ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2025ರ ಮೆಗಾ ಹರಾಜು ಪ್ರಕ್ರಿಯೆಗೆ ಕೇವಲ 5 ದಿನಗಳ ಮಾತ್ರ ಬಾಕಿ ಉಳಿದಿದೆ. ಐಪಿಎಲ್ 2025ರ ಮೆಗಾ ಹರಾಜು ಪ್ರಕ್ರಿಯೆ ಮೇಲೆ ಕ್ರಿಕೆಟ್ ಅಭಿಮಾನಿಗಳು ಕಣ್ಣು ನೆಟ್ಟಿದೆ. ಐಪಿಎಲ್ ಎಲ್ಲಾ 10 ಫ್ರಾಂಚೈಸಿ ಬಲಿಷ್ಠ ತಂಡವನ್ನು ಕಟ್ಟಲು ಸಿದ್ಧತೆ ಮಾಡಿಕೊಳ್ಳುತ್ತಿದೆ. ಇದಕ್ಕೂ ಮುನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ಮಹತ್ವದ ಹೆಜ್ಜೆಯನ್ನಿಟ್ಟಿದೆ. ಆರ್ಸಿಬಿ ವಿರಾಟ್ ಕೊಹ್ಲಿ, ರಜತ್ ಪಾಟಿದಾರ್ ಮತ್ತು ಯಶ್ ದಯಾಳ್ ಅವರನ್ನ ಮಾತ್ರ ರಿಟೈನ್ ಮಾಡಿಕೊಂಡಿದ್ದು, ಉಳಿದ ಆಟಗಾರರನ್ನು ತಂಡದಿಂದ ಮೆಗಾ ಹರಾಜಿಗೆ ಬಿಡುಗಡೆ ಮಾಡಿದೆ.
ಐಪಿಎಲ್ 2025ರ ಮೆಗಾ ಹರಾಜಿಗೂ ಆರ್ಸಿಬಿ ತನ್ನ ಹೊಸ ಬೌಲಿಂಗ್ ಕೋಚ್ ನೇಮಕ ಮಾಡಿಕೊಂಡಿರುವ ಬಗ್ಗೆ ವರದಿಗಳು ಹೇಳಿವೆ. ಸಾಮಾಜಿಕ ಜಾಲತಾಣದಲ್ಲಿ ಆರ್ಸಿಬಿ ಹೊಸ ಬೌಲಿಂಗ್ ಕೋಚ್ ಭಾರೀ ಸದ್ದು ಮಾಡುತ್ತಿದ್ದಾರೆ. ಆದರೆ ಈ ಕುರಿತು ಆರ್ಸಿಬಿ ಯಾವುದೇ ಅಧಿಕೃತ ಮಾಹಿತಿಯನ್ನು ಹಂಚಿಕೊಂಡಿಲ್ಲ.

ಮುಂಬರುವ ಐಪಿಎಲ್ 2025ರ ಟೂರ್ನಿಯಲ್ಲಿ ಆರ್ಸಿಬಿ ಚಾಂಪಿಯನ್ ಆಗಲು ಬೇಕಾದ ಎಲ್ಲ ತಂತ್ರಗಳನ್ನು ರೂಪಿಸುತ್ತಿದೆ. ಇದಕ್ಕೆ ಮೊಲದ ಹೆಜ್ಜೆಯಂತೆ ಆರ್ಸಿಬಿ ಹೊಸ ಬೌಲಿಂಗ್ ಕೋಚ್ ನೇಮಕ ಮಾಡಿಕೊಂಡಿದೆ. ಈ ಬೌಲಿಂಗ್ ಕೋಚ್ ಬೇರೆ ಅಲ್ಲ, ಓಂಕಾರ್ ಸಾಲ್ವಿ. ಮುಂಬೈ ರಣಜಿ ತಂಡದ ಕೋಚ್ ಆಗಿದ್ದ ಓಂಕಾರ್ ಸಾಲ್ವಿ ತಮ್ಮ ಅಧಿಕಾರಿವಧಿಯಲ್ಲಿ ತಂಡವನ್ನು ಚಾಂಪಿಯನ್ ಮಾಡುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಅಲ್ಲದೆ, ಐಪಿಎಲ್ ಹಾಲಿ ಚಾಂಪಿಯನ್ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದೊಂದಿಗೂ ಓಂಕಾರ್ ಸಾಲ್ವಿ ಸಹಾಯಕ ಕೋಚ್ ಆಗಿ ಕೆಲಸ ಮಾಡಿದ್ದಾರೆ.
ಓಂಕಾರ್ ಸಾಲ್ವಿ ಟೀಮ್ ಇಂಡಿಯಾದ ಮಾಜಿ ವೇಗದ ಬೌಲರ್ ಅವಿಷ್ಕರ್ ಸಾಲ್ವಿ ಅವರ ಸಹೋದರ. ಓಂಕಾರ್ ಸಾಲ್ವಿ ಅವರ ಅಧಿಕಾರಾವಧಿಯಲ್ಲಿ ಮುಂಬೈ ತಂಡವು ಕಳೆದ ಋತುವಿನಲ್ಲಿ ರಣಜಿ ಟ್ರೋಫಿ ಗೆದ್ದಿತ್ತು. ಸಾಲ್ವಿ 2005ರಲ್ಲಿ ಮಧ್ಯಪ್ರದೇಶ ವಿರುದ್ಧ ರೈಲ್ವೇಸ್ಗಾಗಿ ಕೇವಲ ಒಂದು ಲಿಸ್ಟ್ ಎ ಆಟವನ್ನು ಆಡಿದ್ದರು.
ಐಪಿಎಲ್ 2025ರ ಟೂರ್ನಿಗಾಗಿ ಆರ್ಸಿಬಿ ತನ್ನ ಮಾಜಿ ಆಟಗಾರ ದಿನೇಶ್ ಕಾರ್ತಿಕ್ ಅವರನ್ನು ಬ್ಯಾಟಿಂಗ್ ಕೋಚ್ ಮತ್ತು ಮೆಂಟರ್ ತಂಡಕ್ಕೆ ಸೇರಿಸಿಕೊಂಡಿದೆ. ಇದೀಗ ಆರ್ಸಿಬಿಯ ನೂತನ ಬೌಲಿಂಗ್ ಕೋಚ್ ಆಗಿ ನೇಮಕಗೊಂಡಿರುವ ಓಂಕಾರ್ ಸಾಲ್ವಿ, ಡಿಕೆ ಜೊತೆಗೂಡಿ ತಂಡವನ್ನು ಚಾಂಪಿಯನ್ ಮಾಡಲು ಸಜ್ಜಾಗಿದ್ದಾರೆ. ಡಿಕೆ ಮತ್ತು ಸಾಲ್ವಿ ಈ ಹಿಂದೆ ಕೋಲ್ಕತ್ತಾ ನೈಟ್ ರೈಡರ್ಸ್ನಲ್ಲಿ ಒಟ್ಟಿಗೆ ಕೆಲಸ ಮಾಡಿದ್ದಾರೆ.
ಸದ್ಯ ಆರ್ಸಿಬಿಗೆ ಐಪಿಎಲ್ 2025ರಲ್ಲಿ ನಾಯಕ ಯಾರು ಎಂಬುದೇ ಅಭಿಮಾನಿಗಳಿ ದೊಡ್ಡ ಪ್ರಶ್ನೆಯಾಗಿದೆ. ಕಳೆದ ಋತುವಿನಲ್ಲಿ ಆರ್ಸಿಬಿ ತಂಡವನ್ನು ಪ್ಲೇಆಫ್ಗೆ ಕರೆದೊಯ್ದ ನಾಯಕ ಫಾಫ್ ಡುಪ್ಲೆಸಿಸ್ ಅವರನ್ನು ಉಳಿಸಿಕೊಂಡಿಲ್ಲ. ಇಂತಹ ಸಂದರ್ಭದಲ್ಲಿ ವಿರಾಟ್ ಕೊಹ್ಲಿ ಮತ್ತೊಮ್ಮೆ ತಂಡದ ನಾಯಕತ್ವ ವಹಿಸಿಕೊಳ್ಳಬಹುದು ಎಂಬ ವರದಿಗಳು ಬಂದಿದ್ದವು. ಆರ್ಸಿಬಿ ಕೆಎಲ್ ರಾಹುಲ್, ರಿಷಬ್ ಪಂತ್ ಮತ್ತು ಶ್ರೇಯಸ್ ಅಯ್ಯರ್ ಅವರಂತಹ ಆಟಗಾರರ ಮೇಲೆ ಕಣ್ಣಿಟ್ಟಿದೆ. ಈ ಮೂವರಿಗೂ ಐಪಿಎಲ್ನಲ್ಲಿ ನಾಯಕತ್ವದ ಅನುಭವವಿದೆ.