ಸಂಘಟಿತದ ಆಟದ ಪ್ರದರ್ಶನ ನೀಡಿದ ಆರ್ ಸಿಬಿ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಮಣಿಸಿ ಪ್ರಶಸ್ತಿಯನ್ನು ಎತ್ತಿ ಹಿಡಿದಿದೆ. ಈ ಮೂಲಕ ಹಲವು ದಿನಗಳಿಂದ ಅಭಿಮಾನಿಗಳು ಹೇಳುತ್ತಿದ್ದ ಈ ಬಾರಿ ಕಪ್ ನಮ್ದೇ ಎಂಬ ಟ್ಯಾಗ್ ಲೈನ್ ನ್ನು ಸರಿ ಎಂದು ಸಾಬೀತು ಮಾಡಿದ್ದಾರೆ. ಈ ಮೂಲಕ ಹಲವು ವರ್ಷಗಳಿಂದ ಐಪಿಎಲ್ ಪ್ರಶಸ್ತಿ ಗಳಿಸುವಲ್ಲಿ ವಿಫಲವಾಗಿದ್ದ ಪುರಷರ ತಂಡಕ್ಕೆ ಬೂಸ್ಟ್ ಸಿಕ್ಕಂತೆ ಆಗಿದೆ.
ಆರಂಭದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ನಾರಿಯರು ಅಬ್ಬರದ ಪ್ರದರ್ಶನ ನೀಡಿದರು. ಆದರೆ ಸ್ಪಿನ್ ಬೌಲರ್ಸ್ ಅಖಾಡಕ್ಕೆ ಇಳಿಯುತ್ತಿದ್ದಂತೆ ಅಬ್ಬರಿಸಿದರು. 10.3 ಓವರ್ ಗಳಲ್ಲಿ 46 ರನ್ ನೀಡಿದ ಸ್ಪಿನ್ ಬೌಲರ್ಗಳು 9 ವಿಕೆಟ್ ಪಡೆದು ಮಿಂಚಿದರು. ಅಲ್ಲದೆ ಬ್ಯಾಟರ್ ಗಳು ಸಹ ಜವಾಬ್ದಾರಿಯುತ ಆಟವನ್ನು ಆಡಿ ತಂಡಕ್ಕೆ ನೆರವಾದರು. ಈ ಮೂಲಕ 2024 ಆರ್ ಸಿಬಿ ತಂಡದ್ದೇ ಎಂದು ಸಾರೀ ಹೇಳಿದರು.

ಇನ್ನೇನು ಕೆಲವೇ ದಿನಗಳಲ್ಲಿ ಪುರುಷರು ಐಪಿಎಲ್ ನಡೆಯುತ್ತಿದೆ. 17ನೇ ಐಪಿಎಲ್ ನ ಉದ್ಘಾಟನಾ ಪಂದ್ಯದಲ್ಲಿ ಚೆನ್ನೈ ವಿರುದ್ಧ ಆರ್ ಸಿಬಿ ತಂಡಗಳು ಕಾದಾಟ ನಡೆಸಲಿವೆ. ನಾರಿಯರ ಸಾಧನೆ ನಿಜಕ್ಕೂ ಪುರುಷರಿಗೆ ನವ ಉತ್ಸಾಹ ತುಂಬಲಿದೆ. ಸತತ ಪ್ರಶಸ್ತಿ ಬರವನ್ನು ಅನುಭವಿಸಿರುವ ಆರ್ ಸಿಬಿ ಈ ಬಾರಿ ಶತಾಯ ಗತಾಯ ಟ್ರೋಫಿ ಎತ್ತುವ ಆಸೆ ಹೊಂದಿದೆ.
ನಾಲ್ಕನೇ ಬಾರಿ ಕಪ್ ಫಿಕ್ಸ್
ಈಗಾಗಲೇ ಆರ್ ಸಿಬಿ ತಂಡ ಐಪಿಎಲ್ನಲ್ಲಿ ಮೂರು ಬಾರಿ ಫೈನಲ್ ಪ್ರವೇಶಿಸಿದೆ. ಆದರೆ ನಿರಾಸೆ ಬಹುವಾಗಿ ಕಾಡಿದೆ. 2009ರಲ್ಲಿ ಡೆಕನ್ ಚಾರ್ಜಾಸ್ ವಿರುದ್ಧ ಆಘಾತಕ್ಕೆ ಒಳಗಾಗಿತ್ತು. 2011 ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಸೋಲು ಕಂಡಿದ್ದ ಆರ್ ಸಿಬಿ, 2016 ರಲ್ಲೂ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಆಘಾತ ಅನುಭಿಸಿತ್ತು. ನಾಲ್ಕನೇ ಬಾರಿ ಆರ್ ಸಿಬಿ ಪ್ರಶಸ್ತಿ ಸುತ್ತು ಪ್ರವೇಶಿಸುವಲ್ಲಿ ಸಫಲವಾದರೆ ಗೆಲುವಿನ ನಗೆಯನ್ನು ಬೀರಬಹುದು.
ಆರ್ ಸಿಬಿ ತಂಡದಲ್ಲಿ ಸ್ಟಾರ್ ಆಟಗಾರರ ದಂಡೇ ಇದೆ. ಎಲ್ಲ ಆಟಗಾರರು ತಮ್ಮ ಜವಬ್ದಾರಿ ಅರಿತು ಆಡಿದಲ್ಲಿ ಗೆಲುವಿನ ಕನಸು ಸನೀಹವಾಗುತ್ತದೆ. ಅಲ್ಲದೆ ಹಲವು ದಿನಗಳಿಂದ ಅಭಿಮಾನಿಗಳು ಅಭಿಮಾನದಿಂದ ಹೇಳುತ್ತಿದ್ದ ಈ ಬಾರಿ ಕಪ್ ನಮ್ದೇ ಎಂಬ ಟ್ಯಾಗ್ ಲೈನ್ ಸಹ ನಿಜವಾಗುತ್ತದೆ.

ವಿರಾಟ್ ಆರ್ಸಿಬಿ ಸೇರುವುದು ಯಾವಾಗ?
ಟೀಂ ಇಂಡಿಯಾ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಲಂಡನ್ ನಿಂದ ಭಾರತಕ್ಕೆ ಮರಳಿದ್ದಾರೆ. ಅಂದರೆ ಸುಮಾರು 2 ತಿಂಗಳ ನಂತರ ಐಪಿಎಲ್ ಮೂಲಕ ಮತ್ತೊಮ್ಮೆ ಕ್ರಿಕೆಟ್ ಕ್ಷೇತ್ರಕ್ಕೆ ಮರಳಲು ಕಿಂಗ್ ಕೊಹ್ಲಿ ಸಜ್ಜಾಗಿದ್ದಾರೆ. ಇಂಗ್ಲೆಂಡ್ ವಿರುದ್ಧದ 5 ಟೆಸ್ಟ್ ಪಂದ್ಯಗಳ ಸರಣಿಯ ಆರಂಭದ ಮೊದಲು, ವಿರಾಟ್ ಟೀಮ್ ಇಂಡಿಯಾದಿಂದ ರಜೆ ತೆಗೆದುಕೊಂಡಿದ್ದರು. ವಿರಾಟ್ ಕೊಹ್ಲಿ ಐಪಿಎಲ್ 2024 ರ ಮೊದಲು ತಮ್ಮ ಆರ್ಸಿಬಿಗೆ ಸೇರಲು ಲಂಡನ್ನಿಂದ ಭಾರತಕ್ಕೆ ಹಿಂದಿರುಗುವಾಗ ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡರು.
ವಿರಾಟ್ ಕೊಹ್ಲಿ ಇದೀಗ ಆರ್ಸಿಬಿ ಪಾಳಯ ಸೇರಲು ಸಜ್ಜಾಗಿದ್ದಾರೆ. ಆರ್ಸಿಬಿ 'ಅನ್ಬಾಕ್ಸ್' ಈವೆಂಟ್ಗೆ ಮುಂಚಿತವಾಗಿ ಅವರು ಬೆಂಗಳೂರಿನಲ್ಲಿ ತಮ್ಮ ಸಹ ಆಟಗಾರರೊಂದಿಗೆ ಸೇರಿಕೊಳ್ಳಬಹುದು ಎಂದು ಈ ಹಿಂದೆ ವರದಿಯಾಗಿತ್ತು. ಮಾರ್ಚ್ 19 ರಂದು ಬೆಂಗಳೂರಿನಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ. ವಿರಾಟ್ ಅವರು ತಮ್ಮ ಎರಡನೇ ಮಗುವಿನ ಜನನದ ಸಮಯದಲ್ಲಿ ತಮ್ಮ ಪತ್ನಿ ಅನುಷ್ಕಾ ಶರ್ಮಾ ಅವರೊಂದಿಗೆ ಇರಲು ಬಯಸಿದ್ದರು. ಹೀಗಾಗಿ ಕ್ರಿಕೆಟ್ನಿಂದ ದೂರ ಉಳಿಯಲು ನಿರ್ಧರಿಸಿದ್ದರು.