ಅಜಿಂಕ್ಯ ರಹಾನೆ ನಾಯಕತ್ವದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವು ಐಪಿಎಲ್ 2025 ರ 15 ನೇ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡವನ್ನು 80 ರನ್ಗಳಿಂದ ಸೋಲಿಸಿತು. ವೆಂಕಟೇಶ್ ಅಯ್ಯರ್ 29 ಎಸೆತಗಳಲ್ಲಿ 60 ರನ್ ಗಳಿಸುವ ಮೂಲಕ ಕೆಕೆಆರ್ ತಂಡದ ಎರಡನೇ ಗೆಲುವಿನಲ್ಲಿ ದೊಡ್ಡ ಪಾತ್ರ ವಹಿಸಿದರು. ಈ ಗೆಲುವಿನ ನಂತರ, ವೆಂಕಟೇಶ್ ಅಯ್ಯರ್ ಟೀಕೆಕಾರರ ಬಾಯಿ ಮುಚ್ಚಿಸಿದ್ದಾರೆ. ಅವರು ಮೆಗಾ ಹರಾಜಿನಲ್ಲಿ ಪಡೆದ ಮೊತ್ತಕ್ಕೆ ತಮ್ಮ ಫಾರ್ಮ್ ಅನ್ನು ಟೀಕಿಸುತ್ತಿದ್ದವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಐಪಿಎಲ್ 2025 ರ ಮೆಗಾ ಹರಾಜಿನಲ್ಲಿ ಕೆಕೆಆರ್ ರೈಟ್ ಟು ಮ್ಯಾಚ್ ಕಾರ್ಡ್ ಬಳಸಿ ವೆಂಕಟೇಶ್ ಅಯ್ಯರ್ ಅವರನ್ನು 23.75 ಕೋಟಿ ರೂ.ಗಳಿಗೆ ತಂಡಕ್ಕೆ ಮತ್ತೆ ಸೇರಿಸಿಕೊಂಡಿತ್ತು. ಆದರೆ ಮೊದಲ ಎರಡು ಪಂದ್ಯಗಳಲ್ಲಿ ಅವರು ಕೇವಲ 9 ರನ್ ಗಳಿಸಲು ಮಾತ್ರ ಸಾಧ್ಯವಾಯಿತು. ಸನ್ರೈಸರ್ಸ್ ಹೈದರಾಬಾದ್ ವಿರುದ್ಧ 29 ಎಸೆತಗಳಲ್ಲಿ 60 ರನ್ ಗಳಿಸುವ ಮೂಲಕ ತಮ್ಮ ತಂಡದ 80 ರನ್ಗಳ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

ಪಂದ್ಯದ ಬಳಿಕ ಮಾತನಾಡಿರುವ ವೆಂಕಟೇಶ್ ಅಯ್ಯರ್, ನಾನು ಸುಳ್ಳು ಹೇಳುವುದಿಲ್ಲ, ಸ್ವಲ್ಪ ಒತ್ತಡವಿದೆ. ನೀವು ಇದರ ಬಗ್ಗೆ ತುಂಬಾ ಚರ್ಚಿಸುತ್ತಿದ್ದೀರಿ. ಆದರೆ ಕೆಕೆಆರ್ನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಆಟಗಾರನಾಗಿರುವುದರಿಂದ ನಾನು ಪ್ರತಿ ಪಂದ್ಯದಲ್ಲೂ ರನ್ ಗಳಿಸಬೇಕು ಎಂದರ್ಥವಲ್ಲ.
ತಂಡಕ್ಕಾಗಿ ಅದ್ಭುತ ಪ್ರದರ್ಶನ ನೀಡುವುದರ ಮೇಲೆ ನನ್ನ ಗಮನವಿದೆ ಎಂದು ಹೇಳಿದ್ದಾರೆ.
ನಾನು ತಂಡಕ್ಕಾಗಿ ಪಂದ್ಯಗಳನ್ನು ಹೇಗೆ ಗೆಲ್ಲಿಸಬೇಕು ಮತ್ತು ಯಾವ ರೀತಿ ಪಂದ್ಯದ ಮೇಲೆ ಪ್ರಭಾವ ಬೀರಬೇಕು ಎಂಬುದರ ಬಗ್ಗೆ ನನ್ನ ಗಮನವಿದೆ. ನಾನು ಎಷ್ಟು ಹಣ ಪಡೆಯುತ್ತಿದ್ದೇನೆ ಅಥವಾ ಎಷ್ಟು ರನ್ ಗಳಿಸುತ್ತಿದ್ದೇನೆ ಎಂಬುದರ ಬಗ್ಗೆ ಯಾವುದೇ ಒತ್ತಡವಿಲ್ಲ. ನನ್ನ ಮೇಲೆ ಅಂತಹ ಒತ್ತಡ ಎಂದಿಗೂ ಬಂದಿಲ್ಲ ಎಂದು ವೆಂಕಟೇಶ್ ಅಯ್ಯರ್ ತಿಳಿಸಿದ್ದಾರೆ.
ಕೆಕೆಆರ್ನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಆಟಗಾರ ಎಂಬ ಒತ್ತಡ ಕೊನೆಗೂ ದೂರವಾಗಿದೆಯೇ ಎಂದು ಪ್ರಶ್ನೆ ಕೇಳಿದಾಗ, ಐಪಿಎಲ್ ಆರಂಭದಿಂದಲೂ ನಾನು ಹೇಳುತ್ತಾ ಬಂದಿದ್ದೇನೆ. ನಿಮಗೆ 20 ಲಕ್ಷ ರೂಪಾಯಿ ಸಿಗುತ್ತಿದೆಯೋ ಅಥವಾ 20 ಕೋಟಿ ರೂಪಾಯಿ ಸಿಗುತ್ತಿದೆಯೋ ಎಂಬುದು ಮುಖ್ಯವಲ್ಲ. ನಾನು ತಂಡದ ಗೆಲುವಿಗೆ ಕೊಡುಗೆ ನೀಡಲು ಬಯಸುವ ತಂಡದ ಆಟಗಾರ ಎಂದು ಉತ್ತರಿಸಿದ್ದಾರೆ.
ಕೆಲವೊಮ್ಮೆ ನಾವು ಕಠಿಣ ಸಂದರ್ಭಗಳನ್ನು ಎದುರಿಸುತ್ತೇವೆ, ಅಲ್ಲಿ ನನ್ನ ಕೆಲಸ ಕೆಲವು ಓವರ್ಗಳನ್ನು ಆಡುವುದಾಗಿರುತ್ತದೆ. ನಾನು ಹಾಗೆ ಮಾಡಿ ರನ್ ಗಳಿಸದಿದ್ದರೂ ಸಹ, ನಾನು ಇನ್ನೂ ನನ್ನ ತಂಡಕ್ಕೆ ಕೊಡುಗೆ ನೀಡಿದ್ದೇನೆ. ಆಕ್ರಮಣಕಾರಿ ಬ್ಯಾಟಿಂಗ್ ಎಂದರೆ ಪ್ರತಿ ಚೆಂಡಿನಲ್ಲೂ ಸಿಕ್ಸರ್ ಹೊಡೆಯುವುದಲ್ಲ. ಬ್ಯಾಟಿಂಗ್ನಲ್ಲಿ ಪಾಸಿಟಿವ್ ಉದ್ದೇಶಗಳನ್ನು ತೋರಿಸುವುದು ಎಂದು ವೆಂಕಟೇಶ್ ಹೇಳಿದ್ದಾರೆ.