೊಹ್ಲಿ ಇದೀಗ ಯುವ ಕುಟುಂಬವನ್ನು ಹೊಂದಿದ್ದಾರೆ. ಅವರು ಅಲ್ಲಿ ಹೆಚ್ಚು ಸಮಯ ಕಳೆಯಬಹುದು. ಆತ ದೆಹಲಿಯ ಹುಡುಗ. ಅವನು ಏಕೆ ಹಿಂತಿರುಗಬಾರದು? ಡೆಲ್ಲಿ ಕ್ಯಾಪಿಟಲ್ಸ್ ಕೂಡ ಆರ್ಸಿಬಿಯಂತೆ ಹತಾಶವಾಗಿದೆ," ಎಂದರು.
"ವಿರಾಟ್ ಕೊಹ್ಲಿ ಕಠಿಣವಾಗಿ ಯೋಚಿಸುವ ಸಮಯ ಬಂದಿದೆ ಎಂದು ನಾನು ಭಾವಿಸುತ್ತೇನೆ. ಫುಟ್ಬಾಲ್ನಲ್ಲಿ ಬೆಕ್ಹ್ಯಾಮ್ ತೊರೆದರು, ಕ್ರಿಸ್ಟಿಯಾನೋ ರೊನಾಲ್ಡೊ ತೊರೆದರು, ಲಿಯೋನೆಲ್ ಮೆಸ್ಸಿ ತೊರೆದರು, ಹ್ಯಾರಿ ಕೇನ್ ಸ್ಪರ್ಸ್ ಅನ್ನು ತೊರೆದು ಬೇಯರ್ನ್ ಮ್ಯೂನಿಚ್ಗೆ ಹೋದರು," ಎಂದು ಇತರೆ ಉದಾಹರಣೆ ನೀಡಿದರು.