ಐಪಿಎಲ್ 2025 ರ 16ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಲಕ್ನೋ ಸೂಪರ್ ಜೈಂಟ್ಸ್ 12 ರನ್ಗಳಿಂದ ಸೋಲಿಸಿತು. 203 ರನ್ ಗಳಿಸಿದ ನಂತರ, ಲಕ್ನೋ ಬೌಲರ್ಗಳು ಡೆತ್ ಓವರ್ಗಳಲ್ಲಿ ಉತ್ತಮವಾಗಿ ಬೌಲಿಂಗ್ ಮಾಡಿ ತಂಡಕ್ಕೆ ಎರಡನೇ ಗೆಲುವು ತಂದುಕೊಟ್ಟರು. ಐಪಿಎಲ್ 2025 ರಲ್ಲಿ ಮುಂಬೈ ಇಂಡಿಯನ್ಸ್ ತಮ್ಮ ಮೂರನೇ ಸೋಲನ್ನು ಎದುರಿಸಬೇಕಾಯಿತು. ಹಾರ್ದಿಕ್ ಪಾಂಡ್ಯ ಮತ್ತು ಸೂರ್ಯಕುಮಾರ್ ಯಾದವ್ ಮುಂಬೈಗೆ ಗೆಲುವು ತಂದುಕೊಡಲು ಶಕ್ತಿ ಮೀರಿ ಪ್ರಯತ್ನಿಸಿದರೂ ಲಕ್ನೋ ಬೌಲರ್ಗಳನ್ನು ಹತ್ತಿಕ್ಕಲು ಸಾಧ್ಯವಾಗಲಿಲ್ಲ. ಗುರಿ ಬೆನ್ನಟ್ಟಿದ ಮುಂಬೈ ತಂಡವು 20 ಓವರ್ಗಳಲ್ಲಿ 5 ವಿಕೆಟ್ಗೆ 191 ರನ್ ಗಳಿಸಲಷ್ಟೇ ಶಕ್ತವಾಯಿತು.
ಟಾಸ್ ಗೆದ್ದ ಮುಂಬೈ ಇಂಡಿಯನ್ಸ್ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ ಲಕ್ನೋ ಸೂಪರ್ ಜೈಂಟ್ಸ್, ಮಿಚೆಲ್ ಮಾರ್ಷ್ (60 ರನ್) ಮತ್ತು ಐಡೆನ್ ಮಾರ್ಕ್ರಾಮ್ (53 ರನ್) ಅವರ ಅರ್ಧಶತಕಗಳ ನೆರವಿನಿಂದ 20 ಓವರ್ಗಳಲ್ಲಿ 8 ವಿಕೆಟ್ಗೆ 203 ರನ್ ಗಳಿಸಿತು. ಮುಂಬೈ ಇಂಡಿಯನ್ಸ್ ಗೆಲ್ಲಲು 204 ರನ್ಗಳ ಗುರಿ ಪಡೆಯಿತು.

ಲಕ್ನೋ ನೀಡಿದ 204 ರನ್ಗಳ ಗುರಿಯನ್ನು ಬೆನ್ನಟ್ಟುವ ಮುಂಬೈ ಇಂಡಿಯನ್ಸ್ ತಂಡದ ಆರಂಭ ಉತ್ತಮವಾಗಿರಲಿಲ್ಲ. ತಂಡವು 2.2 ಓವರ್ಗಳಲ್ಲಿ 17 ರನ್ಗಳ ಒಳಗೆ ಎರಡು ವಿಕೆಟ್ಗಳನ್ನು ಕಳೆದುಕೊಂಡಿತು. ಆದಾಗ್ಯೂ, ಮೂರು ಮತ್ತು ನಾಲ್ಕನೇ ಕ್ರಮಾಂಕದಲ್ಲಿ ಬಂದ ನಮನ್ ಧೀರ್ (46) ಮತ್ತು ಸೂರ್ಯಕುಮಾರ್ ಯಾದವ್ (67) ಅವರ ಉತ್ತಮ ಜೊತೆಯಾಟ ಆಡಿದರು. ಕೊನೆಯಲ್ಲಿ ನಾಯಕ ಹಾರ್ದಿಕ್ ಪಾಂಡ್ಯ ಅಜೇಯ 28 (16) ಗಳಿಸಿದರೂ ತಂಡವನ್ನು ಗೆಲುವಿನತ್ತ ಕೊಂಡೊಯ್ಯಲು ಸಾಧ್ಯವಾಗಲಿಲ್ಲ. ಪರಿಣಾಮ ಮುಂಬೈ ತಂಡವು 191 ರನ್ಗಳನ್ನು ಮಾತ್ರ ಗಳಿಸಲು ಸಾಧ್ಯವಾಯಿತು.
ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್ಗೆ ಇಳಿದ ಲಕ್ನೋ ಸೂಪರ್ ಜೈಂಟ್ಸ್ ಪರ ಆರಂಭಿಕ ಬ್ಯಾಟರ್ಗಳಾದ ಮಿಚೆಲ್ ಮಾರ್ಷ್ (60) ಮತ್ತು ಐಡೆನ್ ಮಾರ್ಕ್ರಾಮ್ (53) ಅವರ ಅರ್ಧಶತಕಗಳ ನೆರವಿನಿಂದ 200 ರನ್ಗಳ ಗಡಿ ದಾಟಿತು. ಮಾರ್ಷ್-ಮಾರ್ಕ್ರಾಮ್ ಹೊರತುಪಡಿಸಿ, ಆಯುಷ್ ಬಡೋನಿ 30 ರನ್ ಮತ್ತು ಡೇವಿಡ್ ಮಿಲ್ಲರ್ 27 ರನ್ ಗಳಿಸಿದರು. ಮುಂಬೈ ಇಂಡಿಯನ್ಸ್ ಪರ ನಾಯಕ ಹಾರ್ದಿಕ್ ಪಾಂಡ್ಯ ಅದ್ಭುತ ಬೌಲಿಂಗ್ ಮಾಡಿ 5 ವಿಕೆಟ್ ಕಬಳಿಸಿದರು.
ಕೊನೆಯ ಎರಡು ಓವರ್ಗಳಲ್ಲಿ ಮುಂಬೈ ಗೆಲುವಿಗೆ 29 ರನ್ಗಳು ಬೇಕಾಗಿದ್ದವು. 19ನೇ ಓವರ್ನಲ್ಲಿ ಶಾರ್ದೂಲ್ ಠಾಕೂರ್ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು. ತಮ್ಮ ಅನುಭವವನ್ನು ಬಳಸಿಕೊಂಡು, ಅವರು ಸತತ ಯಾರ್ಕರ್ಗಳನ್ನು ಹಾಕಿದರು. ಹೀಗಾಗಿ ಹಾರ್ದಿಕ್ ಪಾಂಡ್ಯ ಮತ್ತು ತಿಲಕ್ ವರ್ಮಾ ಬಿಗ್ ಶಾಟ್ ಆಡಲು ಸಾಧ್ಯವಾಗಲಿಲ್ಲ.
ತಿಲಕ್ ಔಟಾದ ನಂತರ ಕೊನೆಯ ಓವರ್ನಲ್ಲಿ ಮುಂಬೈಗೆ 22 ರನ್ಗಳು ಬೇಕಾಗಿದ್ದವು. ಆವೇಶ್ ಖಾನ್ ಕೇವಲ 9 ರನ್ ನೀಡುವ ಮೂಲಕ ಲಕ್ನೋ ತಂಡದ ಗೆಲುವು ತಂದು ಕೊಟ್ಟರು. ಹಾರ್ದಿಕ್ ಪಾಂಡ್ಯ ಮೊದಲ ಎಸೆತದಲ್ಲಿ ಸಿಕ್ಸರ್ ಬಾರಿಸುವ ಮೂಲಕ ಕೊನೆಯ ಓವರ್ ಅನ್ನು ಆರಂಭಿಸಿದರು. ಆದರೆ ಮುಂದಿನ ಎಸೆತದಲ್ಲಿ ಬೌಂಡರಿ ಬಾರಿಸುವಲ್ಲಿ ವಿಫಲರಾದರು. ಆವೇಶ್ ಅವರ ಯಾರ್ಕರ್ಗಳಿಗೆ ಪಾಂಡ್ಯ ಬಳಿಯೂ ಉತ್ತರವಿರಲಿಲ್ಲ.