ಭಾರತ ಕ್ರಿಕೆಟ್ ತಂಡದ ಮಾಜಿ ಬ್ಯಾಟರ್ ವೀರೇಂದ್ರ ಸೆಹ್ವಾಗ್ ಅವರು ತಮ್ಮ ಆಟದ ಸಮಯದಲ್ಲಿ ಸ್ಫೋಟಕ ಬ್ಯಾಟಿಂಗ್ನಿಂದಾಗಿ ಪ್ರತ್ಯೇಕ ಅಭಿಮಾನಿ ಬಳಗವನ್ನೇ ಹೊಂದಿದ್ದಾರೆ. ಏಕೆಂದರೆ ಅವರ ಏಕದಿನ ಮತ್ತು ಟಿ20 ಕ್ರಿಕೆಟ್ ವೃತ್ತಿಜೀವನದುದ್ದಕ್ಕೂ ಕ್ರಮವಾಗಿ 104.33 ಮತ್ತು 145.38ರ ಸ್ಟ್ರೈಕ್ ರೇಟ್ನೊಂದಿಗೆ ಬ್ಯಾಟ್ ಮಾಡಿದ್ದನ್ನು ನೋಡಬಹುದು.
ಇದೇ ವೇಳೆ ಶನಿವಾರದಂದು ಜೈಪುರದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಆರ್ಸಿಬಿ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಅವರ ನಿಧಾನಗತಿಯ ಶತಕದ ಬಗ್ಗೆ ವೀರೇಂದ್ರ ಸೆಹ್ವಾಗ್ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.
72 ಎಸೆತಗಳಲ್ಲಿ ಅಜೇಯ 113 ರನ್ ಗಳಿಸಿದ್ದಕ್ಕಾಗಿ ಭಾರತ ಮತ್ತು ಆರ್ಸಿಬಿ ತಂಡದ ಬ್ಯಾಟರ್ ವಿರಾಟ್ ಕೊಹ್ಲಿಯನ್ನು ಇತರರು ಸಮರ್ಥಿಸಿಕೊಂಡರೆ, ವೀರೇಂದ್ರ ಸೆಹ್ವಾಗ್ ಮಾತ್ರ ಕೊಹ್ಲಿಯ ನಿಧಾನಗತಿ ಬ್ಯಾಟಿಂಗ್ ಎತ್ತಿ ತೋರಿಸಲು ಹಿಂದೆಮುಂದು ನೋಡಲಿಲ್ಲ.

ಐಪಿಎಲ್ 2024ರಲ್ಲಿ ಚೊಚ್ಚಲ ಶತಕ ಬಾರಿಸಿದ ಬಳಿಕವೂ, ವಿರಾಟ್ ಕೊಹ್ಲಿ 200ರ ಸ್ಟ್ರೈಕ್ ರೇಟ್ ಹೊಂದಿರಲಿಲ್ಲ. ಮೊದಲ ಇನ್ನಿಂಗ್ಸ್ನಲ್ಲಿ ಆರ್ಸಿಬಿ ತಂಡ ಗಳಿಸಿದ್ದಕ್ಕಿಂತ 20 ರನ್ ಕೊರತೆ ಎನಿಸಿತು ಎಂದು ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಅವರು ಕ್ರಿಕ್ಬಜ್ನೊಂದಿಗೆ ಮಾತನಾಡಿದರು.
ಆರ್ಸಿಬಿ ಆರಂಭಿಕರಾದ ವಿರಾಟ್ ಕೊಹ್ಲಿ ಮತ್ತು ಫಾಫ್ ಡು ಪ್ಲೆಸಿಸ್ ಜೋಡಿ ಮೊದಲ ವಿಕೆಟ್ಗೆ ಮೊದಲ 14 ಓವರ್ಗಳಲ್ಲಿ 125 ರನ್ಗಳ ಜೊತೆಯಾಟ ನೀಡಿದ್ದರು.
ವೀರೇಂದ್ರ ಸೆಹ್ವಾಗ್ ಮೊದಲು ವಿರಾಟ್ ಕೊಹ್ಲಿಯ ಶತಕವನ್ನು ಶ್ಲಾಘಿಸಿದರು. ಫಾರ್ಮ್ನಲ್ಲಿದ್ದ ದಿನೇಶ್ ಕಾರ್ತಿಕ್ ಅವರಿಗೆ ಆಡಲು ಅವಕಾಶ ಸಿಗಲಿಲ್ಲ, ಕ್ರೀಸ್ಗೆ ಬಂದವರು ಸ್ಕೋರ್ ಬೋರ್ಡ್ ಹೆಚ್ಚಿಸುವ ಕೆಲಸ ಮಾಡಲಿಲ್ಲ ಎಂದರು.

ಅಲ್ಲದೆ, ವಿರಾಟ್ ಕೊಹ್ಲಿಯ ಸ್ಟ್ರೈಕ್ ರೇಟ್ ಖಂಡಿತವಾಗಿಯೂ ಹೆಚ್ಚಾಗಬೇಕಿತ್ತು ಮತ್ತು ಅವರ ಇನ್ನಿಂಗ್ಸ್ ಮುಂದುವರೆದಂತೆ 200ರ ಸ್ಟ್ರೈಕ್ ರೇಟ್ನಲ್ಲಿ ಕೊನೆಗೊಳಿಸಬೇಕಿತ್ತು ಎಂದು ವೀರೇಂದ್ರ ಸೆಹ್ವಾಗ್ ಅಭಿಪ್ರಾಯಪಟ್ಟರು.
"ಆರ್ಸಿಬಿ ಸುಮಾರು 20 ರನ್ಗಳನ್ನು ಕಡಿಮೆ ಮಾಡಿದೆ ಎಂದು ನಾನು ಭಾವಿಸುತ್ತೇನೆ. ವಿರಾಟ್ ಕೊಹ್ಲಿ ಬಗ್ಗೆ, ಅವರ ಶತಕ ಅದ್ಭುತವಾಗಿದೆ, ಆದರೆ ಅವರನ್ನು ಬೇರೆ ಯಾರೂ ಬೆಂಬಲಿಸಲಿಲ್ಲ. ದಿನೇಶ್ ಕಾರ್ತಿಕ್ ಬರಲಿಲ್ಲ, ಹಾಗಾಗಿ ಅವನ ಜೊತೆಯಲ್ಲಿ ದೊಡ್ಡ ಹಿಟ್ಟರ್ಗಳು ಇರಲಿಲ್ಲ, ಬಂದವರು ಉತ್ತಮ ಕೆಲಸ ಮಾಡಲಿಲ್ಲ," ಎಂದು ಮಾಜಿ ಬ್ಯಾಟರ್ ವೀರೇಂದ್ರ ಸೆಹ್ವಾಗ್ ತಿಳಿಸಿದರು.
"ಹೌದು, ಕೊಹ್ಲಿಯ ಸ್ಟ್ರೈಕ್ ರೇಟ್ ಖಂಡಿತವಾಗಿ ಹೆಚ್ಚಾಗಬೇಕಿತ್ತು. ಏಕೆಂದರೆ ನೀವು 39 ಎಸೆತಗಳಲ್ಲಿ 50 ರನ್ ಗಳಿಸಿದಾಗ, ನಂತರ ನೀವು ವೇಗವಾಗಿ ಸ್ಕೋರ್ ಮಾಡಬೇಕು. ಸ್ಟ್ರೈಕ್ ರೇಟ್ ಸ್ವಯಂಚಾಲಿತವಾಗಿ 200ಕ್ಕೆ ತಲುಪಬೇಕು. ಕೊಹ್ಲಿ ಈ ವಿಷಯದಲ್ಲಿ ತಪ್ಪು ಮಾಡಿರುವುದು ಖಚಿತವಾಗಿದೆ," ಎಂದು ವೀರೇಂದ್ರ ಸೆಹ್ವಾಗ್ ಹೇಳಿದರು.

ವಿರಾಟ್ ಕೊಹ್ಲಿಗೆ ಮತ್ತೊಂದು ಸ್ಟ್ರೈಕ್ನಿಂದ ಬೆಂಬಲದ ಕೊರತೆಯ ಬಗ್ಗೆ ಮಾತನಾಡಿದ ವೀರೇಂದ್ರ ಸೆಹ್ವಾಗ್, ಗ್ಲೆನ್ ಮ್ಯಾಕ್ಸ್ವೆಲ್ ಮತ್ತು ಕ್ಯಾಮೆರಾನ್ ಗ್ರೀನ್ ಅವರಂತಹ ಬ್ಯಾಟರ್ಗಳು ಕೊಹ್ಲಿಗೆ ಸಾಥ್ ನೀಡಲು ವಿಫಲರಾದರು. ಹೀಗಾಗಿ ಕ್ರೀಸ್ನ ಒಂದು ತುದಿಯನ್ನು ಸುರಕ್ಷಿತವಾಗಿ ಹಿಡಿದಿಟ್ಟುಕೊಂಡರು. ಇನ್ನೊಂದು ತುದಿಯಲ್ಲಿರುವ ಬ್ಯಾಟರ್ಗಳು ತಮ್ಮ ವಿಕೆಟ್ಗಳೊಂದಿಗೆ ಪೆವಿಲಿಯನ್ ಸೇರಿದರು ಎಂದು ತಿಳಿಸಿದರು.
"ಉಳಿದ ಬ್ಯಾಟರ್ಗಳು ಉತ್ತಮ ಕೊಡುಗೆ ನೀಡಲಿಲ್ಲ. ಇನ್ನಿಂಗ್ಸ್ ಮುನ್ನಡೆಸುವ ಸಂಪೂರ್ಣ ಒತ್ತಡ ವಿರಾಟ್ ಕೊಹ್ಲಿ ಮೇಲಿತ್ತು. ಸತತ ವೈಫಲ್ಯ ಅನುಭವಿಸುತ್ತಿರುವ ಗ್ಲೆನ್ ಮ್ಯಾಕ್ಸ್ವೆಲ್, ಕ್ಯಾಮೆರಾನ್ ಗ್ರೀನ್ ಅವರ ಮೇಲೆ ಆರ್ಸಿಬಿ ತುಂಬಾ ಖರ್ಚು ಮಾಡಿದೆ," ಎಂದು ವೀರೇಂದ್ರ ಸೆಹ್ವಾಗ್ ಹೇಳಿದರು.