18ನೇ ಆವೃತ್ತಿಯ ಐಪಿಎಲ್ ಆರಂಭವಾಗಿದೆ. ಈ ಹೊಸ ಲೀಗ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕಪ್ ಗೆಲುವಿನ ವಿಶ್ವಾಸವನ್ನು ಹೊಂದಿದೆ. ಆರ್ಸಿಬಿ ಐಪಿಎಲ್ ಕಪ್ ಗೆಲ್ಲದೇ ಇದ್ದರೂ ಸಹ ಅಭಿಮಾನಿಗಳ ಮನಸ್ಸಿನಲ್ಲಿ ಮಾತ್ರ ರಾಜನಂತೆ ಮೆರೆಯುತ್ತಿದೆ. ಇದಕ್ಕೆ ಕಾರಣ ಫ್ಯಾನ್ಸ್.. ಅಭಿಮಾನಿಗಳು ಆರ್ಸಿಬಿ ತಂಡವನ್ನು ಎಷ್ಟು ಪ್ರೀತಿಸುತ್ತಾರೋ, ಅದಕ್ಕಿಂತ ಹೆಚ್ಚಾಗಿ ಆರ್ಸಿಬಿ ಫ್ಯಾನ್ಸ್ರನ್ನು ಇಷ್ಟ ಪಡುತ್ತಿದೆ. ಅದಕ್ಕಾಗಿ ಆರ್ಸಿಬಿ ತನ್ನ ತಂಡದ 12ನೇ ಸ್ಥಾನವನ್ನು ಅಭಿಮಾನಿಗಳಿಗೆ ನೀಡಿದೆ. ಆರ್ಸಿಬಿ ಬರೀ ತಂಡವಾಗಿ ಉಳಿದಿಲ್ಲ, ಇದು ಒಂದು ಶಕ್ತಿಯಾಗಿದೆ.
ವಿಶ್ವದ ಯಾವುದೇ ಮೈದಾನಕ್ಕೆ ನೀವು ಎಂಟ್ರಿ ನೀಡಿದರೂ ಸಹ ಆ ಅಂಗಳದಲ್ಲಿ ಒಬ್ಬನಾದರೂ ಆರ್ಸಿಬಿ ಫ್ಯಾನ್ ಸಿಗುತ್ತಾರೆ. ಹೀಗಾಗಿ ಈ ತಂಡ ವಿಶ್ವದ ಖ್ಯಾತ ಕ್ರಿಕೆಟ್ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಅಭಿಮಾನಿಗಳು ಸ್ಟ್ಯಾಂಡ್ನಲ್ಲಿ ಕೂಗುವ ಆರ್ಸಿಬಿ, ಆರ್ಸಿಬಿ, ಎನ್ನು ಮಂತ್ರವೇ ಆಟಗಾರರ ಶಕ್ತಿ. ವಿಶ್ವದಲ್ಲೇ ಅಪಾರ ಅಭಿಮಾನಿಗಳನ್ನು ಹೊಂದಿರುವ ತಂಡ ಈ ಬಾರಿ ಮತ್ತೊಂದು ಗೌರವವನ್ನು ಅಭಿಮಾನಿಗಳಿಗೆ ನೀಡಿದೆ. ಆರ್ಸಿಬಿ ಬಸ್ ಮೇಲೆ ಫ್ಯಾನ್ ಫೋಟೋ ಹಾಕಿ ವಿಶೇಷ ರೀತಿಯಲ್ಲಿ ಗೌರವ ನೀಡಿದೆ.

ಆರ್ಸಿಬಿ ಪಂದ್ಯಗಳು ಯಾವುದೇ ಅಂಗಳದಲ್ಲಿ ನಡೆದ್ರೂ ಸಹ ಅಲ್ಲಿ ಅಭಿಮಾನಿಗಳು ಭಿನ್ನ ವಿಭಿನ್ನ ರೀತಿಯಲ್ಲಿ ಕಾಣಿಸಿಕೊಂಡಿರುತ್ತಾರೆ. ಈ ಎಲ್ಲದರ ನಡುವೆ ಅಭಿಮಾನಿಗಳ ಚಿತ್ತ ಕದಿಯುವ ಆ ಫ್ಯಾನ್ ಸುಗುಮಾರ್ ಕುಮಾರ್. ಪ್ರತಿ ಪಂದ್ಯಕ್ಕೂ ಒಂದೊಂದು ರೀತಿ ಕಾಸ್ಟ್ಯೂಮ್ ಹಾಕಿಕೊಂಡು ಬಂದು ಅಭಿಮಾನಿಗಳು, ಆಟಗಾರರನ್ನು ರಂಜಿಸುವ ಇವರನ್ನು ಆರ್ಸಿಬಿ ಅಭಿಮಾನಿ ಸಂಘಗಗಳ ರಾಯಭಾರಿ ಎಂದೇ ಕರೆಯಲಾಗುತ್ತಿದೆ. ಇವರ ಫೋಟೋವೇ ಈ ಬಾರಿ ಆರ್ಸಿಬಿ ಬಸ್ ಮೇಲೆ ಹಾಕಲಾಗಿದೆ. ಇದು ಆರ್ಸಿಬಿ ಮ್ಯಾನೇಜ್ಮೆಂಟ್, ಫ್ಯಾನ್ಗೆ ನೀಡಿರುವ ದೊಡ್ಡ ಗೌರವಗಳಲ್ಲಿ ಒಂದಾಗಿದೆ.
ಆರ್ಸಿಬಿ ಬಿಗ್ ಫ್ಯಾನ್ ಸುಗುಮಾರ್ ಕುಮಾರ್ ಅವರು ಮೈಖೇಲ್ ಕನ್ನಡದ ಜೊತೆ ಮಾತನಾಡಿದ್ದು, ತಮ್ಮ ಯಶಸ್ಸಿನ ಬಗ್ಗೆ ಹಲವು ವಿಷಯಗಳ ಬಗ್ಗೆ ಬೆಳಕು ಚೆಲ್ಲಿದ್ದಾರೆ.

ಚಿಕ್ಕ ವಯಸ್ಸಿನಿಂದಲೂ ಸುಗುಮಾರ್ ಅವರಿಗೆ ಫ್ಯಾನ್ಸಿ ಡ್ರೆಸ್ ಮೇಲೆ ಹೆಚ್ಚಿನ ಆಸಕ್ತಿ. ಈ ತಮ್ಮ ಆಸಕ್ತಿಯನ್ನೇ ದಿನಗಳದಂತೆ ತಮ್ಮ ಬೆಳವಣಿಗೆಗೆ ಪೂರಕವಾಗಿ ಆಗುತ್ತದೆ ಎಂದು ಯಾರು ಭಾವಿಸಿರಲಿಲ್ಲ. ಆದ್ರೆ ಅಂದು ಆರ್ಸಿಬಿ ತವರಿನಲ್ಲಿ ಪಂದ್ಯವನ್ನು ಆಡಿದಾಗ ಮೈಸೂರು ಮಹಾರಾಜರ ಪೋಷಾಕಿನಲ್ಲಿ ಮೈದಾನಕ್ಕೆ ಹೋಗಿ ಎಲ್ಲರ ಗಮನ ಸೆಳೆದ್ರು. ಅಂದಿನಿಂದ ಆರಂಭವಾದ ಆರ್ಸಿಬಿ ಹಾಗೂ ಕ್ರಿಕೆಟ್ ಮೇಲಿನ ಪ್ರೀತಿ ಇಂದು ಹೆಮ್ಮರವಾಗಿ ಬೆಳೆದಿದೆ. ಇವರ ಕ್ರೀಡಾ ಪ್ರೀತಿ ಕಂಡು ಹಲವು ಸಂಘ ಸಂಸ್ಥೆಗಳು ಬೆನ್ನು ತಟ್ಟಿವೆ ಎಂದು ಸುಗುಮಾರ್ ಹೇಳಿದ್ದಾರೆ.
ಕ್ರಿಕೆಟ್ ಆಟಗಾರರಿಗೆ ಅಭಿಮಾನಿಗಳು ಇರುವುದು ಕಾಮನ್. ಆದ್ರೆ ಅಭಿಮಾನಿಗೇ ಅಭಿಮಾನಿ ಇರುವುದ ತುಂಬ ವಿರಳ. ಆದ್ರೆ ಆರ್ಸಿಬಿ ಅಪಟ್ಟ ಅಭಿಮಾನಿ ಸುಗುಮಾರ್ಗೆ ಅಭಿಮಾನಿಗಳ ಬಳಗವಿದೆ. ಇವರು ಎಲ್ಲಿಯೇ ಹೋದ್ರು ಸಹ ಇವರನ್ನು ಅಭಿಮಾನಿಗಳನ್ನು ಗುರುತು ಹಿಡಿದು ಮಾತನಾಡುವ ಮಟ್ಟಿಗೆ ಇವರು ಬೆಳೆದಿದ್ದಾರೆ. ಈಗ ಇವರನ್ನು ಜನ ಗುರುತು ಹಿಡಿದು ಮಾತನಾಡಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ಆಸ್ಟ್ರೇಲಿಯಾ ಕಂಡ ಲೆಜೆಂಡ್ ಕ್ರಿಕೆಟ್ ಆಟಗಾರ ಸ್ಟೀವ ವಾಗ್ ಅವರು ಪುಸ್ತಕವನ್ನು ಬರೆದಿದ್ದಾರೆ. ಇವರು ಬರೆದ ಪುಸ್ತಕದಲ್ಲಿ ಸುಗುಮಾರ್ ಅವರ ಸಾಧನೆಗೆ 2 ಪುಟಗಳು ಮೀಸಲಿವೆ. ಇದರಿಂದಲೇ ಇವರು ಕ್ರಿಕೆಟ್ನ ಎಷ್ಟು ದೊಡ್ಡ ಅಭಿಮಾನಿ ಎಂಬುದನ್ನು ನೀವೆಲ್ಲಾ ಲೆಕ್ಕಾ ಹಾಕಬಹುದು. ಇನ್ನು ಇವರ ಅಭಿಮಾನಕ್ಕೆ ಭಾರತ ಹಾಗೂ ಪಾಕಿಸ್ತಾನ ನಡವಣ 2019ರಲ್ಲಿ ನಡೆದ ಪಂದ್ಯದಲ್ಲಿ ಗ್ಲೋಬಲ್ ಸ್ಪೋರ್ಟ್ಸ್ ಫ್ಯಾನ್ ಅವಾರ್ಡ್ ನೀಡಿ ಗೌರವಿಸಲಾಗಿದೆ.
2008ರಲ್ಲಿ ಬೆಂಗಳೂರಿನ ಎಂ ಚಿನ್ನಸ್ವಾಮಿ ಅಂಗಳದಲ್ಲಿ ನಡೆದ ಯಾವುದೇ ಆರ್ಸಿಬಿ ಪಂದ್ಯವನ್ನು ಇವರು ಮಿಸ್ ಮಾಡಿಕೊಂಡಿಲ್ಲ. ಹೀಗಾಗಿ ಇವರು ಆರ್ಸಿಬಿ ಸೂಪರ್ ಫ್ಯಾನ್. ಆರ್ಸಿಬಿ ತಂಡದ ಪ್ರತಿ ಆಟಗಾರರು ಸಹ ಇವರನ್ನು ಬಲ್ಲರು. ಆರ್ಸಿಬಿ ಮ್ಯಾನೇಜ್ಮೆಂಟ್ ಈಗ ಪ್ರತಿ ಮ್ಯಾಚ್ ಟಿಕೆಟ್ಗಳನ್ನು ನೀಡುತ್ತದೆ ಎಂದು ಸುಗುಮಾರ್ ಹೇಳಿದ್ದಾರೆ. ಇನ್ನು ಟೀಮ್ ಇಂಡಿಯಾದ ಪಂದ್ಯಗಳು ಪ್ರಪಂಚದ ಯಾವುದೇ ಮೂಲೆಯಲ್ಲೂ ನಡೆದ್ರೂ ಸುಗುಮಾರ್ ಅಲ್ಲಿ ಹಾಜರಿರುತ್ತಾರೆ. ಇವರ ಕೈಯಲ್ಲಿ ಭಾರತದ ಭಾವುಟ ಹಾಗೂ ಕರ್ನಾಟಕದ ಬಾವುಟ ಇದ್ದೇ ಇರುತ್ತದೆ.

ಸುಗುಮಾರ್ ಅವರಿಗೆ ಡಾ. ಎಸ್. ಕ್ಸೇವಿಯರ್ ಬ್ರಿಟ್ಟೊ ಅವರ ಕೆರ್ರಿ ಇಂಡೆವ್ ಲಾಜಿಸ್ಟಿಕ್ಸ್ ಪ್ರೈವೇಟ್ ಲಿಮಿಟೆಡ್ (Kerry indev logistics Pvt ltd) ಪ್ರಾಯೋಜಕತ್ವ ಮಾಡುತ್ತದೆ. ಅಲ್ಲದೆ ಇವರನ್ನು ಕಂಪನಿಯ ರಾಯಭಾರಿಯಾಗಿ ಮಾಡಿದೆ. ಸುಗುಮಾರ್ ಅವರು ತಮ್ಮ ಬಾಸ್ (ಎಸ್. ಕ್ಸೇವಿಯರ್)ಗೆ ತಮ್ಮ ಹೃದಯದಲ್ಲಿ ವಿಶೇಷ ಸ್ಥಾನವನ್ನೇ ನೀಡಿದ್ದಾರೆ.
ದೇವರಾಜ್ ಹಾಗೂ ಪರಿಮಾಳ ದಂಪತಿಗಳ ಮಗ ಸುಗುಮಾರ್ ಮಧ್ಯಮ ಕುಟುಂಬದಲ್ಲಿ ಬೆಳೆದರು. ಇವರ ಬೆಳವಣಿಗೆ ಕಂಡು ಅಂದು ಅವರ ಪೋಷಕರಿಗೆ ಚಿಂತೆ ಆಗಿತ್ತು. ಆದರೆ ಇತ್ತೀಚಿನ ಬೆಳವಣಿಗೆ ಅವರ ಮುಖದಲ್ಲಿ ಮಂದಹಾಸ ಮೂಡಿಸಿತ್ತು. ಇನ್ನು ಸುಗುಮಾರ್ ನನ್ನ ಜೀವನದಲ್ಲಿ ಇಷ್ಟೇಲ್ಲಾ ಸಾಧನೆ ಮಾಡಲು ಎಸ್. ಕ್ಸೇವಿಯರ್ ಹಾಗೂ ಪತ್ನಿ ಸುಮಾ ಅವರ ಕೊಡುಗೆ ಅಪಾರವಾಗಿದೆ ಎಂದು ಹೇಳಿದ್ದಾರೆ.
ಆ ಒಂದು ಪಂದ್ಯದ ವೇಳೆ ಸುಗುಮಾರ್ ಅವರ ಫೋಟೋ ಪಡೆಯಲು ಎಲ್ಲ ಅಭಿಮಾನಿಗಳು ಕಾತುರರಾಗಿದ್ದರು. ಎಲ್ಲರಿಗೂ ಫೋಟೋ ನೀಡುತ್ತಿದ್ದ ಸುಗುಮಾರ್, ತಮ್ಮ ಜೀವನದ ಅಮೂಲ್ಯ ವ್ಯಕ್ತಿಯನ್ನು ಕಂಡ ಕೂಡಲೇ ಅವರಲ್ಲಿಗೆ ಹೋಗಿ ಫೋಟೋ ತೆಗೆದುಕೊಂಡು, ಆಟೋಗ್ರಾಫ್ ಪಡೆದುಕೊಂಡರು. ಅಲ್ಲಿದ್ದ ಫ್ಯಾನ್ಸ್ ನೀವು ಯಾರು ನಿಮ್ಮ ಪೋಟೋ ಏಕೆ ಪಡೆದರು ಎಂದು ಅಚ್ಚರಿಯಿಂದ ಕೇಳಿದ್ರು ಎಂದು ಅವರು ಸುಗುಮಾರ್ ನೆನಪಿಸಿಕೊಂಡಿದ್ದಾರೆ.
ಅಂದು ಇವರ ವೇಷ ಭೂಷಣ ಕಂಡು ಅನುಮಾನ ನೋಡುತ್ತಿದ್ದ ಜನರೇ ಇಂದು ಇವರನ್ನು ಪ್ರೀತಿಯಿಂದ ಮಾತನಾಡಿಸುತ್ತಾರೆ ಎಂದು ಸುಗುಮಾರ್ ಹೇಳಿದ್ದಾರೆ.
ಇತ್ತೀಚಿಗೆ ದುಬೈನಲ್ಲಿ ನಡೆದಿದ್ದ ಚಾಂಪಿಯನ್ಸ್ ಟ್ರೋಫಿಯ ವೇಳೆಯೂ ಸುಗುಮಾರ್ ಅವರು ಅಲ್ಲಿಗೆ ಟೀಮ್ ಇಂಡಿಯಾವನ್ನು ಹುರಿದುಂಬಿಸಲು ಹೋಗಿದ್ದರು. ಈ ವೇಳೆ ಅಲ್ಲಿಯ ಕನ್ನಡಿಗರಾದ ಮಂಜುನಾಥ್ ನಾಯಕ್ ಇವರ ನೆರವಿಗೆ ಬಂದಿದ್ದಾರೆ. ಆರ್ಸಿಬಿ ಅಭಿಮಾನಿಯನ್ನು ಅಲ್ಲಿಯ ಕನ್ನಡಿಗರು ವಿಶೇಷ ಪ್ರಿತಿ ನೀಡಿ ಗೌರವಿಸಿದ್ದಾರೆ. ಸುಗುಮಾರ್ ವಿಶ್ವದ ಯಾವುದೇ ದೇಶಕ್ಕೆ ಹೋದ್ರೂ ಇವರನ್ನು ಅಲ್ಲಿಯ ಭಾರತೀಯರು ಪ್ರೀತಿಯಿಂದ ಮಾತನಾಡಿಸಿ ಆತಿಥ್ಯ ನೀಡುತ್ತಾರೆ ಎಂದು ತಿಳಿಸಿದ್ದಾರೆ.