ಐಪಿಎಲ್ 2025ರ ಮೆಗಾ ಹರಾಜಿಗೂ ಮುನ್ನ ಆಟಗಾರರನ್ನು ಉಳಿಸಿಕೊಳ್ಳುವ ನಿಯಮಗಳಲ್ಲಿ ಬಿಸಿಸಿಯ ಬದಲಾವಣೆ ಮಾಡಿದೆ. ಈ ವರ್ಷದ ನವೆಂಬರ್ ಕೊನೆಯ ವಾರ ಅಥವಾ ಡಿಸೆಂಬರ್ ಮೊದಲ ವಾರದಲ್ಲಿ ಐಪಿಎಲ್ ಮೆಗಾ ಹರಾಜು ಪ್ರಕ್ರಿಯೆ ನಡೆಯುವ ನಿರೀಕ್ಷೆಯಿದೆ.
ಹೊಸ ಐಪಿಎಲ್ ನಿಯಮಗಳ ಅಡಿಯಲ್ಲಿ ಪ್ರತಿ ಫ್ರಾಂಚೈಸಿ ತಂಡಕ್ಕೆ ಗರಿಷ್ಠ 6 ಆಟಗಾರರನ್ನು ಉಳಿಸಿಕೊಳ್ಳಲು ಅವಕಾಶ ನೀಡಲಾಗಿದೆ. ಆದರೆ ತಂಡವು ಉಳಿಸಿಕೊಳ್ಳಬಹುದಾದ ವಿದೇಶಿ ಆಟಗಾರರ ಸಂಖ್ಯೆಗೆ ಯಾವುದೇ ನಿರ್ಬಂಧವಿಲ್ಲ. ಹೆಚ್ಚುವರಿಯಾಗಿ, ತಂಡಗಳು ಗರಿಷ್ಠ ಐದು ಕ್ಯಾಪ್ಡ್ ಮತ್ತು ಗರಿಷ್ಠ ಇಬ್ಬರು ಅನ್ಕ್ಯಾಪ್ಡ್ ಆಟಗಾರರನ್ನು ಉಳಿಸಿಕೊಳ್ಳಬಹುದು.

ಐಪಿಎಲ್ 2024 ರಲ್ಲಿ ನಿರಾಶಾದಾಯಕ ಪ್ರದರ್ಶನದ ನಂತರ, ಪಂಜಾಬ್ ಕಿಂಗ್ಸ್ ದಿಗ್ಗಜ ರಿಕಿ ಪಾಂಟಿಂಗ್ ಅವರನ್ನು ಹೊಸ ಹೆಡ್ ಕೋಚ್ ಆಗಿ ನೇಮಿಸಿಕೊಂಡಿದ್ದು, ಅವರ ನೇತೃತ್ವದಲ್ಲಿ ತಂಡವನ್ನು ಬಲಪಡಿಸುವ ಗುರಿಯನ್ನು ಇಟ್ಟುಕೊಂಡಿದೆ. ಮತ್ತೊಂದೆಡೆ ಕಳೆದ ತಿಂಗಳು ಶಿಖರ್ ಧವನ್ ಎಲ್ಲಾ ಮಾದರಿ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ ನಂತರ ಪಂಜಾಬ್ ಹೊಸ ನಾಯಕನನ್ನು ಹುಡುಕಾಟದಲ್ಲಿದೆ. ಹೀಗಾಗಿ ಪಂಜಾಬ್ ಹೊಸ ಆಟಗಾರರನ್ನು ಕರೆತರಲು ತಯಾರಿ ನಡೆಸುತ್ತಿದೆ.
ಚೊಚ್ಚಲ ಐಪಿಎಲ್ ಪ್ರಶಸ್ತಿ ಮೇಲೆ ಕಣ್ಣಿಟ್ಟಿರುವ ಪಂಜಾಬ್ ಪಂದ್ಯದ ಗತಿಯನ್ನೇ ಬದಲಾಯಿಸಬಲ್ಲ ಆಟಗಾರರನ್ನು ಮೆಗಾ ಹರಾಜಿನಲ್ಲಿ ಬಿಡ್ ಮಾಡಲು ಸಜ್ಜಾಗಿದೆ. ಆದರೆ ಐಪಿಎಲ್ ಹರಾಜಿಗೂ ಮೊದಲು ಪಂಜಾಬ್ ಫ್ರಾಂಚೈಸಿ ಮುಂದಿರುವ ದೊಡ್ಡ ಸವಾಲೆಂದರೆ ಯಾವ ಆಟಗಾರರನ್ನು ಉಳಿಸಿಕೊಳ್ಳಬೇಕು ಮತ್ತು ಯಾರನ್ನು ಬಿಡಬೇಕು ಎಂಬುದು.
ಪಂಜಾಬ್ ತಂಡದಲ್ಲಿ ಜಾನಿ ಬೈರ್ಸ್ಟೋವ್, ಸ್ಯಾಮ್ ಕರ್ರಾನ್, ಲಿಯಾಮ್ ಲಿವಿಂಗ್ಸ್ಟೋನ್, ರಿಲೆ ರೋಸೊ, ಸಿಕಂದರ್ ರಜಾ, ಅರ್ಷ್ದೀಪ್ ಸಿಂಗ್ ಮತ್ತು ಜಿತೇಶ್ ಶರ್ಮಾ ಸೇರಿದಂತೆ ಹಲವು ಸ್ಟಾರ್ ಆಟಗಾರರಿದ್ದಾರೆ. ಆದರೆ ಕಳೆದ ಐಪಿಎಲ್ ಆವೃತ್ತಿಯಲ್ಲಿ ಅವರಿಂದ ನಿರೀಕ್ಷಿತ ಪ್ರದರ್ಶನ ಬಂದಿಲ್ಲ. ಆದ್ದರಿಂದ ಅನ್ ಕ್ಯಾಪ್ಡ್ ಭಾರತದ ಆಟಗಾರರಾದ ಅಶುತೋಷ್ ಶರ್ಮಾ, ಶಶಾಂಕ್ ಸಿಂಗ್ ಮತ್ತು ಪ್ರಭಾಸಿಮ್ರಾನ್ ಸಿಂಗ್ ಅವರನ್ನು ಉಳಿಸಿಕೊಳ್ಳುವ ಸಾಧ್ಯತೆಯಿದೆ. ಆದರೆ, ಇವರಲ್ಲಿ ಇಬ್ಬರಿಗೆ ಮಾತ್ರ ತಂಡದಲ್ಲಿ ಸ್ಥಾನ ಸಿಗಲಿದೆ.
ಐಪಿಎಲ್ 2024ರಲ್ಲಿ ಈ ಮೂವರು ಅನ್ ಕ್ಯಾಪ್ಡ್ ಆಟಗಾರರು ಪಂಜಾಬ್ ಪರ ಫಿನಿಶರ್ ಆಗಿ ಗುರುತಿಸಿಕೊಂಡಿದ್ದಾರೆ. ಕೆಳ ಕ್ರಮಾಂಕದಲ್ಲಿ ಸ್ಪೋಟಕ ಬ್ಯಾಟಿಂಗ್ ಮಾಡುವ ಸಾಮರ್ಥ್ಯ ಅನ್ ಕ್ಯಾಪ್ಡ್ ಆಟಗಾರರಲ್ಲಿದೆ. ಅದರಿಂದ ಪಂಜಾಬ್ ಭವಿಷ್ಯದ ದೃಷ್ಟಿಯಿಂದ ಇಬ್ಬರು ಅನ್ಕ್ಯಾಪ್ಡ್ ಫಿನಿಶರ್ಗಳನ್ನು ಉಳಿಸಿಕೊಳ್ಳಬಹುದು.
ಇವರಲ್ಲದೆ, ಎಡಗೈ ವೇಗದ ಬೌಲರ್ ಅರ್ಷದೀಪ್ ಸಿಂಗ್ ಅವರನ್ನು ಉಳಿಸಿಕೊಳ್ಳುವುದು ಪಂಜಾಬ್ ಫ್ರಾಂಚೈಸಿ ಮೊದಲ ಆಯ್ಕೆಯಾಗಿದ್ದಾರೆ. ಭಾರತ ಟಿ20 ವಿಶ್ವಕಪ್ ಗೆಲ್ಲಲು ಅರ್ಷದೀಪ್ ಸಿಂಗ್ ಪ್ರಮುಖ ಪಾತ್ರ ವಹಿಸಿದ್ದು, 17 ವಿಕೆಟ್ಗಳನ್ನು ಪಡೆದು ಮಿಂಚಿದ್ದರು. ಜಿತೇಶ್ ಶರ್ಮಾ ಅವರನ್ನು ಉಳಿಸಿಕೊಳ್ಳಿವ ಸಾಧ್ಯತೆಯಿದೆ. ಐದನೇ ಅಥವಾ ಅದಕ್ಕಿಂತ ಕೆಳ ಬ್ಯಾಟಿಂಗ್ ಕ್ರಮಾಂಕದಲ್ಲಿ ತಂಡಕ್ಕೆ ನೆರವಾಗಬಲ್ಲರು.
ಕಳೆದ ಆವೃತ್ತಿಯಲ್ಲಿ ಶಿಖರ್ ಧವನ್ ಅನುಪಸ್ಥಿತಿಯಲ್ಲಿ ತಂಡದ ನಾಯಕರಾಗಿದ್ದ ಸ್ಯಾಮ್ ಕುರ್ರಾನ್ ಮಧ್ಯಮ ಕ್ರಮಾಂಕದಲ್ಲಿ ಉತ್ತಮ ಬ್ಯಾಟಿಂಗ್ ಮಾಡಿದ್ದರು. ಹೀಗಾಗಿ ಅವರನ್ನು ಪಂಜಾಬ್ ಫ್ರಾಂಚೈಸಿ ಉಳಿಸಿಕೊಳ್ಳುವ ಅವಕಾಶವನ್ನು ಹೊಂದಿದೆ. ಇತ್ತೀಚೆಗಷ್ಟೇ ನಡೆದ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಪಂದ್ಯದಲ್ಲಿ ತಮ್ಮ ಬ್ಯಾಟಿಂಗ್ ಕೌಶಲ್ಯ ತೋರಿದ್ದ ಇಂಗ್ಲೆಂಡ್ನ ಲಿಯಾಮ್ ಲಿವಿಂಗ್ ಸ್ಟೋನ್ ಕೂಡ ಪಂಜಾಬ್ ಉಳಿಸಿಕೊಳ್ಳುವ ರೇಸ್ನಲ್ಲಿದ್ದಾರೆ. ಅಲ್ಲದೆ, ವೇಗದ ಬೌಲರ್ ಕಗಿಸೊ ರಬಾಡ ಅವರನ್ನೂ ಉಳಿಸಿಕೊಳ್ಳಬಹುದು.