ಪಂಜಾಬ್ ಕಿಂಗ್ಸ್ ಕೋಲ್ಕತ್ತಾ ನೈಟ್ ರೈಡರ್ಸ್ ನಡುವಣ ಐಪಿಎಲ್ 2025 ರ 44ನೇ ಪಂದ್ಯ ಮಳೆಗೆ ಕೊಚ್ಚಿ ಹೋಗಿದೆ. ಕೋಲ್ಕತ್ತಾದ ಈಡನ್ ಗಾರ್ಡನ್ ಮೈದಾನದಲ್ಲಿ ಗೆಲುವಿನ ನಿರೀಕ್ಷೆಯಲ್ಲಿದ್ದ ಉಭಯ ತಂಡಗಳ ಕನಸಿಗೆ ಮಳೆ ಅಡ್ಡಿಪಡಿಸಿದೆ. ಈಡನ್ ಗಾರ್ಡನ್ಸ್ನಲ್ಲಿ ಟಾಸ್ ಗೆದ್ದ ನಂತರ ಪಂಜಾಬ್ ಕಿಂಗ್ಸ್ ನಾಯಕ ಶ್ರೇಯಸ್ ಅಯ್ಯರ್ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದರು. ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ಪರ ಪ್ರಿಯಾಂಶ್ ಆರ್ಯ ಮತ್ತು ಪ್ರಭ್ಸಿಮ್ರಾನ್ ಸಿಂಗ್ ಸ್ಪೋಟಕ ಬ್ಯಾಟಿಂಗ್ ಪ್ರದರ್ಶನ ಮಾಡಿದರು.
ಪ್ರಿಯಾಂಶ್ ಆರ್ಯ ಮತ್ತು ಪ್ರಭ್ಸಿಮ್ರಾನ್ ಸಿಂಗ್ ಅವರ ಬಿರುಸಿನ ಅರ್ಧಶತಕ ನೆರವಿನಿಂದ ಪಂಜಾಬ್ ಕಿಂಗ್ಸ್ ತಂಡ ನಿಗದಿತ 20 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು 201 ರನ್ ಗಳಿಸಿತು. ಪಂಜಾಬ್ ನೀಡಿದ 202 ರನ್ಗಳ ಗೆಲುವಿನ ಗುರಿ ಬೆನ್ನಟ್ಟಿದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಪರ ಆರಂಭಿಕ ಬ್ಯಾಟರ್ಸ್ ರಹಮಾನಲ್ಲಾ ಗುರ್ಬಾಜ್ ಮತ್ತು ಸುನಿಲ್ ನರೈನ್ ಇನ್ನಿಂಗ್ಸ್ ತೆರೆದರು.

ಕೆಕೆಆರ್ ಪರ ರಹಮಾನಲ್ಲಾ ಗುರ್ಬಾಜ್ ಮತ್ತು ಸುನಿಲ್ ನರೈನ್ ಜೋಡಿ ಕೇವಲ ಒಂದು ಓವರ್ ಮಾತ್ರ ಆಡಿದರು. ಇದಾದ ನಂತರ ಬಲವಾದ ಗಾಳಿಯೊಂದಿಗೆ ಮಳೆ ಪ್ರಾರಂಭವಾಯಿತು. ಒಂದು ಗಂಟೆಗೂ ಹೆಚ್ಚು ಕಾಲ ಕಾದರೂ ಮಳೆ ನಿಲ್ಲಲಿಲ್ಲ. ಇದರಿಂದಾಗಿ ಪಂದ್ಯವನ್ನು ರದ್ದುಗೊಳಿಸಬೇಕಾಯಿತು. ಉಭಯ ತಂಡಗಳಿಗೆ ತಲಾ ಒಂದೊಂದು ಅಂಕ ನೀಡಲಾಗಿದೆ.
ಈಡನ್ ಗಾರ್ಡನ್ಸ್ನಲ್ಲಿ ನಡೆದ ರೋಚಕ ಪಂದ್ಯವನ್ನು ನೋಡಿ ಕಣ್ತುಂಬಿಕೊಳ್ಳಲು ಬಂದಿದ್ದ ಅಭಿಮಾನಿಗಳಿಗೆ ಮಳೆ ಖಳನಾಯಕವಾಯಿತು. ಐಪಿಎಲ್ 2025 ರಲ್ಲಿ ಮಳೆಯಿಂದಾಗಿ ಪಂದ್ಯ ರದ್ದಾಗಿರುವುದು ಇದೇ ಮೊದಲು. ಪ್ರಿಯಾಂಶ್ ಆರ್ಯ ಮತ್ತು ಪ್ರಭ್ಸಿಮ್ರಾನ್ ಸಿಂಗ್ ಅವರ ಸ್ಪೋಟಕ ಬ್ಯಾಟಿಂಗ್ ನಂತರ, ಅಭಿಮಾನಿಗಳು ಕೆಕೆಆರ್ ತಂಡದ ರೋಚಕ ರನ್ ಚೇಸ್ ನೋಡಲು ಕಾತುರರಾಗಿದ್ದರು. ಆದರೆ ಮಳೆ ಅವರ ಭರವಸೆಯನ್ನು ಹುಸಿಗೊಳಿಸಿತು. ಎರಡನೇ ಇನ್ನಿಂಗ್ಸ್ನಲ್ಲಿ ಕೇವಲ ಒಂದು ಓವರ್ ಆಡಲಾಯಿತು. ಕೆಕೆಆರ್ ಯಾವುದೇ ವಿಕೆಟ್ ಕಳೆದುಕೊಳ್ಳದೆ 7 ರನ್ ಗಳಿಸಿತು. ಮಳೆ ಬಂದಾಗ ರಹಮಾನಲ್ಲಾ ಗುರ್ಬಾಜ್ 1 ರನ್ ಮತ್ತು ಸುನಿಲ್ ನರೈನ್ 4 ರನ್ ಗಳಿಸಿ ಅಜೇಯರಾಗುಳಿದರು.
ಪಂಜಾಬ್ ಕಿಂಗ್ಸ್: ಪ್ರಿಯಾಂಶ್ ಆರ್ಯ, ಪ್ರಭ್ಸಿಮ್ರಾನ್ ಸಿಂಗ್, ಶ್ರೇಯಸ್ ಅಯ್ಯರ್ (ನಾಯಕ), ಜೋಶ್ ಇಂಗ್ಲಿಸ್ (ವಿಕೆಟ್ಕೀಪರ್), ನೆಹಾಲ್ ವಧೇರಾ, ಶಶಾಂಕ್ ಸಿಂಗ್, ಗ್ಲೆನ್ ಮ್ಯಾಕ್ಸ್ವೆಲ್, ಅಜ್ಮತುಲ್ಲಾ ಒಮರ್ಜಾಯ್, ಮಾರ್ಕೊ ಜಾನ್ಸೆನ್, ಅರ್ಶ್ದೀಪ್ ಸಿಂಗ್, ಯುಜ್ವೇಂದ್ರ ಚಹಾಲ್.
ಕೋಲ್ಕತ್ತಾ ನೈಟ್ ರೈಡರ್ಸ್: ರಹಮಾನುಲ್ಲಾ ಗುರ್ಬಾಜ್ (ವಿಕೆಟ್ಕೀಪರ್), ಸುನಿಲ್ ನರೈನ್, ಅಜಿಂಕ್ಯ ರಹಾನೆ (ನಾಯಕ), ವೆಂಕಟೇಶ್ ಅಯ್ಯರ್, ರಿಂಕು ಸಿಂಗ್, ಆಂಡ್ರೆ ರಸೆಲ್, ರೋವ್ಮನ್ ಪೊವೆಲ್, ವೈಭವ್ ಅರೋರಾ, ಚೇತನ್ ಸಕರಿಯಾ, ಹರ್ಷಿತ್ ರಾಣಾ, ವರುಣ್ ಚಕ್ರವರ್ತಿ.