ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ)ಗುರುವಾರ ರಜತ್ ಪಾಟಿದಾರ್ ಅವರನ್ನು ಐಪಿಎಲ್ 2025ರ ಸೀಸನ್ಗೆ ನಾಯಕನನ್ನಾಗಿ ನೇಮಿಸಿದೆ. ಮಾಜಿ ನಾಯಕ ವಿರಾಟ್ ಕೊಹ್ಲಿ ಮತ್ತೆ ತಂಡದ ಸಾರಥ್ಯ ವಹಿಸಿಕೊಳ್ಳುತ್ತಾರೆ ಎಂದು ಅಭಿಮಾನಿಗಳು ನಿರೀಕ್ಷಿಸುತ್ತಿದ್ದರು. ಆದರೆ, ಆರ್ಸಿಬಿ ಮ್ಯಾನೇಜ್ಮೆಂಟ್ ರಜತ್ ಪಾಟಿದಾರ್ ಅವರನ್ನು ಹೊಸ ನಾಯಕನನ್ನಾಗಿ ನೇಮಿಸಿತು. ಹೊಸ ನಾಯಕನಾಗಿ ಆಯ್ಕೆಯಾದ ರಜತ್ ಪಟಿದಾರ್ ಅವರನ್ನು ವಿರಾಟ್ ಕೊಹ್ಲಿ ಅಭಿನಂದಿಸಿದ್ದಾರೆ.
ಐಪಿಎಲ್ ಮೆಗಾ ಹರಾಜಿಗೂ ಮುನ್ನ ಆರ್ಸಿಬಿ ಉಳಿಸಿಕೊಂಡ ಆಟಗಾರರಲ್ಲಿ ರಜತ್ ಪಾಟಿದಾರ್ ಕೂಡ ಒಬ್ಬರು. ಸೈಯದ್ ಮುಷ್ತಾಕ್ ಅಲಿ ಟ್ರೋಫಿ (ಟಿ20) ಮತ್ತು ವಿಜಯ್ ಹಜಾರೆ ಟ್ರೋಫಿ (ಏಕದಿನ) ಯಲ್ಲಿ ಮಧ್ಯಪ್ರದೇಶ ತಂಡವನ್ನು ಮುನ್ನಡೆಸಿರುವ ಅನುಭವ ರಜತ್ ಅವರಿಗಿದೆ. ಈಗ ಐಪಿಎಲ್ 2025ರಲ್ಲಿ ಆರ್ಸಿಬಿ ತಂಡವನ್ನು ಮುನ್ನಡೆಸಲು ಪಾಟಿದಾರ್ ಸಜ್ಜಾಗಿದ್ದಾರೆ. ಈ ವೇಳೆ ಸುದ್ಧಿಗೋಷ್ಠಿಯಲ್ಲಿ ಮಾತನಾಡಿರುವ ಆರ್ಸಿಬಿಯ ಹೊಸ ನಾಯಕ ರಜತ್ ಪಾಟಿದಾರ್ ಸಂತಸ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನಲ್ಲಿ ನಡೆದ ಆರ್ಸಿಬಿಯ ವಿಶೇಷ ಕಾರ್ಯಕ್ರಮದಲ್ಲಿ, ಹೊಸ ನಾಯಕ ರಜತ್ ಪಟಿದಾರ್ ಸುದ್ದಿಗೋಷ್ಠಿಯಲ್ಲಿ ಕೇಳಿದ ಕೆಲವು ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ಆರ್ಸಿಬಿ ನಾಯಕನಾಗುವ ಬಗ್ಗೆ ಮಾಹಿತಿ ಸಿಕ್ಕಾಗ ಅವರ ಮೊದಲ ಪ್ರತಿಕ್ರಿಯೆ ಏನಿತ್ತು ಎಂದು ಕೇಳಿದಾಗ? 'ಐಪಿಎಲ್ 2024 ರಲ್ಲಿಯೇ, ಕೋಚ್ ಆಂಡಿ ಫ್ಲವರ್ ನನ್ನನ್ನು ಆರ್ಸಿಬಿ ನಾಯಕನಾಗಲು ಬಯಸುತ್ತೀರಾ ಎಂದು ಕೇಳಿದ್ದರು. ಆ ಸಮಯದಲ್ಲಿ ನಾನು ಮೊದಲು ನನ್ನ ರಾಜ್ಯ ಮಧ್ಯಪ್ರದೇಶ ತಂಡವನ್ನು ದೇಶೀಯ ಕ್ರಿಕೆಟ್ನಲ್ಲಿ ನಾಯಕತ್ವ ವಹಿಸುವ ಮೂಲಕ ಬಹಳಷ್ಟು ಕಲಿಯಲು ಬಯಸುತ್ತೇನೆ. ಆಗ ಮಾತ್ರ ನಾನು ನಾಯಕನಾಗಬಲ್ಲೆ ಎಂದು ಕೋಚ್ಗೆ ಹೇಳಿದ್ದೆ. ಅಂದೇ ನನಗೆ ಆರ್ಸಿಬಿ ತಂಡದ ನಾಯಕನಾಗುವ ಸುಳಿವು ಸಿಕ್ಕಿತ್ತು ಎಂದು ಹೇಳಿದ್ದಾರೆ.
ಆರ್ಸಿಬಿ ನಾಯಕನಾದ ಬಗ್ಗೆ ತಮ್ಮ ಸಂತಸ ವ್ಯಕ್ತಪಡಿಸಿದ ರಜತ್ ಪಾಟಿದಾರ್, 'ಆರ್ಸಿಬಿ ನಾಯಕನಾಗಲು ನನ್ನ ಮತ್ತು ವಿರಾಟ್ ಭಯ್ಯಾ ಇಬ್ಬರ ಹೆಸರುಗಳನ್ನು ಚರ್ಚಿಸಲಾಗುತ್ತಿತ್ತು. ನಂತರ ನಾನು ನಾಯಕನಾದಾಗ, ಅದು ಪದಗಳಲ್ಲಿ ವರ್ಣಿಸಲು ಸಾಧ್ಯವಾಗದ ಕ್ಷಣವಾಗಿತ್ತು ಎಂದಿದ್ದಾರೆ.
ಐಪಿಎಲ್ನಲ್ಲಿ ರಜತ್ ಪಾಟಿದಾರ್ ದೊಡ್ಡ ಹೆಸರು ಮಾಡಲು ವಿರಾಟ್ ಕೊಹ್ಲಿ ಪಾತ್ರ ದೊಡ್ಡದಿದೆ. ಅಲ್ಲದೆ, ಈಗ ನಾಯಕನಾಗಲೂ ಕೂಡ ಪಾಟಿದಾರ್ ಮೇಲೆ ಕೊಹ್ಲಿ ಕೃಪೆ ಇದೆ. ನಾಯಕನಾದ ನಂತರ ಪಾಟಿದಾರ್ ಅವರು ಕೊಹ್ಲಿಯನ್ನು ಗುಣಗಾನ ಮಾಡಿದ್ದಾರೆ. 'ವಿರಾಟ್ ಕೊಹ್ಲಿ ಭಾಯ್ ಅವರ ಅನುಭವ ಮತ್ತು ಆಲೋಚನೆಗಳು ನನ್ನ ನಾಯಕತ್ವದ ಪಾತ್ರದಲ್ಲಿ ಖಂಡಿತವಾಗಿಯೂ ನನಗೆ ಸಹಾಯ ಮಾಡುತ್ತವೆ. ಕ್ರಿಕೆಟ್ನ ಅತ್ಯುತ್ತಮ ಆಟಗಾರರಲ್ಲಿ ಒಬ್ಬರಾದ ವಿರಾಟ್ ಕೊಹ್ಲಿ ಭಾಯ್ ಅವರಿಂದ ಕಲಿಯಲು ಅವಕಾಶ ಸಿಕ್ಕಿದ್ದು ನನ್ನ ಅದೃಷ್ಟ ಎಂದು ನುಡಿದ್ದಾರೆ.