ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಟೀಮ್ ಇಂಡಿಯಾ ಸಹಾಯಕ ಕೋಚ್ ಹುದ್ದೆಯಿಂದ ಅಭಿಷೇಕ್ ನಾಯರ್ ಅವರನ್ನು ವಜಾಗೊಳಿಸಲಾಗಿದೆ. ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ಅದ್ಭುತ ಗೆಲುವು ಸಾಧಿಸಿದರೂ, ಕೇವಲ ಎಂಟು ತಿಂಗಳ ನಂತರ ಅಭಿಷೇಕ್ ನಾಯರ್ ಟೀಮ್ ಇಂಡಿಯಾ ಕೋಚಿಂಗ್ ಸ್ಟಾಫ್ನಿಂದ ಕೈ ಬಿಡಲಾಗಿದೆ. ಹೆಡ್ಕೋಚ್ ಗೌತಮ್ ಗಂಭೀರ್ ಆಯ್ಕೆ ಮಾಡಿದ ಸಹಾಯಕ ಸಿಬ್ಬಂದಿಯ ಒಪ್ಪಂದವನ್ನು ಬಿಸಿಸಿಐ ರದ್ದುಗೊಳಿಸಿದ್ದು ಇದೇ ಮೊದಲು.
ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಪಂದ್ಯಗಳಲ್ಲಿನ ಸೋಲುಗಳು ಅಭಿಷೇಕ್ ನಾಯರ್ ಅವರನ್ನು ಭಾರತೀಯ ಕ್ರಿಕೆಟ್ ತಂಡದ ಸಹಾಯಕ ಕೋಚ್ ಹುದ್ದೆಯಿಂದ ವಜಾಗೊಳಿಸಲು ಕಾರಣ ಎಂದು ಬಿಸಿಸಿಐ ಉಲ್ಲೇಖಿಸಿದೆ ಎಂದು ವರದಿಯಾಗಿದೆ.

ಟೀಮ್ ಇಂಡಿಯಾದಿಂದ ಕೈಬಿಟ್ಟ ಕೆಲವೇ ದಿನಗಳ ನಂತರ ಅಭಿಷೇಕ್ ನಾಯರ್ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ತಂಡವನ್ನು ಸೇರಿಕೊಂಡಿದ್ದಾರೆ. ಏಪ್ರಿಲ್ 19 ರ ಶನಿವಾರದಂದು ಕೆಕೆಆರ್ ಈ ಬಗ್ಗೆ ಮಾಹಿತಿ ನೀಡಿದೆ. ಆದರೆ ಕೆಕೆಆರ್ ತಂಡದಲ್ಲಿ ಅವರು ಯಾವ ಪಾತ್ರವನ್ನು ವಹಿಸುತ್ತಾರೆ ಎಂಬುದನ್ನು ಬಹಿರಂಗಪಡಿಸಿಲ್ಲ.
ಕಳೆದ ವರ್ಷ ಗೌತಮ್ ಗಂಭೀರ್ ಅವರ ಕೋಚಿಂಗ್ ಸ್ಟಾಫ್ನಲ್ಲಿ ಅಭಿಷೇಕ್ ನಾಯರ್ ಕೆಕೆಆರ್ ಪರ ಕೆಲಸ ಮಾಡಿದ್ದರು. ಅಕಾಡೆಮಿಯಲ್ಲಿ ಆಟಗಾರರನ್ನು ಸಿದ್ಧಪಡಿಸುವಲ್ಲಿ ತೆರೆಮರೆಯಲ್ಲಿ ಅವರ ಪ್ರಮುಖ ಪಾತ್ರವಹಿಸಿದ್ದರು. ರಿಂಕು ಸಿಂಗ್ ಮತ್ತು ಆಂಗ್ಕ್ರಿಶ್ ರಘುವಂಶಿಯಂತಹ ಪ್ರತಿಭೆಗಳನ್ನು ಕಂಡುಹಿಡಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಕಳೆದ ವರ್ಷ ಕೆಕೆಆರ್ ತಂಡವನ್ನು ಚಾಂಪಿಯನ್ ಮಾಡುವಲ್ಲಿಯೂ ಅವರ ಶ್ರಮವಿದೆ.
ಅಭಿಷೇಕ್ ನಾಯರ್ ಜೊತೆಗೆ, ಫೀಲ್ಡಿಂಗ್ ಕೋಚ್ ಟಿ ದಿಲೀಪ್ ಮತ್ತು ಕಂಡೀಷನಿಂಗ್ ಕೋಚ್ ಸೋಹಮ್ ದೇಸಾಯಿ ಅವರನ್ನು ಗೌತಮ್ ಗಂಭೀರ್ ನೇತೃತ್ವದ ಕೋಚಿಂಗ್ ಸ್ಟಾಫ್ನಿಂದ ತೆಗೆದುಹಾಕಲಾಗಿದೆ. ಹೊಸ ಕೋಚಿಂಗ್ ಸ್ಟಾಫ್ನಲ್ಲಿ, ಗೌತಮ್ ಗಂಭೀರ್, ರಯಾನ್ ಟೆನ್ ಡೋಸ್ಚೇಟ್ ಮತ್ತು ಮೋರ್ನೆ ಮೋರ್ಕೆಲ್ ಮಾತ್ರ ಉಳಿದಿದ್ದಾರೆ.
ಗೌತಮ್ ಗಂಭೀರ್ ನೇತೃತ್ವದಲ್ಲಿ ಸಹಾಯಕ ಕೋಚ್ ಹುದ್ದೆಯನ್ನು ವಹಿಸಿಕೊಂಡಾಗಿನಿಂದ, ನಾಯರ್ ಅವರನ್ನು ಕೋಚ್ ಮತ್ತು ಆಟಗಾರರ ನಡುವಿನ ಕೊಂಡಿಯಾಗಿ ನೋಡಲಾಗುತ್ತಿದೆ. ಅನೇಕ ಆಟಗಾರರು ಅಭಿಷೇಕ್ ನಾಯರ್ ಅವರನ್ನು ಶ್ಲಾಘಿಸಿದರು. ಇತ್ತೀಚೆಗೆ, ವರುಣ್ ಚಕ್ರವರ್ತಿ ಅವರು ಭಾರತ ತಂಡಕ್ಕೆ ಮರಳಿದ್ದಕ್ಕಾಗಿ ನಾಯರ್ಗೆ ಕ್ರೆಡಿಟ್ ನೀಡಿದ್ದರು. ಕೆಎಲ್ ರಾಹುಲ್ ಕೂಡ ನಾಯರ್ ಬಗ್ಗೆ ಗುಣಗಾನ ಮಾಡಿದ್ದರು.
ಐಪಿಎಲ್ 2025 ರಲ್ಲಿ ಕೆಕೆಆರ್ ಪ್ರದರ್ಶನ ಕಳೆದ ವರ್ಷದಷ್ಟು ಉತ್ತಮವಾಗಿಲ್ಲ. ಕೆಕೆಆರ್ ಬ್ಯಾಟರ್ಸ್ ರನ್ ಗಳಿಸಲು ಕಷ್ಟಪಡುತ್ತಿದ್ದಾರೆ. ಕಳೆದ ಪಂದ್ಯದಲ್ಲಿ ಪಂಜಾಬ್ ವಿರುದ್ಧ 111 ರನ್ಗಳ ಗುರಿಯನ್ನು ತಲುಪಲು ಸಹ ಸಾಧ್ಯವಾಗಲಿಲ್ಲ. ಕೆಕೆಆರ್ ಇದುವರೆಗೆ 7 ಪಂದ್ಯಗಳನ್ನು ಆಡಿದ್ದು, 3 ಗೆಲುವುಗಳೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದೆ. ಇಂತಹ ಪರಿಸ್ಥಿತಿಯಲ್ಲಿ ಅಭಿಷೇಕ್ ನಾಯರ್ ಆಗಮನ ತಂಡಕ್ಕೆ ಬಲ ತಂದಿದೆ.