ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ತಂಡವು ಐಪಿಎಲ್ 2025ರ ಮೆಗಾ ಹರಾಜಿನಲ್ಲಿ ವೆಂಕಟೇಶ್ ಅಯ್ಯರ್ ಅವರನ್ನು 23.75 ಕೋಟಿ ರೂ.ಗೆ ಬಿಡ್ ಮಾಡುವ ಮೂಲಕ ಎಲ್ಲರನ್ನು ಅಚ್ಚರಿಗೊಳಿಸಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ಜೊತೆಗೆ ವೆಂಕಟೇಶ್ ಅಯ್ಯರ್ ಬಿಡ್ ಮಾಡಲು ಕೆಕೆಆರ್ ಪೈಪೋಟಿ ನಡೆಸಿತು. ಆದರೆ, ಮುಂದಿನ ಐಪಿಎಲ್ ಆವೃತ್ತಿಗೆ ಕೆಕೆಆರ್ ಅವರನ್ನು ಉಳಿಸಿಕೊಂಡಿರಲಿಲ್ಲ. ಈಗ ವೆಂಕಟೇಶ್ ಅಯ್ಯರ್ ಅವರಿಗೆ ಕೆಕೆಆರ್ ಇಷ್ಟೊಂದು ಖರ್ಚು ಮಾಡಿದ್ದು, ಏಕೆ ಎಂಬ ಪ್ರಶ್ನೆ ಕ್ರಿಕೆಟ್ ಅಭಿಮಾನಿಗಳಲ್ಲಿ ಮೂಡಿದೆ.
ಕಳೆದ ಐಪಿಎಲ್ ಆವೃತ್ತಿಯಲ್ಲಿ ಕೆಕೆಆರ್ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಕೆಕೆಆರ್ ಚಾಂಪಿಯನ್ ಆಗುವುದರಲ್ಲಿ ನಾಯಕ ಶ್ರೇಯಸ್ ಅಯ್ಯರ್ ಪ್ರಮುಖ ಪಾತ್ರವಹಿಸಿದ್ದರು. ಆದರೆ, ಶ್ರೇಯಸ್ ಅಯ್ಯರ್ ತಮ್ಮ ಮೌಲ್ಯವನ್ನು ಕಂಡುಕೊಳ್ಳಲು ಮೆಗಾ ಹರಾಜಿಗೆ ಬಂದಿದ್ದರು. ಹೀಗಾಗಿ ಅವರು ಪಂಜಾಬ್ ಕಿಂಗ್ಸ್ ತಂಡಕ್ಕೆ 26.75 ಕೋಟಿ ರೂ.ಗೆ ಸೇರಿದರು. ಇಂತಹ ಪರಿಸ್ಥಿತಿಯಲ್ಲಿ ನಾಯಕನ ಹುಡುಕಾಟದಲ್ಲಿದ ಕೆಕೆಆರ್ ತಂಡಕ್ಕೆ ವೆಂಕಟೇಶ್ ಅಯ್ಯರ್ ಸಿಕ್ಕಿದ್ದಾರೆ ಎಂಬ ಮಾತುಗಳ ಕೇಳಿ ಬರುತ್ತಿವೆ.

ಡೆಡ್ಲಿ ಆಲ್ರೌಂಡರ್ ವೆಂಕಟೇಶ್ ಅಯ್ಯರ್ ಅವರು 23.75 ಕೋಟಿ ರೂ.ಗೆ ಕೆಕೆಆರ್ ಪಾಲಾಗುತ್ತಿದ್ದಂತೆ ತಂಡದ ನಾಯಕತ್ವದ ಸವಾಲನ್ನು ಸ್ವೀಕರಿಸಲು ಬಯಸುತ್ತೇನೆ ಎಂದು ಅವರು ಹೇಳಿದ್ದಾರೆ. ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ತಂಡವು ತಮ್ಮ ಐಪಿಎಲ್ ವಿಜೇತ ನಾಯಕ ಶ್ರೇಯಸ್ ಅಯ್ಯರ್ ಅವರನ್ನು ಮೆಗಾ ಹರಾಜಿನಲ್ಲಿ ಉಳಿಸಿಕೊಳ್ಳದಿರಲು ನಿರ್ಧರಿಸಿತು. ಹೀಗಾಗಿ ವೆಂಕಟೇಶ್ ಅಯ್ಯರ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲು ಭಾರಿ ಮೊತ್ತವನ್ನು ಖರ್ಚು ಮಾಡಿದೆ ಎಂಬ ವರದಿಗಳ ಹೇಳುತ್ತಿವೆ.