ಭರವಸೆಯ ಆಟಗಾರ ಯಶಸ್ವಿ ಜೈಸ್ವಾಲ್ ಹಾಗೂ ರಿಯಾನ್ ಪರಾಗ್ ಅವರ ಜವಾಬ್ದಾರಿಯುತ ಬ್ಯಾಟಿಂಗ್ ನೆರವಿನಿಂದ ರಾಜಸ್ಥಾನ ರಾಯಲ್ಸ್ ಮೊದಲು ಬ್ಯಾಟ್ ಮಾಡಿ 206 ರನ್ಗಳ ಗುರಿಯನ್ನು ಪಂಜಾಬ್ ಕಿಂಗ್ಸ್ ತಂಡಕ್ಕೆ ನೀಡಿದೆ. ನಿಗದಿತ ಓವರ್ಗಳಲ್ಲಿ ರಾಯಲ್ಸ್ 4 ವಿಕೆಟ್ ನಷ್ಟಕ್ಕೆ 205 ರನ್ ಸೇರಿಸಿತು. ಟಾಸ್ ಸೋತರೂ ಮೊದಲು ಬ್ಯಾಟ್ ಮಾಡುವ ಅವಕಾಶ ರಾಜಸ್ಥಾನ ರಾಯಲ್ಸ್ ತಂಡಕ್ಕೆ ಲಭಿಸಿತು. ಎದುರಾಳಿ ತಂಡ ನೀಡಿದ್ದ ಅವಕಾಶವನ್ನು ಎರಡೂ ಕೈಗಳಿಂದ ಬಳಸಿಕೊಳ್ಳು ಅವಕಾಶವನ್ನು ಹೊಂದಿದ್ದ ರಾಜಸ್ಥಾನ ಬ್ಯಾಟರ್ ಉತ್ತಮ ಆರಂಭವನ್ನು ನೀಡಿದರು.
ಪವರ್ ಪ್ಲೇನಲ್ಲಿ ಸಮಯೋಚಿತ ಬ್ಯಾಟಿಂಗ್ ನಡೆಸಿದ ಯಶಸ್ವಿ ಜೈಸ್ವಾಲ್ ಹಾಗೂ ಸಂಜು ಸ್ಯಾಮ್ಸನ್ ಜೋಡಿ ಉತ್ತಮ ಜೊತೆಯಾಟದ ಕಾಣಿಕೆ ನೀಡಿತು. ಈ ಜೊಡಿ ಬಿಗ್ ಹಿಟ್ ಬಾರಿಸುವ ಯೋಚನೆಯನ್ನು ಕೊಂಚ ದೂರ ಇಟ್ಟು ವಿಕೆಟ್ ಕಾಯ್ದುಕೊಳ್ಳುವತ್ತ ಚಿತ್ತ ನೆಟ್ಟಿತ್ತು. ಈ ಜೋಡಿ ಮೊದಲ ವಿಕೆಟ್ಗೆ 10.2 ಓವರ್ಗಳಲ್ಲಿ 89 ರನ್ ಸೇರಿಸಿ ಅಬ್ಬರಿಸಿತು. ನಾಯಕ ಸಂಜು ಸ್ಯಾಮ್ಸನ್ 6 ಬೌಂಡರಿ ನೆರವಿನಿಂದ 38 ರನ್ ಸಿಡಿಸಿ ಇಲ್ಲದ ಹೊಡೆತಕ್ಕೆ ಮುಂದಾಗಿ ಔಟ್ ಆದರು.

ಕಳೆದ ಕೆಲವು ಪಂದ್ಯಗಳಲ್ಲಿ ರನ್ ಕಲೆ ಹಾಕುವಲ್ಲಿ ವಿಫಲರಾಗಿದ್ದ ಯಶಸ್ವಿ ಜೈಸ್ವಾಲ್ ಉತ್ತಮವಾಗಿ ಬ್ಯಾಟ್ ಮಾಡಿದರು. ಇವರು ತಮ್ಮ ನ್ಯೂನತೆಗಳನ್ನು ತಿದ್ದಿಕೊಂಡು ಬ್ಯಾಟ್ ಮಾಡಿ ತಂಡಕ್ಕೆ ಆಧಾರವಾದರು. ಇವರು 45 ಎಸೆತಗಳಲ್ಲಿ 3 ಬೌಂಡರಿ, 5 ಸಿಕ್ಸರ್ ಸಹಾಯದಿಂದ 67 ರನ್ ಸಿಡಿಸಿ ಔಟ್ ಆದರು.
ಕಳೆದ ಪಂದ್ಯದ ಹೀರೋ ನಿತೀಶ್ ರಾಣಾ ನಿರಾಸೆಯನ್ನು ಅನುಭವಿಸಿದರು.ಮಧ್ಯಮ ಕ್ರಮಾಂಕದಲ್ಲಿ ರಿಯಾನ್ ಪರಾಗ್ ಉತ್ತಮವಾಗಿ ಬ್ಯಾಟ್ ಮಾಡಿದರು. ಇವರು 25 ಎಸೆತಗಳಲ್ಲಿ ಅಜೇಯ 43 ರನ್ ಸಿಡಿಸಿದರು. ಇವರ ಈ ಅಮೋಘ ಇನಿಂಗ್ಸ್ನಲ್ಲಿ 3 ಬೌಂಡರಿ, 3 ಸಿಕ್ಸರ್ಗಳು ಸೇರಿವೆ. ಶಿಮ್ರೋನ್ ಹೆಟ್ಮೆಯರ್ 20 ರನ್ಗಳಿಗೆ ಆಟ ಮುಗಿಸಿದರು. ಧ್ರುವ್ ಜುರೇಲ್ 1 ಬೌಂಡರಿ, 1 ಸಿಕ್ಸರ್ ಸಹಾಯದಿಂದ ಅಜೇಯ 13 ರನ್ ಬಾರಿಸಿದರು.

ಪಂಜಾಬ್ ಪರ ಲಾಕಿ ಫಾರ್ಗ್ಯೂಸನ್ 37 ರನ್ ನೀಡಿ 2 ವಿಕೆಟ್ ಕಬಳಿಸಿದರು. ಉಳಿದಂತೆ ಮಾರ್ಕೊ ಜಾನ್ಸನ್, ಅರ್ಷದೀಪ್ ಸಿಂಗ್ ತಲಾ ಒಂದು ವಿಕೆಟ್ ಕಬಳಿಸದರು.
ರಾಜಸ್ಥಾನ ರಾಯಲ್ಸ್ ತಂಡದಲ್ಲಿ ಒಂದು ಬದಲಾವಣೆ ಮಾಡಲಾಗಿದೆ. ತುಷಾರ್ ದೇಶಪಾಂಡೆ ಗಾಯಕ್ಕೆ ತುತ್ತಾಗಿದ್ದರಿಂದ ಅವರ ಸ್ಥಾನದಲ್ಲಿ ಯಧುವೀರ್ ಸಿಂಗ್ ಅಂಗಳ ಪ್ರವೇಶಿಸಲಿದ್ದಾರೆ. ಇನ್ನು ಪಂಜಾಬ್ ವಿರುದ್ಧದ ಪಂದ್ಯದಲ್ಲಿ ರಾಜಸ್ಥಾನ ತಂಡವನ್ನು ಸಂಜು ಸ್ಯಾಮ್ಸನ್ ಮುನ್ನಡೆಸಲಿದ್ದಾರೆ.
ಪಂಜಾಬ್ ತಂಡ: ಪ್ರಭಾಸಿಮ್ರಾನ್ ಸಿಂಗ್ (ವಿಕೆಟ್ ಕೀಪರ್), ಶ್ರೇಯಸ್ ಅಯ್ಯರ್, ಮಾರ್ಕಸ್ ಸ್ಟೊಯಿನಿಸ್, ನೆಹಾಲ್ ವಧೇರಾ, ಗ್ಲೆನ್ ಮ್ಯಾಕ್ಸ್ವೆಲ್, ಶಶಾಂಕ್ ಸಿಂಗ್, ಸೂರ್ಯಾಂಶ್ ಶೆಡ್ಜ್, ಮಾರ್ಕೊ ಜಾನ್ಸೆನ್, ಅರ್ಷ್ದೀಪ್ ಸಿಂಗ್, ಲಾಕಿ ಫರ್ಗುಸನ್, ಯುಜ್ವೇಂದ್ರ ಚಾಹಲ್
ರಾಜಸ್ಥಾನ ತಂಡ: ಯಶಸ್ವಿ ಜೈಸ್ವಾಲ್, ಸಂಜು ಸ್ಯಾಮ್ಸನ್ (ನಾಯಕ), ನಿತೀಶ್ ರಾಣಾ, ರಿಯಾನ್ ಪರಾಗ್, ಧ್ರುವ ಜುರೆಲ್ (ವಿಕೆಟ್ ಕೀಪರ್), ಶಿಮ್ರಾನ್ ಹೆಟ್ಮೆಯರ್, ವನಿಂದು ಹಸರಂಗಾ, ಜೋಫ್ರಾ ಆರ್ಚರ್, ಮಹೇಶ್ ತೀಕ್ಷಣ, ಯುಧ್ವಿರ್ ಸಿಂಗ್, ಸಂದೀಪ್ ಶರ್ಮಾ