ರಜತ್ ಪಟಿದಾರ್ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಐಪಿಎಲ್ 2025 ರಲ್ಲಿ ತನ್ನ ಎರಡನೇ ಪಂದ್ಯದಲ್ಲಿ ಐದು ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಎದುರಿಸಲಿದೆ. ಉಭಯ ತಂಡಗಳ ರೋಚಕ ಹಣಾಹಣಿ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯಲಿದೆ. ಈಡನ್ ಗಾರ್ಡನ್ಸ್ನಲ್ಲಿ ನಡೆದ ಉದ್ಘಾಟನಾ ಪಂದ್ಯದಲ್ಲಿ ಆರ್ಸಿಬಿ ತಂಡವು ಹಾಲಿ ಚಾಂಪಿಯನ್ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ 7 ವಿಕೆಟ್ಗಳ ಭರ್ಜರಿ ಜಯ ಸಾಧಿಸಿತ್ತು. ಈ ಮೂಲಕ ಐಪಿಎಲ್ 2025 ರ ಸೀಸನ್ ಅನ್ನು ಅದ್ಭುತವಾಗಿ ಆರಂಭಿಸಿತು.
ಚೆನ್ನೈ ಸೂಪರ್ ಕಿಂಗ್ಸ್ ಕೂಡ ತನ್ನ ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು 4 ವಿಕೆಟ್ಗಳಿಂದ ಸೋಲಿಸಿತು. ಸಿಎಸ್ಕೆ ಪರ, ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜ ಮತ್ತು ನೂರ್ ಅಹ್ಮದ್ ತಮ್ಮ ಅದ್ಭುತ ಸ್ಪಿನ್ ಬೌಲಿಂಗ್ ಮೂಲಕ ಮುಂಬೈ ತಂಡವನ್ನು 155 ರನ್ಗಳಿಗೆ ಕಟ್ಟಿ ಹಾಕುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಈ ತ್ರಿಮೂರ್ತಿಗಳು ಒಟ್ಟು 5 ವಿಕೆಟ್ಗಳನ್ನು ಪಡೆಯುವ ಮೂಲಕ ಮುಂಬೈ ತಂಡದ ಸೋಲಿಗೆ ಕಾರಣವಾಗಿದ್ದರು.

ಇಂತಹ ಸಂದರ್ಭದಲ್ಲಿ ಶುಕ್ರವಾರ ನಡೆಯಲಿರುವ ಹೈವೋಲ್ಟೇಜ್ ಪಂದ್ಯದಲ್ಲಿ ಸಿಎಸ್ಕೆ ಸ್ಪಿನ್ನರ್ಸ್ ವಿರುದ್ಧ ಆರ್ಸಿಬಿ ಬ್ಯಾಟರ್ಸ್ ಯಾವ ರೀತಿ ಪ್ರದರ್ಶನ ನೀಡುತ್ತಾರೆ ಎಂಬುದು ಕುತೂಹಲ ಮೂಡಿಸಿದೆ. ಇದಕ್ಕೂ ಮುನ್ನ ಆಸ್ಟ್ರೇಲಿಯಾದ ಮಾಜಿ ದಿಗ್ಗಜ ಆಲ್ರೌಂಡರ್ ಶೇನ್ ವ್ಯಾಟ್ಸನ್ ಆರ್ಸಿಬಿ ಸವಾಲಿನ ಬಗ್ಗೆ ಮಾತನಾಡಿದ್ದಾರೆ. ಚೆಪಾಕ್ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಎದುರಿಸುವುದು ರಾಯಲ್ ಚಾಲೆಂಜರ್ಸ್ ಬೆಂಗಳೂರಿಗೆ ದೊಡ್ಡ ಸವಾಲಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಚೆನ್ನೈನಲ್ಲಿ ಸಿಎಸ್ಕೆ ತಂಡವನ್ನು ಸೋಲಿಸುವುದು ಆರ್ಸಿಬಿ ತಂಡಕ್ಕೆ ಕಠಿಣ ಸವಾಲಾಗಿರುತ್ತದೆ. ಸಂದರ್ಶನವೊಂದರಲ್ಲಿ ಮಾತನಾಡಿರುವ ವ್ಯಾಟ್ಸನ್, "ಚೆಪಾಕ್ನಲ್ಲಿ ಆರ್ಸಿಬಿ ತಂಡಕ್ಕೆ ಆಡುವುದು ದೊಡ್ಡ ಸವಾಲಾಗಿರುತ್ತದೆ. ವಿಶೇಷವಾಗಿ ಸಿಎಸ್ಕೆ ಉತ್ತಮ ಬೌಲರ್ಗಳನ್ನು ಹೊಂದಿದೆ. ಮುಂಬೈ ವಿರುದ್ಧದ ಆರಂಭಿಕ ಪಂದ್ಯದಲ್ಲಿ ಅದ್ಭುತ ಬೌಲಿಂಗ್ ಮಾಡಿದ 3 ಸ್ಪಿನ್ನರ್ಗಳನ್ನು ನೋಡಿ. ಅಶ್ವಿನ್, ಜಡೇಜಾ ಮತ್ತು ನೂರ್ ಅಹ್ಮದ್ ಅದ್ಭುತವಾಗಿ ಆಡುತ್ತಿದ್ದಾರೆ. ಸಿಎಸ್ಕೆ ಪರ ನೂರ್ ಅಹ್ಮದ್ ತಮ್ಮ ಮೊದಲ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿರುವುದು ತಂಡದ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ. ಏಕೆಂದರೆ ಸಿಎಸ್ಕೆ ತಂಡಕ್ಕೆ ವಿಕೆಟ್ ಪಡೆಯುವ ಇನ್ನೊಂದು ಆಯ್ಕೆ ಇದೆ ಎಂದು ತಿಳಿದಿದೆ ಎಂದು ಹೇಳಿದ್ದಾರೆ.
ಸಿಎಸ್ಕೆ ತಂಡದ ಸ್ಪಿನ್ ಪ್ರಾಬಲ್ಯವನ್ನು ಹತ್ತಿಕ್ಕಲು ಆರ್ಸಿಬಿ ತಂಡಕ್ಕೆ ವ್ಯಾಟ್ಸನ್ ಸಲಹೆ ನೀಡಿದ್ದಾರೆ. ಸಿಎಸ್ಕೆ ಸ್ಪಿನ್ ದಾಳಿ ಎದುರಿಸಲು ಆರ್ಸಿಬಿ ತನ್ನ ಪ್ಲೇಯಿಂಗ್-11 ರಲ್ಲಿ ಬದಲಾವಣೆ ಮಾಡಬೇಕು ಎಂದಿದ್ದಾರೆ. ಚೆಪಾಕ್ ಒಂದು ಕೋಟೆ ಎಂದು ತಪ್ಪಾಗಿ ಭಾವಿಸಬೇಡಿ. ಚೆನ್ನೈನಲ್ಲಿ ಉತ್ತಮ ಪ್ರದರ್ಶನ ನೀಡುವುದರ ಮೇಲೆ ಸಿಎಸ್ಕೆ ತಂಡದ ಸಂಪೂರ್ಣ ಸೆಟಪ್ ನಿರ್ಮಿಸಲಾಗಿದ್ದು, ಆರ್ಸಿಬಿಗೆ ಅದನ್ನು ಮುರಿಯುವುದು ತುಂಬಾ ಕಷ್ಟಕರವಾಗಿರುತ್ತದೆ. ಹೀಗಾಗಿ ಆರ್ಸಿಬಿ ತಂಡದಿಂದ ಯಾರಾದರೂ ಪಂದ್ಯವನ್ನು ಗೆಲ್ಲಲು ವಿಶೇಷವಾದದ್ದನ್ನು ಮಾಡಬೇಕು. ಇದಕ್ಕೆ ಪ್ಲೇಯಿಂಗ್-11 ಬದಲಾವಣೆ ಮಾಡಬೇಕು ಎಂದಿದ್ದಾರೆ.
ಆರ್ಸಿಬಿ ಪರ ಕೃನಾಲ್ ಪಾಂಡ್ಯ ಮತ್ತು ಸುಯಾಶ್ ಶರ್ಮಾ ಅವರಂತಹ ಸ್ಪಿನ್ನರ್ಗಳಿದ್ದಾರೆ. ಆದರೆ ಲಿಯಾಮ್ ಲಿವಿಂಗ್ಸ್ಟೋನ್ ಕೂಡ ತಮ್ಮ ಸ್ಪಿನ್ ಬೌಲಿಂಗ್ ಮೂಲಕ ತಂಡಕ್ಕೆ ನೆರವಾಗಬಲ್ಲರು. ಆದಾಗ್ಯೂ, ಆರ್ಸಿಬಿ ಬಳಿ ಯಾವುದೇ ಅಂತಾರಾಷ್ಟ್ರೀಯ ಮಟ್ಟದ ಸ್ಟಾರ್ ಸ್ಪಿನ್ನರ್ ಇಲ್ಲ. ಇದು ಸಿಎಸ್ಕೆ ಅಂತಹ ತಂಡದ ವಿರುದ್ಧ ದೊಡ್ಡ ವ್ಯತ್ಯಾಸವನ್ನು ಉಂಟುಬಹುದು.
ಆರ್ಸಿಬಿ ಬಲಿಷ್ಠ ಬ್ಯಾಟಿಂಗ್ ಲೈನ್ ಆಫ್ ಹೊಂದಿದೆ. ಎದುರಾಳಿ ತಂಡದ ಬೌಲರ್ಸ್ಗೆ ನಡುಕ ಹುಟ್ಟಿಸಬಲ್ಲ ಸ್ಪೋಟಕ ಬ್ಯಾಟರ್ಸ್ ಆರ್ಸಿಬಿ ತಂಡದಲ್ಲಿದ್ದಾರೆ. ಕಳೆದ 17 ವರ್ಷಗಳಿಂದ ಚೆಪಾಕ್ ಮೈದಾನದಲ್ಲಿ ಸಿಎಸ್ಕೆ ವಿರುದ್ಧ ಆರ್ಸಿಬಿ ಗೆದ್ದಿಲ್ಲ. ಈಗ ಸಿಎಸ್ಕೆ ಸ್ಪಿನ್ ಪರೀಕ್ಷೆ ಎದುರಿಸಿ ಆರ್ಸಿಬಿ ಇತಿಹಾಸ ನಿರ್ಮಿಸುತ್ತಾ? ಎಂಬ ಕೂತುಹಲ ಕ್ರಿಕೆಟ್ ಅಭಿಮಾನಿಗಳಲ್ಲಿ ಮೂಡಿದೆ.