ಇಂದಿನಿಂದ ಇಂಡಿಯನ್ ಪ್ರೀಮಿಯರ್ ಲೀಗ್ ಆರಂಭವಾಗಲಿದೆ. ಈ ಲೀಗ್ ಉದ್ಘಾಟನಾ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಕಾದಾಟ ನಡೆಸಲಿವೆ. ಉಭಯ ತಂಡಗಳಿಗೂ ಹೊಸ ನಾಯಕರು ನೇಮಕಗೊಂಡಿದ್ದಾರೆ. ಈ ಬಾರಿ ಕೆಕೆಆರ್ ತಂಡವನ್ನು ಅನುಭವಿ ಅಜಿಂಕ್ಯ ರಹಾನೆ ಮುನ್ನಡೆಸಿದ್ರೆ, ಆರ್ಸಿಬಿ ತಂಡವನ್ನು ರಜತ್ ಪಟಿದಾರ್ ಮುನ್ನಡೆಸಲಿದ್ದಾರೆ. ಆದರೆ ಕೋಲ್ಕತ್ತಾದಲ್ಲಿನ ವಾತಾವರಣ ಸದ್ಯ ಅಭಿಮಾನಿಗಳ ಚಿಂತೆಯನ್ನು ಹೆಚ್ಚಿಸಿದೆ.
ಕೋಲ್ಕತದಲ್ಲಿ ಹವಾಮಾನ ಇಲಾಕೆ ಆರೆಂಜ್ ಅಲರ್ಟ್ ನೀಡಿದೆ. ಹೀಗಾಗಿ ಪಂದ್ಯದ ಆರಂಭಿಕ ಸಮಯದಲ್ಲಿ ಮಳೆ ಬೀಳುವ ಸಾಧ್ಯತೆ ಇದೆ. ಈ ಆವೃತ್ತಿಯ ಮೊದಲ ಪಂದ್ಯಕ್ಕೆ ವರುಣ ಕಾಟ ನೀಡಿದ್ರೆ ನಿಶ್ಚಿತವಾಗಿ ಅಭಿಮಾನಿಗಳಿಗೆ ಬೇಸರವಾಗಲಿದೆ. ಮಳೆಯಿಂದಾಗಿ ಪಂದ್ಯಕ್ಕೆ ಹಾನಿಯಾದ್ರೆ ಏನು ಹೇಳುತ್ತೆ ಐಪಿಎಲ್ ನಿಯಮ ಅನುವ ಬಗ್ಗೆ ವರದಿ ಇಲ್ಲಿದೆ.

ಮಳೆ ಪಂದ್ಯ ನಡೆಯಲು ಅನುವು ಮಾಡಿಕೊಡದೇ ಇದ್ದಲ್ಲಿ ಅಭಿಮಾನಿಗಳಿಗೆ ಖಂಡಿತ ನಿರಾಸೆ ಆಗುತ್ತದೆ. ಈ ವೇಳೆ ಪಂದ್ಯದ ರೋಚಕತೆ ಸಹ ಕಳೆದುಕೊಳ್ಳುತ್ತದೆ. ಒಂದು ವೇಳೆ ಮಳೆಯಿಂದ ಪಂದ್ಯ ಪೂರ್ಣಗೊಳ್ಳದಿದ್ದರೆ, ಐಪಿಎಲ್ನ ಯಾವ ನಿಯಮದ ಅಡಿಯಲ್ಲಿ ಫಲಿತಾಂಶವನ್ನು ನಿರ್ಧರಿಸಲಾಗುತ್ತದೆ. ಲೀಗ್ ಹಂತದ ಪಂದ್ಯಗಳಿಗೆ ಮೀಸಲು ದಿನ ಇರುವುದಿಲ್ಲ. ಮಳೆಯ ಕಾರಣದಿಂದ ಪಂದ್ಯ ತಡವಾದರೆ ಹೆಚ್ಚುವರಿಯಾಗಿ ಒಂದು ಗಂಟೆ ಸಮಯವನ್ನು ನೀಡಲಾಗುತ್ತದೆ.
ಟಿ20 ಕ್ರಿಕೆಟ್ನಲ್ಲಿ ಪಂದ್ಯದ ಫಲಿತಾಂಶವನ್ನು ಅರಿಯಲು ಕನಿಷ್ಠ ತಲಾ 5 ಓವರ್ಗಳ ಪಂದ್ಯವನ್ನಾದ್ರೂ ಆಡಿಸಬೇಕು. ಈ ಐದು ಓವರ್ಗಳಿಗೆ ರಾತ್ರಿ 10.56 ಕಟ್ ಆಫ್ ಟೈಮ್ ಎಂದು ತಿಳಿಸಲಾಗಿದೆ. ಪಂದ್ಯ ಆರಂಭಿಸಬೇಕಿದ್ದಲ್ಲಿ ಈ ಸಮಯದಲ್ಲಿ ಆರಂಭವಾಗುವುದು ಅವಶ್ಯಕ.
ಮಳೆಯಿಂದಾಗಿ ನಿಗದಿತ ಸಮಯದಲ್ಲೂ ಪಂದ್ಯ ನಡೆಯದೇ ಇದ್ದರೆ ರಾತ್ರಿ 12 ಗಂಟೆಯ ವರೆಗೆ ಕಾಯಬೇಕು. ಆಗ ಪಂದ್ಯದ ಅಧಿಕಾರಿಗಳು ಸೂಕ್ತ ನಿರ್ಧಾರವನ್ನು ಮಾಡುತ್ತಾರೆ. ಒಂದು ವೇಳೆ ಪಂದ್ಯ ರದ್ದಾದಲ್ಲಿ ಉಭಯ ತಂಡಗಳಿಗೆ ತಲಾ ಒಂದು ಅಂಕವನ್ನು ನೀಡಲಾಗುತ್ತದೆ.
ಕೋಲ್ಕತ್ತಾದಲ್ಲಿ ಈಗಾಗಲೇ ಮಳೆ ಅಭ್ಯಾಸ ಪಂದ್ಯಕ್ಕೆ ಪೆಟ್ಟು ನೀಡಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳ ಅಭ್ಯಾಸಕ್ಕೆ ಕತ್ತರಿ ಬಿದ್ದಿದೆ. ಮೊದಲ ಪಂದ್ಯ ಒಂದು ವೇಳೆ ರದ್ದಾದಲ್ಲಿ ಅಭಿಮಾನಿಗಳಿಗೆ ಭಾರೀ ನಿರಾಸೆ ಆಗುತ್ತದೆ. ಅಲ್ಲದೆ ಗೆಲುವಿನ ಆರಂಭವನ್ನು ಮಾಡುವ ಕನಸಿನಲ್ಲಿದ್ದ ಉಭಯ ತಂಡಗಳಿಗೆ ಪೆಟ್ಟು ಬೀಳುತ್ತದೆ.
ಉಭಯ ತಂಡಗಳು ಸಹ ಈ ಬಾರಿ ಹೊಸ ನಾಯಕರೊಂದಿಗೆ ಕಣಕ್ಕೆ ಇಳಿಯಲಿದೆ. ಈ ವೇಳೆ ಆರ್ಸಿಬಿ ತಂಡ ರಜತ್ ಪಟಿದಾರ್ ಅವರನ್ನು ನಾಯಕ ಎಂದು ಘೋಷಣೆ ಮಾಡಿದೆ. ವಿರಾಟ್ ಕೊಹ್ಲಿ ಮತ್ತೆ ನಾಯಕತ್ವ ಪಡೆಯುತ್ತಾರೆ ಎಂಬ ಮಾತುಗಳು ಇದ್ದವು. ಆದರೆ ಆರ್ಸಿಬಿ ಭವಿಷ್ಯದ ದೃಷ್ಟಿಯಿಂದ ರಜತ್ಗೆ ಮಣೆ ಹಾಕಿದೆ. ಕೆಕೆಆರ್ ಅಜಿಂಕ್ಯ ರಹಾನೆ ಅವರ ಅನುಭವಕ್ಕೆ ಮಣೆ ಹಾಕಿದೆ.