2024ರ ಇಂಡಿಯನ್ ಪ್ರೀಮಿಯರ್ ಲೀಗ್ನ (ಐಪಿಎಲ್) 17ನೇ ಆವೃತ್ತಿ ಆರಂಭಕ್ಕೆ ದಿನಗಣನೆ ಶುರುವಾಗಿದ್ದು, ಕ್ರಿಕೆಟ್ ಮೈದಾನದಲ್ಲಿ ಅತಿರಥ-ಮಹಾರಥರ ಕಾಳಗ ಮಾರ್ಚ್ 22ರಂದು ಮುಹೂರ್ತ ಫಿಕ್ಸ್ ಆಗಿದೆ.
ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್ಕೆ) ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಮುಖಾಮುಖಿಯಾಗಲಿವೆ.
ಇದೇ ವೇಳೆ 2024ರ ಐಪಿಎಲ್ ಆರಂಭಕ್ಕೂ ಮುನ್ನ ಆರೆಂಜ್ ಕ್ಯಾಪ್ (ಅತಿ ಹೆಚ್ಚು ರನ್ ಗಳಿಸಿದ ಆಟಗಾರ) ಗೆಲ್ಲುವ ಆಟಗಾರನನ್ನು ಭಾರತೀಯ ಕ್ರಿಕೆಟ್ ತಂಡದ ಅನುಭವಿ ಸ್ಪಿನ್ನರ್ ಯುಜ್ವೇಂದ್ರ ಚಹಾಲ್ ಹೆಸರಿಸಿದ್ದಾರೆ.

ತಮ್ಮದೇ ರಾಜಸ್ಥಾನ್ ರಾಯಲ್ಸ್ ತಂಡದ ಆರಂಭಿಕ ಬ್ಯಾಟರ್ಗಳಾದ ಜೋಸ್ ಬಟ್ಲರ್ ಅಥವಾ ಯಶಸ್ವಿ ಜೈಸ್ವಾಲ್ ಅವರನ್ನು ಆರೆಂಜ್ ಕ್ಯಾಪ್ ಗೆಲ್ಲುವ ಆಟಗಾರರನ್ನಾಗಿ ಯುಜ್ವೇಂದ್ರ ಚಾಹಲ್ ಆಯ್ಕೆ ಮಾಡಿದರು.
ತನ್ನ ಯೂಟ್ಯೂಬ್ ಚಾನೆಲ್ 'ಜೋಕರ್ಕಿಹವೇಲಿ'ಯಲ್ಲಿನ ವಿಡಿಯೋದಲ್ಲಿ, ಇಸ್ಪೋರ್ಟ್ಸ್ ಸ್ಟ್ರೀಮರ್ ಗುಲ್ರೆಜ್ ಖಾನ್ ಅವರು ಮುಂಬರುವ ಐಪಿಎಲ್ ಋತುವಿನ ಅಗ್ರ ರನ್-ಸ್ಕೋರರ್ನನ್ನು ಆಯ್ಕೆ ಮಾಡಲು ಕೇಳಿದರು. ಇದಕ್ಕೆ ಯುಜ್ವೇಂದ್ರ ಚಾಹಲ್ ತಮಾಷೆಯಾಗಿ ಮೊದಲು ತಮ್ಮನ್ನು ಆಯ್ಕೆ ಮಾಡಿಕೊಂಡರೂ, ನಂತರ "ಆರೆಂಜ್ ಕ್ಯಾಪ್ ಯಶಸ್ವಿ ಜೈಸ್ವಾಲ್ ಅಥವಾ ಜೋಸ್ ಬಟ್ಲರ್ಗೆ ಹೋಗುತ್ತದೆ," ಎಂದು ಯುಜ್ವೇಂದ್ರ ಚಹಾಲ್ ಹೇಳಿದರು.
ಇನ್ನು ಪ್ರಮುಖ ವಿಕೆಟ್ ಟೇಕರ್ ಬೌಲರ್ನನ್ನು ಊಹಿಸಲು ಯುಜ್ವೇಂದ್ರ ಚಹಾಲ್ ಅವರನ್ನು ಕೇಳಲಾಯಿತು. ಇದಕ್ಕೆ ಅವರು ಸ್ವತಃ ತಮ್ಮನ್ನೇ ಆಯ್ಕೆ ಮಾಡಿದರು. ಎರಡನೇ ಸ್ಥಾನಕ್ಕೆ ಗುಜರಾತ್ ಟೈಟನ್ಸ್ ಸ್ಪಿನ್ನರ್ ರಶೀದ್ ಖಾನ್ ಅವರನ್ನು ಆಯ್ಕೆ ಮಾಡಿದರು.
"ನಾನು ಹೆಚ್ಚು ವಿಕೆಟ್ಗಳನ್ನು ಪಡೆಯುತ್ತೇನೆ. ಎರಡನೆಯದು ರಶೀದ್ ಖಾನ್," ಎಂದು ರಾಜಸ್ಥಾನ್ ರಾಯಲ್ಸ್ ಸ್ಪಿನ್ನರ್ ಯುಜ್ವೇಂದ್ರ ಚಹಾಲ್ ಯೂಟ್ಯೂಬ್ ವಿಡಿಯೋದಲ್ಲಿ ಹೇಳಿದ್ದಾರೆ.

ಇದೇ ವೇಳೆ ಭಾರತದ ಮಾಜಿ ಆರಂಭಿಕ ಬ್ಯಾಟರ್ ಆಕಾಶ್ ಚೋಪ್ರಾ ಅವರು ಲೆಗ್ ಸ್ಪಿನ್ನರ್ ಯುಜ್ವೇಂದ್ರ ಚಹಾಲ್ ಅವರನ್ನು ಬಿಸಿಸಿಐನ ಕೇಂದ್ರ ಒಪ್ಪಂದಗಳಿಂದ ಹೊರಗಿಡುವ ಬಗ್ಗೆ ಆಶ್ಚರ್ಯ ವ್ಯಕ್ತಪಡಿಸಿದರು.
ಯುಜ್ವೇಂದ್ರ ಚಹಾಲ್ರನ್ನು ಹೊರಗಿಡುವುದು ಎಂದರೆ, ಭಾರತ ತಂಡದ ಆಯ್ಕೆ ಸಮಿತಿಯು ಇತರ ಆಯ್ಕೆಗಳನ್ನು ನೋಡುತ್ತಿದೆ ಎಂದು ಹೇಳಿದರು.
"ಯುಜ್ವೇಂದ್ರ ಚಹಾಲ್ ಅವರ ಹೆಸರಿಲ್ಲದಿರುವುದು ನನಗೆ ಸ್ವಲ್ಪ ಆಶ್ಚರ್ಯವಾಗಿದೆ. ಚೇತೇಶ್ವರ ಪೂಜಾರ, ಅಜಿಂಕ್ಯ ರಹಾನೆ ಮತ್ತು ಶಿಖರ್ ಧವನ್ ಅವರ ಹೆಸರು ಇಲ್ಲ. ಅಲ್ಲದೆ ದೀಪಕ್ ಹೂಡಾ ಕೂಡ ಇಲ್ಲ. ಆದರೆ ಯುಜ್ವೇಂದ್ರ ಚಹಾಲ್ ಹೆಸರು ಇಲ್ಲದಿರುವುದು ಏನನ್ನು ಸೂಚಿಸುತ್ತದೆ?, ಬಿಸಿಸಿಐ ಬೇರೆ ದಿಕ್ಕಿನಲ್ಲಿ ನೋಡುತ್ತಿದ್ದಾರೆ ಎಂದು ತೋರುತ್ತಿದೆ," ಎಂದರು.
"ಇದು ಸಿದ್ಧಾಂತದ ದೃಢೀಕರಣವಾಗಿದೆ. ಯುಜ್ವೇಂದ್ರ ಚಹಾಲ್ ಭರವಸೆಯ ಕಿರಣವನ್ನು ಹೊಂದಿರಬಹುದು, ಆದರೆ ಅದು ಆಗುವುದಿಲ್ಲ. ಏಕೆಂದರೆ ಅವರ ಹೆಸರಿಲ್ಲ," ಎಂದು ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ಹೇಳಿದ್ದಾರೆ.
ದೇಶೀಯ ಕ್ರಿಕೆಟ್ ಆಡುವ ನಿರ್ದೇಶನವನ್ನು ನಿರ್ಲಕ್ಷಿಸಿದ ನಂತರ ಇಶಾನ್ ಕಿಶನ್ ಮತ್ತು ಶ್ರೇಯಸ್ ಅಯ್ಯರ್ ಜೋಡಿಯನ್ನು ಬಿಸಿಸಿಐ ಕೇಂದ್ರಿಯ ಗುತ್ತಿಗೆ ಪಟ್ಟಿಯಿಂದ ಹೊರಗಿಡಲಾಗಿದೆ. ಈ ವರ್ಷಕ್ಕೆ ಬಿಸಿಸಿಐನ ತನ್ನ ಕೇಂದ್ರೀಯ ಗುತ್ತಿಗೆ ಆಟಗಾರರನ್ನು ಅನಾವರಣಗೊಳಿಸಿದ್ದರಿಂದ, ನಾಯಕ ರೋಹಿತ್ ಶರ್ಮಾ ಮತ್ತು ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಅಗ್ರ ಬ್ರಾಕೆಟ್ನಲ್ಲಿ ತಮ್ಮ ಸ್ಥಾನವನ್ನು ಉಳಿಸಿಕೊಂಡಿದ್ದಾರೆ.