ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಅಂತೂ ಇಂತು ತನ್ನ ನಾಯಕನನ್ನು ಘೋಷಣೆ ಮಾಡಿದೆ. 31 ವರ್ಷದ ಯುವ ಆಟಗಾರ ರಜತ್ ಪಾಟಿದಾರ್ ಹೆಗಲಿಗೆ ಆರ್ಸಿಬಿ ನಾಯಕತ್ವದ ಹೋಣೆಯನ್ನು ಹೊರಿಸಲಾಗಿದೆ. ಆರ್ಸಿಬಿ ಮುಂದಿನ ಉತ್ತರಾಧಿಕಾರಿ ಎಂದೇ ಇವರನ್ನು ಬಿಂಬಿಸಲಾಗುತ್ತಿದೆ. ಇವರು ಭವಿಷ್ಯದಲ್ಲಿ ತಂಡವನ್ನು ಮುನ್ನಡೆಸಬಹುದು ಎಂಬ ಲೆಕ್ಕಾಚಾರವನ್ನೇ ಹಾಕಿಕೊಂಡು ಆರ್ಸಿಬಿ ಇವರ ಹೆಗಲಿಗೆ ಈ ಜವಾಬ್ದಾರಿಯನ್ನು ನೀಡಿದೆ.
ಈಗಾಗಲೇ ದೇಶೀಯ ಟೂರ್ನಿಯಲ್ಲಿ ಬ್ಯಾಟಿಂಗ್ ಹಾಗೂ ನಾಯಕತ್ವದ ಮೂಲಕ ಗಮನ ಸೆಳೆದ ಪಾಟಿದಾರ್, ನಿಶ್ಚಿತವಾಗಿ ಆರ್ಸಿಬಿ ನಾಯಕರ ಪಟ್ಟಿಯಲ್ಲಿ ಇದ್ದ ಆಟಗಾರ. ಆದರೆ ಜಸ್ಟ್ 27 ಪಂದ್ಯಗಳನ್ನು ಆಡಿದ ಆಟಗಾರನಿಗೆ ನಾಯಕತ್ವ ನಿಡ್ತಾರಾ ಎಂಬ ಪ್ರಶ್ನೆಗಳು ಇದ್ದವು. ಈ ಪ್ರಶ್ನೆಗಳಿಗೆ ಆರ್ಸಿಬಿ ಮ್ಯಾನೇಜ್ಮೆಂಟ್ ತಲೆ ಕೆಡಿಸಿಕೊಳ್ಳದೇ, ತಾನು ಅಂದುಕೊಂಡಂತೆ ರಜತ್ ಅವರಿಗೆ ಪಟ್ಟ ಕಟ್ಟಿದೆ. ಹಾಗಿದ್ದರೆ ರಜತ್ ಅವರ ಮುಂದಿರುವ ಸವಾಲುಗಳು ಏನು ಎಂಬ ಬಗ್ಗೆ ವರದಿ ಇಲ್ಲಿದೆ.

ದೇಶೀಯ ಟೂರ್ನಿಗಳಲ್ಲಿ ಮಧ್ಯ ಪ್ರದೇಶ ತಂಡವನ್ನು ಮುನ್ನಡೆಸಿರಬಹುದು. ಆದರೆ ಪ್ರತಿಷ್ಠಿತ ಲೀಗ್ನಲ್ಲಿ ಅತಿ ಜನಪ್ರೀಯ ಫ್ರಾಂಚೈಸಿಯನ್ನು ಮುನ್ನಡೆಸುವುದು ಕಷ್ಟ. ಸರಿ ಮಾಡಿದಾಗ ಎಲ್ಲವೂ ಸಲೀಸಾಗಿರುತ್ತದೆ. ಆದರೆ ಒಂದು ತಪ್ಪು ಹೆಜ್ಜೆ ಇಟ್ಟರೂ ಸಹ ಟೀಕೆಗಳ ಮಾಹ ಪೂರವೇ ಇವರ ಮುಂದೆ ಬಂದು ನಿಲ್ಲಲಿದೆ. ಇನ್ನು ನಾಯಕತ್ವದ ಭಾರವನ್ನು, ತಮ್ಮ ಬ್ಯಾಟಿಂಗ್ ಮೇಲೆ ಬೀಳದಂತೆ ನೋಡಿಕೊಳ್ಳುವ ಜವಾಬ್ದಾರಿ ರಜತ್ ಮೇಲಿದೆ. ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ತಂಡ, ಆರ್ಸಿಬಿ ಟೂರ್ನಿಯಲ್ಲಿ ಸ್ಥಿರ ಪ್ರದರ್ಶನ ನೀಡುವಲ್ಲಿ ಎಡವಿದ್ರೆ ಗಟ್ಟಿಯಾಗಿ ನಿಂತು ಉತ್ತರ ನೀಡಬೇಕು.
ಆರ್ಸಿಬಿ ಐಪಿಎಲ್ 17 ಆವೃತ್ತಿಗಳಲ್ಲಿ ಆಡಿ ಸೈ ಎನಿಸಿಕೊಂಡಿದೆ. ಈ ವೇಳೆ ಒಂದು ಬಾರಿಯೂ ಕಪ್ ಗೆಲ್ಲದ ಒತ್ತಡ ನಿಶ್ಚಿತವಾಗಿ ತಂಡದ ಮೇಲೆ ಇದೆ. ತಂಡ ಯಾವುದೇ ಋತುವಿನಲ್ಲಿ ಅಂಗಳಕ್ಕೆ ಇಳಿದಾಗ, ಅಭಿಮಾನಿಗಳು ಭಾರೀ ಬೆಂಬಲವನ್ನು ನೀಡಿದ್ದಾರೆ. ಆದರೆ ಅಭಿಮಾನಿಗಳ ಆಸೆ ಹಾಗೂ ಕನಸನ್ನು ಸಾಕಾರ ಗೊಳಿಸುವ ಜವಾಬ್ದಾರಿ ರಜತ್ ಅವರ ಮೇಲಿದೆ. ಅಲ್ಲದೆ ಕಳೆದ 17 ಆವೃತ್ತಿಗಳಲ್ಲಿ ಆರ್ಸಿಬಿ ತಂಡದ ಪರ ಆಡಿರುವ ವಿರಾಟ್ ಅವರಿಗಾಗಿ ಈ ಆವೃತ್ತಿಯಲ್ಲಿ ಕಪ್ ಗೆಲುವಿನ ಅನಿವಾರ್ಯತೆ ಸಹ ಇದೆ.

ಖಂಡಿತವಾಗಿಯೂ ಈ ಬಾರಿಯ ಆರ್ಸಿಬಿ ತಂಡವನ್ನು ಬ್ಯಾಲೆನ್ಸ್ ಮಾಡುವುದು ಸಣ್ಣ ಕೆಲಸವಲ್ಲ. ಒಂದು ರೀತಿಯಲ್ಲಿ ನೋಡಿದರೆ, ಟಾಪ್ 12 ಆಟಗಾರರು ಅಂತಾರಾಷ್ಟ್ರೀಯ ಸರ್ಕಿಟ್ನಲ್ಲಿ ಆಡಿದ ಅನುಭವವನ್ನು ಹೊಂದಿದ್ದಾರೆ. ಈ ನಡುವೆಯೇ ಹೇಗೆ ರಜತ್ ತಂಡದಲ್ಲಿರುವ ಪ್ರತಿಯೊಬ್ಬರ ಆಟಗಾರರ ಕ್ಷಮತೆಯನ್ನು ಗುರುತಿಸಿ ಅವರಿಗೆ ಜವಾಬ್ದಾರಿಯನ್ನು ನಿಭಾಯಿಸುತ್ತಾರೆ ಎಂಬುದು ಕುತೂಹಲ ಹೆಚ್ಚಿಸಿದೆ. ಕಳೆದ ಕೆಲವು ವರ್ಷಗಳಿಗೆ ಹೋಲಿಸಿದರೆ ಈ ಬಾರಿ ಆರ್ಸಿಬಿ ಬೌಲಿಂಗ್ ಲೈನ್ ಅಪ್ ಬಲಿಷ್ಠವಾಗಿದೆ. ಹೇಗೆ ಪಂದ್ಯಕ್ಕೆ ಅನುಸಾರವಾಗಿ ಬೌಲಿಂಗ್ ಬದಲಾವಣೆ ಮಾಡುತ್ತಾರೆ. ನುರಿತ ಸ್ಪಿನ್ ಬೌಲರ್ ಇಲ್ಲದಿರುವ ಸಮಸ್ಯೆಯನ್ನು ಹೇಗೆ ಸರಿದೂಗಿಸುತ್ತಾರೆ ಎಂಬ ಪ್ರಶ್ನೆ ಅಭಿಮಾನಿಗಳನ್ನು ಕಾಡುತ್ತಿದೆ.