ಐಪಿಎಲ್ 2025ರ ಮೆಗಾ ಹರಾಜು ಪ್ರಕ್ರಿಯೆಗೆ ಭಾರತೀಯ ಕ್ರಿಕೆಟ್ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಸ್ಟಾರ್ ಆಟಗಾರರು ಐಪಿಎಲ್ ಮೆಗಾ ಹರಾಜು ಪ್ರಕ್ರಿಯೆಯಲ್ಲಿ ಅದೃಷ್ಟ ಪರೀಕ್ಷೆ ಇಳಿದಿದ್ದಾರೆ. ಕಳೆದ ಬಾರಿ ಐಪಿಎಲ್ ನಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಚಾಂಪಿಯನ್ ಪಟ್ಟಕ್ಕೆ ಏರಿಸಿದ ನಾಯಕ ಶ್ರೇಯಸ್ ಕೂಡ ಹರಾಜಿನ ಅಂಗಳದಲ್ಲಿ ಇದ್ದಾರೆ. ತಮ್ಮ ಮೌಲ್ಯವನ್ನು ಹೆಚ್ಚಿಸಿಕೊಳ್ಳುಲು ಐಪಿಎಲ್ ಮೆಗಾ ಹರಾಜು ಅಖಾಡಕ್ಕೆ ಇಳಿದಿದ್ದಾರೆ. ಈಗ ಹರಾಜು ಪ್ರಕ್ರಿಯೆಗೆ ಮೊದಲು ಶ್ರೇಯಸ್ ಅಯ್ಯರ್ ರಣಜಿ ಟ್ರೋಫಿ ಟೂರ್ನಿಯಲ್ಲಿ ಅಬ್ಬರಿಸಿದ್ದಾರೆ.
ಗುರುವಾರ ಎಂಸಿಎ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ ಮೈದಾನದಲ್ಲಿ ನಡೆದ ಒಡಿಶಾ ವಿರುದ್ಧದ ಪಂದ್ಯದಲ್ಲಿ ಮುಂಬೈ ಪರ ಶ್ರೇಯಸ್ ಅಯ್ಯರ್ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದ್ದಾರೆ. ಈ ವೇಳೆ ಭರ್ಜರಿ ದ್ವಿಶತಕ ಸಿಡಿಸಿ ಸಂಭ್ರಮಿಸಿದ್ದಾರೆ. ರಣಜಿ ಟ್ರೋಫಿಯಲ್ಲಿ ತಮ್ಮ ವೃತ್ತಿಜೀವನದ ಮೂರನೇ ದ್ವಿಶತಕ ಬಾರಿಸಿ ಅಬ್ಬರಿಸಿದ್ದಾರೆ. ಒಡಿಶಾ ಬೌಲರ್ ಗಳನ್ನು ಬೆಂಡೆತ್ತಿದ ಶ್ರೇಯಸ್ ಮೈದಾನದ ಸುತ್ತಮುತ್ತ ಬೌಂಡರಿ, ಸಿಕ್ಸರ್ ಗಳ ಸುರಿಮಳೆಗೈದರು.

ಶ್ರೇಯಸ್ ಅಯ್ಯರ್ ಎದುರಿಸಿದ 314 ಎಸೆತಗಳಲ್ಲಿ 24 ಬೌಂಡರಿ ಮತ್ತು 9 ಸಿಕ್ಸರ್ ಗಳ ನೆರವಿನಿಂದ 233 ರನ್ ಗಳನ್ನು ಕಲೆ ಹಾಕಿದರು. ಇದು ಅವರ ದೇಶಿಯ ಕ್ರಿಕೆಟ್ ವೃತ್ತಿ ಜೀವನದ ಅತ್ಯಧಿಕ ಗರಿಷ್ಠ ಸ್ಕೋರ್ ಆಗಿದೆ.
ಶ್ರೇಯಸ್ ಅಯ್ಯರ್ ಅವರ ಈ ಅದ್ಭುತ ಇನ್ನಿಂಗ್ಸ್ ಐಪಿಎಲ್ 2025ರ ಮೆಗಾ ಹರಾಜಿನ ಮೊದಲು ಬಂದಿರುವುದು ಅವರಿಗೆ ಲಾಭ ತಂದುಕೊಡುವ ಸಾಧ್ಯತೆ ಇದೆ.
ಏಕೆಂದರೆ ಮೆಗಾ ಹರಾಜು ಪ್ರಕ್ರಿಯೆಯಲ್ಲಿರುವ ಶ್ರೇಯಸ್ ಅಯ್ಯರ್ ಅವರ ಮೇಲೆ ಫ್ರಾಂಚೈಸಿಗಳು ಕಣ್ಣಿಟ್ಟಿವೆ. ಇಂತಹ ಸಂದರ್ಭದಲ್ಲಿ ರಣಜಿ ಟ್ರೋಫಿಯಲ್ಲಿ ಬೊಂಬಾಟ್ ಬ್ಯಾಟಿಂಗ್ ಪ್ರದರ್ಶನ ನೀಡಿರುವ ಶ್ರೇಯಸ್ ಮೆಗಾ ಹರಾಜಿನಲ್ಲಿ ಭಾರಿ ಮೊತ್ತಕ್ಕೆ ಬಿಡ್ ಆಗುವ ಸಾಧ್ಯತೆ ಇದೆ.

ಒಡಿಶಾ ವಿರುದ್ಧದ ರಣಜಿ ಟ್ರೋಫಿ ಪಂದ್ಯದಲ್ಲಿ ಶ್ರೇಯಸ್ ಅಯ್ಯರ್ ಮತ್ತು ಸಿದ್ಧೇಶ್ ಲಾಡ್ ದಾಖಲೆಯ ಜೊತೆಯಾಟ ಆಡಿದ್ದಾರೆ. ಈ ಜೋಡಿ 354 ರನ್ಗಳ ಜೊತೆಯಾಟ ಆಡುವ ಮೂಲಕ ರಣಜಿ ಟ್ರೋಫಿಯಲ್ಲಿ ದಾಖಲೆ ಬರೆದಿದ್ದಾರೆ. ರಣಜಿ ಟ್ರೋಫಿ ಇತಿಹಾಸದಲ್ಲಿ ಮುಂಬೈನ ನಾಲ್ಕನೇ ವಿಕೆಟ್ಗೆ ಗರಿಷ್ಠ ಜೊತೆಯಾಟವಾಗಿದೆ. 2009-10ರಲ್ಲಿ ಗುಜರಾತ್ ವಿರುದ್ಧ ರೋಹಿತ್ ಶರ್ಮಾ ಮತ್ತು ಸುಶಾಂತ್ ಮರಾಠೆ 342 ರನ್ ಜೊತೆ ನೀಡಿದ್ದರು.
ಶ್ರೇಯಸ್ ಅಯ್ಯರ್ ಅವರು ನಾಯಕನಾಗಿಯೂ ಐಪಿಎಲ್ನಲ್ಲಿ ಮಿಂಚಿದ್ದಾರೆ. ಐಪಿಎಲ್ನಲ್ಲಿ ಹಲವು ಫ್ರಾಂಚೈಸಿಗಳಿಗೆ ಈಗ ನಾಯಕರ ಅವಶ್ಯಕತೆ ಇದ್ದು, ಶ್ರೇಯಸ್ ಅಯ್ಯರ್ಗೆ ಬಾಜಿ ಕಟ್ಟಬಹುದು. ಇವರು ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಐಪಿಎಲ್ 2024ರಲ್ಲಿ ಚಾಂಪಿಯನ್ ಪಟ್ಟಕ್ಕೆ ಏರಿಸಿದ್ದರು. ಆದರೆ ಕೆಕೆಆರ್ ಇವರನ್ನು ಉಳಿಸಿಕೊಳ್ಳುವಲ್ಲಿ ವಿಫಲವಾಗಿದ್ದು, ಹರಾಜು ಅಂಗಳಕ್ಕೆ ಬಿಟ್ಟಿದೆ. ಈ ಆಟಗಾರನ ಮೇಲೆ ಐಪಿಎಲ್ ಫ್ರಾಂಚೈಸಿಗಳು ಕಣ್ಣು ನೆಟ್ಟಿವೆ.