18ನೇ ಆವೃತ್ತಿಯ ಐಪಿಎಲ್ ಆರಂಭವಾಗಿದೆ. ಈ ಲೀಗ್ನಲ್ಲಿ ಹಲವು ಆಟಗಾರರು ಎಲ್ಲರ ಚಿತ್ತ ಕದ್ದಿದ್ದಾರೆ. ಇನ್ನು ಅನುಭವಿ ಆಟಗಾರರ ತಮ್ಮ ಮೇಲೆ ತಂಡ ಇಟ್ಟ ನಂಬಿಕೆಗೆ ಪೂರಕವಾಗಿ ಆಡುತ್ತಿದ್ದಾರೆ. ಈ ವೇಳೆ ಕರ್ನಾಟಕದ ಆಟಗಾರರು ಸಹ ಈ ಲೀಗ್ನಲ್ಲಿ ತಮ್ಮ ಪ್ರದರ್ಶನ ಮುಂದುವರೆಸಿದ್ದು, ಇನ್ನು ಹಲವರು ತಮ್ಮ ಅವಕಾಶಕ್ಕಾಗಿ ಕಾಯುತ್ತಿದ್ದಾರೆ. ಹಾಗಿದ್ದರೆ, ಐಪಿಎಲ್ನಲ್ಲಿ ಸದ್ದು ಮಾಡುತ್ತಿರುವ ಕರ್ನಾಟಕದ ಆಟಗಾರರ ಬಗ್ಗೆ ವರದಿ ಇಲ್ಲಿದೆ.
ಈ ಬಾರಿಯ ಐಪಿಎಲ್ನಲ್ಲಿ 13 ಕನ್ನಡಿಗ ಆಟಗಾರರು ಬೇರೆ ಬೇರೆ ಫ್ರಾಂಚೈಸಿಗಳ ಪರ ಕಣಕ್ಕೆ ಇಳಿದಿದ್ದಾರೆ. ಈ ಆಟಗಾರರು ತಮ್ಮ ನೈಜ್ಯ ಆಟವಾಡಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತಿದ್ದಾರೆ. ಹೆಚ್ಚು ಆಟಗಾರರು ಇನ್ನು ಬೆಂಚ್ ಕಾಯುತ್ತಿದ್ದಾರೆ. ಈ ವರದಿಯಲ್ಲಿ ಯಾವ ತಂಡದ ಬಳಿ ಕನ್ನಡಿಗ ಆಟಗಾರರು ಇದ್ದಾರೆ. ಅವರು ನೀಡುತ್ತಿರುವ ಪ್ರದರ್ಶನ ಹೇಗೆದೆ ಎಂಬ ಬಗ್ಗೆ ವರದಿ ಇಲ್ಲಿದೆ.

ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ ಅತಿ ಹೆಚ್ಚು ಕನ್ನಡಿಗರು ಇದ್ದಾರೆ. ಆರ್ಸಿಬಿ, ಪಂಜಾಬ್ ಕಿಂಗ್ಸ್, ಕೆಕೆಆರ್ ತಂಡದಲ್ಲಿ ತಲಾ ಇಬ್ಬರು ಆಟಗಾರರು ಇದ್ದಾರೆ. ಉಳಿದಂತೆ ಗುಜರಾತ್, ಮುಂಬೈ ಇಂಡಿಯನ್ಸ್, ಚೆನ್ನೈ ಸೂಪರ್ ಕಿಂಗ್ಸ್, ಎಸ್ಆರ್ಎಚ್ ತಂಡಗಳಲ್ಲಿ ತಲಾ ಒಬ್ಬರು ಇದ್ದಾರೆ. ಆದರೆ ಈ ಎಲ್ಲ ಆಟಗಾರರಿಗೆ ಇನ್ನು ಅವಕಾಶ ಸಿಕ್ಕಿಲ್ಲ. ಈಗ ಸಿಕ್ಕ ಅವಕಾಶದಲ್ಲಿ ಮಿಂಚಿದ ಆಟಗಾರರ ಪಟ್ಟಿಯಲ್ಲಿ ಪ್ರಸಿದ್ಧ ಕೃಷ್ಣ ಹಾಗೂ ಕೆಎಲ್ ರಾಹುಲ್, ದೇವದತ್ ಪಡಿಕ್ಕಲ್ ಎದ್ದು ಕಾಣುತ್ತಾರೆ.
ಕೆಎಲ್ ರಾಹುಲ್ ಅವರನ್ನು ಡೆಲ್ಲಿ ಕ್ಯಾಪಿಟಲ್ಸ್ ಭಾರೀ ಮೊತ್ತವನ್ನು ನೀಡಿ ತಂಡಕ್ಕೆ ಬರ ಮಾಡಿಕೊಂಡಿದೆ. ಈ ವೇಳೆ ಇವರು ಸಿಕ್ಕ ಅವಕಾಶದಲ್ಲಿ ಮಿಂಚುತ್ತಿರು ಆಟಗಾರ. ಈ ಐಪಿಎಲ್ನಲ್ಲಿ ಇವರು ಆಡಿದ 2 ಪಂದ್ಯಗಳಲ್ಲಿ 46ರ ಸರಾಸರಿಯಲ್ಲಿ 92 ರನ್ ಸಿಡಿಸಿದ್ದಾರೆ. ಈ ವೇಳೆ ಒಂದು ಅರ್ಧಶತಕ ಸಹ ಮೂಡಿ ಬಂದಿದೆ. ಈ ಸ್ಥಿರ ಪ್ರದರ್ಶನವನ್ನು ಇವರು ಮುಂದುವರೆಸುವ ವಿಶ್ವಾಸ ಹೊಂದಿದ್ದಾರೆ.

ಪ್ರಸಕ್ತ ಐಪಿಎಲ್ನಲ್ಲಿ ಅಮೋಘ ಫಾರ್ಮ್ನಲ್ಲಿ ಕಾಣಿಸಿಕೊಂಡಿರುವ ಇನ್ನೊಬ್ಬ ಕನ್ನಡಿಗ ಎಂದರೆ ಪ್ರಸಿದ್ಧ ಕೃಷ್ಣ. ಈ ಬಾರಿ ಇವರು ತಮ್ಮ ಲೈನ್ ಹಾಗೂ ಲೆಂಥ್ ಮೇಲೆ ಕಂಟ್ರೋಲ್ ಇಟ್ಟುಕೊಂಡಿದ್ದು ಸೊಗಸಾದ ದಾಳಿಯನ್ನು ಸಂಘಟಿಸುತ್ತಿದ್ದಾರೆ. ಗುಜರಾತ್ ಟೈಟನ್ಸ್ ತಂಡಕ್ಕೆ ಇವರು ಸದ್ಯ ದೊಡ್ಡ ಅಸ್ತ್ರವಾಗಿದ್ದಾರೆ. ಇವರು ಆಡಿದ 4 ಪಂದ್ಯಗಳಲ್ಲಿ 5 ವಿಕೆಟ್ ಕಬಳಿಸಿದ್ದು ಭರವಸೆ ಮೂಡಿಸಿದ್ದಾರೆ.
ಐಪಿಎಲ್ನಲ್ಲಿ ಭರ್ಜರಿ ಪ್ರದರ್ಶನ ನೀಡುತ್ತಿರುವ ಇನ್ನೋಬ್ಬ ಆಟಗಾರ ವಿಜಯ್ ಕುಮಾರ್ ವೈಶಾಖ್. ಇವರು ಗುಜರಾತ್ ಟೈಟನ್ಸ್ ವಿರುದ್ಧದ ಪಂದ್ಯದ ಡೆತ್ ಓವರ್ಗಳಲ್ಲಿ ಬಿಗುವಿನ ದಾಳಿ ನಡೆಸಿ ಗಮನ ಸೆಳೆದ ಪ್ರತಿಭೆ ಇವರು ಈ ಪಂದ್ಯದಲ್ಲಿ ವಿಕೆಟ್ ಪಡೆಯಲಿಲ್ಲ. ಆದರೆ ಬಿಗುವಿನ ದಾಳಿಯ ಮೂಲಕ ಇವರು ಗಮನ ಸೆಳೆದಿದ್ದಾರೆ. ಆದರೆ ಈ ಪಂದ್ಯದ ಬಳಿಕ ಇವರಿಗೆ ಅವಕಾಶಗಳು ಸಿಗುತ್ತಿಲ್ಲ.
ಐಪಿಎಲ್ನಲ್ಲಿ ಸದ್ಯ ಆರ್ಸಿಬಿ ತಂಡದ ಪರ ಆಡುತ್ತಿರುವ ಪ್ರತಿಭೆ. ಇವರು ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿ ತಂಡದ ಮೊತ್ತವನ್ನು ಹಿಗ್ಗಿಸಿ, ಆರಂಭಿಕರಿಗೆ ಉತ್ತಮ ಸಾಥ್ ನೀಡುವ ಜವಾಬ್ದಾರಿ ನೀಡಲಾಗಿದೆ. ಇದನ್ನು ಇವರು ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದಾರೆ. ಇವರು ಆಡಿದ 4 ಪಂದ್ಯಗಳಲ್ಲಿ 78 ರನ್ ಸಿಡಿಸಿದ್ದಾರೆ.
ಮನೀಶ್ ಪಾಂಡೆ ಒಂದೇ ಪಂದ್ಯ ಆಡುವ ಅವಕಾಶ ಪಡೆದು 19 ರನ್ ಸಿಡಿಸಿದ್ದಾರೆ. ಇನ್ನು ಅಭಿನವ್ ಮನೋಹರ್ ಎಸ್ಆರ್ಎಚ್ ಪರ ಬ್ಯಾಟ್ ಮಾಡಿ ರನ್ ಬರ ಅನುಭವಿಸುತ್ತಿದ್ದಾರೆ. ಕರುಣ್ ನಾಯರ್, ಶ್ರೇಯಸ್ ಗೋಪಾಲ್ ಸೇರಿದಂತೆ ಹಲವು ಆಟಗಾರರು ಅವಕಾಶಕ್ಕಾಗಿ ಕಾಯುತ್ತಿದ್ದಾರೆ.