ಶನಿವಾರ ನಡೆದ ಐಪಿಎಲ್ 2025 ರ 9ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಗುಜರಾತ್ ಟೈಟಾನ್ಸ್ 36 ರನ್ಗಳಿಂದ ಸೋಲಿಸಿತು. ಈ ಪಂದ್ಯದ ವೇಳೆ ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್ ಪಾಂಡ್ಯ ಮತ್ತು ಗುಜರಾತ್ ಟೈಟಾನ್ಸ್ ಸ್ಪಿನ್ನರ್ ಆರ್ ಸಾಯಿ ಕಿಶೋರ್ ನಡುವೆ ಬಿಸಿ ವಾಗ್ವಾದ ನಡೆದಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ವೈರಲ್ ಆಗುತ್ತಿದೆ. ಮುಂಬೈ ಇಂಡಿಯನ್ಸ್ ತಂಡದ ಇನ್ನಿಂಗ್ಸ್ನ 15 ನೇ ಓವರ್ನಲ್ಲಿ ಈ ಘಟನೆ ನಡೆದಿದೆ.
ಮೈದಾನದಲ್ಲಿ ಹಾರ್ದಿಕ್ ಪಾಂಡ್ಯ ಮತ್ತು ಆರ್ ಸಾಯಿ ಕಿಶೋರ್ ಪರಸ್ಪರ ಮುಖಾಮುಖಿಯಾದಾಗ ಅಭಿಮಾನಿಗಳು ಆಘಾತಕ್ಕೊಳಗಾಗಿದ್ದರು. ಅಷ್ಟರ ಮಟ್ಟಿಗೆ ಪಂದ್ಯ ಬಿಸಿಯಾಗಿತ್ತು. ಈ ವೇಳೆ ಸಾಯಿ ಕಿಶೋರ್ ಅವರಿಗೆ ಹಾರ್ದಿಕ್ ಪಾಂಡ್ಯ ಅವಹೇಳನಕಾರಿ ಪದ ಬಳಸಿದ್ದಾರೆ ಎನ್ನಲಾಗುತ್ತಿದೆ. ಘಟನೆಯನ್ನು ಗಮನಿಸಿದ ಅಂಪೈರ್ಗಳು ಸಹ ಮಧ್ಯಪ್ರವೇಶಿಸಬೇಕಾಯಿತು.

ಪಂದ್ಯದ ವೇಳೆ ಗುಜರಾತ್ ಟೈಟಾನ್ಸ್ ತಂಡದ ಬೌಲರ್ಗಳು ಮುಂಬೈ ಇಂಡಿಯನ್ಸ್ ಮೇಲೆ ಒತ್ತಡ ಹೇರಿದಾಗ ಈ ಘಟನೆ ಆರಂಭವಾಯಿತು. ಇದಕ್ಕೂ ಮುನ್ನ ಮುಂಬೈ ತಂಡದ ಕೆಲವು ವಿಕೆಟ್ಗಳನ್ನು ತೆಗೆದುಕೊಳ್ಳುವ ಮೂಲಕ ಜಿಟಿ ಬೌಲರ್ಗಳು ಪಂದ್ಯದ ಗತಿಯನ್ನು ಬದಲಾಯಿಸಿದ್ದರು. ಮುಂಬೈ ಇಂಡಿಯನ್ಸ್ ತಂಡದ ಇನ್ನಿಂಗ್ಸ್ನ 15 ನೇ ಓವರ್ನಲ್ಲಿ, ಆರ್ ಸಾಯಿ ಕಿಶೋರ್ ಮೊದಲ ಎರಡು ಡಾಟ್ ಬಾಲ್ಗಳನ್ನು ಹಾರ್ದಿಕ್ ಪಾಂಡ್ಯಗೆ ಎಸೆದರು. ನಂತರ ಪಾಂಡ್ಯ ಮೂರನೇ ಎಸೆತದಲ್ಲಿ ಬೌಂಡರಿ ಬಾರಿಸಿದರು. ಆ ಓವರ್ನ ನಾಲ್ಕನೇ ಎಸೆತ ಕೂಡ ಡಾಟ್ ಬಾಲ್ ಆಗಿತ್ತು. ಇಲ್ಲಿಯೇ ಹಾರ್ದಿಕ್ ಮತ್ತು ಸಾಯಿ ಕಿಶೋರ್ ನಡುವೆ ವಾಗ್ವಾದ ನಡೆಯಿತು. ನಾಲ್ಕನೇ ಎಸೆತದ ನಂತರ ಸಾಯಿ ಕಿಶೋರ್ ಅವರು ಹಾರ್ದಿಕ್ ಪಾಂಡ್ಯ ದಿಟ್ಟಿಸಿ ನೋಡಲಾರಂಭಿಸಿದರು.
ಈ ವೇಳೆ ಹಾರ್ದಿಕ್ ಪಾಂಡ್ಯ ಕೂಡ ಹಿಂದೆ ಸರಿಯಲಿಲ್ಲ. ಸಾಯಿ ಕಿಶೋರ್ ನಿಂತಿದ್ದ ಕಡೆಗೆ ನಡೆದುಕೊಂಡು ಬಂದು ಪಾಂಡ್ಯ ಕೂಡ ದಿಟ್ಟಿಸಿ ನೋಡಿದರು. ಬಳಿಕ ಸಾಯಿ ಕಿಶೋರ್ ವಿರುದ್ಧ ಅವರು ಕೆಲವು ಅವಾಚ್ಯ ಶಬ್ದಗಳನ್ನು ಬಳಸಿದರು. ಆ ಹೊತ್ತಿಗೆ ಮೈದಾನದಲ್ಲಿದ್ದ ಅಂಪೈರ್ಗಳು ಮಧ್ಯಪ್ರವೇಶಿಸಿ ಇಬ್ಬರು ಆಟಗಾರರನ್ನು ಬೇರ್ಪಡಿಸಬೇಕಾಯಿತು.
ಪಂದ್ಯದ ನಂತರ, ಆರ್ ಸಾಯಿ ಕಿಶೋರ್ ಅವರನ್ನು ಘಟನೆಯ ಬಗ್ಗೆ ಕೇಳಿದಾಗ, ಹಾರ್ದಿಕ್ ನನ್ನ ಒಳ್ಳೆಯ ಸ್ನೇಹಿತ. ಅವರು ಕ್ರಿಕೆಟ್ ಆಟವನ್ನು ಪ್ರಾಮಾಣಿಕತೆಯಿಂದ ಆಡುತ್ತಿದ್ದಾರೆ. ಮೈದಾನದ ಒಳಗೆ ಈ ರೀತಿ ಇರಬೇಕು. ಆದರೆ ನಾವು ವಿಷಯಗಳನ್ನು ವೈಯಕ್ತಿಕವಾಗಿ ತೆಗೆದುಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ.
ಗುಜರಾತ್ನ ಅಹಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಜಿಟಿ ತಂಡ 196 ರನ್ಗಳನ್ನು ಗಳಿಸಿತು. 197 ರನ್ಗಳ ಗುರಿಯನ್ನು ಬೆನ್ನಟ್ಟಿದ ಮುಂಬೈ ಇಂಡಿಯನ್ಸ್ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ ಕೇವಲ 160 ರನ್ ಗಳಿಸಲು ಶಕ್ತವಾಯಿತು. ಇದರೊಂದಿಗೆ ಪಂದ್ಯವನ್ನು ಮುಂಬೈ 36 ರನ್ಗಳಿಂದ ಸೋತಿತು. ಇದು ಐಪಿಎಲ್ 2025 ರಲ್ಲಿ ಮುಂಬೈ ತಂಡದ ಸತತ ಎರಡನೇ ಸೋಲು, ಆದರೆ ಜಿಟಿ ತಂಡಕ್ಕೆ ಮೊದಲ ಗೆಲುವು ಇದಾಗಿದೆ.