ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2025ರ ಟೂರ್ನಿಗೂ ಮುನ್ನ ಮೆಗಾ ಹರಾಜು ಪ್ರಕ್ರಿಯೆ ನಡೆಯಲಿದೆ. ಇದಕ್ಕಾಗಿ ಐಪಿಎಲ್ ಫ್ರಾಂಚೈಸಿ ತಂಡಗಳು ಆಟಗಾರರನ್ನು ಉಳಿಸಿಕೊಳ್ಳಲು ಅಕ್ಟೋಬರ್ 31 ಕೊನೆಯ ದಿನವಾಗಿದೆ. ಹೀಗಿರುವಾಗ ತಮ್ಮ ನೆಚ್ಚಿನ ತಂಡ ಯಾವ ಆಟಗಾರರನ್ನು ಉಳಿಸಿಕೊಳ್ಳಲಿದೆ ಎಂಬ ಕುತೂಹಲ ಅಭಿಮಾನಿಗಳಲ್ಲಿ ಹೆಚ್ಚುತ್ತಿದೆ.
ಐಪಿಎಲ್ 2025ರ ಟೂರ್ನಿಗೆ ಎಲ್ಲಾ 10 ಫ್ರಾಂಚೈಸಿಗಳು 6 ಆಟಗಾರರನ್ನು ಉಳಿಸಿಕೊಳ್ಳಲು ಅವಕಾಶವನ್ನು ಹೊಂದಿವೆ. ಈ ಸಂದಭದಲ್ಲಿ ತಂಡಗಳು ರೈಟ್ ಟು ಮ್ಯಾಚ್ ಕಾರ್ಡ್ ಅನ್ನು ಸಹ ಬಳಸಲು ಅವಕಾಶವನ್ನು ಬಿಸಿಸಿಐ ನೀಡಿದೆ.

ಐಪಿಎಲ್ 2024ರ ಚಾಂಪಿಯನ್ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಯಾವ 6 ಆಟಗಾರರನ್ನು ಉಳಿಸಿಕೊಳ್ಳುತ್ತಾರೆ? ಎಂಬುದನ್ನು ತಿಳಿದುಕೊಳ್ಳಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.
ಹೀಗಿರುವಾಗ ಕೆಕೆಆರ್ ಮತ್ತು ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಬ್ರಾಡ್ ಹಾಗ್ ಅವರು ಭವಿಷ್ಯ ನುಡಿದಿದ್ದಾರೆ. ತನ್ನ ಯೂಟ್ಯೂಬ್ ಚಾನೆಲ್ನಲ್ಲಿ ಮಾತನಾಡಿರುವ ಬ್ರಾಡ್ ಹಾಗ್, ಕೆಕೆಆರ್ ಉಳಿಸಿಕೊಳ್ಳುವ 6 ಸಂಭಾವ್ಯ ಆಟಗಾರರ ಹೆಸರನ್ನು ಬಹಿರಂಗಪಡಿಸಿದ್ದಾರೆ.
ಐಪಿಎಲ್ 2025ರ ಟೂರ್ನಿಗಾಗಿ ಕೆಕೆಆರ್ ಈ 6 ಆಟಗಾರರನ್ನು ಉಳಿಸಿಕೊಳ್ಳಬಹುದು ಎಂದು ಬ್ರಾಡ್ ಹಾಗ್ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಕೋಲ್ಕತ್ತಾ ನೈಟ್ ರೈಡರ್ಸ್ ಮೊದಲು ನಾಯಕ ಶ್ರೇಯಸ್ ಅಯ್ಯರ್ ಅವರನ್ನು ಉಳಿಸಿಕೊಳ್ಳಲಿದೆ. ಇದರ ನಂತರ ತಂಡವು ವೆಸ್ಟ್ ಇಂಡೀಸ್ ಸ್ಟಾರ್ ಆಲ್ ರೌಂಡರ್ ಗಳಾದ ಸುನಿಲ್ ನಾರಾಯಣ್ ಮತ್ತು ಆಂಡ್ರೆ ರಸೆಲ್ ಅವರನ್ನು ಉಳಿಸಿಕೊಳ್ಳಬಹುದು. ಈ ಇಬ್ಬರೂ ಆಟಗಾರರು ಬೌಲಿಂಗ್ ಮತ್ತು ಬ್ಯಾಟಿಂಗ್ ಎರಡರಲ್ಲೂ ತಂಡಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಇವರೊಂದಿಗೆ ಕೆಕೆಆರ್, ಸ್ಪಿನ್ನರ್ ವರುಣ್ ಚಕ್ರವರ್ತಿ, ಫಿನಿಶ್ ರಿಂಕು ಸಿಂಗ್ ಮತ್ತು ವೇಗಿ ಹರ್ಷಿತ್ ರಾಣಾ ಅವರನ್ನೂ ಉಳಿಸಿಕೊಳ್ಳಬಹುದು ಎಂದು ಬ್ರಾಡ್ ಹಾಗ್ ತಿಳಿಸಿದ್ದಾರೆ.
ಇತ್ತೀಚೆಗಷ್ಟೇ ಹರ್ಷಿತ್ ಟೀಮ್ ಇಂಡಿಯಾದಲ್ಲಿಯೂ ಸ್ಥಾನ ಪಡೆದಿದ್ದಾರೆ. ಸದ್ಯ ಅವರು ಮುಂಬರುವ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಗೆ ಭಾರತ ತಂಡಕ್ಕೆ ಆಯ್ಕೆಯಾಗಿದ್ದಾರೆ. ರಿಂಕು ಸಿಂಗ್ ಮತ್ತು ವರಣ್ ಚಕ್ರವರ್ತಿ ಕಳೆದ ಹಲವು ಆವೃತ್ತಿಗಳಿಂದ ಕೆಕೆಆರ್ನ ಪ್ರಮುಖ ಆಟಗಾರರಾಗಿದ್ದಾರೆ. ಜೊತೆಗೆ ಇತ್ತೀಚೆಗೆ ನಡೆದ ಬಾಂಗ್ಲಾದೇಶ ವಿರುದ್ಧ ಟಿ20 ಸರಣಿಯಲ್ಲಿ ರಿಂಕು ಸಿಂಗ್ ಮತ್ತು ವರಣ್ ಚಕ್ರವರ್ತಿ ಅದ್ಭುತ ಪ್ರದರ್ಶನ ನೀಡಿದ್ದಾರೆ.
ಕೆಕೆಆರ್ ಫ್ರಾಂಚೈಸಿ ತಾವು ಉಳಿಸಿಕೊಳ್ಳುವ ಆಟಗಾರರ ಬಗ್ಗೆ ಯಾವುದೇ ಮಾಹಿತಿಯನ್ನು ಬಹಿರಂಗಪಡಿಸಿಲ್ಲ. ಅಕ್ಟೋಬರ್ 31 ರಂದು ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಸಿಗಲಿದೆ.