ಇತ್ತೀಚಿನ ವರದಿಗಳ ಪ್ರಕಾರ, ಮುಂಬೈ ಇಂಡಿಯನ್ಸ್ ಎರಡು ಪ್ರಮುಖ ಆಘಾತಗಳನ್ನು ಅನುಭವಿಸಲು ಸಿದ್ಧವಾಗಿದೆ. ಏಕೆಂದರೆ ತಂಡದ ಇಬ್ಬರು ಸ್ಟಾರ್ ಕ್ರಿಕೆಟಿಗರಾದ ರೋಹಿತ್ ಶರ್ಮಾ ಮತ್ತು ಸೂರ್ಯಕುಮಾರ್ ಯಾದವ್ 2025ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಗಿಂತ ಮುಂಚಿತವಾಗಿ ಬೇರೆಯಾಗಬಹುದು.
ದೈನಿಕ್ ಜಾಗರಣ್ ಪ್ರಕಾರ, ರೋಹಿತ್ ಶರ್ಮಾ ಮತ್ತು ಸೂರ್ಯಕುಮಾರ್ ಅವರು ಐದು ಬಾರಿಯ ಐಪಿಎಲ್ ಚಾಂಪಿಯನ್ ತಂಡವನ್ನು ತೊರೆಯಬಹುದು ಮತ್ತು ಹಾಲಿ ಚಾಂಪಿಯನ್ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ಮುಂದಿನ ವರ್ಷ ನಡೆಯಲಿರುವ ಮೆಗಾ ಹರಾಜಿನಲ್ಲಿ ಈ ಆಟಗಾರರನ್ನು ಖರೀದಿಸಲು ಸಜ್ಜಾಗಿರಬಹುದು.

ಈ ಪಂದ್ಯಾವಳಿಯಲ್ಲಿ ಹಾರ್ದಿಕ್ ಪಾಂಡ್ಯ ಮತ್ತು ರೋಹಿತ್ ಶರ್ಮಾ, ಸೂರ್ಯಕುಮಾರ್, ಜಸ್ಪ್ರೀತ್ ಬುಮ್ರಾ ನಡುವೆ ಭಿನ್ನಾಭಿಪ್ರಾಯಗಳಿವೆ ಎಂದು ವರದಿಗಳಾಗಿದ್ದವು.
30 ವರ್ಷದ ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲಿ, ಮುಂಬೈ ಇಂಡಿಯನ್ಸ್ ತಂಡವು ಒಂದು ತಂಡವಾಗಿ ಆಡಲು ಸಾಧ್ಯವಾಗದ ಕಾರಣ, ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನವನ್ನು ಗಳಿಸಿತು.
ಮುಂಬೈ ಇಂಡಿಯನ್ಸ್ ಮ್ಯಾನೇಜ್ಮೆಂಟ್ ಐಪಿಎಲ್ 2025ರಲ್ಲಿ ಪರಿಸ್ಥಿತಿಗಳನ್ನು ಸುಧಾರಿಸಲು ಆಶಿಸುತ್ತಿತ್ತು. ಆದರೆ ಮಾಜಿ ನಾಯಕ ರೋಹಿತ್ ಶರ್ಮಾ ಮತ್ತು ಸ್ಫೋಟಕ ಬ್ಯಾಟರ್ ಸೂರ್ಯಕುಮಾರ್ ಯಾದವ್ ನಿರ್ಗಮಿಸಿದರೆ, ಅದು ಮುಂಬೈ ಇಂಡಿಯನ್ಸ್ ತಂಡಕ್ಕೆ ತುಂಬಲಾರದ ನಷ್ಟವಾಗುತ್ತದೆ.
ಆದರೆ, ಮುಂಬೈ ಅಭಿಮಾನಿಗಳು ಸದ್ಯಕ್ಕೆ ಹೆಚ್ಚು ಆತಂಕಪಡುವ ಅಗತ್ಯವಿಲ್ಲ. ಏಕೆಂದರೆ ಈ ಆಟಗಾರರ ಹೊರಹೋಗುವ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ.
ಒಂದು ವೇಳೆ ರೋಹಿತ್ ಶರ್ಮಾ ಮುಂಬೈ ಇಂಡಿಯನ್ಸ್ ತಂಡವನ್ನು ತೊರೆದರೆ, 2025ರ ಐಪಿಎಲ್ಗಾಗಿ ಗುಜರಾತ್ ಟೈಟನ್ಸ್ ಅಥವಾ ಡೆಲ್ಲಿ ಕ್ಯಾಪಿಟಲ್ಸ್ ಸೇರುವ ಸಾಧ್ಯತೆಯಿದೆ.
ಗುಜರಾತ್ ಟೈಟನ್ಸ್ 2022ರಲ್ಲಿ ಐಪಿಎಲ್ ಟ್ರೋಫಿಯನ್ನು ಗೆದ್ದುಕೊಂಡಿತು ಮತ್ತು ಕಳೆದ ವರ್ಷ ರನ್ನರ್-ಅಪ್ ಆಗಿ ಮುಗಿಸಿತು. ಆದರೆ, ಈ ವರ್ಷದ ಐಪಿಎಲ್ನಲ್ಲಿ ನಾಯಕರಾಗಿ ತಮ್ಮ ಮೊದಲ ಋತುವಿನಲ್ಲಿ ಶುಭ್ಮನ್ ಗಿಲ್ ಅವರ ನಾಯಕತ್ವದಲ್ಲಿ ಒಂಬತ್ತನೇ ಸ್ಥಾನ ಪಡೆದುಕೊಂಡಿತು.
ಇನ್ನು, ರಿಷಭ್ ಪಂತ್ ನಾಯಕತ್ವದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಈ ವರ್ಷ ಅಂಕಪಟ್ಟಿಯಲ್ಲಿ 6ನೇ ಸ್ಥಾನದಲ್ಲಿ ಮುಗಿಸುವಲ್ಲಿ ಯಶಸ್ವಿಯಾಗಿದೆ.
ಮತ್ತೊಂದೆಡೆ, ರಿಷಭ್ ಪಂತ್ ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿ ತೊರೆದು ಚೆನ್ನೈ ಸೂಪರ್ ಕಿಂಗ್ಸ್ಗೆ ಸೇರುವ ಸಾಧ್ಯತೆ ಇದೆ. ಏಕೆಂದರೆ ಡೆಲ್ಲಿ ಕ್ಯಾಪಿಟಲ್ಸ್ ಮ್ಯಾನೇಜ್ಮೆಂಟ್ ರಿಷಭ್ ಪಂತ್ ಅವರ ಪ್ರದರ್ಶನದಿಂದ ಸಂತೋಷವಾಗಿಲ್ಲ ಎಂದು ವರದಿಗಳು ಹೇಳಿವೆ.
ಅಲ್ಲದೆ, ಕೆಎಲ್ ರಾಹುಲ್ ಅವರು ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ತೊರೆದು, ತಮ್ಮ ತವರಿನ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ನಾಯಕನಾಗಿ ಸೇರಬಹುದು.
ಫಾಫ್ ಡು ಪ್ಲೆಸಿಸ್ ಕಳೆದ ಮೂರು ಐಪಿಎಲ್ ಆವೃತ್ತಿಯಲ್ಲಿ ಆರ್ಸಿಬಿ ತಂಡವನ್ನು ಮುನ್ನಡೆಸಿದ್ದಾರೆ. ಆದರೆ ತಂಡವನ್ನು ಮೊದಲ ಪ್ರಶಸ್ತಿಗೆ ಮುನ್ನಡೆಸಲು ವಿಫಲರಾಗಿದ್ದಾರೆ.